Saturday, May 22, 2010

ಕಾಡಿಸಿತ್ತು ಬೇಸಿಗೆ ಮಳೆ ...




ಮೊನ್ನೆ ಇಡೀ, ಏಕತಾನತೆಯಿಂದ ಎಲ್ಲೋ ಕಳೆದು ಹೋಗಿದ್ದೇನೆ ಅನಿಸುತ್ತಿತ್ತು ನನಗೆ . ಒಂದು ಮಳೆಯಾದರೂ ಬರಬಾರದೇ . ಭೂಮಿ, ವಾತಾವರಣ, ಕೊನೆಗೆ ಮನಸ್ಸು, ಎಲ್ಲ ಒಮ್ಮೆ ತಂಪಾಗಬಾರದೆ ಎಂದುಕೊಳ್ಳುತ್ತಿದ್ದೆ .
ಬೇಸಿಗೆ ಮಳೆಯ ಮಜವೇ ಬೇರೆ. ಹಗಲಿನಲ್ಲಿ ಸೂರ್ಯನ ಶಾಖಕ್ಕೆ ಕಾದ ಭೂಮಿಗೆ, ಮಳೆಯ ಸಿಂಚನವಾದೊಡನೆ, ಪ್ರಕೃತಿಯಲ್ಲೆಲ್ಲ ಘಮ ಘಮ. ಮಣ್ಣ ಕಂಪು, ಮಳೆಯ ತಂಪುಗಳ wonderful combination.! ಆಗ ಕೈಯಲ್ಲೊಂದು icecream ಇದ್ದರಂತೂ ಅದೇ ಸ್ವರ್ಗ. ಅಂತದ್ದೇ ಒಂದು ಮಳೆಗೆ, ಒಂದು ಕಾಮನಬಿಲ್ಲಿಗೆ ಮನಸು ಕಾದಿತ್ತು.
ನನ್ನ ತಳಮಳ ಅರ್ಥವಾಗಿರಬೇಕು ಮೇಘ ರಾಜನಿಗೆ . ಪೂರ್ವ ದಿಕ್ಕಿನಲ್ಲಿ ಮೇಘ ಸಂದೇಶ, ಕಾಳಿದಾಸನ ಮೇಘದೂತ ಮನದ ಪಟದಲ್ಲಿ ಹಾದು ಹೋಗಿದ್ದ . ಸಂಜೆ ೬-೭ರ ಸುಮಾರಿಗೆ ಮಳೆ ಸುರಿಯಬಹುದೆಂದು ಎಣಿಸಿದ್ದೆ, ಬರಲೇ ಇಲ್ಲ ಮಳೆ. ಮಳೆ ಕಾಡಿತ್ತು , ಕಂಗೆಡಿಸಿತ್ತು.
ರಾತ್ರಿಯ ಊಟ ಮುಗಿಸಿ ರೂಮಿಗೆ ಬರುವಾಗಲೇ ಮಿಂಚುತ್ತಿತ್ತು ಬಾನು. 'ಆಂಟೀ ಮಳೆ ಬಂದ್ರೆ ಸಾಕು' ಎಂದು PG ಆಂಟೀ ಹತ್ರ ಹೇಳಿ, ರೂಮಿಗೆ ನಡೆದಿದ್ದೆ. ರಾತ್ರಿ ಕರೆಂಟು ಕೈ ಕೊಟ್ಟಾಗಲೇ ನನಗೆ ಎಚ್ಚರವಾದದ್ದು . ನನ್ನ ರೂಮಿನಲ್ಲಿದ್ದ ಕತ್ತೆಲೆಗೆ ಸೆಡ್ಡು ಹೊಡೆಯುತ್ತಿದ್ದ ಮಿಂಚು ಬಳ್ಳಿಗಳು. ಪಕ್ಕದ ಗುಡ್ಡಗಳಿಗೆ ಬಡಿದು ಪ್ರತಿಧ್ವನಿಸಿ ನನ್ನ ರೂಮಿನಲ್ಲೇ ಕೊನೆಯಾದಂತೆ ಭಾಸವಾಗುವ ಗುಡುಗು.ತರಗೆಲೆಗಳ ಶಬ್ದದೊಂದಿಗೆ ಬೀಸುತ್ತಿದ್ದ ಗಾಳಿ. ಹಾಗೆ ಪಟ ಪಟನೆ ಮಳೆ ಹನಿಗಳು ಬೀಳತೊಡಗಿದವು. ಮಳೆ ಭೋರೆಂದು ಸುರಿಯ ತೊಡಗಿತು. ಬಿಟ್ಟು ಹೋದ ಹುಡುಗನನ್ನು ನೆನೆದು ಅಳುತ್ತಿದ್ದ ಹುಡುಗಿಯಂತೆ ರೋಧಿಸುತ್ತಿತ್ತು ಬಾನು.
ಹೊರಗಡೆ ಮಳೆ ಹನಿಯ ಅದೇ ಚಟಪಟ..ನನ್ನ ರೂಮಿನ ಹೊರಗೆ ಹಾಕಿರುವ ನೀಲಿ ಬಣ್ಣದ ತಾಡಪತ್ರೆಯ (plastic sheet) ಮೇಲೆ. ಪಕ್ಕದ ಮನೆಯ ಹಲವು ಮಳೆಗಾಲಗಳನ್ನು ಕಂಡಿರುವ ಅರೆ ಕಪ್ಪು ಬಣ್ಣದ ಹೆಂಚುಗಳ ಮೇಲೆ,ಎದುರಿಗಿರುವ ಹಳದಿ ಗುಲ್ ಮೊಹರ್ ಗಿಡದ ಮೇಲೆ, ಕೆಸುವಿನ ಎಳೆಗಳ ಮೇಲೆ , ಅಂಗಳಕ್ಕೆ ಹಾಸಿರುವ ಕಲ್ಲಿನ ಮೇಲೆ ಬೀಳುವ ಮಳೆಹನಿಗಳ ಸದ್ದು ಬೇರೆ ಬೇರೆ ಇದ್ದಂತ ಭಾವ,ನನ್ನದೇ ಕಲ್ಪನೆಯ ಲೋಕ.
ಮನೆ,ಅಮ್ಮ ಎಲ್ಲವೂ ನೆನಪಾಗಿದ್ದವು. ನನ್ನ ಪುಟ್ಟ ರೂಮಿನ, ಪುಟ್ಟ ಮಂಚದ ಮೂಲೆಯಲ್ಲಿ ಅಮ್ಮನ ನೈಟಿಯನ್ನು ಹಿಡಿದು ಮುದುರಿ ಕುಳಿತಿದ್ದೆ. ಮಳೆಯ ಚಟಪಟಕ್ಕೆ ಮನದಲ್ಲಿ ನೆನಪುಗಳ ಜಾತ್ರೆ . ಜಾತ್ರೆಯಲ್ಲಿ ಇರುವವರು ಯಾರು ಎಂದು ಪತ್ತೆ ಹಚ್ಚುವುದರ ಒಳಗೆ ಬಂದ ಕರೆಂಟು, ಕಟ ಕಟ ಸದ್ದಿನೊಂದಿಗೆ ತಿರುಗಲು ಶುರುವಿಟ್ಟುಕೊಂಡ ಫ್ಯಾನು.ನೆನಪುಗಳ ಸರೋವರದಲ್ಲಿ ಯಾರೋ ಕಲ್ಲೆಸೆದ ಭಾವನೆ. ಮನದಲ್ಲೇನೋ ಕಸಿವಿಸಿ. ನೆನಪುಗಳ ಪ್ರವಾಹಕ್ಕೆ ತಡೆಯೊಡ್ಡಿ ಕಿಟಕಿ ತೆರೆದೆ...
