Sunday, July 18, 2010

ಪ್ರಚಂಡ ಪೋರನೀತ .....



ಅವನ ಹರೆಯದ ಮಕ್ಕಳು ಪೆಪ್ಪರಮೆಂಟು ಚೀಪುತ್ತ, ಗೋಲಿ ಆಡುತ್ತ , ಗಣಿತದ ಕೂಡಿಸುವ,ಕಳೆಯುವ ಲೆಕ್ಕಗಳನ್ನು ಬಿಡಿಸಲು ಪರದಾಡುತ್ತಿದ್ದರೆ,ಅವನು ಸರ್ ಅಲ್ಬರ್ಟ್ ಐನಸ್ಟೀನರ 'photo-electric effect ' ನ ಮೇಲೆ ನಿರರ್ಗಳವಾಗಿ ಭಾಷಣವನ್ನು ಮಾಡುತ್ತಿದ್ದ. ತನ್ನ ಒಂಬತ್ತನೇ ಹರೆಯದಲ್ಲೇ 10ನೆಯ ತರಗತಿ ಪಾಸು ಮಾಡಿದ ಪೋರ, 21ನೆಯ ವಯಸ್ಸಿನಲ್ಲಿ doctorate ಪಡೆದು,ಈಗ ಪ್ರತಿಷ್ಠಿತ IIT ಮುಂಬೈನಲ್ಲಿ ತನಗಿಂತ ದೊಡ್ಡವರಿಗೆ ಮಾರ್ಗದರ್ಶನ ಮಾಡುತ್ತಾನೆ .


ನೀವೆಣಿಸಿದ್ದು ಸರಿ, ಅವನೇ 'ತಥಾಗತ್ ಅವತಾರ್ ತುಳಸಿ' . ಜಗತ್ತು ಕಂಡ ಪ್ರಚಂಡ ಪೋರರಲ್ಲಿ ಇವನೂ ಒಬ್ಬ . ಅದರಲ್ಲೂ ಭಾರತೀಯ..!ಬಿಹಾರದ ಪಾಟ್ನಾದಲ್ಲಿ ಸಪ್ಟೆಂಬರ್ 7,1987 ರಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ 'ತಥಾಗಥ್' ಹುಟ್ಟಿನಿಂದಲೇ ಅಪ್ರತಿಮ ಬುದ್ಧಿಶಾಲಿ. ಅವನ ಬುದ್ಧಿಮತ್ತೆಗೆ ಬೆಂಬಲವಾಗಿ ನಿಂತವರು ತಂದೆ ಪ್ರೊ. ತುಳಸಿ ನಾರಾಯಣ್ ಪ್ರಸಾದ್. ನ್ಯಾಯಾಲಯದ ಅನುಮತಿ ಪಡೆದು ಅತೀ ಚಿಕ್ಕ ವಯಸ್ಸಿನಲ್ಲೇ (ಹತ್ತನೇ ವಯಸ್ಸಿಗೆ )ಪದವಿಯನ್ನು ಪಡೆದಾಗ ದೇಶವೇ ಬೆರಗಾಗಿ ನಿಂತಿತ್ತು. ಮುಂದೆ ತನ್ನ ಹನ್ನೆರಡನೆಯ ವಯಸ್ಸಿಗೆ ಸ್ನಾತಕೋತ್ತರ ಪದವಿಯನ್ನು ಪಡೆದ ಈತ, doctorate ಪಡೆದದ್ದು 'quantum computing' ವಿಷಯದಲ್ಲಿ .ಪ್ರತಿಷ್ಠಿತ times ಪತ್ರಿಕೆ ಹೊರಡಿಸಿದ ಜಗತ್ತಿನ 7 ವರ ಸಂಭೂತ (most gifted youngsters) ಯುವಕರಲ್ಲಿ ಈತನೂ ಒಬ್ಬ ..!


Waterloo University, ಕೆನಡದಿಂದ ಬಂದ ಆಮಂತ್ರಣವನ್ನು ನಯವಾಗಿಯೇ ತಿರಸ್ಕರಿಸಿಈತ, ಭಾರತದಲ್ಲೇ ಸೇವೆ ಸಲ್ಲಿಸುತ್ತಾನಂತೆ..!ಅದ್ವಿತೀಯವಾದ ಸಾಧನೆಯನ್ನು ಮಾಡಿ ಭಾರತಕ್ಕೆ ಇನ್ನೂ ಒಂದು 'ನೊಬೆಲ್ ' ಪಾರಿತೋಷಕವನ್ನು ಕೊಡಿಸುವ ಮಹದಾಸೆ ಈತನದು ..!


ಇದೇ ದೇಶದ ಅನ್ನವನ್ನು ಉಂಡು, ತಮ್ಮ ನೆಲವನ್ನೇ ದೂರುತ್ತಾ ವಿದೇಶಕ್ಕೆ ಹಾರುವ ಇಂದಿನ ಯುವಜನಾಂಗಕ್ಕೆ ತಥಾಗಥನಂಥವರು 'role model ' ಯಾಕಗಲಾರರು ?

Tuesday, July 13, 2010

To sweet stupid putti ...


ಅದೀಗ ತಾನೇ ಮನೆಗೆ ಮಂಗಳೂರಿನಿದ ಬಂದಿದ್ದೆ ಸಂಜೆ 7ರ ಸಮಯವಾಗಿರಬಹುದು. trainನಲ್ಲಿ ಬಂದ ಕಾರಣ ಅಂಥದ್ದೇನು ಸುಸ್ತಾಗಿರಲಿಲ್ಲ, hallನಲ್ಲಿ ಕುಳಿತು T.V ನೋಡುತ್ತಿದ್ದೆ. ಅಡುಗೆಮನೆಯಲ್ಲಿ ಲಿಂಬೆ ಹಣ್ಣಿನ ಪಾನಕ ಮಾಡುತ್ತಿದ್ದ ಅಮ್ಮ ,ಅಲ್ಲಿಂದಲೇ ಹೇಳಿದರು "ವಿಶಾಲ್ ಬಂದಿದಿದ್ನೆ, ಮದುವೆ ಕರಿಯಲೇ ಅವನ ಮದುವೆನಡ "ಎಂದರು. ಸೀದಾ ಎದ್ದು ಅಡುಗೆಮನೆಯತ್ತ ನಡೆದಿದ್ದೆ ನಾನು "ಯಾವಾಗಲೇ ?" ಎಂದು ಕೇಳುತ್ತ. "ಈ ತಿಂಗಳು 26ಕ್ಕೆ,ನಿನಗೆ ಒಂದು invitation card ಕೊಟ್ಟಿದ್ದ ನಿನ್ ರೂಮಿನಲ್ಲಿದ್ದು ನೋಡು" ಅಂದಿದ್ದರು. ಪಾನಕದ ಗ್ಲಾಸನ್ನು ಹಿಡಿದು ಮೆಟ್ಟಿಲೇರಿ ನನ್ನ ರೂಮು ಸೇರುವುದಕ್ಕೂ ಕರೆಂಟು ಕೈಕೊಡುವುದಕ್ಕೂ ಸರಿ ಆಯಿತು. ಹಾಗೆ ಹೊರಕ್ಕೆ ಬಂದು ಬಾಲ್ಕನಿಯಲ್ಲಿನ ಆರಾಮ ಕುರ್ಚಿಯಲ್ಲಿ ಕುಳಿತ ನನ್ನ ಕಣ್ಣುಗಳು ಆಗಸದಲ್ಲಿ ನಕ್ಷತ್ರಗಳನ್ನು ಹುಡುಕ ತೊಡಗಿದರೆ, ಮನಸ್ಸು ಹಿಂದಕ್ಕೋಡಿತು. ಬೆಳಕಿನ ವೇಗಕ್ಕಿಂತ ಹೆಚ್ಚು ಈ ಹುಚ್ಚು ಮನಸಿನ ವೇಗ ..!


