Tuesday, June 29, 2010

ಕನ್ನಡಿಯಲ್ಲಿನ ಕಿನ್ನರಿ ..!









ಎರಡು ತಿಂಗಳುಗಳ ಹಿಂದೆ ನಡೆದ ಘಟನೆ ಅದ್ಯಾಕೋ ನೆನಪಾಗಿಬಿಟ್ಟಿದೆ. ಅದೊಂದು ಬುಧವಾರ ಕಾಲೇಜು ಬಸ್ಸು ಮಿಸ್ಸಾಗಿ ಲೋಕಲ್ ಬಸ್ಸಿನಲ್ಲಿ ಹೊರಟಿದ್ದೆ. ಅದೇನೋ ಖುಷಿ ಲೋಕಲ್ ಬಸ್ಸಿನಲ್ಲಿ ಓಡಾಡುವುದೆಂದರೆ . uniform ತೊಟ್ಟ ಹುಡುಗಿಯರಿರುವ ಕಪ್ಪು -ಬಿಳುಪು tvಯಂತೆ ಕಾಣುವ ಕಾಲೇಜು ಬಸ್ಸಿನಲ್ಲಿ ಹೋಗುವುದು ಬೇಜಾರಿನ ಕೆಲಸ. Gossip, ಒಂದಿಷ್ಟು ಅಸೂಯೆ ಬಿಟ್ಟರೆ ಆ ಬಸ್ಸಿನಲ್ಲಿ ಬೇರೇನೂ ಇದ್ದಹಾಗೆ ನನಗೆ ಅನಿಸಿವುದೇ ಇಲ್ಲ..!




ಲೋಕಲ್ ಬಸ್ಸು ಅಷ್ಟೇನೂ rushಇರಲಿಲ್ಲ. ನಿಂತಿದ್ದೆ ನಾನು ಎದುರುಗಡೆ ಬಾಗಿಲಿನ ಹತ್ತಿರವೇ . ಅದೇನೋ ಖುಷಿ ಬಾಗಿಲಲ್ಲಿ ನೇತಾಡಿಕೊಂಡು ಹೋಗುವುದೆಂದರೆ . ದಕ್ಷಿಣ ಕನ್ನಡದ ಬಸ್ಸುಗಳ ಕಿಟಕಿಗಳಿಗೆ ಗಾಜುಗಳೇ ಇರುವುದಿಲ್ಲ ಫುಲ್ ಖುಲ್ಲಂ ಖುಲ್ಲ. ಬೇಸಿಗೆಯಲ್ಲಿ ಗಾಳಿ ಬೆಳಕುಗಳೂ , ಮಳೆಗಾಲದಲ್ಲಿ ಮಳೆಹನಿಯೂ ಬಸ್ಸಿನೊಳಗೆ ಚೆನ್ನಾಗಿ ಬರುತ್ತವೆ..! ಬಸ್ ಕ್ಲೀನರ್ ಬಂದು "ಮಿತ್ತ ಪೋಯಿ" (ಮೇಲೆ ಹೋಗಿ ) ಎಂದು ಎಚ್ಚರಿಸಿದಾಗ ಒಳಗೆ ಹೋಗದೆ ವಿಧಿಯಿರಲಿಲ್ಲ. ಹಾಗೆ ನಿಂತ ನನಗೆ ಕಂಡದ್ದು ಡ್ರೈವರನ ಎಡಗಡೆ ಇರುವ ಉದ್ದದ ಸೀಟಿನಲ್ಲಿ ಕುಳಿತು ನನ್ನನ್ನೇ ನೋಡುತ್ತಿದ್ದ ಸುಮಾರು ೪ ರ ಹರೆಯದ ಹುಡುಗಿ. ತುಂಬಾ ಮುದ್ದು ಮುದ್ದಾಗಿದ್ದಳು. ಸುಮ್ಮನೆ ಮುಗುಳ್ನಕ್ಕೆ ಕಣ್ಣನ್ನು ಮಿಟುಕಿಸುತ್ತ. (ಪಕ್ಕಾ ಹುಡುಗೀರ style )




ಅವಳನ್ನೇ ಅವಲೋಕಿಸಿದೆ ...ಕೆಂಪು ಬಿಳಿ ಬಣ್ಣಗಳ ಚೆಂದದ ಫ್ರಾಕ್ ತೊಟ್ಟಿದ್ದಳು.ಕೈಗಳಿಗೆ ಕೆಂಪು ಬಿಳಿ ಬಳೆಗಳ ಸಮ್ಮಿಶ್ರಣ. ಪುಟ್ಟ ಪುಟ್ಟ ಕೈಗಳಲ್ಲೂ ಮದರಂಗಿಯ ರಂಗು.ಕಾಲುಗಳಲ್ಲಿ ದಪ್ಪನೆಯ ಗೆಜ್ಜೆಯ ಘಲ ಘಲ. ಕಣ್ಣಿಗೆ ಅಮ್ಮ ಹಚ್ಚಿದ್ದಿರಬೇಕು ಒಂದೆಳೆಯ ಕಾಡಿಗೆ. ಹಣೆಯಲ್ಲಿ ಹೊಳೆಯುವ ಪುಟ್ಟ ಬಿಂದಿ. ರೇಶಿಮೆ ಕೂದಲು ಅದರಲ್ಲಿ ಕುಳಿತು ನನ್ನ ಹೊಟ್ಟೆಯುರಿಸಿದ್ದು ಮಲ್ಲಿಗೆಯ ಉದ್ದನೆಯ ಮಾಲೆ. .!




ಅದ್ಯಾಕೋ ನನ್ನ ಬಾಲ್ಯ ನೆನಪಾಗಿಬಿಟ್ಟಿತ್ತು. ನಾನೂ ಹಾಗೆ ಕೈತುಂಬಾ ಬಳೆಗಳನ್ನು ಹಾಕಿಕೊಳ್ಳುತ್ತಿದ್ದೆ. ನನ್ನ ಪುಟ್ಟ ಜುಟ್ಟಿಗೆ ಅದರ ಎರಡರಷ್ಟು ಉದ್ದದ ಹೂ ಮಾಲೆಯನ್ನು ಅಮ್ಮನತ್ರ ಜಗಳವಾಡಿ ಮುಡಿಯುತ್ತಿದ್ದೆ. ಗೋಲಾಕಾರದಲ್ಲಿ ಡಬ್ಬಿಯಲ್ಲಿ ಬರುವ ಆ ಬಣ್ಣಗಳಿಂದ ನನ್ನ ಹಣೆಯ ಮೇಲೆ ಚಿತ್ರ ವಿಚಿತ್ರವಾದ design ಮಾಡುತ್ತಿದ್ದೆ. ಅದೇನೋ ಖುಷಿಯಿತ್ತು ತನ್ಮಯತೆಯಿಂದ ಅಲಂಕರಿಸಿಕೊಳ್ಳುವುದರಲ್ಲಿ , ಆ ಕನ್ನಡಿಯ ಮುಂದೆ ನಾನೇ ಕಿನ್ನರಿ...! ಎಲ್ಲ ಗತವೈಭವ ಅನಿಸಿಬಿಡ್ತು.