ಕಾದ ಮಣ್ಣಿನಲ್ಲಿ ಮಳೆಹನಿ ಇಳಿವ ಭರಕ್ಕೆ ಎದ್ದ ಮಣ್ಣ ಕಂಪು. ಆ ಕಂಪಿಗೆ ಸಣ್ಣಕೆ ರೋಮಾಂಚಿತಗೊಂಡಿತ್ತು ಮನಸು. ಕಿಟಕಿಯಿಂದಲೇ ಮಳೆಹನಿಯನ್ನು ಹಿಡಿಯುವ ಪುಟ್ಟ ಪ್ರಯತ್ನವನ್ನೂ ಮಾಡಿದ್ದೆ. ಆಗಲೇ ನೆನಪಾಗಿತ್ತು. ಅಮ್ಮ ಜೋರು ಮಳೆ ಸುರಿಯುತ್ತಿರುವಾಗ ದೋಸೆ ಎರೆಯುತ್ತ, ಅಥವಾ ಮಳೆಗಾಲದಲ್ಲಿ ಕರೆಂಟು ಕೈಕೊಟ್ಟಾಗ ತನ್ಮಯಳಾಗಿ ಹಾಡುತ್ತಿದ್ದ ಮಳೆ ಹಾಡು. ಕವಿ ಸಿದ್ದಯ್ಯ ಪುರಾಣಿಕರು ಬರೆದ ಭಾವಗೀತೆಗೆ ಅಮ್ಮ ಜೀವ ತುಂಬಿ ಹಾಡುತ್ತಾಳೆ. ಆ ಕವನದ ಸಾಲುಗಳು ಹೀಗಿವೆ. :
ಮೋಡಗಳ ಜಡೆಬಿಚ್ಚಿ ಮೈದೊಳೆದುಕೊಳುತಿಹಳು
ಬಯಲ ಭಾಮಿನಿ ಜಗದ ಮಣೆಯ ಮೇಲೆ
ಕೇಶರಾಶಿಯ ನೀರು ತೊಟ್ಟಿಕ್ಕಿ ಸುರಿಯುತಿದೆ
ಇದಕೆ ಜನವೆನ್ನುವುದು ಮಳೆಯ ಲೀಲೆ
ಮಳೆಯ ಹನಿ ಮಧು ನೆಲಕೆ ಈ ಜಗದ ಮೃತ್ತಿಕೆಯ
ಕಣಕಣವು ಮಧುವ್ರತವು ಸೃಷ್ಟಿಯೆಂಬ
ಹುಟ್ಟಿನಲಿ ಶೇಖರಿತವಾಗುತಿದೆ ಮಧುಕೋಶ
ಮಾಧುರ್ಯ ಪಸರಿಸಿದೆ ತಿರೆಯ ತುಂಬ
ಹುಲ್ಲ ಹಾಸಿನ ಮೇಲೆ ಮಳೆವನಿಯ ಸೇಸೆಯಿದು
ಯಾರ ಪರಿಣಯಕಾಗಿ ? ಹೇಳು ಕವಿಯೇ!
ಆಗಸದ ಹಂದರಕೆ ಮಳೆಯ ಮುತ್ತಿನ ಸರವು
ಆಗಿಹುದು ಮದುವೆಮನೆ ಬುವಿಗೆ ಬುವಿಯೇ
ನೆಲಮುಗಿಲನಪ್ಪಿದುದೋ ಮುಗಿಲೆ ನೆಲನಪ್ಪಿದುದೋ
ಮಳೆಯಲ್ಲಿ ಬದಲಾಯ್ತು ಬಯಲಿನಂತರವು ;
ಎಲ್ಲ ನೆಲ ಎಲ್ಲ ಜಲ, ಎಲ್ಲ ಅಂಬರ ತಲವು
ನೆಲ ಮುಗಿಲು ಬಯಲೆಂಬ ಭೇದ ಆವಾಂತರವು
ಜಗದ ಪೀಠದ, ಬಯಲ ಗೋಲಕದ ಮಿಂಚುಗಳ
ಪಂಚ ಸೂತ್ರದ ಲಿಂಗ-ಮಳೆಯ ಅಭಿಷೇಕ !
ನೀರಲ್ಲ ಇದು ತೀರ್ಥ, ವಿಶ್ವ ಲಿಂಗೋದಕವು
ಆಗಲಿನ್ನಾದರೂ ನರಕ ನಾಕ .
ಅರ್ಥ ಪೂರ್ಣ ಕವನ ಅಲ್ವಾ ? ಕವಿಯ ಕಲ್ಪನೆಗೊಮ್ಮೆ hats off ಎಂದಿದ್ದೆ . ಇದೇ ಹಾಡು ಗುಮ್ಮನಂತೆ ಕಾಡಿತ್ತು .ಫೋನ್ ಮಾಡಿ ಅಮ್ಮನನ್ನು ಹಾಡೆಂದು ಕೇಳಲು ಗಂಟೆ ೧೨.೪೫ .! ಅದೇ ಹಾಡು ಗುಯ್ಯ್ ಗುಡುತ್ತಿತ್ತು ಕಿವಿಯಲ್ಲಿ . ಹಾಗೆ ಮುಸುಕೆಳೆದು ಮಲಗಿದ್ದೆ. ಭರ್ರ್ಎಂದು ತಿರುಗುತ್ತಿದ್ದ ಫ್ಯಾನ್ ಸದ್ದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಓದುತ್ತಿದ್ದ ವಾಹನಗಳ ಸದ್ದಿಗೆ ಮಳೆಯ ಚಟಪಟ ಅಡಗಿಕೊಂಡಿತ್ತು. ಅರೆ ಮಂಪರು... ಕಿವಿಯಲ್ಲಿ ಯಾರೋ ಅದೇ ಹಾಡನ್ನು ಗುನುಗಿದಂತೆ. ಹಾಗೆ ನಿದ್ದೆ ಹೋಗಿದ್ದೆ .
ಬೆಳಿಗ್ಗೆ ಎಚ್ಚರವಾದಾಗ ಭರ್ತಿ ೭ ಗಂಟೆ. ದಡಬಡಿಸಿ ಎದ್ದಿದ್ದೆ ,.. ಬಾಗಿಲು ತೆರೆಯುತ್ತಿದ್ದಂತೆ ನಗು ಚೆಲ್ಲಿದ ಬೆಳಕು .ಹಾಗೆ ಬರಿಗಾಲಲ್ಲೇ ಗುಲ್ ಮೊಹರ್ ಗಿಡದತ್ತ ಓಡಿದ್ದೆ . ತಂಗಾಳಿ ಹೊಂಬೆಳಕುಗಳ ಸುಂದರ ಸಮಾಗಮ. ಗಿಡದಲ್ಲಿ ಕೂತಿದ್ದ ಮಿಂಚುಳ್ಳಿಯೊಂದು ನನ್ನ ನೋಡುತ್ತಲೇ ಹಾರಿತ್ತು.ಗುಲ್ಮೊಹರ ಗಿಡದಿಂದ ಹೂ-ಮಳೆಹನಿ ಎರಡೂ ನನ್ನ ಮೇಲೆ ಉದುರುತ್ತಿತ್ತು . ಮನಸ್ಸಿಗೆ ಅದೇನೋ ಅವ್ಯಕ್ತ ಆನಂದ.. ನನಗೆ ಅರಿವಿಲ್ಲದಂತೆ ಗುನುಗುತ್ತಿದ್ದೆ 'ಮುಂಜಾವಿನಲಿ ತುಂತುರಿನ ಸೋನೆ ಮಳೆ ..'
ಬೇಸಿಗೆಯ ಒಂದು ಮಳೆ ಅದೆಷ್ಟು ಅಪ್ಯಾಯಮಾನ. ಮನೆಯ ನೆನಪನ್ನು ಗುಮ್ಮನಂತೆ ಕಾಡಿಸಿ. ಬೆಳಿಗ್ಗೆ ಹೊಸ ಜಗತ್ತನ್ನು ತೋರಿಸಿದ ಮಳೆಗೆ ಮನದಲ್ಲೇ thanks ಎಂದಿದ್ದೆ

Monday, May 17, 2010

ಚಂದಿರನ ಮೇಲೆ ಮನೆಯ ಕಟ್ಟುವರಂತೆ ...