'ವಿಶಾಲ್ ಸರ್ ' ನಾನು ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ನಮಗೆ ಕಂಪ್ಯೂಟರ್ ವಿಷಯ ಕಲಿಸಲು ಬರುತ್ತಿದ್ದ tall, dark and handsome ಹುಡುಗ. ನಾನು ಕಲಿಯುತ್ತಿದ್ದ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದ ಅವರು, ನನ್ನ ಅಮ್ಮನ ನೆಚ್ಚಿನ ವಿದ್ಯಾರ್ಥಿಗಳಲ್ಲಿ ಒಬ್ಬರು. ಪಪ್ಪನಿಗೆ ವಿಚ್ಚೇದನ ಕೊಟ್ಟು ಹೋದ ಅಮ್ಮನ ಹಿಂದೆ ಹೋಗದ ದುರದೃಷ್ಟಕರ ಬಾಲ್ಯವನ್ನು ಕಂಡಿದ್ದ ಅವರು ಬೆಳೆದದ್ದೆಲ್ಲ ಚಿಕ್ಕಮ್ಮನ (ಅಮ್ಮನ ತಂಗಿ)ಅಕ್ಕರೆಯಲ್ಲೇ.



ನಾವು ಬಾಡಿಗೆಗಿದ್ದ ಮನೆಯ ಪಕ್ಕದ ರಸ್ತೆಯಲ್ಲೇ ಹಾದು ಶಾಲೆಗೆ ಹೋಗುವಾಗ ಪ್ರತಿದಿನ ಎಂಬಂತೆ ಮೂರು ಗುಲಾಬಿ ಹೂಗಳ ಗೊಂಚೊಂದನ್ನು ಅಮ್ಮನಿಗೆ ಕೊಟ್ಟು ಹೋಗುತ್ತಿದ್ದ 'ವಿಶಾಲ್'ನನ್ನು 5 ರ ಹರೆಯದ ನಾನು ಪಿಳಿಪಿಳಿ ನೋಡುತ್ತಿದ್ದೆ . ಬಣ್ಣ ಮಾಸಿದ ಆ ಸಮವಸ್ತ್ರ, ನೇರ ಕೂದಲು. ಮುಗ್ಧ ಕಣ್ಣುಗಳ ಮುಖ ನನ್ನ ಮನದಲ್ಲಿ ಅಚ್ಚೊತ್ತಿತ್ತು. 'ಬೂಟ್ ಪಾಲಿಶ್' ಪಾಠವನ್ನು ಅಮ್ಮ ಕಲಿಸುವಾಗ, ಉಳಿದ ಮಕ್ಕಳ ಕಂಗಳಲ್ಲಿ ನೀರಾಡಿದ್ದರೆ, ಈ ಹುಡುಗ ಬಿಕ್ಕಿ ಬಿಕ್ಕಿ ಅತ್ತಿದ್ದೂ , ಅಮ್ಮ ಸಮಾಧಾನಿಸಿದ್ದೂ ಎಲ್ಲವನ್ನೂ ಅಮ್ಮನ ಬಾಯಿಯಿಂದಲೇ ಕೇಳಿದ್ದ ನೆನಪಿತ್ತು.




ಅಂಥ ಹುಡುಗ ತನ್ನ ಶಿಕ್ಷಣವನ್ನು ಮುಗಿಸಿ ತಾತ್ಕಾಲಿಕ ಅವಧಿಗಾಗಿ ನಮಗೆ ಕಂಪ್ಯೂಟರ್ ಹೇಳಿಕೊಡಲು ಬರುತ್ತಿದ್ದ. 'ಅದೇ ಹಳೆಯ ಮುಖದ enlarged version' ಅಂದುಕೊಂಡಿದ್ದೆ ಮೊದಲ ಸಲ ಶಾಲೆಯಲ್ಲಿ ವಿಶಾಲನನ್ನು ಕಂಡಾಗ. ಆ ಕಣ್ಣುಗಳಲ್ಲಿ ಅದೇನೋ ಆಕರ್ಷಣೆಯಿತ್ತು (ಆ ವಯಸ್ಸಿಗೆ ನನಗೆ ಹಾಗನಿಸಿತ್ತೋ). ನಗುನಗುತ್ತಲೇ binary addition & subtraction ಕಲಿಸಲು ಆರಂಭಿಸಿದ ಆತ ನನಗೆ ಜಾಸ್ತಿ ಪ್ರಶ್ನೆಗಳನ್ನು ಕೇಳುತ್ತಿದ್ದ. ನೆಚ್ಚಿನ ಶಿಕ್ಷಕಿಯ ಮಗಳೆಂದೋ ಅಥವಾ ಉದ್ದಕಿದ್ದು ಹಿಂದಿನ ಬೆಂಚಿನಲ್ಲಿ ಕುಳಿತು ಕೀಟಲೆ ಕೊಡುತ್ತಿದ್ದೆ ಎಂದೋ..!



ಪ್ರಶ್ನೆ ಕೇಳಿದಾಗಲೆಲ್ಲ ಅವರ ಕಣ್ಣಲ್ಲಿ ಕಣ್ಣಿಟ್ಟು ಉತ್ತರಿಸುತ್ತಿದ್ದೆ. ಕುಳಿತ ತಕ್ಷಣ ಮತ್ತೆ ಮಾತು, back bench comments,ಕೀಟಲೆ ಶುರು. ಒಮ್ಮೆ ನನ್ನ ತುಂಟತನ ಮೇರೆ ಮೀರಿದಾಗ "ಸೌಮ್ಯ ನಿಂದು ಜಾಸ್ತಿಯಾಯಿತು madam ಹತ್ರ ಹೇಳ್ತೇನೆ " ಎಂದಿದ್ದರು. ಹಾಗೆ ಅಮ್ಮನ ಹತ್ರ ಹೇಳಿದ್ದರು ಕೂಡ. ಆ ದಿನ ಮನೆಯಲ್ಲಿ ನನಗೆ ಅಮ್ಮನಿಂದ ಗೀತೋಪದೇಶ, ಹಿತೋಪದೇಶ, ಮಂತ್ರೋಪದೇಶ ಎಲ್ಲ ಆಗಿತ್ತು.



ನಂತರದ ದಿನಗಳಲ್ಲಿ ನನ್ನ ತುಂಟತನ ಕಡಿಮೆ ಆಗಿತ್ತು. ಅದೇನೋ ನವಿರಾದ ಭಾವ ಮನದ ಮೂಲೆಯೊಳಗೆ. ಮನಸಿನಲ್ಲೇ ಇಷ್ಟ ಪಡುತ್ತಿದ್ದೆ ಅವರನ್ನು. That was a stupid 'crush'..! ನನ್ನ ಆರಾಧನೆಯ ಭಾವ ಕಣ್ಣಲ್ಲೇ ತಿಳಿಯುತ್ತಿತ್ತೋ ಏನೋ ..! ಅಮ್ಮನಿಗೂ ಗೊತ್ತಿತ್ತು ನನ್ನ crush ಕಥೆ. ಮನದಲ್ಲೇ ನಗುತ್ತಿದ್ದರು ನಾನು 'ವಿಶಾಲ್ ಸರ್ ' ಬಗ್ಗೆ ಮಾತನಾಡುತ್ತಿದ್ದರೆ.