ಈಗ ಬಳೆಗಳನ್ನು ಕಂಡರೆ ಒಂದು ರೀತಿಯ ಅಲರ್ಜಿ. ಅದನ್ನು ಕೊಳ್ಳುವ ಮಾತು ಬಿಡಿ ಇರೋದನ್ನೇ ಹಾಕಿಕೊಳ್ಳಲಾಗದ ಮನೋಸ್ಥಿತಿ. ಹಣೆಗೆ ಬೊಟ್ಟು ಇಡದೆ ಅದೆಷ್ಟು ವರುಷಗಳು ಕಳೆದಿತ್ತೋ. ಅಜ್ಜಿಯ ಮನೆಗೆ ಹೋಗುವಾಗ, ಭೂತ ಕನ್ನಡಿಯ ಹಿಡಿದು ಹುಡುಕಿದರೆ ಮಾತ್ರ ಕಾಣುವಂಥ ಒಂದು ಚುಕ್ಕಿಯನ್ನು ಇಡುತ್ತಿದ್ದೆ. .!ಒಂದೇ ಕಾಲಿಗೆ ಒಂದೆಳೆಯ ಬೆಳ್ಳಿ ಚೈನು ಅದೊಂಥರ fashion..! (ಇದರಿಂದ ತುಂಬಾ ಫಚೀತಿ ಅನುಭವಿಸಿದ್ದೇನೆ ಬಿಡಿ ಆ ಕುರಿತು ಇನ್ನೊಮ್ಮೆ ಬರೆಯುತ್ತೇನೆ ). ಇನ್ನು ಚೋಟುದ್ದದ ಕೂದಲು, ನಾಲ್ಕೈದು ಕ್ಲಿಪ್ ಗಳನ್ನು ಹಾಕಿ ಕಷ್ಟಪಟ್ಟು ಕಟ್ಟುತ್ತಿದ್ದ ಜುಟ್ಟು. ಇನ್ನು ಅದಕ್ಕೆಲ್ಲಿ ಮಲ್ಲಿಗೆಯ ಮಾಲೆ? ನನಗೆ ನಗು ಬಂದಿತ್ತು. ನಾಗರೀಕತೆ, fashion ಎಂದು ನಾವು ಕಳೆದು ಕೊಳ್ಳುತ್ತಿರುವುದೇನು? ನಮ್ಮ ಸಂಸ್ಕೃತಿಯನ್ನೇ ? ಅಥವಾ ನಮ್ಮನ್ನೇ? ಕಂಡಕ್ಟರ್ ಬಂದು ಟಿಕೆಟ್ ಕೇಳಿದಾಗಲೇ ನಾನು ನನ್ನ ನೆನಪುಗಳ ಮುಸುಕಿನಿದ ಹೊರಬಂದದ್ದು.


ಮತ್ತೊಮ್ಮೆ ಆ ಬಾಲೆಯತ್ತಲೇ ನನ್ನ ನೋಟ ಹರಿಯಿತು ಬೇಡವೆಂದರೂ. ಆಕೆಯೂ ನನ್ನತ್ತಲೇ ನೋಡುತ್ತಿದ್ದಳು. ಅವಳಿಗೆ ನನ್ನ ತುಂಡು ಕೂದಲು ಇಷ್ಟವಾಗಿದ್ದಿರಬೇಕು (ಹಾಗಂತ ನಾನು ಅಂದುಕೊಂಡದ್ದು). ನನ್ನ ಮನದೊಳಗೋ ಹೇಳಿಕೊಳ್ಳಲಾಗದ ಭಾವ. ಅದು ಮೆಚ್ಚುಗೆಯೋ ,ವಿಷಾದವೋ, ಅಸೂಯೆಯೋ ತಿಳಿಯಲಿಲ್ಲ ಆ ಕ್ಷಣಕ್ಕೆ.


ಇಳಿದು ಬಿಟ್ಟಿದ್ದೆ ಅಲ್ಲೇ ಜ್ಯೋತಿ ವೃತ್ತದ ಬಳಿ. ಹೂ ಮಾರುವವನ ಬಳಿ ಒಂದು ಮೊಳ ಹೂವನ್ನು ಕೊಂಡುಕೊಂಡಿದ್ದೆ. ಪಕ್ಕದ ಫ್ಯಾನ್ಸಿ ಅಂಗಡಿಗೆ ನುಗ್ಗಿ ಒಂದು ಡಜನ್ ಬಳೆಗಳನ್ನು, ಬಿಂದಿಗಳನ್ನು ತೆಗೆದುಕೊಂಡಿದ್ದೆ. ಅವೆಲ್ಲ ನನ್ನನ್ನು ಅಲಂಕರಿಸಿದ್ದವು. ನಾನು ಬಸ್ಸಲ್ಲಿರದಿದ್ದನ್ನು ಕಂಡ 'ಶಾಲು' phone ಮಾಡಿದ್ದಳು. "ಬರ್ತೇನೆ" ಎಂದು ಚುಟುಕಾಗಿ ಉತ್ತರಿಸಿ. ನಡೆದಿದ್ದೆ ಕಾಲೇಜಿನತ್ತ .


ಕ್ಲಾಸಿನೊಳಗೆ ಕಾಲಿಡುತ್ತಲೇ ಎಲ್ಲರೂ "ಹೋ " ಎಂದು ಬೊಬ್ಬಿಟ್ಟಿದ್ದರು. ಗೆಳೆಯ 'ಇಮ್ರಾನ್' ಬಂದು "hey sou..... what a cool surprize... looking cute and funny too .!" ಅಂದು ಬಿಟ್ಟಿದ್ದ. ಹುಸಿಕೋಪ ತೋರುತ್ತಲೇ ನನ್ನ ಜಾಗದತ್ತ ತೆರಳಿದ್ದೆ.


ಅವರಿಗೇನು ಗೊತ್ತಿತ್ತು ? ನನಗಾಗುತ್ತಿರುವ ಅನುಭೂತಿ, ಅವರ್ಚನೀಯ ಆನಂದ. ನನಗೋ ನನ್ನ ಬಾಲ್ಯಕ್ಕೆ ಮರಳಿದ ಅನುಭವ. ಓಡಿ ಬಿಟ್ಟಿದ್ದೆ ladies ರೂಮಿಗೆ. ಕನ್ನಡಿಯಲ್ಲಿ ಕಿನ್ನರಿಯಾಗಲು...!



Sunday, June 20, 2010

ಮತ್ತೆ ನಾನು ನಾನಾದೆ.. !


ಅದೆನಾಗಿತ್ತೋ.. ಕಳೆದ ಐದಾರು ದಿನಗಳಿಂದ ನಾನು ನಾನಾಗಿರಲಿಲ್ಲ. ಮನಸು ತಳಮಳದಲ್ಲಿತ್ತು.. ಹಗ್ಗ ಹರಿದ ನಾವೆಯಂತಾಗಿತ್ತು. ಪರೀಕ್ಷೆಯನ್ನು ಮುಗಿಸಿ ಬಂದ ನಾನು ಖುಷಿಯಿಂದಿರುವ ಬದಲು ಖಿನ್ನತೆಗೆ ಒಳಗಾಗಿದ್ದೆ . ಹೆಚ್ಚಾಗಿ 'ವಟವಟ' ಎನ್ನುತ್ತಲೇ ಇರುವ ನಾನು ಮೌನಿಯಾಗಿದ್ದೆ. ಮಳೆಯ 'ಚಟಪಟ' ನನ್ನ 'ವಟವಟ'ವನ್ನು ನಿಲ್ಲಿಸಿಬಿಟ್ಟಿತ್ತು. ನನ್ನ ಮನದೊಳಗಿದ್ದ ಒಂದು ಪುಟ್ಟ ಐದರ ಮಗುವೊಂದು ಕಳೆದು ಹೋಗಿತ್ತು. ಸ್ನೇಹಿತರ phone call ಗಳನ್ನೂ ಅಲಕ್ಷಿಸಿದ್ದೆ. ಕೊನೆಗೆ ಸ್ನೇಹಿತರಿಬ್ಬರು ಬೈದೂ ಆಗಿತ್ತು. ಏನಾಗಿದೆ ನಿನಗೆ ಎಂದರೆ ನನ್ನಲ್ಲಿ ಉತ್ತರವಿರಲಿಲ್ಲ. "nothing man, i'll be alright" ಎಂಬ ಹಾರಿಕೆಯ ಉತ್ತರ ಬೇರೆ ನನ್ನಿಂದ. ಅರ್ಧದಲ್ಲಿ ಬಿದ್ದ ಒಂದು stupid painting ಪ್ರಯತ್ನ, ಮುಗಿಸಲಾರದೆ ಹಾಗೆ ಅರ್ಧದಲ್ಲಿ ಬಿಟ್ಟ ೨ ಲೇಖನಗಳು, ಯಾಕೋ ನನ್ನೊಳಗಿದ್ದ ಒಂದು ಪುಟ್ಟ ಹುಡುಗಿ ಕಳೆದೆ ಹೋಗಿದ್ದಳು ಎಂದುಕೊಂಡಿದ್ದೆ, ಕಂಗಾಲೂ ಆಗಿದ್ದೆ.



