Tuesday, August 31, 2010

ಹರಟೆ -ಲೈನ್ ಹೊಡ್ಯೋದು ..!




ನನ್ನ ಹಿಂದಿನ ಬ್ಲಾಗ್ ಪೋಸ್ಟ್ ಇದ್ದದ್ದು ಪ್ರೀತಿಯ ಬಗ್ಗೆ. ಸ್ವಲ್ಪ ಸೀರಿಯಸ್ ವಿಷ್ಯ ಆಗಿತ್ತು ಬೇರೆ. ಕೆಲವು ಸ್ನೇಹಿತರು ಕೇಳ್ತಿದ್ರು ಸ್ವಲ್ಪ funny ಆಗಿ ಒಂದು ಪೋಸ್ಟ್ ಹಾಕಬಾರದಾ ? ಅಂತ. ಆದ್ರೆ ಈವಾಗ ಯಾಕೋ ನಿಮ್ಮೆಲ್ಲರ ತಲೆ ಸ್ವಲ್ಪ ತಿನ್ನೋಣ ಅನ್ನಿಸ್ತಿದೆ. (ತಲೆ ತಿನ್ನೋದು ಒಂಥರಾ ನನ್ನ ಜನ್ಮಸಿದ್ದ ಹಕ್ಕು ಇದ್ದಂಗೆ. )ಇದರಿಂದ ಎರಡು ಲಾಭ ಇದೆ 1.ನಂಗೆ ತಲೆ ತಿಂದ ಖುಷಿ ಸಿಗತ್ತೆ 2.ನಿಮಗೆ ತಲೆ ಇದೆ ಅನ್ನೋದು ಗೊತ್ತಾಗತ್ತೆ. ಏನಂತೀರಾ? ನೀವು ಓದ್ತೀರಾ ಅಂದ್ರೆ ನಂಗೇನು ಪ್ರಾಬ್ಲಮ್ ಇಲ್ಲ. ಸರಿ ಬಿಡ್ರೀ ವಿಷಯಕ್ಕೆ ಬರ್ತೇನೆ.


ಈ ಹುಡುಗೀರನ್ನ ನೋಡೋ ಕ್ರಿಯೆಗೆ (ಕದ್ದುಮುಚ್ಚಿನೋ ನೇರವಾಗೋ ಅದು ಸೆಕೆಂಡರಿ) ನಾವೆಲ್ಲಾ ಮಾಮೂಲಾಗಿ ಕೊಡೊ ಟೈಟಲ್ಲು 'ಲೈನ್ ಹೊಡಿಯೋದು','ಸೈಟ್ ಹೊಯೋದು', 'ಡವ್ ಹೊಡ್ಯೋದು' ಇತ್ಯಾದಿ ಇತ್ಯಾದಿ ಅಲ್ವಾ? ಹುಡುಗ್ರು/ ಹುಡುಗೀರು ನಾವು ಎಷ್ಟೇ ಡೀಸೆಂಟು ಅಂತ ಪೋಸ್ ಕೊಟ್ರೂ ಒಂದಲ್ಲ ಒಂದು ಸಲ ಲೈನ್ ಹೊಡೆದೇ ಇರ್ತಾರೆ. ಇದು ಆ ಸೂರ್ಯ ಚಂದ್ರರ ಆಣೆಗೂ ಸತ್ಯ. ಸೂರ್ಯ ಚಂದ್ರರು ಇರುವಷ್ಟೇ ಸತ್ಯ. (ಅಮಾವಾಸ್ಯೆ ದಿನ ಚಂದ್ರ ಇರೋದಿಲ್ಲ ಮರಿ ಅಂತೀರಾ?) ನಾನು ಈಗ ಕೊರಿಯೋ ವಿಷ್ಯ ಯಾವ್ದು ಅಂತ ಗೊತ್ತಾಯ್ತಲ್ವಾ?