ಹಾಗೆ ನಾನು ಹತ್ತನೇ ತರಗತಿಗೆ ಬರುವ ವೇಳೆ 'ವಿಶಾಲ್ ಸರ್ ' ಮುಂಬೈಗೆ ಹಾರಿದ್ದರು. ಹೋಗುವ ಮೊದಲು ಅಮ್ಮನಿಗೆ ಹೇಳಲು ಬಂದಿದ್ದರು."ಚೆನ್ನಾಗಿ ಓದು ಪುಟ್ಟಿ, ಕವನ, ಕಥೆಗಳನ್ನೂ ಮುಂದುವರೆಸು" ಎಂದು ಹೇಳಿ ಹೊರಟಿದ್ದರು. ಖಾಲಿ ಖಾಲಿ ಆದ ಭಾವ ಕಂಪ್ಯೂಟರ್ ಕ್ಲಾಸ್, ಮನಸು ಎಲ್ಲ. ಅತ್ತು ಬಿಟ್ಟಿದ್ದೆ ಬಿಕಿ ಬಿಕ್ಕಿ . ಕಾಲದ ಹಾದಿಯಲ್ಲಿ ವಿಶಾಲ್ ಸರ್ ನೆನಪು ಹಿಂದೆ ಹೋಗಿತ್ತು. ಸವೆದಿತ್ತು ...ಹೈಸ್ಕೂಲಿನ ಗೇಟು ದಾಟಿದಂತೆಲ್ಲ ಶಾಲಾ ದಿನಗಳ ನೆನಪಿನ ಬಾಗಿಲು ಮುಚ್ಚಿಕೊಂಡಿತ್ತು.
ಕಾಲೇಜು ಜೀವನದ ಗಡಿಬಿಡಿಯಲ್ಲಿ 'ವಿಶಾಲ್ ಸರ್ ' ಮೆಲ್ಲನೆ ಹಿಂದೆ ಸರಿದಿದ್ದರು. ಈಗ ಹಲವು ವರ್ಷಗಳ ನಂತರ ಮತ್ತೊಮ್ಮೆ ಧುತ್ತೆಂದು ಪ್ರತ್ಯಕ್ಷವಾಗಿತ್ತು ಅವರ ನೆನಪು. ಅದೂ ಅವರ ಮದುವೆಯ ಜೊತೆಗೆ, ಕರೆಯೋಲೆಯ ಜೊತೆಗೆ. ಶಾಲಾ ದಿನಗಳ flash back ge ಕರೆದುಕೊಂಡು ಹೋಗಿತ್ತು ಅವರ ನೆನಪು. ಎಲ್ಲವನ್ನು ಕತ್ತಲೆಯ ರಾತ್ರಿಯ ತಾರೆಗಳ ಬೆಳಕಲ್ಲಿ ನೆನೆಸಿಕೊಂಡಿದ್ದೆ. ಹದಿಹರೆಯದಲ್ಲಿ ಸಾಮಾನ್ಯ ಈ ಒಂಥರಾ stupid crushಗಳು ಅಲ್ವಾ?. ಉದ್ದ-ನೇರ ಕೂದಲು, ಉದ್ದನೆಯ ದೇಹ ,ಕನಸು ಕಂಗಳು,ನಗು, ಕೂದಲನ್ನು ಹಿಂದಕ್ಕೆ ತೀಡೋ ಸ್ಟೈಲು ಏನೋ ಒಂದು ಇಷ್ಟವಾಗಿ ಬಿಡುತ್ತದೆ . ಮನಸ್ಸು ಅದರತ್ತ ವಾಲುತ್ತದೆ. ನನಗೂ ಆದದ್ದು ಅದೇ ಆಗಿತ್ತು .

ಇಷ್ಟೆಲ್ಲಾ ನೆನಪಾಗೋ ಹೊತ್ತಿಗೆ ನನ್ನ ಮೊಗದಲ್ಲೊಂದು ತುಂಟನಗೆ ಸದ್ದಿಲ್ಲದೇ ಹಾದು ಹೋಗಿರಬೇಕು, ನಮ್ಮನೆಯ ತೋಟದಂಚಿನ ನದಿಯಲ್ಲಿ ಹಾದು ಹೋಗುವ ಹಾಯಿದೋಣಿಯಂತೆ ...!ಅಷ್ಟರಲ್ಲೇ ಕರೆಂಟು ಬಂದಿತ್ತು . ಥಟ್ಟನೆ ಎದ್ದು ನನ್ನ ರೂಮಿಗೆ ಹೋಗಿ ಕರೆಯೋಲೆಯನ್ನು ಕೈಗೆತ್ತಿಕೊಂಡೆ. ವಿಳಾಸ ಬರೆವಲ್ಲಿ ಬರೆದಿತ್ತು : To 'Sweet Stupid Putti' ..!

Saturday, July 3, 2010

ಸಸ್ಯಶಾಸ್ತ್ರಜ್ಞೆ ನನ್ನ ಅಜ್ಜಿ

ನಿನ್ನೆ ಅಜ್ಜಿ ಮನೆಗೆ ಹೋಗಿದ್ದೆ .ಅದೇನೋ ನಂಟು ಈ ಮಳೆಗಾಲಕ್ಕೆಮತ್ತು ಅಜ್ಜಿ ಮನೆಗೆ. ಹೆಚ್ಚೇನು ದೂರವಿಲ್ಲ ನನ್ನ ಅಜ್ಜಿ ಮನೆ, ಹೆಚ್ಚೆಂದರೆ ೧೦ ಕಿಲೋ ಮೀಟರುಗಳು ಇರಬಹುದು ನಮ್ಮ ಮನೆಯಿಂದ.


ಮಧ್ಯಾಹ್ನ ಮೊಸರನ್ನ, ಪಲ್ಯ ಉಪ್ಪಿನಕಾಯಿ,ಹಪ್ಪಳಗಳ ಭರ್ಜರಿ ಊಟ ಆದ ನಂತರ ಅಜ್ಜಿಯ ಹತ್ತಿರ " ಒಂದು ರೌಂಡ್ ಬೆಟ್ಟಕ್ಕೆ ಹೋಗಬಪ್ಪ ಬಾರೆ " ಎಂದೆ. ತುಂತುರು ಮಳೆ ಹನಿಸುತ್ತಲೇ ಇತ್ತು, ಅಜ್ಜಿಗೆ ಎಲ್ಲಿ ಮೊಮ್ಮಗಳಿಗೆ ಶೀತವಾದರೆ ಎಂಬ ಕಾಳಜಿ. " ಇವತ್ತು ಮಳೆನಲೇ , ಜ್ವರ ಬತ್ತು ನೆನೆಯಡ" ಎಂದರು. ಇದೆ ಮಾತನ್ನು ನಿರೀಕ್ಷಿಸುತ್ತಿದ್ದೆ ನಾನು. "ಮಳೆಗಾಲದಲ್ಲಿ ಮಳೆ ಸುರಿಯೋದೆಯ, ಬಾ ನೀನು" ಎನ್ನುತ್ತಲೇ ಅಂಗಳಕ್ಕೆ ಇಳಿದುಬಿಟ್ಟಿದ್ದೆ . ನನ್ನ ಬಣ್ಣದ ಬಂದೂಕನ್ನು (ಕೊಡೆ)ಹಿಡಿದು.