ಏನಾಗಿತ್ತು ನನಗೆ ?? ಸಂಬಂಧಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೆನೆ? ಒಟ್ಟಿನಲ್ಲಿ ಇಲ್ಲಸಲ್ಲದ್ದಕ್ಕೆ ಸುಖಾಸುಮ್ಮನೆ ತಲೆ ಕೆಡಿಸಿಕೊಂಡಿದ್ದೆ . . ನಗು ಮರೆತು ಹೋದಂತಿತ್ತು. ಭಾವನೆಗಳು ಎಲ್ಲೋ ನಿಯಂತ್ರಣ ತಪ್ಪಿದಂತಿತ್ತು . ಮನಃ ಪೂರ್ತಿಯಾಗಿ ಅಳಲೂ ಆಗುತ್ತಿರಲಿಲ್ಲ. ನನ್ನನ್ನು ನಾನು ಹೊರಗೆಳೆಯಬೇಕಿತ್ತು. ನನ್ನ ಆರಾಮ ಖುರ್ಚಿಯಲ್ಲಿ ಕುಳಿತು ನೀಲಾಕಾಶವನ್ನು ದಿಟ್ಟಿಸುತ್ತಿದ್ದೆ. ..


ಮತ್ತೆ ಕರೆಯತೊಡಗಿತು ನನ್ನ phone, ನೋಡಿದರೆ ನನ್ನ ಆತ್ಮೀಯ ಗೆಳೆಯ. ವಿಧಿಯಿಲ್ಲದೇ recieve ಮಾಡಿದೆ. "ಏನಾಗಿದ್ಯೇ ನಿಂಗೆ ? ಬ್ಲಾಗ್ ನಲ್ಲಿ ಏನೇನೋ ಬರೆದಿದೀಯ ಅಷ್ಟೊಂದು ಸೀರಿಯಸ್ಸಾಗಿ "ಎಂದ." ಏನಿಲ್ವೋ ಸುಮ್ಮನೆ " ಎಂದುತ್ತರಿಸಿದೆ . "ನಿನ್ನ 'ಏನಿಲ್ಲ' ಅಂದ್ರೆ ತುಂಬಾ ವಿಷ್ಯ ಇದೆ ಅಂತಾನೆ ಅರ್ಥ ಹೇಳೇ ಮಹಾರಾಯ್ತೀ " ಎಂದ.


ನಾನು ಪಕ್ಕಾ ಬಹಿರ್ಮುಖಿ. ಖುಷಿಯಾದರೆ ಕುಣಿದು ಕೇಕೆ ಹಾಕಿಬಿಡುತ್ತೇನೆ. ಬೇಸರವಾದರೆ ಕಣ್ಣೀರು ಹರಿಯದೆ ಸಮಾಧಾನವಿಲ್ಲ. ಅದು -ಇದು ಮಾತನಾಡುತ್ತಲೇ ವಿಷಯವನ್ನೆಲ್ಲ ಹೇಳಿದ್ದೆ .ಮನಸಿಗೆ ಆದ ಬೇಸರದ ಭಾವಗಳೆಲ್ಲ ಮಾತಿನ ಮೂಲಕ ಹೊರಬಿದ್ದಿದ್ದವು. ನಾನು ತಡೆಯಿಲ್ಲದೆ ಮಾತನಾಡುತ್ತಿದ್ದೆ ಆತ 'ನಂತ್ರ', 'ಹೂಂ', 'ಸರಿ' ಎಂದಷ್ಟೇ ಹೇಳುತ್ತಿದ್ದ. ವಿಷಯ ಮುಗಿವ ಹೊತ್ತಿಗೆ ನನ್ನ ಕಣ್ಣ ಅಂಚೂ ಒದ್ದೆಯಾಗಿ ಆಗಿತ್ತು. ಆದರೂ ಮಾತಾಡುತ್ತಿದೆ. ಮನಸು ಬೇಸರದ ಮೋಡವನ್ನು ಬಿಟ್ಟು ಆಚೆ ಬಂದಿತ್ತು. FIFA WC ಸುದ್ದಿ. ಮತ್ತದೇ ಮೆಸ್ಸಿ, ಕ್ರಿಸ್ಟಿಯಾನೋ ರೋನಲ್ದೋ, ಕಾಕಾ,ರೂನಿ ಎಲ್ಲರಿಗೂ ನನ್ನ ಮಾಮೂಲಿ ಸ್ಟೈಲಿನಲ್ಲಿ ಲೈನ್ ಹೊಡೆಯ ತೊಡಗಿದೆ. ಅವನ ತಲೆ ತಿನ್ನತೊಡಗಿದೆ. ಗೆಳೆಯ ನಗುತ್ತಿದ್ದ ಜೋರಾಗಿ "ಅದ್ಯಾಕೋ ಹಲ್ಕಿರೀತಿಯಾ ನೀನೊಬ್ನೇ brush ಮಾಡ್ತೀಯ ಅನ್ನೋ ಥರ" ಎಂದಿದ್ದೆ. ನಗುವಿನ ಅಲೆ ಇನ್ನೂ ಜೋರಾಯ್ತು . ಜೊತೆಗೆ ಇನ್ನೊಂದು ಪರಿಚಯದ ಧ್ವನಿ.


"ನೀನು ಹೀಗೆ ತಲೆ ತಿಂತಾ ಇದ್ರೇನೆ ಚಂದ ನಮಗೆ .ನಿನ್ನ ಮೌನ ಸಹಿಸಲು ಅಸಾಧ್ಯ ಗೆಳತೀ " ಎಂದು ನಾಟಕೀಯವಾಗಿ ಎಂದಿದ್ದಳು ನನ್ನೊಲವಿನ ಗೆಳತಿ 'ಸಂಧ್ಯಾ'. "ಹೇಯ್ ಕತ್ತೆ ನೀನೆಲ್ಲೇ ಇದೀಯಾ.. ?" ಎಂದೆ. icecream ತಿನ್ತಿದೇನೆ ಬೇಕಾ ?"ಎಂದಳು. "ಪಿಶಾಚೀ ನನ್ನ ಬಿಟ್ಟು ತಿಂದರೆ ನೀ ಉದ್ಧಾರ ಆಗೋದಿಲ್ಲ ಎನ್ನುತ್ತಲೇ " ಅಕ್ಷರಶಃ ಕೂಗಿಬಿಟ್ಟಿದ್ದೆ ನಾನು ..! "ಅಂತೂ ನಮ್ ಟ್ರೈನ್ track ಗೆ ಬಂದು speed pick up ಮಾಡ್ತು "ಅಂದಳು ಅವಳು. ನಕ್ಕು ಬಿಟ್ಟಿದ್ದೆ . " ನಿನ್ನನ್ನೇ ಕಾಯ್ತಾ ಇದ್ದೇವೆ stupid ಬೇಗ ಹೊರಡು.. ಹೋಗಿ ಮುಖ ತೊಳ್ಕೋ. ಬರೋವಾಗ ನಿನ್ನ ಗುಳ್ಳೆ (bubbler) ಬಾಟಲಿ ತಗೊಂಡು ಬಾರೆ " ಅಂದಿದ್ದಳು. ಮನಸು ಸುಟ್ಟ ಬೂದಿಯಿಂದೆದ್ದು ಬರುವ 'ಫೀನಿಕ್ಸ್' ಪಕ್ಷಿಯಂತೆ ಹಾರುತ್ತಿತ್ತು ಮುಗಿಲೆತ್ತರಕ್ಕೆ..!