ಅಜ್ಜ ಮೊಮ್ಮಗನ ಸಂಬಂಧವನ್ನು ಕಥನ ಕವನದಲ್ಲಿ ಹಿಡಿದಿಡುವ ಒಂದು ಸಣ್ಣ ಮುಗ್ಧ ಪ್ರಯತ್ನ ಚಂದ್ರಯಾನದ ಕುರಿತು ಅದೆಲ್ಲೋ ಕೇಳಿದ್ದ ಪುಟ್ಟನ ಮುಗ್ಧ ಕಲ್ಪನೆ ಅದಕ್ಕೆ ಮಾತಿನ ರೂಪ ..ಉತ್ತರವಾಗಿ ಭಾವಗಳನ್ನು ಹೊರಸೂಸುವ ಅಜ್ಜಾ :
ದಶಕಗಳ ನೆರಿಗೆಯಿರುವ ಅಜ್ಜನ ಕೈಹಿಡಿದು
ರಾತ್ರಿಯ ವಿಹಾರಕ್ಕೆ ಹೊರಟಿರುವ ಪುಟ್ಟ ....
ಬಾನಲ್ಲಿ ನಗುತ್ತಿರು ಚಂದಿರನ ಕಂಡ ಪುಟ್ಟನ
ಮನದಲ್ಲೊಂದು ದೊಡ್ಡ ಪ್ರಶ್ನೆ ...
ಚಂದಿರನ ಮೇಲೆ ಮನೆಯ ಕಟ್ಟುವರಂತೆ
ಭುವಿಯಿಂದ ಬಾನಿಗೆ ಏಣಿ ಹಾಕುವರಂತೆ
ಹೌದಾ ಅಜ್ಜಾ?? ....
ಮುಗುಳ್ನಕ್ಕ ಅಜ್ಜನ ಉತ್ತರಕ್ಕೂ ಕಾಯದೆ ಪುಟ್ಟ ಮುಂದುವರೆದ ..
ಅಮ್ಮ ಹೊಡೆಯಲು ಬಂದಾಗ ಸರಸರನೆ ಏಣಿ ಏರಿ
ಚಂದಿರನ ಮನೆಯಲ್ಲಿ ಅಡಗಿಕೊಂಡರಾಯಿತು
ಅಮ್ಮ ಡುಮ್ಮಿ ಬೇಗ ಏರಲಾರಳು ಅಲ್ವಾ?
ಚಂದಿರನ ಮೇಲಿಂದ ಇಣುಕಬೇಕು...
ನಮ್ಮ ಮನೆಯ ಪತ್ತೆ ಹಚ್ಚಿ ಕೂಗಬೇಕು
ಹಾರುವ ವಿಮಾನಗಳ ಹಿಡಿಯಬೇಕು
ಹಕ್ಕಿಗಳ ಜೊತೆ ಮಾತನಾಡಬೇಕು
ಬಾನೇರಿ ಮಿನುಗುವ ತಾರೆಗಳ ಸೊಕ್ಕು ಮುರಿಯಬೇಕು
ಮೊನ್ನೆ ಅಕ್ಕನ ಜೊತೆ ಸೇರಿ ಹಾರಿಸುತ್ತಿದಾಗ ಕಳೆದ
ಗಾಳಿಪಟವನು ಹುಡುಕಬೇಕು ..
ಚಂದಿರನಿಂದ ಭೂಮಿಗೆ ಕಾಗದದ ರಾಕೆಟ್ ಉಡಾಯಿಸಬೇಕು
ಮಾಡಿಕೊಡ್ತಿಯ ಅಲ್ವಾ ಅಜ್ಜಾ ? ಎಂದ ಪುಟ್ಟ
ಕಾಲೇಜಿನ ದಿನಗಳಲ್ಲಿ ಅಜ್ಜಿಗೆ ಕಾಗದದ ರಾಕೆಟ್ ಬಿಟ್ಟ
ನೆನಪಾಗಿರಬೇಕು ಅಜ್ಜನಿಗೆ .
ಕೃತಕ ಹಲ್ಲುಗಳಿಗೆ ಜೀವ ತುಂಬಿಸಿಬಿಟ್ಟ ತನ್ನ ನಗೆಯಿಂದ ..
ತಾರಸಿಯ ಮನೆ ಬೇಡ ಅಜ್ಜಾ ...
ಹಳ್ಳಿಯ ಸೋಗೆಮನೆಯಂತೆ ಇರುವ ಮನೆಯೊಂದನ್ನು ಕಟ್ಟಿಬಿಡುವ
ಇಡೀ ದಿನ ಆಫೀಸು ಕೆಲಸವೆನ್ನುವ ಪಪ್ಪನೂ ಬೇಡ
ಕ್ಲಬ್ಬು-ಪಾರ್ಟಿ ಎಂದು ನನ್ನ ಕೈಗೆ ಸಿಗದ ಮಮ್ಮಿಯೂ ಬೇಡ
ನೀನು ವೃದ್ಧಾಶ್ರಮವನ್ನು ಸೇರುವುದೂ ಬೇಡ
ನಾನು-ನೀನು ಇಬ್ಬರೇ ಅಲ್ಲಿ ..
ಆಯ್ತಾ ಅಜ್ಜಾ ?ಎಂದ ಪುಟ್ಟನ ಮುಗ್ಧ ಪ್ರಶ್ನೆಗೆ
ಉತ್ತರವಾಗಿ ಅಜ್ಜನ ಕಣ್ಣುಗಳಿಂದ ನೀರಿಳಿಯುತ್ತಿತ್ತು ..!

Thursday, April 15, 2010

ಜುಟ್ಟು ಗೊಂಬೆ ನೆನಪಾಗಿ ಕಾಡುತಿದೆ....




ನಿನ್ನೆ ನನ್ನ ರೂಮ್ clean ಮಾಡ್ತಾ ಇದ್ದೆ . ಕಣ್ಣು albumಗಳ ಸಾಲಿನತ್ತ ಹಾಯಿತು . ಯಾಕೋ ನನ್ನ ಬಾಲ್ಯದ ಫೋಟೋಗಳನ್ನು ನೋಡಬೇಕು ಅನಿಸಿಬಿಡ್ತು. album ತೆರೆದು ನೋಡತೊಡಗಿದೆ . ಅದೆಷ್ಟು ಮುದ್ದಾಗಿದ್ದೆ ನಾನು ..! ನೋಡಿದ ತಕ್ಷಣವೇ ಎಲ್ಲರೂ ನನ್ನ nick-name 'ಪುಟ್ಟಿ' ಎಂದು ಕರೆಯುವಷ್ಟು ..! ಹಾಗೇ ಪುಟಗಳನ್ನೂ ತಿರುವುತ್ತಿದ್ದ ನಾನು, ಒಂದು ಕಡೆ ನಿಂತುಬಿಟ್ಟಿದ್ದೆ . ಆ ಫೋಟೋದಲ್ಲಿ ನನ್ನ ಕೈಯಲ್ಲಿದ್ದ ಎರಡು ಗೊಂಬೆಗಳು ನನ್ನನ್ನು ಸೆಳೆದಿದ್ದವು ಮತ್ತೊಮ್ಮೆ. ಸುಮಾರಾಗಿ ನನ್ನನ್ನೇ ಹೋಲುತ್ತಿದ್ದ 'ಜುಟ್ಟು ಗೊಂಬೆಗಳು' ಅವು ನಾನು ಅವುಗಳನ್ನು ಕರೆಯುತ್ತಿದ್ದದ್ದೂ ಅದೇ ಹೆಸರಿನಿಂದಲೇ. ಪುಟ್ಟದಾದ ಅಂಗಿ, ಕಪ್ಪನೆಯ ಒಂದು ಜುಟ್ಟು ಇದ್ದು ,ಲಕ್ಷಣವಾಗಿದ್ದ ಪುಟ್ಟ ಹೆಣ್ಣು ಗೊಂಬೆಗಳು ಅವು . .! ಫೋಟೋದಲ್ಲಿ ಪುಟ್ಟಿಯ ಪುಟ್ಟ ಪುಟ್ಟ ಕೈಗಳಲ್ಲಿ ಕಂಗೊಳಿಸುತ್ತಿದ್ದವು .