ಬೆಳೆಯನ್ನೇ ಬೆಳೆಯದೆ ಹಾಗೆ ಬಯಲಾದ ಗದ್ದೆಯಲ್ಲಿ ನಮ್ಮನ್ನು ಸ್ವಾಗತಿಸಿದ್ದು 'ಅಲೆ ಹಗ್ಗ' ಹಾಕಿ ಕಟ್ಟಿ ಮೇಯಲು ಬಿಟ್ಟ ಒಂದು ಎಮ್ಮೆ. "ನಿನ್ನ ನೆಮ್ಮದಿಗೆ ಭಂಗವಿಲ್ಲ. ..ಎಮ್ಮೆ ನಿನಗೆ ಸಾಟಿಯಿಲ್ಲ" ಎಂದು ನಾನು ಹಾಡಲು ಶುರುವಿಟ್ಟುಕೊಂಡರೆ. ಅಜ್ಜಿ " ಕೊಡೆ ಬಿಡಸೆ ಮಳೆ ಬತ್ತಿದ್ದು" ಎನ್ನುತ್ತಿದ್ದರು. ನೀರು ಹರಿದಲ್ಲೆಲ್ಲ ಕೆರೆ. ಪುಟ್ಟ ಝರಿ... ಇನ್ನೂ ಹೇಳಬೇಕೆಂದರೆ ನೈಸರ್ಗಿಕ water park.

ಅದೇನೋ ಖುಷಿ ತುಂತುರು ಮಳೆಯಲ್ಲಿ ನೆನೆಯುವುದೆಂದರೆ, ಅಮ್ಮನ ಜೊತೆ ಪೇಟೆಯಲ್ಲಿ ಅಡ್ಡಾಡುವುದೆಂದರೆ,ಅಜ್ಜಿಯ ಜೊತೆ ಬೆಟ್ಟಕ್ಕೆ, ಅಜ್ಜನ ಜೊತೆ ತೋಟಕ್ಕೆ ಹೋಗುವುದೆಂದರೆ. ಅದೊಂಥರ default combination.
ಹಾದಿ ಬದಿಯ ಹೂ ಕಾಯಿಗಳನ್ನು ನೋಡುತ್ತಾ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತ, ಅದರ ಹೆಸರುಗಳನ್ನು ಅಜ್ಜಿಯ ಹತ್ತಿರ ವಿಚಾರಿಸುತ್ತಾ ನಡೆಯುತ್ತಿದ್ದೆ. ಅಜ್ಜಿಯೂ ಉತ್ಸಾಹದಿಂದ ವಿವರಿಸುತ್ತಲೇ ಹೋದರು. ಕೆಲವು ಚಿತ್ರಗಳು ನಿಮಗಾಗಿ.

ಬೇಲಿಬದಿಯ ಮಾಮೂಲಿ ಸುಂದರಿ: ತೇರು ಹೂವು
ಅಂಗಳದ ಅಥಿತಿ: ಅವಲಕ್ಕಿ ಹುಲ್ಲು


ಬೇಲಿಸುಂದರಿ: ನುಕ್ಕಿ ಗಿಡದ ಹೂವು

ಕಾಡು ಲವಂಗ (ಗೆಣಸಲೆ ಎಲೆ )


ಹಾವಿನ ಹಣ್ಣು

ಹಳಚಾರೆ ಹಣ್ಣು ಕೊಂಬ್ಲಾರಜ್ಜಿ (ವಿಷದ ಹೂವು ) ಅದರ ಗಿಡ
ಕಾಡು ಗಿಡಗಳಿಗೆ ಹಿಂದಿನ ತಲೆಮಾರಿನ ಜನರಿಟ್ಟ ಹೆಸರುಗಳೇ ವಿಚಿತ್ರ. ಆದರೆ ಸಸ್ಯಶಾಸ್ತ್ರೀಯ ಹೆಸರುಗಳಿಗಿಂತ ತುಂಬಾ ಇಷ್ಟವೂ, ಅತ್ಮೀಯವೂ ಆಗುವಂತ ಹೆಸರುಗಳು ಅವು. ಅಜ್ಜಿ ಅದರ ಉಪಯೋಗಗಳನ್ನೂ ಹೇಳುತ್ತಿದ್ದರು. ತನ್ಮಯತೆಯಿಂದ ಪಕ್ಕಾ ವಿದ್ಯಾರ್ಥಿಯಾಗಿ ಕೇಳುತ್ತಿದ್ದೆ. ಮಳೆಯ ಹನಿಯಲ್ಲಿ ತೋಯ್ದಿತ್ತು ನೆಲ, ಗಿಡ, ಹೂವು, ಹಣ್ಣು, ನನ್ನ ಮೈ-ಮನಸ್ಸು ಎಲ್ಲ. 'ಮುಂಗಾರು ಮಳೆಯೇ...' ಎಂದು 'ಸೋನು ನಿಗಮ್ ' ಹಾಡಿದಂತೆ ಆಯಿತು.


ನೆಕ್ಕರಕದ ಹೂ

ಬೆಳ್ಳಟ್ಟೆ ಹೂವು

ಕುಸುಮಾಲೆ ಹೂವು
ವಾಪಸ್ ಮನೆಗೆ ಮರಳುವ ಹೊತ್ತಿಗೆ ನನ್ನ ನನಗೆ ಅಜ್ಜಿ ಸಸ್ಯಶಾಸ್ತ್ರದ ಪ್ರೊಫೆಸರ್ ಆಗಿ ಕಂಡದ್ದಂತೂ ಸುಳ್ಳಲ್ಲ ...!














































































































































































































































































































































































































































































































































































































































































































































































































































































































































































































































































































































































Tuesday, June 29, 2010

ಕನ್ನಡಿಯಲ್ಲಿನ ಕಿನ್ನರಿ ..!









ಎರಡು ತಿಂಗಳುಗಳ ಹಿಂದೆ ನಡೆದ ಘಟನೆ ಅದ್ಯಾಕೋ ನೆನಪಾಗಿಬಿಟ್ಟಿದೆ. ಅದೊಂದು ಬುಧವಾರ ಕಾಲೇಜು ಬಸ್ಸು ಮಿಸ್ಸಾಗಿ ಲೋಕಲ್ ಬಸ್ಸಿನಲ್ಲಿ ಹೊರಟಿದ್ದೆ. ಅದೇನೋ ಖುಷಿ ಲೋಕಲ್ ಬಸ್ಸಿನಲ್ಲಿ ಓಡಾಡುವುದೆಂದರೆ . uniform ತೊಟ್ಟ ಹುಡುಗಿಯರಿರುವ ಕಪ್ಪು -ಬಿಳುಪು tvಯಂತೆ ಕಾಣುವ ಕಾಲೇಜು ಬಸ್ಸಿನಲ್ಲಿ ಹೋಗುವುದು ಬೇಜಾರಿನ ಕೆಲಸ. Gossip, ಒಂದಿಷ್ಟು ಅಸೂಯೆ ಬಿಟ್ಟರೆ ಆ ಬಸ್ಸಿನಲ್ಲಿ ಬೇರೇನೂ ಇದ್ದಹಾಗೆ ನನಗೆ ಅನಿಸಿವುದೇ ಇಲ್ಲ..!