ಈಗ ನಾನು ಕೇಳೋದು ಏನು ಅಂದ್ರೆ.....ಅದ್ಕೆ ಲೈನ್ ಹೊಡಿಯೋದು ಅಂತಾನೆ ಯಾಕೆ ಹೇಳ್ತಾರೆ ? ಎಷ್ಟು ಥರ ಲೈನ್ ಹೊಡೀಬಹುದು? ಹುಡ್ಗೀರು ಲೈನ್ ಹೇಗೆ ಹೊಡೀತಾರೆ? ಸುಲಭವಾದ ವಿಧಾನ ಯಾವುದು ? ಯಾರಿಗೂ ತಿಳಿಯದೆ ಲೈನ್ ಹೊಡಿಯೋದು ಹೇಗೆ ? ಜೊತೆಗೆ ಇಂಥದ್ದೆಲ್ಲ ಪ್ರಶ್ನೆಗಳಿಗೆ ನನ್ನದೇ ಆದ ಉತ್ತರವನ್ನೂ ಕೊಡ್ತಾ ಇದೇನೆ. opinion changes from person to person ಅಲ್ವಾ ? ನಾನಿಲ್ಲಿ ಬರೆದದ್ದು just for entertainment. ಇದರಲ್ಲಿ ಬೇರೆ ಯಾವುದೇ ದುರುದ್ದೇಶಗಳು ಇಲ್ಲ. ಇಲ್ಲಿಬರುವ ಪಾತ್ರಗಳೆಲ್ಲ ಕೇವಲ ಕಾಲ್ಪನಿಕ.ಯಾವುದೇ ವ್ಯಕ್ತಿಯ ಜೊತೆ ಹೋಲುವಂತಿದ್ದರೆ ಅದು ಕಾಕತಾಳೀಯ ಮಾತ್ರ. !



ಹೌದು ಲೈನ್ ಹೊಡಿಯೋದು ಅಂತಾನೆ ಅಂತ ಯಾಕೆ ಹೇಳ್ತಾರೆ ? ನಮ್ಮ ಎದುರಲ್ಲಿರೋ ಒಂದು ಸುಂದರ ಹುಡುಗಿ/ ಹುಡುಗ್ರನ್ನ ಮಧ್ಯದಲ್ಲಿ ಯಾವುದೇ ಅಡೆತಡೆ ಬಂದರೂ ಅದನ್ನು ನಿವಾರಿಸಿಕೊಂಡು ನೋಡೋದನ್ನ ಮುಂದುವರಿಸ್ತೇವೆ ಅಲ್ವಾ ?ನೇರವಾಗಿ ನೋಡ್ತಾನೇ ಇರ್ತೇವೆ. ಆ ಕಡೆ ಜನ ಏನೆಂದುಕೊಳ್ಳಬಹುದು ಅನ್ನೋ ಯೋಚನೆ ತಪ್ಪಿ ಕೂಡ ಬರಲಿಕ್ಕಿಲ್ಲ. ಬಂದರೂ ಎದುರಿಗಿರುವ ಆಕರ್ಷಣಾ ಶಕ್ತಿಯೇ, ವಿಚಾರಶಕ್ತಿಗಿಂತ ಬಲಯುತವಾಗಿರುತ್ತದೆ (ನ್ಯೂಟನ್ನನಿಗೆ ಇದ್ಯಾಕೆ ಹೊಳೆಯಲಿಲ್ಲ? ಇಂತದ್ದೊಂದು ವಾದವಿದ್ದರೆ ಪುಸ್ತಕದಲ್ಲಿರೋ ನ್ಯೂಟನ್ನನ ಮೂರು ನಿಯಮಗಳೇನು 10 ನಿಯಮಗಳಿದ್ದರೂ ಬಾಯಲ್ಲೇ ಫಿಲಂ ಹಾಡುಗಳ ತರಹ ನಲಿಯುತ್ತಿದ್ದವೇನೋ) .