ಹೆಚ್ಚಾಗಿ ಹೆಣ್ಣುಮಕ್ಕಳು ತಮ್ಮ ಬಾಲ್ಯದಲ್ಲಿ ಗೊಂಬೆಗಳ ಜೊತೆ ಆಡುವುದನ್ನು ಹಾಗೂ ಅಡುಗೆ ಆಟವನ್ನು ಇಷ್ಟ ಪಡುತ್ತಾರೆ ಇದನ್ನು ನೀವೂ ನೋಡಿರಬಹುದು. ಒಂದು ಮಗು ಅನುಕರಣೆಯ ಮೂಲಕವೇ ಎಲ್ಲವನ್ನು ಕಲಿಯುವುದಲ್ಲವೇ ? ಹೆಣ್ಣು ಮಗುವಿಗೆ ತನ್ನ ಹಾಗೇ ಇರುವ ಅಮ್ಮ role model ಆಗಿ ಬಿಡುತ್ತಾರೆ. ಅವರನ್ನೇ ಅನುಕರಿಸುತ್ತದೆ ಅದು . ಅಮ್ಮ ಅಡುಗೆಮನೆಯಲ್ಲಿ ಅಡುಗೆ ಮಾಡುವುದನ್ನು, ಪುಟ್ಟ ಪಾಪುವನ್ನು ಮಲಗಿಸುವುದನ್ನು ನೋಡುತ್ತಾ ಹೆಣ್ಣು ಮಗು ಅದರದೇ ಜಗತ್ತಿನಲ್ಲಿ,ಅದರದೇ ಆದ ರೀತಿಯಲ್ಲಿ ಅಮ್ಮನನ್ನು ಅನುಕರಿಸುತ್ತದೆ . ಅಮ್ಮ ತನ್ನ ಉದ್ದನೆಯ ಜಡೆಗೆ ಮೊಳ ಉದ್ದದ ಹೂ ಮಾಲೆ ಮುಡಿದರೆ, 'ಪುಟ್ಟಿ' ತನ್ನ ಬಾಬ್ ಕೂದಲಿಗೂ ಅಷ್ಟೇ ಉದ್ದದ ಹೂ ಬೇಕೆಂದು ಹಠ ಮಾಡುತ್ತಾಳೆ. ಗೊಂಬೆಗಳನ್ನು ಮಗುವಿನ ತರಹ ಜೋಪಾನ ಮಾಡುತ್ತದೆ . ಆ ಹೆಣ್ಣು ಮಗು ಆ ಗೊಂಬೆಗೆ ಪುಟ್ಟ ಅಮ್ಮನೇ ಆಗಿಬಿಡುತ್ತಾಳೆ.


ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇನೆ ಗೊತ್ತಾ ? ನಾನು ನನ್ನ ಬಾಲ್ಯದಲ್ಲಿ (ಸುಮಾರು ೩-೪ ತರಗತಿಯವರೆಗೂ ) ಗೊಂಬೆಗಳ ಜೊತೆ ಆಡಿದ್ದೆ, ಅವುಗಳಿಗೆ ಊಟ ಮಾಡಿಸಿದ್ದೆ, ಸ್ನಾನ ಮಾಡಿಸಿದ್ದೆ ಮಲಗಿಸಿದ್ದೆ (ನಂತರ ಕ್ರಿಕೆಟ್ ಆಡುತ್ತಿದ್ದೆ ಆ ಮಾತು ಬೇರೆ ). ಹೂ ಮುಡಿಯಲು ಅಮ್ಮನೊಂದಿಗೆ ಜಗಳವಾಡಿದ್ದೆ . ಗೊಂಬೆಗೂ ಹೂ ಮುಡಿಸಿದ್ದೆ, ಅವುಗಳೊಂದಿಗೆ ಮಾತನಾಡಿದ್ದೆ. ನನ್ನದೇ ಲೋಕದಲ್ಲಿ ಆ 'ನಿರ್ಜೀವ ಗೊಂಬೆಗಳ ಜೊತೆ ಜೀವಂತ ಗೊಂಬೆ ನಾನಾಗಿದ್ದೆ ..!' ಒಟ್ಟಿನಲ್ಲಿ ಅವು ನನ್ನ ನೆಚ್ಚಿನ ಗೊಂಬೆಗಳಾಗಿದ್ದವು. ಮೌನವಾಗಿ ನನ್ನ ಜೊತೆ ಸಂಭಾಷಿಸುತ್ತಿದ್ದವು.


ನಂತರದ ದಿನಗಳಲ್ಲಿ ಹೊನ್ನಿನ ಕೂದಲಿನ ವಿದೇಶಿ ಗೊಂಬೆಯೊಂದು ನನ್ನ ಕೈಸೇರಿತ್ತು . ನಾವು ಬಾಡಿಗೆ ಮನೆಯಿಂದ ಸ್ವಂತ ಮನೆಗೆ shift ಆಗುವಾಗ. ನನ್ನ ಜುಟ್ಟು ಗೊಂಬೆಗಳು ಕಳೆದು ಹೋಗಿದ್ದವು, ಮರೆತು ಹೋಗಿದ್ದವು .


ಮತ್ತೆ ನಿನ್ನೆ ಯಾಕೋ ನೆನಪಾಗಿ ಕಾಡಿದ್ದವು . ಆಲ್ಬಮ್ ತೆಗೆದಿಟ್ಟು ಸೀದಾ ಅಮ್ಮನ ಬಳಿ ಓಡಿದ್ದೆ "ಆಯಿ, ನನ್ನತ್ರ ಎರಡು ಜುಟ್ಟು ಗೊಂಬೆ ಇದ್ದಿತ್ತು ನೆನಪಿದ್ದಾ ?" ಎಂದೆ . "ರಾಶಿ ಚಂದಕಿದ್ದಿತ್ತು ಅಲ್ದಾ ?" ಎಂಬುದು ಅಮ್ಮನ reply.ನಾನು ಮುಂದುವರೆದು "ಈಗ ಸಿಕ್ತಿಲ್ಯಾ ಅದು? ನಂಗೆ ಬೇಕಾಗಿತ್ತು " ಎಂದು ಕೇಳಿದ್ದೆ. ಅಮ್ಮ ನಕ್ಕು "ಸಿಕ್ಕಗು ಜಾತ್ರೇಲಿ, ಕುಮಟಾದಲ್ಲಿ ಕೇಳಿ ನೋಡು " ಎಂದರು . ಸಂಜೆ ತಮ್ಮನ ಜೊತೆ ಕುಮಟ ಸುತ್ತುತ್ತ ಎಲ್ಲ fancy ಅಂಗಡಿಗಳನ್ನು ಕೇಳಿದ್ದೆ . ಎಲ್ಲ ಕಡೆ ಹೊನ್ನ ಕೂದಲ ಗೊಂಬೆಗಳದ್ದೇ ಕಾರುಬಾರು . ಅದು ಬಿಟ್ಟರೆ sexy lookನ ಬಾರ್ಬಿ ಗೊಂಬೆಗಳು, teddy bear ಗಳು. ಯಾವುದೂ ಇಷ್ಟ ಆಗಲೇ ಇಲ್ಲ. ಅದೆಲ್ಲ ಚಿಕ್ಕ ಮಕ್ಕಳು ಆಡೋದು ಅನಿಸಿ ಬಿಡ್ತು . ನನ್ನ ಕಂಗಳು ನನ್ನ 'ಜುಟ್ಟು ಗೊಂಬೆಯನ್ನು ' ಹುಡುಕುತ್ತಿದ್ದವು. ಎಲ್ಲೋ ಸಿಗಲೇ ಇಲ್ಲ . ಸಿಗಬಹುದೆಂಬ ಆಸೆಯಿಂದ ತಮ್ಮನ ಬೈಕ್ ಏರಿದವಳಿಗೆ ನಿರಾಸೆ ಕಾಡಿತ್ತು .