ಲೋಕಲ್ ಬಸ್ಸು ಅಷ್ಟೇನೂ rushಇರಲಿಲ್ಲ. ನಿಂತಿದ್ದೆ ನಾನು ಎದುರುಗಡೆ ಬಾಗಿಲಿನ ಹತ್ತಿರವೇ . ಅದೇನೋ ಖುಷಿ ಬಾಗಿಲಲ್ಲಿ ನೇತಾಡಿಕೊಂಡು ಹೋಗುವುದೆಂದರೆ . ದಕ್ಷಿಣ ಕನ್ನಡದ ಬಸ್ಸುಗಳ ಕಿಟಕಿಗಳಿಗೆ ಗಾಜುಗಳೇ ಇರುವುದಿಲ್ಲ ಫುಲ್ ಖುಲ್ಲಂ ಖುಲ್ಲ. ಬೇಸಿಗೆಯಲ್ಲಿ ಗಾಳಿ ಬೆಳಕುಗಳೂ , ಮಳೆಗಾಲದಲ್ಲಿ ಮಳೆಹನಿಯೂ ಬಸ್ಸಿನೊಳಗೆ ಚೆನ್ನಾಗಿ ಬರುತ್ತವೆ..! ಬಸ್ ಕ್ಲೀನರ್ ಬಂದು "ಮಿತ್ತ ಪೋಯಿ" (ಮೇಲೆ ಹೋಗಿ ) ಎಂದು ಎಚ್ಚರಿಸಿದಾಗ ಒಳಗೆ ಹೋಗದೆ ವಿಧಿಯಿರಲಿಲ್ಲ. ಹಾಗೆ ನಿಂತ ನನಗೆ ಕಂಡದ್ದು ಡ್ರೈವರನ ಎಡಗಡೆ ಇರುವ ಉದ್ದದ ಸೀಟಿನಲ್ಲಿ ಕುಳಿತು ನನ್ನನ್ನೇ ನೋಡುತ್ತಿದ್ದ ಸುಮಾರು ೪ ರ ಹರೆಯದ ಹುಡುಗಿ. ತುಂಬಾ ಮುದ್ದು ಮುದ್ದಾಗಿದ್ದಳು. ಸುಮ್ಮನೆ ಮುಗುಳ್ನಕ್ಕೆ ಕಣ್ಣನ್ನು ಮಿಟುಕಿಸುತ್ತ. (ಪಕ್ಕಾ ಹುಡುಗೀರ style )




ಅವಳನ್ನೇ ಅವಲೋಕಿಸಿದೆ ...ಕೆಂಪು ಬಿಳಿ ಬಣ್ಣಗಳ ಚೆಂದದ ಫ್ರಾಕ್ ತೊಟ್ಟಿದ್ದಳು.ಕೈಗಳಿಗೆ ಕೆಂಪು ಬಿಳಿ ಬಳೆಗಳ ಸಮ್ಮಿಶ್ರಣ. ಪುಟ್ಟ ಪುಟ್ಟ ಕೈಗಳಲ್ಲೂ ಮದರಂಗಿಯ ರಂಗು.ಕಾಲುಗಳಲ್ಲಿ ದಪ್ಪನೆಯ ಗೆಜ್ಜೆಯ ಘಲ ಘಲ. ಕಣ್ಣಿಗೆ ಅಮ್ಮ ಹಚ್ಚಿದ್ದಿರಬೇಕು ಒಂದೆಳೆಯ ಕಾಡಿಗೆ. ಹಣೆಯಲ್ಲಿ ಹೊಳೆಯುವ ಪುಟ್ಟ ಬಿಂದಿ. ರೇಶಿಮೆ ಕೂದಲು ಅದರಲ್ಲಿ ಕುಳಿತು ನನ್ನ ಹೊಟ್ಟೆಯುರಿಸಿದ್ದು ಮಲ್ಲಿಗೆಯ ಉದ್ದನೆಯ ಮಾಲೆ. .!




ಅದ್ಯಾಕೋ ನನ್ನ ಬಾಲ್ಯ ನೆನಪಾಗಿಬಿಟ್ಟಿತ್ತು. ನಾನೂ ಹಾಗೆ ಕೈತುಂಬಾ ಬಳೆಗಳನ್ನು ಹಾಕಿಕೊಳ್ಳುತ್ತಿದ್ದೆ. ನನ್ನ ಪುಟ್ಟ ಜುಟ್ಟಿಗೆ ಅದರ ಎರಡರಷ್ಟು ಉದ್ದದ ಹೂ ಮಾಲೆಯನ್ನು ಅಮ್ಮನತ್ರ ಜಗಳವಾಡಿ ಮುಡಿಯುತ್ತಿದ್ದೆ. ಗೋಲಾಕಾರದಲ್ಲಿ ಡಬ್ಬಿಯಲ್ಲಿ ಬರುವ ಆ ಬಣ್ಣಗಳಿಂದ ನನ್ನ ಹಣೆಯ ಮೇಲೆ ಚಿತ್ರ ವಿಚಿತ್ರವಾದ design ಮಾಡುತ್ತಿದ್ದೆ. ಅದೇನೋ ಖುಷಿಯಿತ್ತು ತನ್ಮಯತೆಯಿಂದ ಅಲಂಕರಿಸಿಕೊಳ್ಳುವುದರಲ್ಲಿ , ಆ ಕನ್ನಡಿಯ ಮುಂದೆ ನಾನೇ ಕಿನ್ನರಿ...! ಎಲ್ಲ ಗತವೈಭವ ಅನಿಸಿಬಿಡ್ತು.


ಈಗ ಬಳೆಗಳನ್ನು ಕಂಡರೆ ಒಂದು ರೀತಿಯ ಅಲರ್ಜಿ. ಅದನ್ನು ಕೊಳ್ಳುವ ಮಾತು ಬಿಡಿ ಇರೋದನ್ನೇ ಹಾಕಿಕೊಳ್ಳಲಾಗದ ಮನೋಸ್ಥಿತಿ. ಹಣೆಗೆ ಬೊಟ್ಟು ಇಡದೆ ಅದೆಷ್ಟು ವರುಷಗಳು ಕಳೆದಿತ್ತೋ. ಅಜ್ಜಿಯ ಮನೆಗೆ ಹೋಗುವಾಗ, ಭೂತ ಕನ್ನಡಿಯ ಹಿಡಿದು ಹುಡುಕಿದರೆ ಮಾತ್ರ ಕಾಣುವಂಥ ಒಂದು ಚುಕ್ಕಿಯನ್ನು ಇಡುತ್ತಿದ್ದೆ. .!ಒಂದೇ ಕಾಲಿಗೆ ಒಂದೆಳೆಯ ಬೆಳ್ಳಿ ಚೈನು ಅದೊಂಥರ fashion..! (ಇದರಿಂದ ತುಂಬಾ ಫಚೀತಿ ಅನುಭವಿಸಿದ್ದೇನೆ ಬಿಡಿ ಆ ಕುರಿತು ಇನ್ನೊಮ್ಮೆ ಬರೆಯುತ್ತೇನೆ ). ಇನ್ನು ಚೋಟುದ್ದದ ಕೂದಲು, ನಾಲ್ಕೈದು ಕ್ಲಿಪ್ ಗಳನ್ನು ಹಾಕಿ ಕಷ್ಟಪಟ್ಟು ಕಟ್ಟುತ್ತಿದ್ದ ಜುಟ್ಟು. ಇನ್ನು ಅದಕ್ಕೆಲ್ಲಿ ಮಲ್ಲಿಗೆಯ ಮಾಲೆ? ನನಗೆ ನಗು ಬಂದಿತ್ತು. ನಾಗರೀಕತೆ, fashion ಎಂದು ನಾವು ಕಳೆದು ಕೊಳ್ಳುತ್ತಿರುವುದೇನು? ನಮ್ಮ ಸಂಸ್ಕೃತಿಯನ್ನೇ ? ಅಥವಾ ನಮ್ಮನ್ನೇ? ಕಂಡಕ್ಟರ್ ಬಂದು ಟಿಕೆಟ್ ಕೇಳಿದಾಗಲೇ ನಾನು ನನ್ನ ನೆನಪುಗಳ ಮುಸುಕಿನಿದ ಹೊರಬಂದದ್ದು.