ಈಗ ಈ ಲೈನ್ ಹೊಡ್ಯೋದ್ರಲ್ಲಿ ಮುಖ್ಯವಾಗಿ ಮೂರು ಥರ ಇದೆ (ನನ್ನದೇ ಸಂಶೋಧನೆ ಇದು, ಉದಾಹರಣೆಯ ಸಹಿತ ವಿವರಿಸುತ್ತೇನೆ ಓದಿ):

1. Direct Lining (Straight Lining )

2.Zigzag Lining

3. Indirect Lining

Illustration1:

ಒಂದು ಸುಮಾರಂಥ ಪಟ್ಟಣದ ಬಸ್ಸು. ಸೀಟುಗಳೆಲ್ಲ ಭರ್ತಿಯಾಗಿ ಕೆಲವರು ನಿಂತಿದ್ದಾರೆ. ಒಂದು stylish ಸುಂದರ ಹುಡುಗಿ ಜೀನ್ಸ್ ತೊಟ್ಟು ಮುಂದೆ(ಡ್ರೈವರ್ ಹಿಂದೆ) ನಿಂತಿದ್ದಾಳೆ. ಒಂಥರಾ attitude ಬೇರೆ ಇರೋ ಹಾಗಿದೆ. ಬಸ್ಸಿನಲ್ಲಿರೋ ಹೆಣ್ಣು ಜಾತಿಗಳಿಗೆಲ್ಲ ಹೊಟ್ಟೆಯಲ್ಲಿ ಹುಣಸೆಹಣ್ಣು ಕಿವುಚಿದ ಭಾವ.ಬಸ್ಸಿನಲ್ಲಿರೋ ಗಂಡು ಜಾತಿಗಳಿಗೆಲ್ಲ (ವಯೋಮಿತಿಯಿಲ್ಲ)ಒಳಗೊಳಗೇ ಪುಳಕ,ಬೇಡವೆಂದರೂ ಕಣ್ಣುಗಳು ಅವಳನ್ನೇ follow ಮಾಡುತ್ತಿವೆ. ನೇರವಾಗಿ ಅವಳನ್ನೇ ನೋಡುತ್ತಿದ್ದಾರೆ, ಕಣ್ಣು ಕೂಡ ಮಿಟುಕಿಸದೆ, ತಿಂದೇ ಬಿಡುವಂತೆ. ಇದು Direct Lining. (ಹುಡುಗಿಯ ಎದುರಿಗೆ ಕೊಂಬುಗಣ್ಣ ಆಸಾಮಿ ಏನಾದರೂ ಇದ್ದು, ಹುಡುಗಿ ಗಟ್ಟಿಗಿತ್ತಿ ಇದ್ದು, ಹುಡುಗಿಗದು ತಿಳಿಯದೆ. ಕಪಾಳ ಮೋಕ್ಷಮಾಡಿ ....ಅದೆಲ್ಲ ಈಗ ಬೇಡ ಬಿಡಿ ).

Illustration 2:

ಮಂಗಳೂರು-ವೆರ್ಣ ಪ್ಯಾಸೆಂಜರ್ ಟ್ರೇನು. ಸಲ್ವಾರ್ ಹಾಕಿಕೊಂಡಿರುವ ಮುದ್ದಾದ ಹುಡುಗಿ (ಹುಡುಗೀರೆ ಮುದ್ದಾಗಿರ್ತಾರಾ?). ಎದುರಿಗೊಬ್ಬ so called ಡೀಸೆಂಟು ಹುಡುಗ.ಒಂದೆಳೆಯ ಕಾಡಿಗೆಯ ಮಿಂಚು ಆ ಹುಡುಗಿಯ ಕಣ್ಣುಗಳಲ್ಲಿ . ಕವಿಗಳು ವರ್ಣಿಸುವ ಕಮಲಲೋಚನೆಯ ಕಣ್ಣೋಟಕ್ಕೆ, ನಮ್ಮ ಡೀಸೆಂಟು ಹುಡುಗ ಕಪಿಯಾಗಿದ್ದಾನೆ. ಸೀದಾ ಡೈರೆಕ್ಟ್ ಲೈನ್ ಹೊಡಿಯೋಕೆ ಪೂರ್ತಿ ಧೈರ್ಯ ಸಾಲುತ್ತಿಲ್ಲ ಪಾಪ. ಒಮ್ಮೆ ಅವಳನ್ನು ನೋಡಿ ಅವಳು ಇವನತ್ತ ನೋಡುವಾಗ ದೃಷ್ಟಿ ಬದಲಿಸುತ್ತಿದ್ದಾನೆ. ಅವಳು ಬೇರೆಕಡೆ ನೋಡುವಾಗ ಅವಳ ಮೊಗದಲ್ಲೇ ಲೀನ ಹುಡುಗ.ಇದು ZIGZAG lining ಗೆ ಉದಾಹರಣೆ.


Illustration 3:
ಇನ್ನು ಕೆಲವು ಹುಡುಗರಿರ್ತಾರೆ ಸ್ವಲ್ಪ ಬಿಗುಮಾನ. ಹುಡುಗೀರೆ ಬೇಕಾದ್ರೆ ನಮ್ಮನ್ನ ನೋಡ್ಬೇಕು.ನಾವು ಅವರತ್ತ ತಿರುಗಿ ಕೂಡ ನೋಡೋದಿಲ್ಲ (ನೆನಪಿಡಿ ಬರೀ ತಿರುಗಿ ನೋಡೋದಿಲ್ಲ ). ಆದರೂ ಮನಸು ಕೇಳಬೇಕಲ್ಲ ? ಬೈಕಿನಲ್ಲಿ ಹೋಗೋವಾಗ ಹಿಂದೆ ಕುಳಿತ ಗೆಳೆಯ ತಿವಿದು ಹೇಳ್ತಾನೆ "ಗುರು ಫಿಗರ್ರೂ ಸುಪರ್ರೋ ".! ಏನ್ ಮಾಡೋದು ? ಬಿಗುಮಾನದ ಹುಡುಗ ಬೈಕ್ ಮಿರರ್ ನಲ್ಲಿ ಹಿಂದೆ ಇರೋ ಹುಡುಗಿನಾ ನೋಡ್ತಾನೆ . ಕಾಲೇಜ್ entrenceನಲ್ಲಿ ಹುಡುಗಿಯರಿಗಿಂತ ಮೊದಲು ಬಂದು notice ಬೋರ್ಡಿನಲ್ಲಿ ತಲೆ ಕೂದಲು ಬಾಚ್ತ ಹಿಂದೆ ಇರೋ ಹುಡ್ಗೀರ್ನ ನೋಡ್ತಾನೆ. ಇದು Indirect Lining ..!