ವಾಪಸ್ ಮನೆಗೆ ಬಂದವಳಿಗೆ ಬಾಗಿಲು ದಾಟುತ್ತಲೇ ಅಮ್ಮನ ಪ್ರಶ್ನೆ "ಸಿಕ್ತನೆ ಜುಟ್ಟು ಗೊಂಬೆ ?" ನನ್ನ ಮುಖದಲ್ಲಿನ ನಿರಾಸೆ, ಧುಮುಕಲು ರೆಡಿ ಆಗಿರುವ ಜೋಗವನ್ನು ಕಂಡೇ ಅಮ್ಮನಿಗೆ ತಿಳಿದಿರಬೇಕು "don't worry ಪುಟ್ಟಿ,paper evaluation ಗೆ ಹೋದಾಗ ಅಲ್ಲಿ ಸಿಕ್ರೆ ತರ್ತೆ ಅಥವಾ ಮತ್ತೆಲ್ಲಿನ್ದಾರೂ ತರಿಸುವಾ "ಎಂದಾಗ ಒಂದು ಬಗೆಯ ನಿರಾಳ ಭಾವ . ಗಂಟಿಕ್ಕಿದ್ದ ಹುಬ್ಬು ಸಡಿಲವಾಗಿತ್ತು.


ಇನ್ನೂ ನೆನಪಾಗಿ ಕಾಡುತ್ತಿದ್ದೆ ಆ 'ಜುಟ್ಟುಗೊಂಬೆ'. ಯಾವಾಗ ನನ್ನ ಕೈಗೆ ಸಿಗುತ್ತದೋ ಕಾದು ಕುಳಿತಿದ್ದೇನೆ . ನಿಮಗೆಲ್ಲಿಯಾದರೂ ಸಿಕ್ಕರೆ ಪ್ಲೀಸ್ ತಿಳಿಸ್ತೀರಾ?

Saturday, April 3, 2010

ಯಾರನ್ನು ಯಾರು ಹಿಡಿದರೋ ಯಾರಿಗೆ ಗೊತ್ತು?







ಕುಮಟಾದಿಂದ ಮಂಗಳೂರಿಗೆ ಹೋಗುವಾಗ ಬಸ್ಸಿನಲ್ಲಿ ಹೋಗುವುದು ವಾಡಿಕೆ. ಬರುವಾಗ ಟ್ರೈನಲ್ಲಿ ಬಂದಿರುತ್ತೇನೆ. ಐದು ಗಂಟೆಗಳನ್ನು ಕಳೆಯುವುದು ತುಂಬಾ ಬೇಸರ ತರಿಸುತ್ತದೆ . ಪಕ್ಕದಲ್ಲೆನಾದರೂ ಒಳ್ಳೆಯ ಆಸಾಮಿ ಕುಳಿತಿದ್ದರೆ ಮಾತಿಗೆ ಇಳಿದಿರುತ್ತೇನೆ ಇಲ್ಲದಿದ್ದರೆ? ಮನದ ಸರೋವರದಲ್ಲಿ ಕಲ್ಪನೆಗಳ ದೋಣಿ ಏರುವುದು ನನ್ನ ಮೆಚ್ಚಿನ ಹವ್ಯಾಸಗಳಲ್ಲಿ ಒಂದು. ನನ್ನದೇ ಕಲ್ಪನೆಗಳ ದೋಣಿಯಲ್ಲಿ ನಾನೇ ನಾವಿಕ , ನಾನೇ ಪ್ರಯಾಣಿಕ ..! ಕಲ್ಪನಾ ಲೋಕದಲ್ಲಿ ನಾನು ಕಿನ್ನರಿ , ಗಾಳಿಪಟ, ಗುಬ್ಬಚ್ಚಿ , ಮೋಡ, ಹೀಗೆ ... ಆದರೆ ಮರವಂತೆಯ ಸಮುದ್ರದ ಹತ್ತಿರ ಬಸ್ಸು ಹಾಯುವಾಗ ನನ್ನ ಕಲ್ಪನಾ ಸರಣಿಯು ಕಳಚಿ ಬಿದ್ದಿರುತ್ತದೆ . ಕಣ್ಣೆವೆಯಿಕ್ಕದೆ ಸಮುದ್ರವನ್ನು ನೋಡುತ್ತಿರುತ್ತೇನೆ. ಸುಮಾರು ಮೂರು ಕಿಲೋಮೀಟರುಗಳಷ್ಟು ದೂರದವರೆಗೂ ಸಮುದ್ರ ನಮ್ಮ ಕಣ್ಣೆದುರಿಗೆ ಭೋರ್ಗರೆಯುತ್ತಿರುತ್ತದೆ . .ಪಕ್ಕದಲ್ಲಿ ಸೌಪರ್ಣಿಕ ನದಿ ಸದ್ದಿಲ್ಲದೇ ಹರಿಯುತ್ತಿರುತ್ತದೆ . ಇವೆರಡರ ಮಧ್ಯೆ ರಾಷ್ಟ್ರೀಯ ಹೆದ್ದಾರಿ ೧೭ ಪಕ್ಕಾ ಆಲಸಿಯಂತೆ ಹಗಲು ಕನಸು ಕಾಣುತ್ತ ಕಾಲು ಚಾಚಿ ಬಿದ್ದುಕೊಂಡಿರುತ್ತದೆ .
ಮೊದಲಿನಿಂದಲೂ ಕವಿಗಳು ಸಮುದ್ರಕ್ಕೆ ಪುರುಷನ ಹೋಲಿಕೆ ಕೊಟ್ಟಿದ್ದಾರೆ , ನದಿ ಹೆಣ್ಣು. .! ಬಾಗಿ, ಬಳುಕಿ, ಜೀವ ವಾಹಿನಿಯಾಗಿ ಹರಿಯುವ ನದಿ ಕೊನೆಗೆ ಸೇರುವುದು ಸಮುದ್ರವನ್ನು . ಅದಿಕ್ಕೆ ಇರಬೇಕು ಸಮುದ್ರ ಭೋರ್ಗರೆಯುವುದು. ಆ ಪುರುಷತ್ವದ ಹಮ್ಮು ಅದಕ್ಕೆ ..!

ಒಂದು ಪಾಲು ಭೂಮಿಯನ್ನು ಕ್ಷಣಾರ್ಧದಲ್ಲಿ ನುಂಗಿ ಬಿಡುವ ಭೀಬತ್ಸ ಸಮುದ್ರ . ದಿನವೂ ಬೆಂಕಿಯನ್ನುಗುಳುವ ಸೂರ್ಯನನ್ನು ನುಂಗಿದರೂ ಶಾಂತ . ಮಕ್ಕಳ ಮುಟ್ಟಾಟವನ್ನು ನೆನಪಿಸುವ ಅಲೆಗಳ ಆಟ . ಯಾರಿಗೆ ಯಾರು ಸಿಕ್ಕಿದರೋ ಯಾರಿಗೂ ಗೊತ್ತಿಲ್ಲ. ಛಲಬಿಡದ ವಿಕ್ರಮನಂತೆ ಮರಳಿ ಯತ್ನವ ಮಾಡು ಎನ್ನುವ ಸಂದೇಶವನ್ನು ನೀಡುವ ಅಲೆಗಳು .