ಮತ್ತೊಮ್ಮೆ ಆ ಬಾಲೆಯತ್ತಲೇ ನನ್ನ ನೋಟ ಹರಿಯಿತು ಬೇಡವೆಂದರೂ. ಆಕೆಯೂ ನನ್ನತ್ತಲೇ ನೋಡುತ್ತಿದ್ದಳು. ಅವಳಿಗೆ ನನ್ನ ತುಂಡು ಕೂದಲು ಇಷ್ಟವಾಗಿದ್ದಿರಬೇಕು (ಹಾಗಂತ ನಾನು ಅಂದುಕೊಂಡದ್ದು). ನನ್ನ ಮನದೊಳಗೋ ಹೇಳಿಕೊಳ್ಳಲಾಗದ ಭಾವ. ಅದು ಮೆಚ್ಚುಗೆಯೋ ,ವಿಷಾದವೋ, ಅಸೂಯೆಯೋ ತಿಳಿಯಲಿಲ್ಲ ಆ ಕ್ಷಣಕ್ಕೆ.


ಇಳಿದು ಬಿಟ್ಟಿದ್ದೆ ಅಲ್ಲೇ ಜ್ಯೋತಿ ವೃತ್ತದ ಬಳಿ. ಹೂ ಮಾರುವವನ ಬಳಿ ಒಂದು ಮೊಳ ಹೂವನ್ನು ಕೊಂಡುಕೊಂಡಿದ್ದೆ. ಪಕ್ಕದ ಫ್ಯಾನ್ಸಿ ಅಂಗಡಿಗೆ ನುಗ್ಗಿ ಒಂದು ಡಜನ್ ಬಳೆಗಳನ್ನು, ಬಿಂದಿಗಳನ್ನು ತೆಗೆದುಕೊಂಡಿದ್ದೆ. ಅವೆಲ್ಲ ನನ್ನನ್ನು ಅಲಂಕರಿಸಿದ್ದವು. ನಾನು ಬಸ್ಸಲ್ಲಿರದಿದ್ದನ್ನು ಕಂಡ 'ಶಾಲು' phone ಮಾಡಿದ್ದಳು. "ಬರ್ತೇನೆ" ಎಂದು ಚುಟುಕಾಗಿ ಉತ್ತರಿಸಿ. ನಡೆದಿದ್ದೆ ಕಾಲೇಜಿನತ್ತ .


ಕ್ಲಾಸಿನೊಳಗೆ ಕಾಲಿಡುತ್ತಲೇ ಎಲ್ಲರೂ "ಹೋ " ಎಂದು ಬೊಬ್ಬಿಟ್ಟಿದ್ದರು. ಗೆಳೆಯ 'ಇಮ್ರಾನ್' ಬಂದು "hey sou..... what a cool surprize... looking cute and funny too .!" ಅಂದು ಬಿಟ್ಟಿದ್ದ. ಹುಸಿಕೋಪ ತೋರುತ್ತಲೇ ನನ್ನ ಜಾಗದತ್ತ ತೆರಳಿದ್ದೆ.


ಅವರಿಗೇನು ಗೊತ್ತಿತ್ತು ? ನನಗಾಗುತ್ತಿರುವ ಅನುಭೂತಿ, ಅವರ್ಚನೀಯ ಆನಂದ. ನನಗೋ ನನ್ನ ಬಾಲ್ಯಕ್ಕೆ ಮರಳಿದ ಅನುಭವ. ಓಡಿ ಬಿಟ್ಟಿದ್ದೆ ladies ರೂಮಿಗೆ. ಕನ್ನಡಿಯಲ್ಲಿ ಕಿನ್ನರಿಯಾಗಲು...!



Sunday, June 20, 2010

ಮತ್ತೆ ನಾನು ನಾನಾದೆ.. !


ಅದೆನಾಗಿತ್ತೋ.. ಕಳೆದ ಐದಾರು ದಿನಗಳಿಂದ ನಾನು ನಾನಾಗಿರಲಿಲ್ಲ. ಮನಸು ತಳಮಳದಲ್ಲಿತ್ತು.. ಹಗ್ಗ ಹರಿದ ನಾವೆಯಂತಾಗಿತ್ತು. ಪರೀಕ್ಷೆಯನ್ನು ಮುಗಿಸಿ ಬಂದ ನಾನು ಖುಷಿಯಿಂದಿರುವ ಬದಲು ಖಿನ್ನತೆಗೆ ಒಳಗಾಗಿದ್ದೆ . ಹೆಚ್ಚಾಗಿ 'ವಟವಟ' ಎನ್ನುತ್ತಲೇ ಇರುವ ನಾನು ಮೌನಿಯಾಗಿದ್ದೆ. ಮಳೆಯ 'ಚಟಪಟ' ನನ್ನ 'ವಟವಟ'ವನ್ನು ನಿಲ್ಲಿಸಿಬಿಟ್ಟಿತ್ತು. ನನ್ನ ಮನದೊಳಗಿದ್ದ ಒಂದು ಪುಟ್ಟ ಐದರ ಮಗುವೊಂದು ಕಳೆದು ಹೋಗಿತ್ತು. ಸ್ನೇಹಿತರ phone call ಗಳನ್ನೂ ಅಲಕ್ಷಿಸಿದ್ದೆ. ಕೊನೆಗೆ ಸ್ನೇಹಿತರಿಬ್ಬರು ಬೈದೂ ಆಗಿತ್ತು. ಏನಾಗಿದೆ ನಿನಗೆ ಎಂದರೆ ನನ್ನಲ್ಲಿ ಉತ್ತರವಿರಲಿಲ್ಲ. "nothing man, i'll be alright" ಎಂಬ ಹಾರಿಕೆಯ ಉತ್ತರ ಬೇರೆ ನನ್ನಿಂದ. ಅರ್ಧದಲ್ಲಿ ಬಿದ್ದ ಒಂದು stupid painting ಪ್ರಯತ್ನ, ಮುಗಿಸಲಾರದೆ ಹಾಗೆ ಅರ್ಧದಲ್ಲಿ ಬಿಟ್ಟ ೨ ಲೇಖನಗಳು, ಯಾಕೋ ನನ್ನೊಳಗಿದ್ದ ಒಂದು ಪುಟ್ಟ ಹುಡುಗಿ ಕಳೆದೆ ಹೋಗಿದ್ದಳು ಎಂದುಕೊಂಡಿದ್ದೆ, ಕಂಗಾಲೂ ಆಗಿದ್ದೆ.



