ಪರೀಕ್ಷೆಯ ಮುಗಿಸಿಕೊಂಡು ಬಂದ ಖುಷಿಯಲ್ಲಿ ಅಜ್ಜಿಮನೆಗೆ ನನ್ನ boy friend (ಕ್ಯಾಮೆರ) ಜೊತೆ ಹೋಗಿ ಮನೆಗೆ ಬಂದ ನನಗೆ ಸಣ್ಣಗೆ ತಲೆ ನೋವು, ಜ್ವರ . (ಹಾಗೆಲ್ಲ ಸುಮ್ಮನೆ ತಲೆ ನೋವು ಬರುವುದಿಲ್ಲ ಮಾರಾಯ್ರೆ. 'ತಲೆ' ಇದ್ದವರಿಗೆ ಮಾತ್ರ ತಲೆನೋವು ಬರುವುದಂತೆ.!). ಮಲೆನಾಡಿನ ಮಳೆಯಂತೆ ಮಾತನಾಡುವವಳು ಬಯಲು ಸೀಮೆಯ ಮಳೆಯಾಗಿಬಿಟ್ಟಿದ್ದೆ. ಕ್ಯಾಮೆರಾದ ಜೊತೆ ಅಲೆದದ್ದು ಜಾಸ್ತಿಯಾಯಿತೆಂದು ಪಪ್ಪ ಗೊಣಗುತ್ತಲೇ 'ಚಂದ್ರು' ಡಾಕ್ಟರರ ಬಳಿ ನನ್ನ ಕರೆದೊಯ್ಯಲು ತಯಾರಾದರು. ಅದೇನೋ ಒಂದು ಬಗೆಯ ಅಲರ್ಜಿ ಈ ಡಾಕ್ಟರಗಳೆಂದರೆ, ಅವರ ಗುಳಿಗೆಗಳೆಂದರೆ, ಚುಚ್ಚುವ ಸೂಜಿಗಳ ಕಂಡರೆ.! ಬಟ್ಟೆ ಬದಲಿಸಲು ಹೊರಟಾಗಲೇ ನನ್ನ ಎಡಗೈ ತೋಳಮೇಲೆ ಕಂಡದ್ದು ಸುಟ್ಟ ಗುಳ್ಳೆ.! ನಾನೆಲ್ಲಿ ಬಿಸಿ ಎಣ್ಣೆಯ ಸಿಡಿಸಿಕೊಂಡಿದ್ದೇನೆ ಎಂದು ಯೋಚಿಸುತ್ತಲೇ ಅಮ್ಮನಿಗೆ ತೋರಿಸಿದರೆ ಅಮ್ಮ "ಅಯ್ಯೋ ನಿನಗೆಲ್ಲಿಂದ ಬಂತೇ ಇದು.! chickenpox ಗುಳ್ಳೆ ಇದು "ಎಂದು declare ಮಾಡಿಬಿಟ್ಟರು..!
ಡಾಕ್ಟರರು chickenpox ಎಂದು confirm ಮಾಡಿ 3 ಇಂಜೆಕ್ಷನ್ ಚುಚ್ಚಿದರು.( ಹತ್ತನೇ ತರಗತಿಯಲ್ಲಿ TT ಇಂಜೆಕ್ಷನ್ ತೆಗೆದುಕೊಂಡ ನಂತರ ತೆಗೆದುಕೊಂಡ ಹ್ಯಾಟ್ರಿಕ್ ಇಂಜೆಕ್ಷನ್ಸ್ ಇವು). ಅದೃಷ್ಟ ಬಂದರೆ ಒದ್ದು ಬರುವುದಂತೆ ಹಾಗೆ ದುರಾದೃಷ್ಟವು ಕೂಡ.!.