ಅಷ್ಟೊಂದು ಜಲರಾಶಿಯಿದ್ದರೂ ಒಂದು ತೊಟ್ಟು ಸಿಹಿ ನೀರಿಲ್ಲದ ಸಮುದ್ರ . ಸೂರ್ಯ ಮೊಗೆಮೊಗೆದು ಕುಡಿದರೂ ಆರಲೊಲ್ಲದ ಸಮುದ್ರ. ಚುಕ್ಕಿ ಚಂದ್ರಮರಿಗೆ ತಮ್ಮ ಬಿಂಬವ ನೋಡಲು ಕೊಡದ, ಮಾತ್ಸರ್ಯದ ಮೂಟೆ ಈ ಸಮುದ್ರ, ಪ್ರತಿಫಲಿಸುವುದು ಆಗಸದ ನೀಲಿ ಬಣ್ಣವನ್ನೇ ..!ಕಳೆದುಹೋದ ಹುಡುಗನನ್ನು ಹುಡುಕುತ್ತ ಅಲೆಯುತ್ತಿರುವ ನೀಳ ಕೂದಲಿನ ಹುಡುಗಿಯಂತೆ ಕಾಣುವುದು ಈ ಸಮುದ್ರ . ಹವಳ ಮುತ್ತುಗಳನ್ನು ತನ್ನೊಡಲಲ್ಲಿ ಅಡಗಿಸಿ ಇಟ್ಟುಕೊಂಡಿರುವ ಕಳ್ಳ ಸಮುದ್ರ. ಜಲಚರಗಳ ತವರೂರು. ಹೀಗೆ ಅದೇನೇನೋ ಭಾವ ಆ ಮೂರುವರೆ ಕಿಲೋಮೀಟರುಗಳನ್ನು ಕ್ರಮಿಸುವಷ್ಟರಲ್ಲಿ ..! ನಕ್ಕುಬಿಟ್ಟಿದ್ದೆ ನನ್ನ ಯೋಚನೆಗೆ ನಾನೇ.. !

ಆಗಸದಲ್ಲಿ ಚಿಕ್ಕಿಗಳಂತೆ ಚಿಕ್ಕದಾಗಿ ಕಾಣುತ್ತಿರುವ ಹಡಗು ಯಾವದೇಶದ್ದೋ ಏನೋ? ಆದರೂ ಅದೇನೋ ಕುತೂಹಲ,ಮನದಲ್ಲಿ ಭಾವನೆಗಳ ಮರ್ಮರ . ಹಡಗು ಸಾಗುತ್ತಿತ್ತು ನೀರಲ್ಲಿ ಅಲೆಗಳ ಮೇಲೆ . ನಮ್ಮ ಬಸ್ಸು ಓಡುತ್ತಿತ್ತು . ಕಾಲವೂ ಉರುಳುತ್ತಿತ್ತು . ಮರವಂತೆಯ ಕಡಲ ತೀರದ ದಾರಿ ಮುಗಿದರೂ ಸಮುದ್ರ ಕಾಡುತ್ತಿತ್ತು ನನ್ನ . ಕಣ್ಣ ಕೊನೆಯವರೆಗೂ ಕಾಣುವ ಆ ಅಖಂಡ ಜಲರಾಶಿಯ ಇನ್ನೊಂದು ತೀರವನ್ನು ನೋಡಬೇಕು ಎನ್ನುವ ಚಿಕ್ಕಂದಿನ ನನ್ನ ಹಂಬಲ ಮತ್ತೊಮ್ಮೆ ಧಿಡೀರನೆ ಎದುರಾಗಿತ್ತು .ಕಣ್ಮುಚ್ಚಿ world map ಕಲ್ಪಿಸಿಕೊಂಡೆ. ಅರಬ್ಬೀ ಸಮುದ್ರದ ಮರವಂತೆಯನ್ನು ಗುರುತಿಸಿಕೊಂಡೆ . ಇನ್ನೊಂದು ತೀರಕ್ಕಾಗಿ ತಡಕಾಡಿದೆ . ಎಲ್ಲಿದೆ ಇನ್ನೊಂದು ತೀರ ? ಆಫ್ರಿಕ ಖಂದದಲ್ಲೆಲ್ಲೋ ಇದ್ದಂತೆ ಅನಿಸುತ್ತಿದೆ ಅಲ್ವಾ?

Friday, April 2, 2010

ನನ್ನ ಕಿವಿಯೋಲೆಗಳ ಸಂಗ್ರಹ ....






ನನ್ನ ಮೆಚ್ಚಿನ ಹವ್ಯಾಸಗಳಲ್ಲಿ ಕಿವಿಯೋಲೆಗಳ (ear-rings) ಸಂಗ್ರಹವೂ ಕೂಡ ಒಂದು. dressಗೆ ಹೊಂದುವ matching ಕಿವಿಯೋಲೆಗಳು, ಬಣ್ಣಬಣ್ಣದ matching ಕ್ಲಿಪ್ಪುಗಳು ನನ್ನ ಮಾಮೂಲಿ style. ಒಂದೊಂದು ಕಿವಿಯೋಲೆಗಳ ಹಿಂದೆಯೂ ಒಂದಿಷ್ಟು ನೆನಪುಗಳು ಭದ್ರ . ಮನಸೆಂಬ ಈ ವಸ್ತುವಿದೆಯಲ್ಲ ಬಹಳ ವಿಚಿತ್ರ ಅದು .ಅದಕ್ಕೆ ಯಾವಾಗ ಖುಷಿಯಾಗುತ್ತದೆ, ಯಾವಾಗ ಬೇಸರವಾಗುತ್ತದೆ ಎಂಬುದೇ ಅರ್ಥವಾಗಲೋಲ್ಲದು . ಒಮ್ಮೊಮ್ಮೆ ಕಾರಣವಿಲ್ಲದೆ ಬೇಜಾರಾಗುತ್ತದೆ , ಆಗ ನನ್ನ ಎಲ್ಲ ಕಿವಿಯೋಲೆಗಳ ಸಂಗ್ರಹವನ್ನು ತೆರೆದು ಕೂರುತ್ತೇನೆ . ಮೊದಲು ಚಿಕ್ಕ ಚಿಕ್ಕ ಕಿವಿಯೋಲೆಗಳ (studs)ಹುಚ್ಚಿತ್ತು .ನಂತರ hangingsಗಳ ಶೋಕಿ ಹೆಚ್ಚಿದೆ.