ಏನಾಗಿತ್ತು ನನಗೆ ?? ಸಂಬಂಧಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೆನೆ? ಒಟ್ಟಿನಲ್ಲಿ ಇಲ್ಲಸಲ್ಲದ್ದಕ್ಕೆ ಸುಖಾಸುಮ್ಮನೆ ತಲೆ ಕೆಡಿಸಿಕೊಂಡಿದ್ದೆ . . ನಗು ಮರೆತು ಹೋದಂತಿತ್ತು. ಭಾವನೆಗಳು ಎಲ್ಲೋ ನಿಯಂತ್ರಣ ತಪ್ಪಿದಂತಿತ್ತು . ಮನಃ ಪೂರ್ತಿಯಾಗಿ ಅಳಲೂ ಆಗುತ್ತಿರಲಿಲ್ಲ. ನನ್ನನ್ನು ನಾನು ಹೊರಗೆಳೆಯಬೇಕಿತ್ತು. ನನ್ನ ಆರಾಮ ಖುರ್ಚಿಯಲ್ಲಿ ಕುಳಿತು ನೀಲಾಕಾಶವನ್ನು ದಿಟ್ಟಿಸುತ್ತಿದ್ದೆ. ..


ಮತ್ತೆ ಕರೆಯತೊಡಗಿತು ನನ್ನ phone, ನೋಡಿದರೆ ನನ್ನ ಆತ್ಮೀಯ ಗೆಳೆಯ. ವಿಧಿಯಿಲ್ಲದೇ recieve ಮಾಡಿದೆ. "ಏನಾಗಿದ್ಯೇ ನಿಂಗೆ ? ಬ್ಲಾಗ್ ನಲ್ಲಿ ಏನೇನೋ ಬರೆದಿದೀಯ ಅಷ್ಟೊಂದು ಸೀರಿಯಸ್ಸಾಗಿ "ಎಂದ." ಏನಿಲ್ವೋ ಸುಮ್ಮನೆ " ಎಂದುತ್ತರಿಸಿದೆ . "ನಿನ್ನ 'ಏನಿಲ್ಲ' ಅಂದ್ರೆ ತುಂಬಾ ವಿಷ್ಯ ಇದೆ ಅಂತಾನೆ ಅರ್ಥ ಹೇಳೇ ಮಹಾರಾಯ್ತೀ " ಎಂದ.


ನಾನು ಪಕ್ಕಾ ಬಹಿರ್ಮುಖಿ. ಖುಷಿಯಾದರೆ ಕುಣಿದು ಕೇಕೆ ಹಾಕಿಬಿಡುತ್ತೇನೆ. ಬೇಸರವಾದರೆ ಕಣ್ಣೀರು ಹರಿಯದೆ ಸಮಾಧಾನವಿಲ್ಲ. ಅದು -ಇದು ಮಾತನಾಡುತ್ತಲೇ ವಿಷಯವನ್ನೆಲ್ಲ ಹೇಳಿದ್ದೆ .ಮನಸಿಗೆ ಆದ ಬೇಸರದ ಭಾವಗಳೆಲ್ಲ ಮಾತಿನ ಮೂಲಕ ಹೊರಬಿದ್ದಿದ್ದವು. ನಾನು ತಡೆಯಿಲ್ಲದೆ ಮಾತನಾಡುತ್ತಿದ್ದೆ ಆತ 'ನಂತ್ರ', 'ಹೂಂ', 'ಸರಿ' ಎಂದಷ್ಟೇ ಹೇಳುತ್ತಿದ್ದ. ವಿಷಯ ಮುಗಿವ ಹೊತ್ತಿಗೆ ನನ್ನ ಕಣ್ಣ ಅಂಚೂ ಒದ್ದೆಯಾಗಿ ಆಗಿತ್ತು. ಆದರೂ ಮಾತಾಡುತ್ತಿದೆ. ಮನಸು ಬೇಸರದ ಮೋಡವನ್ನು ಬಿಟ್ಟು ಆಚೆ ಬಂದಿತ್ತು. FIFA WC ಸುದ್ದಿ. ಮತ್ತದೇ ಮೆಸ್ಸಿ, ಕ್ರಿಸ್ಟಿಯಾನೋ ರೋನಲ್ದೋ, ಕಾಕಾ,ರೂನಿ ಎಲ್ಲರಿಗೂ ನನ್ನ ಮಾಮೂಲಿ ಸ್ಟೈಲಿನಲ್ಲಿ ಲೈನ್ ಹೊಡೆಯ ತೊಡಗಿದೆ. ಅವನ ತಲೆ ತಿನ್ನತೊಡಗಿದೆ. ಗೆಳೆಯ ನಗುತ್ತಿದ್ದ ಜೋರಾಗಿ "ಅದ್ಯಾಕೋ ಹಲ್ಕಿರೀತಿಯಾ ನೀನೊಬ್ನೇ brush ಮಾಡ್ತೀಯ ಅನ್ನೋ ಥರ" ಎಂದಿದ್ದೆ. ನಗುವಿನ ಅಲೆ ಇನ್ನೂ ಜೋರಾಯ್ತು . ಜೊತೆಗೆ ಇನ್ನೊಂದು ಪರಿಚಯದ ಧ್ವನಿ.


"ನೀನು ಹೀಗೆ ತಲೆ ತಿಂತಾ ಇದ್ರೇನೆ ಚಂದ ನಮಗೆ .ನಿನ್ನ ಮೌನ ಸಹಿಸಲು ಅಸಾಧ್ಯ ಗೆಳತೀ " ಎಂದು ನಾಟಕೀಯವಾಗಿ ಎಂದಿದ್ದಳು ನನ್ನೊಲವಿನ ಗೆಳತಿ 'ಸಂಧ್ಯಾ'. "ಹೇಯ್ ಕತ್ತೆ ನೀನೆಲ್ಲೇ ಇದೀಯಾ.. ?" ಎಂದೆ. icecream ತಿನ್ತಿದೇನೆ ಬೇಕಾ ?"ಎಂದಳು. "ಪಿಶಾಚೀ ನನ್ನ ಬಿಟ್ಟು ತಿಂದರೆ ನೀ ಉದ್ಧಾರ ಆಗೋದಿಲ್ಲ ಎನ್ನುತ್ತಲೇ " ಅಕ್ಷರಶಃ ಕೂಗಿಬಿಟ್ಟಿದ್ದೆ ನಾನು ..! "ಅಂತೂ ನಮ್ ಟ್ರೈನ್ track ಗೆ ಬಂದು speed pick up ಮಾಡ್ತು "ಅಂದಳು ಅವಳು. ನಕ್ಕು ಬಿಟ್ಟಿದ್ದೆ . " ನಿನ್ನನ್ನೇ ಕಾಯ್ತಾ ಇದ್ದೇವೆ stupid ಬೇಗ ಹೊರಡು.. ಹೋಗಿ ಮುಖ ತೊಳ್ಕೋ. ಬರೋವಾಗ ನಿನ್ನ ಗುಳ್ಳೆ (bubbler) ಬಾಟಲಿ ತಗೊಂಡು ಬಾರೆ " ಅಂದಿದ್ದಳು. ಮನಸು ಸುಟ್ಟ ಬೂದಿಯಿಂದೆದ್ದು ಬರುವ 'ಫೀನಿಕ್ಸ್' ಪಕ್ಷಿಯಂತೆ ಹಾರುತ್ತಿತ್ತು ಮುಗಿಲೆತ್ತರಕ್ಕೆ..!