ಇದೇನು ಎಲ್ಲ ಹುಡುಗರ ಬಗ್ಗೆ ಹೇಳ್ತೀರಲ್ಲ ಅಂತೀರಾ ? ನಿಲ್ರೀ ಸ್ವಲ್ಪ.ಒಂದ್ಸಲ ನನ್ನ ಸ್ನೇಹಿತ ಒಬ್ಬ ಕೇಳಿದ್ದ, "ಹುಡುಗಿರೇನು ಲೈನ್ ಹೊಡಿಯೋದೇ ಇಲ್ವಾ ?" ಅಯ್ಯೋ! ಯಾರು ಇಲ್ಲ ಅಂದ್ರು. ಮನುಷ್ಯರಲ್ವಾ ಹುಡುಗೀರು? ಹೊಡಿದೇ ಹೊಡೀತಾರೆ. ಇಲ್ದಿದ್ರೆ ನಮ್ಮ chocolate boys ರಣಭೀರ್, ಇಮ್ರಾನ್ ಖಾನ್ ಇವರಿಗೆಲ್ಲ ಫ್ಯಾನ್ಸ್ ಎಲ್ಲಿರ್ತಿದ್ರು ? (ಮನೇಲಿ ಸೀಲಿಂಗೋ, ಟೆಬಲ್ಲೋ ಫ್ಯಾನ್ಸ್ಇರ್ತಿತ್ತು ಅಷ್ಟೇ).ರೋಡ್ನಲ್ಲಿ ಚೆನ್ನಾಗಿರೋ ಹುಡುಗರು ಹೋದರೆ ನೋಡೇ ಇರ್ತಾರೆ ಬಿಡಿ ಈ ಹುಡುಗೀರು. ಆದ್ರೆ ನಾವು ನೋಡೇ ಇಲ್ಲ ಅನ್ನೋ ಥರ ಆಡ್ತಾರೆ ಅಷ್ಟೇ. .! ಅದ್ಕೆ ನಮ್ಮ ಮಂಗಳೂರು ಹುಡುಗೀರು ಮಳೆಗಾಲದಲ್ಲೂ ಕೂಲಿಂಗ್ ಗ್ಲಾಸ್ ಹಾಕ್ಕೊಂಡೆ ಇರ್ತಾರೆ .!ಆರ್ದೂ ಹುಡುಗೀರು zigzag lining ಇಷ್ಟ ಪಡ್ತಾರೆ. ನಮ್ಮ ಸಮಾಜ ಹುಡುಗೀರನ್ನ ಬೆಳೆಸಿರೋದೆ ಹಾಗೆ direct line ಏನಾದರೂ ಹೊಡೆದರೆ, ಅವಳಿಗೆ ಇಲ್ಲಸಲ್ಲದ ಪಟ್ಟ ಗ್ಯಾರಂಟೀ.


safe ಆಗಿ ಲೈನ್ ಹೊಡಿಬೇಕೋ ಕೂಲಿಂಗ್ ಗ್ಲಾಸ್ ಹಾಕ್ಕೊಂಡು ತಿರುಗಾಡಿ. ಯಾರಿಗೂ ನೀವು ಯಾರನ್ನ ನೋಡ್ತಿದೀರಿ ಅನ್ನೋದೇ ಗೊತ್ತಾಗೋದಿಲ್ಲ. styleಗೆ ಸ್ಟೈಲು ಆಯ್ತು, ಲೈನ್ ಹೊಡೆದಂಗೂ ಆಯ್ತು. ಒಂದೇ ಗುಂಡಿಗೆ ಎರಡು ಹಕ್ಕಿಗಳು.!


ಇಷ್ಟೆಲ್ಲಾ ಹೇಳ್ತೀಯಲ್ಲ ನೀನು ಏನ್ ಮಾಡ್ತಿಯ ಅಂತ ಕೇಳ್ತೀರಾ ? ನಾನು ನೋಡಿ frank ಆಗಿ ಹೇಳ್ಬಿಡ್ತೇನೆ ನಾನು ಹುಡುಗ್ರನ್ನ ನೋಡ್ತೇನೆ , ಆದರೆ ಕೆಟ್ಟ ದೃಷ್ಟಿಯಿಂದ ಅಲ್ಲ .ಸೌಂದರ್ಯ ಇರೋದೇ ನೋಡೋದಿಕ್ಕೆ ಹೊಗಳೋದಿಕ್ಕೆ ಅಲ್ವಾ ? ಗಾಂಧೀಜಿಯವರ 'ಕೆಟ್ಟದ್ದನ್ನು ನೋಡಬೇಡಿ' ಅನ್ನೋದನ್ನು ಅವರ ಕ್ಷಮೆಯೊಂದಿಗೆ 'ಕೆಟ್ಟದಾಗಿ ನೋಡಬೇಡಿ ' ಅಂತ ಸಣ್ಣ ತಿದ್ದುಪಡಿ ಮಾಡಿ. ಅದನ್ನೇ ಪಾಲಿಸಿಕೊಂಡು ಬಂದಿದ್ದೇನೆ. .!