ಸಂಬಂಧಗಳ ಜಂಜಾಟವಿಲ್ಲದೆ ಬೆಳೆಯುವ ಸ್ನೇಹಕ್ಕೆ ಅದೆಷ್ಟು ಶಕ್ತಿ ?ಅದಕ್ಕೆ ನಾನು ಸಂಬಂಧಗಳಿಗಿಂತ ಸ್ನೇಹಿತರನ್ನೇ ಹೆಚ್ಚು ನಂಬುವುದು. ಬರೋಬ್ಬರಿ ಐದಡಿ ಎಂಟು ಇಂಚು ಎತ್ತರದ ನನ್ನಲ್ಲಿ ಪುಟ್ಟ ಹುಡುಗಿಯನ್ನೇ ಹುಡುಕುವ ನನ್ನ ಆ ಎರಡು ಸ್ನೇಹಿತರಿಗೆ ಮನದಲ್ಲಿ ಥ್ಯಾಂಕ್ಸ್ ಹೇಳುತ್ತಲೇ ನನ್ನ 'ಗುಳ್ಳೆ ಬಾಟಲಿಯನ್ನು' ಹುಡುಕಲು ಕುಣಿಯುತ್ತಲೇ ಸಾಗಿದ್ದೆ ...! ಮತ್ತೆ ನಾನು ನಾನಾದೆ.. !

Saturday, June 19, 2010

ಸಾವೆಂದರೆ .......




ಮರಳ ಗಡಿಯಾರದಲ್ಲಿನ ಕಣಗಳಂತೆ ಸೋರಿಹೋಗುವ ಕಾಲ
ಇತಿಹಾಸವಾಗಿ ಭೂತದೊಳಗೆ ಸೇರಿಹೋಗುವ ಕ್ಷಣಗಳು
ಅದೆಲ್ಲೋ ಎಚ್ಚರಿಸುತ್ತಿದೆ ಸಾವಿನ ಗಂಟೆಯ ಸದ್ದು.
ಸರಿಯುತ್ತಿದ್ದೇವೆ ನಾವು ಸತ್ಯದ ಅಂಚಿಗೆ ..
ಸಾವೊಂದು ನಗ್ನ ಸತ್ಯ ಉಳಿದಿದ್ದೆಲ್ಲವೂ ಸುಳ್ಳು !
ಕೆಲವರಿಗೆ ಕೈಲಾಸ, ವೈಕುಂಠ, ದೇವರ ಸಹವಾಸ..
ಕೆಲವರಿಗೆ ಜಗತ್ತಿನ ಯಾವುದರ ಪರಿವೆಯಿಲ್ಲದ ಗೋರಿಯೊಳಗಿನ ಸುಖ ನಿದ್ರೆ ...
ಯೋಧರಿಗೆ ಸೋಲೇ ಸಾವು ....
ಹುಟ್ಟಿನೊಂದಿಗೆ ಸಾಗುವ ನೆರಳು ಈ ಸಾವು
ಸಾವೆಂದರೆ ಯಮಪಾಶ,ನರಳಾಟ,ರಕ್ತದೋಕುಳಿ
ಕೊನೆಗೆ ಸಾವೆಂದರೆ ಮುಕ್ತಿ ..
ಆತ್ಮಕ್ಕೆ ಮರುಹುಟ್ಟುಕೊಡುವ ಶಕ್ತಿ ..!

ಕಂಸನನ್ನು ಕಾಡಿದ್ದು ಇದೇ ಸಾವು ..
ಸಾವಿತ್ರಿ ಗೆದ್ದದ್ದು ಇದೇ ಸಾವು ..
ಹಿಟ್ಲರ್, ಸದ್ದಾಂ, ಇದಿ ಅಮಿನ್ ,ಸ್ಟಾಲಿನ್ ರ ಕ್ರೌರ್ಯದ ಕೊನೆ ಸಾವು..
ರಾತ್ರಿ ರಾಹುಲನ ಬಿಟ್ಟು ಹೊರಟ ಸಿದ್ಧಾರ್ಥನ ಬುದ್ಧನನ್ನಾಗಿಸಿದ್ದು ಒಂದು ಸಾವು ..!
ನಮ್ಮೆಲ್ಲರ ಎದುರಿಗಿರುವ ಸತ್ಯ ಸಾವು ..!
ಸತ್ಯಂ ಶಿವಂ ಸುಂದರಂ ..!

Friday, June 18, 2010

ಚಿಟ್ಟೆಗಳ ಲೋಕದಲ್ಲೊಂದು ಪಯಣ ....


ಮಳೆಗಾಲದಲ್ಲಿ ಮಳೆಹನಿಯಲ್ಲಿ ನೆನೆಯುತ್ತಲೇ ಅರಳುವ ಹೂವುಗಳು ಹಲವು. ಹೂ ಅರಳಿ ಕಂಪು ಬೀರಿದೊಡನೆ, ಮುಂಜಾನೆಯ ಅರುಣೋದಯ ಕಾಲದಲ್ಲೇ ಬರುವವು ದುಂಬಿಗಳ ಹಿಂಡು. ನಂತರ ಚಿಟ್ಟೆಗಳ ಕಾರುಬಾರು. . Egg > Caterpillar > Pupa >Butterfly ಎಂಬ ನಾಲ್ಕು ಹಂತಗಳಲ್ಲಿ ವಿಕಾಸಗೊಂಡು, ಮೈಮೇಲೆ ಬಣ್ಣಗಳನ್ನೂ, ಚುಕ್ಕಿಗಳ ಚಿತ್ತಾರವನ್ನೂ ಬಿಡಿಸಿಕೊಂಡು ಹೆಮ್ಮೆಯಿಂದ ಹಾರಾಡುತ್ತವೆ. ಹಲವು ಕವಿಗಳ ಕವಿತೆಯ ವಸ್ತುವಾಗಿರುವ ಚಿಟ್ಟೆಗಳದ್ದು ಕನಸಿನ ಲೋಕ








ಚಿಕ್ಕವಳಿದ್ದಾಗ ಅದರ ಹಿಡಿಯಲು ಅದರ ಬೆನ್ನು ಹತ್ತುತ್ತಿದ್ದ ನಾನು. ಈ ಬಾರಿ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದ್ದೇನೆ..















ಪರಿಸರ ಮಾಲಿನ್ಯದಿಂದಾಗಿ ನಗರಗಳಲ್ಲಿ ವಿರಳ ಎನಿಸಿರುವ ಈ ಹಾರಾಡುವ ಹೂಗಳು ಹೆಚ್ಚೆಂದರೆ ಹದಿನೈದು ದಿನಗಳು ಬದುಕುತ್ತವೆಯಂತೆ...! ನಮ್ಮನೆಯ ಹೂದೋಟದಲ್ಲಿ ಬರುವ ಸಾಮಾನ್ಯ ಚಿಟ್ಟೆಗಳ ಲೋಕದಲ್ಲೊಂದು ಪಯಣ.




































Saturday, May 22, 2010

ಕಾಡಿಸಿತ್ತು ಬೇಸಿಗೆ ಮಳೆ ...