ನಾನು ೫ನೆಯ ತರಗತಿಯಲ್ಲಿರುವವರೆಗೂ ನನ್ನ ಕಿವಿಗೆ ಫಿಕ್ಸ್ ಆದ, ತೆಗೆಯಲು ಬಾರದ ring ಇತ್ತು, ನಂತರ ಅಮ್ಮ ರಿಂಗ್ ತೆಗೆದು stud ಮಾಡಿಸಿ ಹಾಕಿದರು. ನಂತರ ನನ್ನ artificial ಕಿವಿಯೋಲೆಗಳ ಸಂಗ್ರಹ ಶುರುವಾಯಿತು. ಮೊದಲು ಜಾತ್ರೆಯ ಪೇಟೆಗಳಲ್ಲಿ ಕೊಳ್ಳುತ್ತಿದ್ದೆ, ಅಮ್ಮ, ಚಿಕ್ಕಮ್ಮ ಎಲ್ಲ ತಂದು ಕೊಡುತ್ತಿದ್ದರು. ಗೆಳತಿಯರು ಅವರೂರ ಜಾತ್ರೆಗೆ, ತಮ್ಮನಿಗೆ ರಾಖಿ ಕಟ್ಟಿದಾಗ ಅವನು ತಂದು ಕೊಟ್ಟ ಪುಟ್ಟ ಹರಳುಗಳ ಕಿವಿಯೋಲೆ , ನನ್ನ ಗೆಳೆಯನೊಬ್ಬ ಸಿಂಗಾಪುರದಿಂದ ತಂದ ಕಿವಿಯೋಲೆ , ಎಲ್ಲೋ ಪ್ರವಾಸಕ್ಕೆ ಹೋದಾಗ ಅಜ್ಜಿ ತಂದು ಕೊಟ್ಟ ಸಾಂಪ್ರದಾಯಿಕ ear-rings ಇನ್ನೂ ಹೊಸತೆಂಬಂತೆ ಇವೆ. ಮತ್ತೆ ನಾನು fancy-storesಗಳಿಗೆ ಹೋದಾಗ ಚಂದವೆಂದು ಕೊಂಡುಕೊಂಡ ಬಗೆಬಗೆಯ ಕಿವಿಯೋಲೆಗಳಿವೆ . ೫ ರೂಪಾಯಿಗಳಿಂದ ಹಿಡಿದು ೪೦೦ ರೂಪಾಯಿಗಳ ವರೆಗಿನ ಕಿವಿಯೋಲೆಗಳೂ ಇವೆ ನಾನು ಕೊಂಡುಕೊಂಡ ಸಂಗ್ರಹದಲ್ಲಿ ಮನಕ್ಕೆ ಬೇಸರವಾದಾಗ ತೆಗೆದು ನೋಡಿದರೆ ಬಾನ ತಾರೆಗಳಂತೆ ಮಿನುಗುತ್ತವೆ ಆ ಕಿವಿಯೋಲೆಗಳ ಜೊತೆ ನೆನಪುಗಳೂ ಕೂಡ .


ತಮ್ಮ ಯಾವತ್ತೂ ತಮಾಷೆ ಮಾಡ್ತಾನೆ ನಿನ್ನ ಕಿವಿಯೋಲೆಗಳಿಗೆ ಸುರಿಯುವ ಹಣದಿಂದ ಇನ್ನೊಂದು ಮನೆ ಕಟ್ಟಬಹುದಿತ್ತು ಎಂದು.. ! ಕಳ್ಳರು ಮನೆಗೆ ಕನ್ನ ಹಾಕಿದರೆ ನಿನ್ನ ಕಿವಿಯೋಲೆಗಳ ಸಂಗ್ರಹದ box ಎತ್ತಿ ಒಯ್ಯುತ್ತಾರೆ ನೋಡು ಎನ್ನುತ್ತಾ ಯಾವಾಗಲೂ ಕಿಚಾಯಿಸುತ್ತಾನೆ. ಅವನಿಗೆಲ್ಲಿ ಅರ್ಥ ಆಗ್ಬೇಕು ಹೇಳಿ ?


ಇಲ್ಲಿ ನನ್ನ ಸಂಗ್ರಹದ ನಾಲ್ಕನೆ ಒಂದು ಭಾಗದ ಫೋಟೋಗಳನ್ನ ಇಟ್ಟಿದೇನೆ.

Sunday, March 14, 2010

ನದಿಯ ತೀರದಲ್ಲೊಂದು ಒಂಟಿ ದೋಣಿ ..




ಮಂಗಳೂರಿನಿಂದ ಕುಮಟಾಕ್ಕೆ ಬರುವ ಹಾದಿಯಲ್ಲಿ ಏನಿಲ್ಲವೆಂದರೂ ಹನ್ನೆರಡು ನದಿ-ತೊರೆಗಳು ಸಿಗುತ್ತವೆ. ನದಿ ಎಂದಮೇಲೆ ಅದಕ್ಕೆರಡು ದಡಗಳು ಇರಲೇಬೇಕಲ್ಲವೇ ? ಆ ನದಿಗಳ ದಡದಲ್ಲಿ ಲಂಗರು ಹಾಕಿರುವ ಬೆಸ್ತರ ದೋಣಿಗಳು ನನ್ನನ್ನು ಬಹುವಾಗಿ ಕಾಡುತ್ತಿದ್ದವು. ಚಿಕ್ಕಂದಿನಿದಲೂ ಪ್ರಕೃತಿ ದ್ರಶ್ಯವಿರುವ ಚಿತ್ರ ಪಟಗಳು ನನ್ನನ್ನು ಸೆಳೆಯುತ್ತಿದ್ದವು. ಅದರಲ್ಲೂ ನದಿದಂಡೆ, ಅಲ್ಲೊಂದು ದೋಣಿ , ನದಿಯಲ್ಲಿ ಸಾಗುತ್ತಿರುವ ಹಾಯಿದೋಣಿ ಇರುವ ಚಿತ್ರಗಳೆಂದರೆ ಇದೇನೋ ಇಷ್ಟ. ಆ ಒಂಟಿ ದೋಣಿಗಳು ಅದೇನೇನೋ ಹೇಳುತ್ತಿರುವಂತೆ ಭಾಸವಾಗುತ್ತದೆ ನನಗೆ. ಅದಕ್ಕೆ ಜೀವವಿಲ್ಲ ಸರಿ, ಆದರೆ ನಮಗೆ ಜೀವವೂ ಇದೆ,ಭಾವವೂ ಇದೆ ಅಲ್ಲವೇ.?
ಒಂದು ಬಗೆಯ ಕುತೂಹಲ, ಒಂದು ಬಗೆಯ ಕಾಯುವಿಕೆ, ಒಂದು ಬಗೆಯ ಹತಾಶೆ , ಒಂದು ಬಗೆಯ ನಿರೀಕ್ಷೆ, ಒಂದು ಬಗೆಯ ನೆಮ್ಮದಿ ,ಏನೋ ಒಂದು ಖುಷಿ, ಮನದೊಳಗಿನ ಸಣ್ಣ ಭಯ.. ಹೀಗೆ ಹಲವು ಭಾವಗಳ ಸಮ್ಮಿಶ್ರಣ. ನವರಸಗಳ ಕೂಟ . ಆ ಒಂಟಿದೋಣಿ.