ನಿಮ್ಮ ಸಮಯವನ್ನು ಹಾಳು ಮಾಡಿ, ನಿಮ್ಮಲ್ಲಿ ನಗೆಯ ಹಾಲುಕ್ಕಿದರೆ ನನ್ನ ಮೊದಲ ಹಾಸ್ಯಲೇಖನ ಸಾರ್ಥಕವಾದಂತೆ .!

Monday, August 16, 2010

ಪ್ರೀತಿ ಪುರಾಣ .............!


ಪ್ರೀತಿಯೆಂದರೆ.......?? ಹೀಗೊಂದು ಯೋಚನೆ ಎಲ್ಲರಿಗೂ ಬಂದಿರಬಹುದು. ಪದಗಳಲ್ಲಿ ಸರಿಯಾಗಿ ವ್ಯಕ್ತಪಡಿಸಲಾಗದ, ಭಾವನೆಗಳ ಮಹಾಪೂರ. ಪಶ್ಚಿಮದ ದೇಶದಲ್ಲಾದರೆ 'i love you' ಅನ್ನುವ ಒಂದೇ ಒಂದು ವಾಕ್ಯದಲ್ಲಿ ಹೇಳಲಾಗುವ ಭಾವನೆ. ಅಪ್ಪ, ಅಮ್ಮ, ತಮ್ಮ, ಗೆಳತಿ, ಹೆಂಡತಿ ಎಲ್ಲ ಸಂಬಂಧಗಳಿಗೂ ಅದೇ ಮೂರು ಶಬ್ದಗಳನು ಉಪಯೋಗಿಸಿ ಬಿಡುತ್ತಾರೆ, ಆ ಮಾಹಾಜನರು. (ರಾಹುಲ್ ಮಹಾಜನನಿಗೆ ಅದರರ್ಥ ಗೊತ್ತಿಲ್ಲ ಬಿಡಿ) ಇಲ್ಲಿ ನಮ್ಮಲ್ಲಾದರೆ ? ಪ್ರೇಮಿಗಳಿಗೆ ತಪ್ಪಿದರೆ ಸ್ನೇಹಿತರಿಗೆ ಮಾತ್ರ ಉಪಯೋಗಿಸಲ್ಪಡುವ ಶಬ್ದ (ನಾನು ಹೇಳ ಹೊರಟಿರುವುದು ಮಾಮೂಲಿ ಪಟ್ಟಣದ ವಿಷಯ). ಹೋಗಿ ಅಜ್ಜನಿಗೋ, ಅಜ್ಜಿಗೋ ಹೇಳಿ ನೋಡೋಣ ' i love you' ಎಂದು....! ಇವಳಿಗೆ ಯಾವಾಗಿಂದ ಹುಚ್ಚು ಅನ್ನಬಹುದು.