ಮೊನ್ನೆ ಇಡೀ, ಏಕತಾನತೆಯಿಂದ ಎಲ್ಲೋ ಕಳೆದು ಹೋಗಿದ್ದೇನೆ ಅನಿಸುತ್ತಿತ್ತು ನನಗೆ . ಒಂದು ಮಳೆಯಾದರೂ ಬರಬಾರದೇ . ಭೂಮಿ, ವಾತಾವರಣ, ಕೊನೆಗೆ ಮನಸ್ಸು, ಎಲ್ಲ ಒಮ್ಮೆ ತಂಪಾಗಬಾರದೆ ಎಂದುಕೊಳ್ಳುತ್ತಿದ್ದೆ .
ಬೇಸಿಗೆ ಮಳೆಯ ಮಜವೇ ಬೇರೆ. ಹಗಲಿನಲ್ಲಿ ಸೂರ್ಯನ ಶಾಖಕ್ಕೆ ಕಾದ ಭೂಮಿಗೆ, ಮಳೆಯ ಸಿಂಚನವಾದೊಡನೆ, ಪ್ರಕೃತಿಯಲ್ಲೆಲ್ಲ ಘಮ ಘಮ. ಮಣ್ಣ ಕಂಪು, ಮಳೆಯ ತಂಪುಗಳ wonderful combination.! ಆಗ ಕೈಯಲ್ಲೊಂದು icecream ಇದ್ದರಂತೂ ಅದೇ ಸ್ವರ್ಗ. ಅಂತದ್ದೇ ಒಂದು ಮಳೆಗೆ, ಒಂದು ಕಾಮನಬಿಲ್ಲಿಗೆ ಮನಸು ಕಾದಿತ್ತು.
ನನ್ನ ತಳಮಳ ಅರ್ಥವಾಗಿರಬೇಕು ಮೇಘ ರಾಜನಿಗೆ . ಪೂರ್ವ ದಿಕ್ಕಿನಲ್ಲಿ ಮೇಘ ಸಂದೇಶ, ಕಾಳಿದಾಸನ ಮೇಘದೂತ ಮನದ ಪಟದಲ್ಲಿ ಹಾದು ಹೋಗಿದ್ದ . ಸಂಜೆ ೬-೭ರ ಸುಮಾರಿಗೆ ಮಳೆ ಸುರಿಯಬಹುದೆಂದು ಎಣಿಸಿದ್ದೆ, ಬರಲೇ ಇಲ್ಲ ಮಳೆ. ಮಳೆ ಕಾಡಿತ್ತು , ಕಂಗೆಡಿಸಿತ್ತು.
ರಾತ್ರಿಯ ಊಟ ಮುಗಿಸಿ ರೂಮಿಗೆ ಬರುವಾಗಲೇ ಮಿಂಚುತ್ತಿತ್ತು ಬಾನು. 'ಆಂಟೀ ಮಳೆ ಬಂದ್ರೆ ಸಾಕು' ಎಂದು PG ಆಂಟೀ ಹತ್ರ ಹೇಳಿ, ರೂಮಿಗೆ ನಡೆದಿದ್ದೆ. ರಾತ್ರಿ ಕರೆಂಟು ಕೈ ಕೊಟ್ಟಾಗಲೇ ನನಗೆ ಎಚ್ಚರವಾದದ್ದು . ನನ್ನ ರೂಮಿನಲ್ಲಿದ್ದ ಕತ್ತೆಲೆಗೆ ಸೆಡ್ಡು ಹೊಡೆಯುತ್ತಿದ್ದ ಮಿಂಚು ಬಳ್ಳಿಗಳು. ಪಕ್ಕದ ಗುಡ್ಡಗಳಿಗೆ ಬಡಿದು ಪ್ರತಿಧ್ವನಿಸಿ ನನ್ನ ರೂಮಿನಲ್ಲೇ ಕೊನೆಯಾದಂತೆ ಭಾಸವಾಗುವ ಗುಡುಗು.ತರಗೆಲೆಗಳ ಶಬ್ದದೊಂದಿಗೆ ಬೀಸುತ್ತಿದ್ದ ಗಾಳಿ. ಹಾಗೆ ಪಟ ಪಟನೆ ಮಳೆ ಹನಿಗಳು ಬೀಳತೊಡಗಿದವು. ಮಳೆ ಭೋರೆಂದು ಸುರಿಯ ತೊಡಗಿತು. ಬಿಟ್ಟು ಹೋದ ಹುಡುಗನನ್ನು ನೆನೆದು ಅಳುತ್ತಿದ್ದ ಹುಡುಗಿಯಂತೆ ರೋಧಿಸುತ್ತಿತ್ತು ಬಾನು.
ಹೊರಗಡೆ ಮಳೆ ಹನಿಯ ಅದೇ ಚಟಪಟ..ನನ್ನ ರೂಮಿನ ಹೊರಗೆ ಹಾಕಿರುವ ನೀಲಿ ಬಣ್ಣದ ತಾಡಪತ್ರೆಯ (plastic sheet) ಮೇಲೆ. ಪಕ್ಕದ ಮನೆಯ ಹಲವು ಮಳೆಗಾಲಗಳನ್ನು ಕಂಡಿರುವ ಅರೆ ಕಪ್ಪು ಬಣ್ಣದ ಹೆಂಚುಗಳ ಮೇಲೆ,ಎದುರಿಗಿರುವ ಹಳದಿ ಗುಲ್ ಮೊಹರ್ ಗಿಡದ ಮೇಲೆ, ಕೆಸುವಿನ ಎಳೆಗಳ ಮೇಲೆ , ಅಂಗಳಕ್ಕೆ ಹಾಸಿರುವ ಕಲ್ಲಿನ ಮೇಲೆ ಬೀಳುವ ಮಳೆಹನಿಗಳ ಸದ್ದು ಬೇರೆ ಬೇರೆ ಇದ್ದಂತ ಭಾವ,ನನ್ನದೇ ಕಲ್ಪನೆಯ ಲೋಕ.
ಮನೆ,ಅಮ್ಮ ಎಲ್ಲವೂ ನೆನಪಾಗಿದ್ದವು. ನನ್ನ ಪುಟ್ಟ ರೂಮಿನ, ಪುಟ್ಟ ಮಂಚದ ಮೂಲೆಯಲ್ಲಿ ಅಮ್ಮನ ನೈಟಿಯನ್ನು ಹಿಡಿದು ಮುದುರಿ ಕುಳಿತಿದ್ದೆ. ಮಳೆಯ ಚಟಪಟಕ್ಕೆ ಮನದಲ್ಲಿ ನೆನಪುಗಳ ಜಾತ್ರೆ . ಜಾತ್ರೆಯಲ್ಲಿ ಇರುವವರು ಯಾರು ಎಂದು ಪತ್ತೆ ಹಚ್ಚುವುದರ ಒಳಗೆ ಬಂದ ಕರೆಂಟು, ಕಟ ಕಟ ಸದ್ದಿನೊಂದಿಗೆ ತಿರುಗಲು ಶುರುವಿಟ್ಟುಕೊಂಡ ಫ್ಯಾನು.ನೆನಪುಗಳ ಸರೋವರದಲ್ಲಿ ಯಾರೋ ಕಲ್ಲೆಸೆದ ಭಾವನೆ. ಮನದಲ್ಲೇನೋ ಕಸಿವಿಸಿ. ನೆನಪುಗಳ ಪ್ರವಾಹಕ್ಕೆ ತಡೆಯೊಡ್ಡಿ ಕಿಟಕಿ ತೆರೆದೆ...