ಕಾಲಿಗೆ ಹಗ್ಗ ಹಾಕಿ ಮಂಚಕ್ಕೆ ಕಟ್ಟಿದ ತುಂಟ ಮಗುವಿನ ಸ್ಥಿತಿ ಆ ದೋಣಿಯದು .!ಒಂದು ಬಗೆಯ ಸ್ವಾತಂತ್ರ್ಯ , ಒಂದು ಬಗೆಯ ಬಂಧನವನ್ನು ಅನುಭವಿಸುವ ತ್ರಿಶಂಕು ಮನೋಸ್ಥಿತಿ . ಮಲೆನಾಡಿನ ತೋಟಗಳ ಮಧ್ಯದಲ್ಲಿರುವ ತೋಡುಗಳ ಮಧ್ಯ ಮಗುವೊಂದು ತನ್ನ ಅಂಗಿಯನ್ನು ಎತ್ತಿ ನಿಂತಂತೆ ಕಾಣುತ್ತದೆ ಆ ಒಂಟಿ ದೋಣಿ. ಒಂದೆಡೆ ನೀರಾಟದ ಮಜವಾದರೆ ಅಮ್ಮ ಎಲ್ಲಿ ಬೈಯ್ಯುವಳೋ ಎಂಬ ಸಣ್ಣ ಭಯ. ತನ್ನ ಹುಡುಗಿಯ ಜೊತೆ ಜಗಳವಾಡಿ ಬಂದು ಸಮುದ್ರದ ಅಂಚಿನಲ್ಲಿ ಸೂರ್ಯಾಸ್ತ ನೋಡುತ್ತಾ 'ಅವಳನ್ನು'miss ಮಾಡುತ್ತಿರುವ ಹುಡುಗನಂತೆ ಕಾಣುತ್ತದೆ ಒಮ್ಮೆ. ಮಗದೊಮ್ಮೆ ವೃದ್ಧಾಶ್ರಮದ ಮುಂದಿರುವ ಪುಟ್ಟ ಹೂದೋಟದ ಕೊನೆಯಲ್ಲಿರುವ ಹಳದಿ 'ಗುಲ್ಮೊಹರ್' ಗಿಡದ ಕೆಳಗೆ ಕಲ್ಲು ಬೆಂಚಿನಲ್ಲಿ ಕುಳಿತು ನೆನಪಿಗೆ ಬಾರದ ನೆನಪುಗಳ ಹುಡುಕಾಟದಲ್ಲಿರುವ ಅಜ್ಜನಂತೆ .!ಕೆಲವೊಮ್ಮೆ ಹೊಳೆಯಂಚಲಿ ಕುಳಿತು ತನ್ನ ಮುಂಗುರುಳುಗಳ ಜೊತೆ ಆಟವಾಡುತ್ತ ಇನಿಯನ ನೆನೆಯುತ್ತಿರುವ ಹುಡುಗಿಯಂತೆ. ಒಮ್ಮೊಮ್ಮೆ ಘೋರ ತಪಸ್ಸಿನಲ್ಲಿರುವ ಋಷಿಯಂತೆ. ವಿದೇಶಕ್ಕೆ ಹೋದ ಗಂಡ ವಾಪಸ್ಸಾಗುವ ಹಡಗಿನ ನಿರೀಕ್ಷೆಯಲ್ಲಿರುವ ರವೀಂದ್ರರ ಕಾದಂಬರಿಯ ಹೆಣ್ಣಂತೆ ಕಾಣುತ್ತದೆ .ಕೋಟಿ ಜನರ ನಡುವೆ ಇದ್ದರೂ ಕಾಣುವ ಆ ಏಕಾಂಗಿತನದ ಛಾಯೆ ಹೊತ್ತ ವ್ಯಕ್ತಿಯಂತೆ ಕಾಣುತ್ತಿದೆ, ಸಾವಿರ ಪುಟ್ಟ ಪುಟ್ಟ ಅಲೆಗಳ ಜೊತೆ ನಿಂತ ಆ ಒಂಟಿ ದೋಣಿ .ಕೆಲವೊಮ್ಮೆ ಕನ್ನಡ ಶಾಲೆ (ನಮ್ಮ ಕಡೆ primary ಸ್ಕೂಲ್) ಮೇಷ್ಟ್ರು ಹೊರ ಹಾಕಿದ ಹುಡುಗನಂತೆ ಭಾಸವಾಗುತ್ತದೆ . ಗಡಿ ಕಾಯುತ್ತಿರುವ ಯೋಧನಂತೆ ಕಂಡರೂ ಅಚ್ಚರಿಯಿಲ್ಲ .ಅಥವಾ ನಾವಿಕನಿಲ್ಲದೆ ಬದುಕಿಲ್ಲ ಎಂದು ಸಾರುತ್ತಾ ಶೂನ್ಯವನು ದಿಟ್ಟಿಸುತ್ತ ನಿಂತ ಬೈರಾಗಿ ಯಾಗಿಕಾಣುತ್ತಿದೆ . ಅಥವಾ ಅನಂತತೆಯಲ್ಲಿ ಒಂದಾಗುವ ವಿಶ್ವ ಮಾನವ ಸಂದೇಶವನ್ನು ಹೇಳುತ್ತಿದೆಯೋ?
ಕೊನೆಗೆ ಅಂದುಕೊಂಡೆ ಈ ಎಲ್ಲ ಕಾರಣಗಳಿಗೆ ಬೆಸ್ತರ ಜೀವನ ನೌಕೆ, ಕಲಾವಿದರಿಗೆ ಒಂಟಿ ದೋಣಿಯಾಗಿ ಕಾಡುತ್ತಿರಬೇಕು. ಜಡತೆಯಲ್ಲಿ ಚೇತನ ತುಂಬಲು, ಕಾಣಲು ಸೃಜನ ಶೀಲ ಮನಸೊಂದು ಬೇಕಷ್ಟೇ.. !

Sunday, February 28, 2010

ಮತ್ತೆ ಕಾಯುತಿರುವಳು ರಾಧೆ



ಹಸಿರಂಚಿನ ಲಂಗ ಘಲಘಲಿಸುವ ನೂಪುರ

ಕಣ್ಣಿಗೆ ನಿರೀಕ್ಷೆಯ ಕಾಡಿಗೆ ..

ಇನ್ನೂ ಕಾಯುತಿಹಳು ರಾಧೆ ವೃಂದಾವನದಲಿ

ಅದೇ ಕೃಷ್ಣನಿಗಾಗಿ .. ರಾಧೆಯ ಕೃಷ್ಣನಿಗಾಗಿ ...



ಎಲ್ಲಿಂದಲೋ ತೀಲಿಬರುತಿದೆ ವೇಣುಗಾನ

ಕಳೆದುಹೋಗಿದ್ದಾಳೆ ರಾಧೆ

ನೆನಪುಗಳ ಮೆರವಣಿಗೆಯಲ್ಲಿ

ಕನಸುಗಳ ಜಾತ್ರೆಯಲ್ಲಿ ..

ಕೃಷ್ಣ ಅರಮನೆಯನು ಬಿಟ್ಟು

ಭಾಮೆ- ರುಕ್ಮಿಣಿಯರ ಮರೆತು ಬಂದು

ಕೊಳಲನೂದುವನು....

ಕಾಲ ಗೆಜ್ಜೆಯ ದನಿಗೆ ಮರುಳಾಗುವನು

ಕೇದಗೆ,ಜಾಜಿಯ ಮಾಲೆ ಕಟ್ಟಿ ಮುಡಿಸುವನು

ಕಣ್ಣಲಿ ಕಣ್ಣಿಟ್ಟು ಚಂದಿರನ ಬಿಂಬವ ಹುಡುಕುವನು

ತೋಳ ತೆಕ್ಕೆಯಲಿ ಬಂಧಿಸುವನು ..

ಅದೇನೋ ಮಂಪರು ...

ಸೆರಗಿನಂಚನು ಯಾರೋ

ಹಿಡಿದೆಳೆದಂತೆ ಭಾಸವಾಗುತಿದೆ

ಹೃದಯ ತಾಳ ತಪ್ಪಿದೆ

ಕಣ್ಣೆವೆಗಳು ಅರೆಮುಚ್ಚಿ, ಗಲ್ಲಗಳು ಕೆಂಪೇರಿವೆ

ಇನ್ನೇನು ಬಂಧಿಸಿ ಬಿಡುವನು ಬಾಹುಗಳ ಬಿಗಿಯಲ್ಲಿ...


ಅರೆ ಏನಾಗಿದೆ ?

ಗೋಪಾಲನ ಮೈಯಲರಿಲ್ಲ

ಬಿಸಿಯುಸಿರೂ ಇಲ್ಲ !

ಹಿಂದಿರುಗಿ ನೋಡಿದರೆ ...

ಮುಳ್ಳಿಗೆ ಸಿಕ್ಕಿಕೊಂಡಿದೆ ಸೆರಗು

ಬಿಡಿಸುವಾಗ ಕೈಗೆ ಮುಳ್ಳೊಂದು ಚುಚ್ಚಿದೆ..

ಅದಾವುದರ ಪರಿವೆಯಿಲ್ಲ ರಾಧೆಗೆ ...

ಕಣ್ಣಂಚಲಿ ಅದೇ ನಿರೀಕ್ಷೆ ....

ಮತ್ತೆ ಕಾಯುತಿರುವಳು ರಾಧೆ ಕೃಷ್ಣನಿಗಾಗಿ

ಅದೇ ರಾಧೆಯ ಕೃಷ್ಣನಿಗಾಗಿ ...