Love is blind ಪ್ರೀತಿ ಕುರುಡು ಇದು ಎಲ್ಲರಿಗೂ ಗೊತ್ತಿರೋ ವಿಷಯ. Its deaf and dumb too ಮಾರಾಯರೇ. ಪ್ರೇಮಿಸುತ್ತಿರುವ ಒಂದು ಯುವ ಜೋಡಿಗೆ ನೀವು ಏನು ಹೇಳಿದರೂ ಕೇಳೋದೇ ಇಲ್ಲ,ಅವ್ರು ಅಂದಿದ್ದೆ ಸರಿ ಅಂತಾರೆ. ಇದು deaf ಆಯ್ತು ಇನ್ನು dumb?? ಮೂಕ ಪ್ರೀತಿ ಅಂತ ಕೇಳಿರಬೇಕಲ್ವಾ? ಪ್ರೀತಿಯನ್ನು ಪದಗಳಲ್ಲಿ ಸೆರೆ ಹಿಡಿಯೋಕೆ ಆಗೋದೇ ಇಲ್ಲ. ಅದಕ್ಕೆ 'ಪ್ರೇಮ ಪತ್ರಗಳು' ಇನ್ನು ಜೀವಂತ. ಹುಡುಗ ಯಾವುದೇ ಪುಸ್ತಕ ಓದದಿದ್ದರೂ ಹುಡುಗಿಗೆ ಲವ್ ಲೆಟರ್ ಕೊಡೊ ಸಂದರ್ಭ ಬಂದ್ರೆ 'ಪ್ರೇಮ ಪತ್ರದ link' ಖಂಡಿತ ಹುಡುಕೆ ಹುಡುಕ್ತಾನೆ. !


ಸರಿ ಬಿಡ್ರೀ ವಿಷಯಕ್ಕೆ ಬರ್ತೇನೆ. ನಾನು ಮೇಲೆ ಹೇಳಿರೋದಕ್ಕೆ, ಈಗ ಬರ್ಯೋದಕ್ಕೆ ಅಷ್ಟೊಂದು ಸಂಬಂಧ ಇಲ್ಲ ಬಿಡಿ. ಆದರೂ ನಿಮ್ ತಲೆ ತಿಂದೆ,.... ಯಾಕೆ ಸುಮ್ನೆ ಒಂದೇ ಸಲ ಸಿರಿಯಸ್ ಯಾಗೋದು ಹೇಳಿ?


ಮೊನ್ನೆ ಅಕ್ಕನ ಜೊತೆ ಚಾಟ್ ಮಾಡ್ತಿದ್ದೆ g-talk ನಲ್ಲಿ ಯಾರೋ ಮಾತಿಗೆ ಎಳೆದರು.ಅಷ್ಟೇನೂ ಗೊತ್ತಿರದ orkut friend. ನನ್ನ ಬಗ್ಗೆ ವಿಚಾರಿಸುತ್ತಲೇ "Do u 've Boy fren?" ಎಂದು ಬಿಟ್ಟಿತ್ತು ಆ ಆಸಾಮಿ. " yup many guy frens are der" ಅನ್ನೋ ಉತ್ತರ ಕೊಟ್ಟೆ. " no no i mean lover"ಅಂದಿತ್ತು ಆ ಕಡೆ ಪಾರ್ಟಿ."nope i don belive in love" ಎನ್ನುತ್ತಲೇ log out ಆಗಿದ್ದೆ.


ಉತ್ತರವೇನೋ ಕೊಟ್ಟಿದ್ದೆ ಆದರೆ ಪ್ರೀತಿ ಎಂದರೇನು ಅನ್ನೋ ವಿಷಯ ಹುಳವಾಗಿ ತಲೆ ಹೊಕ್ಕಿತ್ತು. ಕೆಲವು ಗೆಳೆಯ/ಗೆಳತಿಯರಿಗೆ message ಮಾಡಿಬಿಟ್ಟೆ. ಉತ್ತರ ಬರಲಾರಂಭಿಸಿತು... ಎಲ್ಲರೂ ತತ್ವಜ್ಞಾನವನ್ನೇ ಹೇಳುತ್ತಿದ್ದರೇ ವಿನಃ sweet and simple ಆಗಿ ಹೇಳಲೇ ಇಲ್ಲ ..ಅಥವಾ ನನ್ನ ಮನದೊಳಗಿದ್ದ ಉತ್ತರವನ್ನು ಯಾರೂ ಕೊಡಲೇ ಇಲ್ಲ..!