ಕಾದ ಮಣ್ಣಿನಲ್ಲಿ ಮಳೆಹನಿ ಇಳಿವ ಭರಕ್ಕೆ ಎದ್ದ ಮಣ್ಣ ಕಂಪು. ಆ ಕಂಪಿಗೆ ಸಣ್ಣಕೆ ರೋಮಾಂಚಿತಗೊಂಡಿತ್ತು ಮನಸು. ಕಿಟಕಿಯಿಂದಲೇ ಮಳೆಹನಿಯನ್ನು ಹಿಡಿಯುವ ಪುಟ್ಟ ಪ್ರಯತ್ನವನ್ನೂ ಮಾಡಿದ್ದೆ. ಆಗಲೇ ನೆನಪಾಗಿತ್ತು. ಅಮ್ಮ ಜೋರು ಮಳೆ ಸುರಿಯುತ್ತಿರುವಾಗ ದೋಸೆ ಎರೆಯುತ್ತ, ಅಥವಾ ಮಳೆಗಾಲದಲ್ಲಿ ಕರೆಂಟು ಕೈಕೊಟ್ಟಾಗ ತನ್ಮಯಳಾಗಿ ಹಾಡುತ್ತಿದ್ದ ಮಳೆ ಹಾಡು. ಕವಿ ಸಿದ್ದಯ್ಯ ಪುರಾಣಿಕರು ಬರೆದ ಭಾವಗೀತೆಗೆ ಅಮ್ಮ ಜೀವ ತುಂಬಿ ಹಾಡುತ್ತಾಳೆ. ಆ ಕವನದ ಸಾಲುಗಳು ಹೀಗಿವೆ. :
ಮೋಡಗಳ ಜಡೆಬಿಚ್ಚಿ ಮೈದೊಳೆದುಕೊಳುತಿಹಳು
ಬಯಲ ಭಾಮಿನಿ ಜಗದ ಮಣೆಯ ಮೇಲೆ
ಕೇಶರಾಶಿಯ ನೀರು ತೊಟ್ಟಿಕ್ಕಿ ಸುರಿಯುತಿದೆ
ಇದಕೆ ಜನವೆನ್ನುವುದು ಮಳೆಯ ಲೀಲೆ
ಮಳೆಯ ಹನಿ ಮಧು ನೆಲಕೆ ಈ ಜಗದ ಮೃತ್ತಿಕೆಯ
ಕಣಕಣವು ಮಧುವ್ರತವು ಸೃಷ್ಟಿಯೆಂಬ
ಹುಟ್ಟಿನಲಿ ಶೇಖರಿತವಾಗುತಿದೆ ಮಧುಕೋಶ
ಮಾಧುರ್ಯ ಪಸರಿಸಿದೆ ತಿರೆಯ ತುಂಬ
ಹುಲ್ಲ ಹಾಸಿನ ಮೇಲೆ ಮಳೆವನಿಯ ಸೇಸೆಯಿದು
ಯಾರ ಪರಿಣಯಕಾಗಿ ? ಹೇಳು ಕವಿಯೇ!
ಆಗಸದ ಹಂದರಕೆ ಮಳೆಯ ಮುತ್ತಿನ ಸರವು
ಆಗಿಹುದು ಮದುವೆಮನೆ ಬುವಿಗೆ ಬುವಿಯೇ
ನೆಲಮುಗಿಲನಪ್ಪಿದುದೋ ಮುಗಿಲೆ ನೆಲನಪ್ಪಿದುದೋ
ಮಳೆಯಲ್ಲಿ ಬದಲಾಯ್ತು ಬಯಲಿನಂತರವು ;
ಎಲ್ಲ ನೆಲ ಎಲ್ಲ ಜಲ, ಎಲ್ಲ ಅಂಬರ ತಲವು
ನೆಲ ಮುಗಿಲು ಬಯಲೆಂಬ ಭೇದ ಆವಾಂತರವು
ಜಗದ ಪೀಠದ, ಬಯಲ ಗೋಲಕದ ಮಿಂಚುಗಳ
ಪಂಚ ಸೂತ್ರದ ಲಿಂಗ-ಮಳೆಯ ಅಭಿಷೇಕ !
ನೀರಲ್ಲ ಇದು ತೀರ್ಥ, ವಿಶ್ವ ಲಿಂಗೋದಕವು
ಆಗಲಿನ್ನಾದರೂ ನರಕ ನಾಕ .
ಅರ್ಥ ಪೂರ್ಣ ಕವನ ಅಲ್ವಾ ? ಕವಿಯ ಕಲ್ಪನೆಗೊಮ್ಮೆ hats off ಎಂದಿದ್ದೆ . ಇದೇ ಹಾಡು ಗುಮ್ಮನಂತೆ ಕಾಡಿತ್ತು .ಫೋನ್ ಮಾಡಿ ಅಮ್ಮನನ್ನು ಹಾಡೆಂದು ಕೇಳಲು ಗಂಟೆ ೧೨.೪೫ .! ಅದೇ ಹಾಡು ಗುಯ್ಯ್ ಗುಡುತ್ತಿತ್ತು ಕಿವಿಯಲ್ಲಿ . ಹಾಗೆ ಮುಸುಕೆಳೆದು ಮಲಗಿದ್ದೆ. ಭರ್ರ್ಎಂದು ತಿರುಗುತ್ತಿದ್ದ ಫ್ಯಾನ್ ಸದ್ದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಓದುತ್ತಿದ್ದ ವಾಹನಗಳ ಸದ್ದಿಗೆ ಮಳೆಯ ಚಟಪಟ ಅಡಗಿಕೊಂಡಿತ್ತು. ಅರೆ ಮಂಪರು... ಕಿವಿಯಲ್ಲಿ ಯಾರೋ ಅದೇ ಹಾಡನ್ನು ಗುನುಗಿದಂತೆ. ಹಾಗೆ ನಿದ್ದೆ ಹೋಗಿದ್ದೆ .
ಬೆಳಿಗ್ಗೆ ಎಚ್ಚರವಾದಾಗ ಭರ್ತಿ ೭ ಗಂಟೆ. ದಡಬಡಿಸಿ ಎದ್ದಿದ್ದೆ ,.. ಬಾಗಿಲು ತೆರೆಯುತ್ತಿದ್ದಂತೆ ನಗು ಚೆಲ್ಲಿದ ಬೆಳಕು .ಹಾಗೆ ಬರಿಗಾಲಲ್ಲೇ ಗುಲ್ ಮೊಹರ್ ಗಿಡದತ್ತ ಓಡಿದ್ದೆ . ತಂಗಾಳಿ ಹೊಂಬೆಳಕುಗಳ ಸುಂದರ ಸಮಾಗಮ. ಗಿಡದಲ್ಲಿ ಕೂತಿದ್ದ ಮಿಂಚುಳ್ಳಿಯೊಂದು ನನ್ನ ನೋಡುತ್ತಲೇ ಹಾರಿತ್ತು.ಗುಲ್ಮೊಹರ ಗಿಡದಿಂದ ಹೂ-ಮಳೆಹನಿ ಎರಡೂ ನನ್ನ ಮೇಲೆ ಉದುರುತ್ತಿತ್ತು . ಮನಸ್ಸಿಗೆ ಅದೇನೋ ಅವ್ಯಕ್ತ ಆನಂದ.. ನನಗೆ ಅರಿವಿಲ್ಲದಂತೆ ಗುನುಗುತ್ತಿದ್ದೆ 'ಮುಂಜಾವಿನಲಿ ತುಂತುರಿನ ಸೋನೆ ಮಳೆ ..'
ಬೇಸಿಗೆಯ ಒಂದು ಮಳೆ ಅದೆಷ್ಟು ಅಪ್ಯಾಯಮಾನ. ಮನೆಯ ನೆನಪನ್ನು ಗುಮ್ಮನಂತೆ ಕಾಡಿಸಿ. ಬೆಳಿಗ್ಗೆ ಹೊಸ ಜಗತ್ತನ್ನು ತೋರಿಸಿದ ಮಳೆಗೆ ಮನದಲ್ಲೇ thanks ಎಂದಿದ್ದೆ