ಸಂಬಂಧಗಳ ಜಂಜಾಟವಿಲ್ಲದೆ ಬೆಳೆಯುವ ಸ್ನೇಹಕ್ಕೆ ಅದೆಷ್ಟು ಶಕ್ತಿ ?ಅದಕ್ಕೆ ನಾನು ಸಂಬಂಧಗಳಿಗಿಂತ ಸ್ನೇಹಿತರನ್ನೇ ಹೆಚ್ಚು ನಂಬುವುದು. ಬರೋಬ್ಬರಿ ಐದಡಿ ಎಂಟು ಇಂಚು ಎತ್ತರದ ನನ್ನಲ್ಲಿ ಪುಟ್ಟ ಹುಡುಗಿಯನ್ನೇ ಹುಡುಕುವ ನನ್ನ ಆ ಎರಡು ಸ್ನೇಹಿತರಿಗೆ ಮನದಲ್ಲಿ ಥ್ಯಾಂಕ್ಸ್ ಹೇಳುತ್ತಲೇ ನನ್ನ 'ಗುಳ್ಳೆ ಬಾಟಲಿಯನ್ನು' ಹುಡುಕಲು ಕುಣಿಯುತ್ತಲೇ ಸಾಗಿದ್ದೆ ...! ಮತ್ತೆ ನಾನು ನಾನಾದೆ.. !

Saturday, June 19, 2010

ಸಾವೆಂದರೆ .......




ಮರಳ ಗಡಿಯಾರದಲ್ಲಿನ ಕಣಗಳಂತೆ ಸೋರಿಹೋಗುವ ಕಾಲ
ಇತಿಹಾಸವಾಗಿ ಭೂತದೊಳಗೆ ಸೇರಿಹೋಗುವ ಕ್ಷಣಗಳು
ಅದೆಲ್ಲೋ ಎಚ್ಚರಿಸುತ್ತಿದೆ ಸಾವಿನ ಗಂಟೆಯ ಸದ್ದು.
ಸರಿಯುತ್ತಿದ್ದೇವೆ ನಾವು ಸತ್ಯದ ಅಂಚಿಗೆ ..
ಸಾವೊಂದು ನಗ್ನ ಸತ್ಯ ಉಳಿದಿದ್ದೆಲ್ಲವೂ ಸುಳ್ಳು !
ಕೆಲವರಿಗೆ ಕೈಲಾಸ, ವೈಕುಂಠ, ದೇವರ ಸಹವಾಸ..
ಕೆಲವರಿಗೆ ಜಗತ್ತಿನ ಯಾವುದರ ಪರಿವೆಯಿಲ್ಲದ ಗೋರಿಯೊಳಗಿನ ಸುಖ ನಿದ್ರೆ ...
ಯೋಧರಿಗೆ ಸೋಲೇ ಸಾವು ....
ಹುಟ್ಟಿನೊಂದಿಗೆ ಸಾಗುವ ನೆರಳು ಈ ಸಾವು
ಸಾವೆಂದರೆ ಯಮಪಾಶ,ನರಳಾಟ,ರಕ್ತದೋಕುಳಿ
ಕೊನೆಗೆ ಸಾವೆಂದರೆ ಮುಕ್ತಿ ..
ಆತ್ಮಕ್ಕೆ ಮರುಹುಟ್ಟುಕೊಡುವ ಶಕ್ತಿ ..!

ಕಂಸನನ್ನು ಕಾಡಿದ್ದು ಇದೇ ಸಾವು ..
ಸಾವಿತ್ರಿ ಗೆದ್ದದ್ದು ಇದೇ ಸಾವು ..
ಹಿಟ್ಲರ್, ಸದ್ದಾಂ, ಇದಿ ಅಮಿನ್ ,ಸ್ಟಾಲಿನ್ ರ ಕ್ರೌರ್ಯದ ಕೊನೆ ಸಾವು..
ರಾತ್ರಿ ರಾಹುಲನ ಬಿಟ್ಟು ಹೊರಟ ಸಿದ್ಧಾರ್ಥನ ಬುದ್ಧನನ್ನಾಗಿಸಿದ್ದು ಒಂದು ಸಾವು ..!
ನಮ್ಮೆಲ್ಲರ ಎದುರಿಗಿರುವ ಸತ್ಯ ಸಾವು ..!
ಸತ್ಯಂ ಶಿವಂ ಸುಂದರಂ ..!

Friday, June 18, 2010

ಚಿಟ್ಟೆಗಳ ಲೋಕದಲ್ಲೊಂದು ಪಯಣ ....


ಮಳೆಗಾಲದಲ್ಲಿ ಮಳೆಹನಿಯಲ್ಲಿ ನೆನೆಯುತ್ತಲೇ ಅರಳುವ ಹೂವುಗಳು ಹಲವು. ಹೂ ಅರಳಿ ಕಂಪು ಬೀರಿದೊಡನೆ, ಮುಂಜಾನೆಯ ಅರುಣೋದಯ ಕಾಲದಲ್ಲೇ ಬರುವವು ದುಂಬಿಗಳ ಹಿಂಡು. ನಂತರ ಚಿಟ್ಟೆಗಳ ಕಾರುಬಾರು. . Egg > Caterpillar > Pupa >Butterfly ಎಂಬ ನಾಲ್ಕು ಹಂತಗಳಲ್ಲಿ ವಿಕಾಸಗೊಂಡು, ಮೈಮೇಲೆ ಬಣ್ಣಗಳನ್ನೂ, ಚುಕ್ಕಿಗಳ ಚಿತ್ತಾರವನ್ನೂ ಬಿಡಿಸಿಕೊಂಡು ಹೆಮ್ಮೆಯಿಂದ ಹಾರಾಡುತ್ತವೆ. ಹಲವು ಕವಿಗಳ ಕವಿತೆಯ ವಸ್ತುವಾಗಿರುವ ಚಿಟ್ಟೆಗಳದ್ದು ಕನಸಿನ ಲೋಕ








ಚಿಕ್ಕವಳಿದ್ದಾಗ ಅದರ ಹಿಡಿಯಲು ಅದರ ಬೆನ್ನು ಹತ್ತುತ್ತಿದ್ದ ನಾನು. ಈ ಬಾರಿ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದ್ದೇನೆ..















ಪರಿಸರ ಮಾಲಿನ್ಯದಿಂದಾಗಿ ನಗರಗಳಲ್ಲಿ ವಿರಳ ಎನಿಸಿರುವ ಈ ಹಾರಾಡುವ ಹೂಗಳು ಹೆಚ್ಚೆಂದರೆ ಹದಿನೈದು ದಿನಗಳು ಬದುಕುತ್ತವೆಯಂತೆ...! ನಮ್ಮನೆಯ ಹೂದೋಟದಲ್ಲಿ ಬರುವ ಸಾಮಾನ್ಯ ಚಿಟ್ಟೆಗಳ ಲೋಕದಲ್ಲೊಂದು ಪಯಣ.