(chickenpox ನಿನ್ನ ವೇದಾಂತಿಯನ್ನಾಗಿ ಮಾಡಿದೆ ಅಂತೀರಾ? ) ಅಷ್ಟಕ್ಕೇ ಸುಮ್ಮನಿರದ ಚಂದ್ರು ಡಾಕ್ಟರರು ಪಥ್ಯವನ್ನು ಹೇಳಿಯೇ ಬಿಟ್ಟರು. "ನಂಜಿನದನ್ನೇನು ಕೊಡಬೇಡಿ, ಚಪ್ಪೆ ಊಟ, ಹಣ್ಣುಗಳನ್ನು ತಿನ್ನಬಹುದು." "ಮಾವಿನ ಹಣ್ಣು ತಿನ್ನಬಹುದಾ ?" ಇಂಜೆಕ್ಷನ್ ತೆಗೆದುಕೊಂಡ ನೋವಿನ ಎಡೆಯಲ್ಲೂ ನನ್ನ ಪ್ರಶ್ನೆ. "ಏನು ಮಾವಿನ ಹಣ್ಣಾ? " ಎನ್ನುತ್ತಾ ಇಲ್ಲ ಎಂದು ತಲೆ ಆಡಿಸಿ ಬಿಟ್ಟಿದ್ದರು.! ಮನೆಯಲ್ಲಿ ನನ್ನ ರೂಮಿನ ಪಕ್ಕದ ರೂಮಿನಲ್ಲಿ ನನಗಾಗಿ ಕಾಯುತ್ತಿರುವ ಬಂಗಾರದ ಬಣ್ಣದ ಮಾವಿನ ಹಣ್ಣುಗಳು ನನ್ನ ಅವಸ್ಥೆಯ ನೋಡಿ ಕಣ್ಣೀರಿಟ್ಟ೦ತೆ ಅನಿಸಿತು ನನಗೆ.! ಮಳೆಗಾಲದಲ್ಲಿ ಸುರಿಯುವ ಮಳೆಯನ್ನೂ ಕಿಟಕಿಯಿಂದ ನೋಡುತ್ತಾ ಹಲಸಿನ ಚಿಪ್ಸ್, ಹಲಸಿನ ಹಪ್ಪಳ-ಕಾಯಿಬೆಲ್ಲ ತಿನ್ನುವ ನನ್ನ ಕನಸಿನೆ ಬಲೂನಿಗೆ ಸೂಜಿ ಚುಚ್ಚಿದ ಅನುಭವ.!
ಬೆಳಿಗ್ಗೆ ತಿಂಡಿಗೆ ಗೋಧಿಯ ದೋಸೆ ಅಥವಾ ಚಪಾತಿ, ಸಪ್ಪೆ ಊಟ, ಬೇಯಿಸಿದ ತರಕಾರಿಯ ಹೋಳುಗಳು, ಹಣ್ಣುಗಳು ಇವಿಷ್ಟೇ ನನ್ನ ಆಹಾರ. ಹಿಂದೆ ಕಾಮಾಲೆಯಾಗಿದ್ದಾಗ ತಿಂದು ತಿಂದು ಬೇಜಾರು ಹಿಡಿಸಿದ್ದ 'ಗೋಧಿ ದೋಸೆಯನ್ನು ಇನ್ನು ಜೀವನದಲ್ಲಿ ಮುಟ್ಟುವುದಿಲ್ಲ' ಎನ್ನುವ ಶಪಥವನ್ನು.chickenpox ಒಂದೂವರೆ ವರ್ಷದಲ್ಲಿ ಅಳಿಸಿ ಹಾಕಿತ್ತು.! ಸ್ನಾನಕ್ಕೂ ಕೊಕ್ ಬೇರೆ.