Monday, May 17, 2010

ಚಂದಿರನ ಮೇಲೆ ಮನೆಯ ಕಟ್ಟುವರಂತೆ ...


ಅಜ್ಜ ಮೊಮ್ಮಗನ ಸಂಬಂಧವನ್ನು ಕಥನ ಕವನದಲ್ಲಿ ಹಿಡಿದಿಡುವ ಒಂದು ಸಣ್ಣ ಮುಗ್ಧ ಪ್ರಯತ್ನ ಚಂದ್ರಯಾನದ ಕುರಿತು ಅದೆಲ್ಲೋ ಕೇಳಿದ್ದ ಪುಟ್ಟನ ಮುಗ್ಧ ಕಲ್ಪನೆ ಅದಕ್ಕೆ ಮಾತಿನ ರೂಪ ..ಉತ್ತರವಾಗಿ ಭಾವಗಳನ್ನು ಹೊರಸೂಸುವ ಅಜ್ಜಾ :
ದಶಕಗಳ ನೆರಿಗೆಯಿರುವ ಅಜ್ಜನ ಕೈಹಿಡಿದು
ರಾತ್ರಿಯ ವಿಹಾರಕ್ಕೆ ಹೊರಟಿರುವ ಪುಟ್ಟ ....
ಬಾನಲ್ಲಿ ನಗುತ್ತಿರು ಚಂದಿರನ ಕಂಡ ಪುಟ್ಟನ
ಮನದಲ್ಲೊಂದು ದೊಡ್ಡ ಪ್ರಶ್ನೆ ...
ಚಂದಿರನ ಮೇಲೆ ಮನೆಯ ಕಟ್ಟುವರಂತೆ
ಭುವಿಯಿಂದ ಬಾನಿಗೆ ಏಣಿ ಹಾಕುವರಂತೆ
ಹೌದಾ ಅಜ್ಜಾ?? ....
ಮುಗುಳ್ನಕ್ಕ ಅಜ್ಜನ ಉತ್ತರಕ್ಕೂ ಕಾಯದೆ ಪುಟ್ಟ ಮುಂದುವರೆದ ..
ಅಮ್ಮ ಹೊಡೆಯಲು ಬಂದಾಗ ಸರಸರನೆ ಏಣಿ ಏರಿ
ಚಂದಿರನ ಮನೆಯಲ್ಲಿ ಅಡಗಿಕೊಂಡರಾಯಿತು
ಅಮ್ಮ ಡುಮ್ಮಿ ಬೇಗ ಏರಲಾರಳು ಅಲ್ವಾ?
ಚಂದಿರನ ಮೇಲಿಂದ ಇಣುಕಬೇಕು...
ನಮ್ಮ ಮನೆಯ ಪತ್ತೆ ಹಚ್ಚಿ ಕೂಗಬೇಕು
ಹಾರುವ ವಿಮಾನಗಳ ಹಿಡಿಯಬೇಕು
ಹಕ್ಕಿಗಳ ಜೊತೆ ಮಾತನಾಡಬೇಕು
ಬಾನೇರಿ ಮಿನುಗುವ ತಾರೆಗಳ ಸೊಕ್ಕು ಮುರಿಯಬೇಕು
ಮೊನ್ನೆ ಅಕ್ಕನ ಜೊತೆ ಸೇರಿ ಹಾರಿಸುತ್ತಿದಾಗ ಕಳೆದ
ಗಾಳಿಪಟವನು ಹುಡುಕಬೇಕು ..
ಚಂದಿರನಿಂದ ಭೂಮಿಗೆ ಕಾಗದದ ರಾಕೆಟ್ ಉಡಾಯಿಸಬೇಕು
ಮಾಡಿಕೊಡ್ತಿಯ ಅಲ್ವಾ ಅಜ್ಜಾ ? ಎಂದ ಪುಟ್ಟ
ಕಾಲೇಜಿನ ದಿನಗಳಲ್ಲಿ ಅಜ್ಜಿಗೆ ಕಾಗದದ ರಾಕೆಟ್ ಬಿಟ್ಟ
ನೆನಪಾಗಿರಬೇಕು ಅಜ್ಜನಿಗೆ .
ಕೃತಕ ಹಲ್ಲುಗಳಿಗೆ ಜೀವ ತುಂಬಿಸಿಬಿಟ್ಟ ತನ್ನ ನಗೆಯಿಂದ ..
ತಾರಸಿಯ ಮನೆ ಬೇಡ ಅಜ್ಜಾ ...
ಹಳ್ಳಿಯ ಸೋಗೆಮನೆಯಂತೆ ಇರುವ ಮನೆಯೊಂದನ್ನು ಕಟ್ಟಿಬಿಡುವ
ಇಡೀ ದಿನ ಆಫೀಸು ಕೆಲಸವೆನ್ನುವ ಪಪ್ಪನೂ ಬೇಡ
ಕ್ಲಬ್ಬು-ಪಾರ್ಟಿ ಎಂದು ನನ್ನ ಕೈಗೆ ಸಿಗದ ಮಮ್ಮಿಯೂ ಬೇಡ
ನೀನು ವೃದ್ಧಾಶ್ರಮವನ್ನು ಸೇರುವುದೂ ಬೇಡ
ನಾನು-ನೀನು ಇಬ್ಬರೇ ಅಲ್ಲಿ ..
ಆಯ್ತಾ ಅಜ್ಜಾ ?ಎಂದ ಪುಟ್ಟನ ಮುಗ್ಧ ಪ್ರಶ್ನೆಗೆ
ಉತ್ತರವಾಗಿ ಅಜ್ಜನ ಕಣ್ಣುಗಳಿಂದ ನೀರಿಳಿಯುತ್ತಿತ್ತು ..!

Thursday, April 15, 2010

ಜುಟ್ಟು ಗೊಂಬೆ ನೆನಪಾಗಿ ಕಾಡುತಿದೆ....




ನಿನ್ನೆ ನನ್ನ ರೂಮ್ clean ಮಾಡ್ತಾ ಇದ್ದೆ . ಕಣ್ಣು albumಗಳ ಸಾಲಿನತ್ತ ಹಾಯಿತು . ಯಾಕೋ ನನ್ನ ಬಾಲ್ಯದ ಫೋಟೋಗಳನ್ನು ನೋಡಬೇಕು ಅನಿಸಿಬಿಡ್ತು. album ತೆರೆದು ನೋಡತೊಡಗಿದೆ . ಅದೆಷ್ಟು ಮುದ್ದಾಗಿದ್ದೆ ನಾನು ..! ನೋಡಿದ ತಕ್ಷಣವೇ ಎಲ್ಲರೂ ನನ್ನ nick-name 'ಪುಟ್ಟಿ' ಎಂದು ಕರೆಯುವಷ್ಟು ..! ಹಾಗೇ ಪುಟಗಳನ್ನೂ ತಿರುವುತ್ತಿದ್ದ ನಾನು, ಒಂದು ಕಡೆ ನಿಂತುಬಿಟ್ಟಿದ್ದೆ . ಆ ಫೋಟೋದಲ್ಲಿ ನನ್ನ ಕೈಯಲ್ಲಿದ್ದ ಎರಡು ಗೊಂಬೆಗಳು ನನ್ನನ್ನು ಸೆಳೆದಿದ್ದವು ಮತ್ತೊಮ್ಮೆ. ಸುಮಾರಾಗಿ ನನ್ನನ್ನೇ ಹೋಲುತ್ತಿದ್ದ 'ಜುಟ್ಟು ಗೊಂಬೆಗಳು' ಅವು ನಾನು ಅವುಗಳನ್ನು ಕರೆಯುತ್ತಿದ್ದದ್ದೂ ಅದೇ ಹೆಸರಿನಿಂದಲೇ. ಪುಟ್ಟದಾದ ಅಂಗಿ, ಕಪ್ಪನೆಯ ಒಂದು ಜುಟ್ಟು ಇದ್ದು ,ಲಕ್ಷಣವಾಗಿದ್ದ ಪುಟ್ಟ ಹೆಣ್ಣು ಗೊಂಬೆಗಳು ಅವು . .! ಫೋಟೋದಲ್ಲಿ ಪುಟ್ಟಿಯ ಪುಟ್ಟ ಪುಟ್ಟ ಕೈಗಳಲ್ಲಿ ಕಂಗೊಳಿಸುತ್ತಿದ್ದವು .


ಹೆಚ್ಚಾಗಿ ಹೆಣ್ಣುಮಕ್ಕಳು ತಮ್ಮ ಬಾಲ್ಯದಲ್ಲಿ ಗೊಂಬೆಗಳ ಜೊತೆ ಆಡುವುದನ್ನು ಹಾಗೂ ಅಡುಗೆ ಆಟವನ್ನು ಇಷ್ಟ ಪಡುತ್ತಾರೆ ಇದನ್ನು ನೀವೂ ನೋಡಿರಬಹುದು. ಒಂದು ಮಗು ಅನುಕರಣೆಯ ಮೂಲಕವೇ ಎಲ್ಲವನ್ನು ಕಲಿಯುವುದಲ್ಲವೇ ? ಹೆಣ್ಣು ಮಗುವಿಗೆ ತನ್ನ ಹಾಗೇ ಇರುವ ಅಮ್ಮ role model ಆಗಿ ಬಿಡುತ್ತಾರೆ. ಅವರನ್ನೇ ಅನುಕರಿಸುತ್ತದೆ ಅದು . ಅಮ್ಮ ಅಡುಗೆಮನೆಯಲ್ಲಿ ಅಡುಗೆ ಮಾಡುವುದನ್ನು, ಪುಟ್ಟ ಪಾಪುವನ್ನು ಮಲಗಿಸುವುದನ್ನು ನೋಡುತ್ತಾ ಹೆಣ್ಣು ಮಗು ಅದರದೇ ಜಗತ್ತಿನಲ್ಲಿ,ಅದರದೇ ಆದ ರೀತಿಯಲ್ಲಿ ಅಮ್ಮನನ್ನು ಅನುಕರಿಸುತ್ತದೆ . ಅಮ್ಮ ತನ್ನ ಉದ್ದನೆಯ ಜಡೆಗೆ ಮೊಳ ಉದ್ದದ ಹೂ ಮಾಲೆ ಮುಡಿದರೆ, 'ಪುಟ್ಟಿ' ತನ್ನ ಬಾಬ್ ಕೂದಲಿಗೂ ಅಷ್ಟೇ ಉದ್ದದ ಹೂ ಬೇಕೆಂದು ಹಠ ಮಾಡುತ್ತಾಳೆ. ಗೊಂಬೆಗಳನ್ನು ಮಗುವಿನ ತರಹ ಜೋಪಾನ ಮಾಡುತ್ತದೆ . ಆ ಹೆಣ್ಣು ಮಗು ಆ ಗೊಂಬೆಗೆ ಪುಟ್ಟ ಅಮ್ಮನೇ ಆಗಿಬಿಡುತ್ತಾಳೆ.


ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇನೆ ಗೊತ್ತಾ ? ನಾನು ನನ್ನ ಬಾಲ್ಯದಲ್ಲಿ (ಸುಮಾರು ೩-೪ ತರಗತಿಯವರೆಗೂ ) ಗೊಂಬೆಗಳ ಜೊತೆ ಆಡಿದ್ದೆ, ಅವುಗಳಿಗೆ ಊಟ ಮಾಡಿಸಿದ್ದೆ, ಸ್ನಾನ ಮಾಡಿಸಿದ್ದೆ ಮಲಗಿಸಿದ್ದೆ (ನಂತರ ಕ್ರಿಕೆಟ್ ಆಡುತ್ತಿದ್ದೆ ಆ ಮಾತು ಬೇರೆ ). ಹೂ ಮುಡಿಯಲು ಅಮ್ಮನೊಂದಿಗೆ ಜಗಳವಾಡಿದ್ದೆ . ಗೊಂಬೆಗೂ ಹೂ ಮುಡಿಸಿದ್ದೆ, ಅವುಗಳೊಂದಿಗೆ ಮಾತನಾಡಿದ್ದೆ. ನನ್ನದೇ ಲೋಕದಲ್ಲಿ ಆ 'ನಿರ್ಜೀವ ಗೊಂಬೆಗಳ ಜೊತೆ ಜೀವಂತ ಗೊಂಬೆ ನಾನಾಗಿದ್ದೆ ..!' ಒಟ್ಟಿನಲ್ಲಿ ಅವು ನನ್ನ ನೆಚ್ಚಿನ ಗೊಂಬೆಗಳಾಗಿದ್ದವು. ಮೌನವಾಗಿ ನನ್ನ ಜೊತೆ ಸಂಭಾಷಿಸುತ್ತಿದ್ದವು.


ನಂತರದ ದಿನಗಳಲ್ಲಿ ಹೊನ್ನಿನ ಕೂದಲಿನ ವಿದೇಶಿ ಗೊಂಬೆಯೊಂದು ನನ್ನ ಕೈಸೇರಿತ್ತು . ನಾವು ಬಾಡಿಗೆ ಮನೆಯಿಂದ ಸ್ವಂತ ಮನೆಗೆ shift ಆಗುವಾಗ. ನನ್ನ ಜುಟ್ಟು ಗೊಂಬೆಗಳು ಕಳೆದು ಹೋಗಿದ್ದವು, ಮರೆತು ಹೋಗಿದ್ದವು .


ಮತ್ತೆ ನಿನ್ನೆ ಯಾಕೋ ನೆನಪಾಗಿ ಕಾಡಿದ್ದವು . ಆಲ್ಬಮ್ ತೆಗೆದಿಟ್ಟು ಸೀದಾ ಅಮ್ಮನ ಬಳಿ ಓಡಿದ್ದೆ "ಆಯಿ, ನನ್ನತ್ರ ಎರಡು ಜುಟ್ಟು ಗೊಂಬೆ ಇದ್ದಿತ್ತು ನೆನಪಿದ್ದಾ ?" ಎಂದೆ . "ರಾಶಿ ಚಂದಕಿದ್ದಿತ್ತು ಅಲ್ದಾ ?" ಎಂಬುದು ಅಮ್ಮನ reply.ನಾನು ಮುಂದುವರೆದು "ಈಗ ಸಿಕ್ತಿಲ್ಯಾ ಅದು? ನಂಗೆ ಬೇಕಾಗಿತ್ತು " ಎಂದು ಕೇಳಿದ್ದೆ. ಅಮ್ಮ ನಕ್ಕು "ಸಿಕ್ಕಗು ಜಾತ್ರೇಲಿ, ಕುಮಟಾದಲ್ಲಿ ಕೇಳಿ ನೋಡು " ಎಂದರು . ಸಂಜೆ ತಮ್ಮನ ಜೊತೆ ಕುಮಟ ಸುತ್ತುತ್ತ ಎಲ್ಲ fancy ಅಂಗಡಿಗಳನ್ನು ಕೇಳಿದ್ದೆ . ಎಲ್ಲ ಕಡೆ ಹೊನ್ನ ಕೂದಲ ಗೊಂಬೆಗಳದ್ದೇ ಕಾರುಬಾರು . ಅದು ಬಿಟ್ಟರೆ sexy lookನ ಬಾರ್ಬಿ ಗೊಂಬೆಗಳು, teddy bear ಗಳು. ಯಾವುದೂ ಇಷ್ಟ ಆಗಲೇ ಇಲ್ಲ. ಅದೆಲ್ಲ ಚಿಕ್ಕ ಮಕ್ಕಳು ಆಡೋದು ಅನಿಸಿ ಬಿಡ್ತು . ನನ್ನ ಕಂಗಳು ನನ್ನ 'ಜುಟ್ಟು ಗೊಂಬೆಯನ್ನು ' ಹುಡುಕುತ್ತಿದ್ದವು. ಎಲ್ಲೋ ಸಿಗಲೇ ಇಲ್ಲ . ಸಿಗಬಹುದೆಂಬ ಆಸೆಯಿಂದ ತಮ್ಮನ ಬೈಕ್ ಏರಿದವಳಿಗೆ ನಿರಾಸೆ ಕಾಡಿತ್ತು .


ವಾಪಸ್ ಮನೆಗೆ ಬಂದವಳಿಗೆ ಬಾಗಿಲು ದಾಟುತ್ತಲೇ ಅಮ್ಮನ ಪ್ರಶ್ನೆ "ಸಿಕ್ತನೆ ಜುಟ್ಟು ಗೊಂಬೆ ?" ನನ್ನ ಮುಖದಲ್ಲಿನ ನಿರಾಸೆ, ಧುಮುಕಲು ರೆಡಿ ಆಗಿರುವ ಜೋಗವನ್ನು ಕಂಡೇ ಅಮ್ಮನಿಗೆ ತಿಳಿದಿರಬೇಕು "don't worry ಪುಟ್ಟಿ,paper evaluation ಗೆ ಹೋದಾಗ ಅಲ್ಲಿ ಸಿಕ್ರೆ ತರ್ತೆ ಅಥವಾ ಮತ್ತೆಲ್ಲಿನ್ದಾರೂ ತರಿಸುವಾ "ಎಂದಾಗ ಒಂದು ಬಗೆಯ ನಿರಾಳ ಭಾವ . ಗಂಟಿಕ್ಕಿದ್ದ ಹುಬ್ಬು ಸಡಿಲವಾಗಿತ್ತು.


ಇನ್ನೂ ನೆನಪಾಗಿ ಕಾಡುತ್ತಿದ್ದೆ ಆ 'ಜುಟ್ಟುಗೊಂಬೆ'. ಯಾವಾಗ ನನ್ನ ಕೈಗೆ ಸಿಗುತ್ತದೋ ಕಾದು ಕುಳಿತಿದ್ದೇನೆ . ನಿಮಗೆಲ್ಲಿಯಾದರೂ ಸಿಕ್ಕರೆ ಪ್ಲೀಸ್ ತಿಳಿಸ್ತೀರಾ?