ಹೀಗೆ 'ಸಪ್ಪೆ ದಿನಗಳು' ಕಳೆದು ಹದಿನೈದು ದಿನಗಳಾದಾಗ ಶುರುವಾಯಿತು ನೋಡಿ ಅಮೋಘವಾದ ಮೂರನೇ ಅಧ್ಯಾಯ! ಪರೀಕ್ಷೆ ಮುಗಿಸಿ ಮನೆಗೆ ಬಂದ ನನ್ನ ತಮ್ಮ, 7 aum arivu ಚಿತ್ರದಿಂದ ಸ್ಪೂರ್ತಿ ಪಡೆದಿದ್ದ ಪುಣ್ಯಾತ್ಮ,! ಬಂದವನೇ "ಅಕ್ಕಾ, ಚಂದ್ರನ ಮೇಲಿನ ಕಲೆಯನ್ನು ತೆಗೆಯಲಾಗದಿದ್ದರೆನಂತೆ? ನಿನ್ನ ಮುಖದ ಮೇಲಿನ ಕಲೆಯನ್ನೆಲ್ಲ ನಾನು ಕಳೆಯುತ್ತೇನೆ.." ಎಂದ ಒಮ್ಮೆ ನಾಟಕೀಯವಾಗಿ. ಆ ಡೈಲಾಗ್ ಕೇಳಿಯೇ ಒಮ್ಮೆ ಭಯವಾಗಿತ್ತು ನನಗೆ. ಅದ್ಯಾವುದೋ ಪುಸ್ತಕವನ್ನು ಓದಿ .ಅವನ ಇದ್ದು ಬಿದ್ದ ಆಯುರ್ವೇದ ಜ್ಞಾನವನ್ನೆಲ್ಲಾ ಸೇರಿಸಿ. ಏನೇನೋ ಎಲೆ, ಬೇರುಗಳನ್ನೆಲ್ಲ ತಂದು. ಕಹಿ ಕಷಾಯ ಮಾಡಿಸಿ ಕುಡಿಸಿಯೇ ಬಿಟ್ಟ ಭೂಪ..! ಚಂದ್ರು ಡಾಕ್ಟರರ ಸಣ್ಣ ಸೂಜಿಯ ಇಂಜೆಕ್ಷನ್ ಆದರೂ ಬೇಕಿತ್ತು. ಆದರೆ ಈ ಕಷಾಯ ಮಾತ್ರ ಯಾರಿಗೂ ಬೇಡ.! ಏನು ನೈವೇದ್ಯಕ್ಕಿಟ್ಟರೂ ಚಕಾರವೆತ್ತದೆ ಸೇವಿಸುವ ಆ ದೇವರೂ ಈ ಕಷಾಯವ ನೈವೇದ್ಯಕ್ಕೆ ಇಟ್ಟಿದ್ದರೆ ಮುಖ ತಿರುಗಿಸಿ ಕೂತುಬಿಡುತ್ತಿದ್ದನೇನೋ..! ಒಟ್ಟಿನಲ್ಲಿ ನನ್ನ ತಮ್ಮನ ಆಯುರ್ವೇದ ಪ್ರಯೋಗಕ್ಕೆ ನಾನು 'ಬಲಿಪಶು' ಆದೆ ಅನ್ನುವುದಕ್ಕಿಂತ. ಯಾವ್ಯಾವುದೋ ಸೊಪ್ಪುಗಳನ್ನು ತಿಂದು ಬಲಿಯಾಗಿ 'ಪಶು'ವಾದೆ.!
ಏನೆಲ್ಲಾ ಅನುಭವಸಿ ಹದಿನೇಳು ದಿನ ಕಳೆವಷ್ಟರಲ್ಲಿ 'ನಾಳೆ ನಿನೆಗೆ ಸ್ನಾನ' ಎನ್ನುವ ಖುಷಿಯ ವಾರ್ತೆ ಅಮ್ಮನಿಂದ.! ಅಂತೂ ಹದಿನೆಂಟನೆಯದಿನದ ಮಿನಿ- ಮಜ್ಜನಕ್ಕೆ ತಯಾರಾದೆ. ಅದೇನು ಖುಷಿ ಆ ಸ್ನಾನದಲ್ಲಿ. ಏನೀ ಮಹಾನಂದವೇ....! ಅಮ್ಮ ಬಂದು ತಲೆಯ ಮೇಲೆ ನೀರೆರೆದು ಹೋದ ನಂತರ ಭರ್ಜರಿ ಸ್ನಾನವಾಯಿತು.ರಸ್ತೆಯಲಿ ಮಳೆ ಸುರಿದಾಗ ಹರಿಯುವ ನೀರಿನಂತೆ ಕೊಳೆ ಹೋಗುತ್ತದೆ ಎಂದುಕೊಂಡಿದ್ದ ನನಗೆ ಭಾರೀ ನಿರಾಸೆ. ದಿನವೂ ತಲೆ ಸ್ನಾನ ಮಾಡುತ್ತಿದ್ದ ನಾನು ಹದಿನೆಂಟು ದಿನಗಳ ನಂತರ ಮಾಡಿದರೂ ಕೊಳೆ ನಾನು ಎಣಿಸಿದ್ದ ಪ್ರಮಾಣದಲ್ಲಿ ಇರಲೇ ಇಲ್ಲ..!
ಇತಿ chickenpox ಪರ್ವಃ ಸಮಾಪ್ತಿ: .