ಹಾಗೆ ಯೋಚಿಸುತ್ತಲೇ ಇದ್ದ ನನ್ನ ಮನದಲ್ಲಿ ಒಂದಿಷ್ಟು ಘಟನೆಗಳು ಹಾದುಹೋದವು... ಪ್ರೀತಿಯನ್ನು ನಾವು ಶಬ್ದಗಳಲ್ಲಿ ಕಟ್ಟಿಹಾಕಲಾರೆವು ಸರಿ. ಆದರೆ ಇದು ಪ್ರೀತಿ ಎಂದು ಮನಸು ಒಂದು ಘಟನೆಯನ್ನು ನೋಡಿದ ತಕ್ಷಣ ನಿರ್ಧರಿಸಿ ಬಿಡುತ್ತದೆ ಅಲ್ವಾ ? ನನ್ನ ಜೀವನದಲ್ಲಿ ನಡೆದ, ನಾನು ನೋಡಿದ ಘಟನೆಗಳು ಇವು .....


*ಇಸ್ತ್ರಿ ಮಾಡುವಾಗ ತನ್ನ ಅಚ್ಚುಮೆಚ್ಚಿನ ಸೀರೆಯ blouse ಸುಟ್ಟುಕೊಂಡ ಅಮ್ಮ, ದುಃಖ ತಡೆಯಲಾಗದೆ ಜಿನುಗಿದ ಕಣ್ಣೀರು. ಅಮ್ಮ ಸಂಜೆ ಶಾಲೆಯಿಂದ ಬರುವಷ್ಟರಲ್ಲಿ ಪೇಟೆಗೆ ಹೋಗಿ ಹೊಸ matching blouse ತಂದುಕೊಟ್ಟ ಪಪ್ಪ.


*ದನಗಳನ್ನು ಪ್ರೀತಿಯಿಂದ ಸಾಕಿ ಅವುಗಳಿಗೆ ಹೆಸರಿಟ್ಟು ಕರೆಯುವ ಪಕ್ಕದ ಮನೆಯ ಮುಸ್ಲಿಂ ಕುಟುಂಬ.


*ನಾನು ಮಂಗಳೂರನ್ನು ಬಿಟ್ಟು ಬರುವಾಗ ತನ್ನ ಪ್ರೀತಿಯ teddybearನ್ನುನನ್ನ ಕೈಗಿತ್ತು "ಎಲ್ಲಿ ಹೋದರೂ ಇದನ್ನು ತಗೊಂಡು ಹೋಗು ಸೌಮ್ಯ ನನ್ನ ನೆನಪಿಗೆ" ಎಂದು ಕಣ್ಣೀರಾದ ಗೆಳತಿ.


*ಗೆಳೆಯನ revaluation ಗೋಸ್ಕರ ತನ್ನ ಹೊಸ hand-setನ್ನೇ ಮಾರಿದ ನನ್ನ ಸ್ನೇಹಿತ .!


*ಡೈರಿಯ ಹಾಳೆಗಳ ಮಧ್ಯೆ ಬಣ್ಣಗೆಟ್ಟು ಮುಗುಮ್ಮಾಗಿ ಕುಳಿತಿರುವ ಪ್ರತಿ friendship day & valentines day ಗಳಿಗೆ ಆತ್ಮೀಯ ಗೆಳೆಯ ಕೊಟ್ಟ ಹಳದಿ ಗುಲಾಬಿ ಹೂಗಳು.


*ಬೀದಿ ನಾಯಿ ಬಂದಿಲ್ಲವೆಂದು ತನಗೆ ಹಾಕಿದ ಊಟವನ್ನು ಮುಟ್ಟದೆ ಕುಳಿತಿದ್ದ ಗೆಳತಿಯ ಮನೆಯ ಬೆಕ್ಕು.


*ಕಳೆದು ಹೋದ ಗೆಳತಿಯ ನೆನಪಲ್ಲಿ ಪ್ರತಿ ಶನಿವಾರ ಆಂಜನೇಯನ ಗುಡಿಗೆ ಹೋಗಿ ಬಂದು school-book companyಯ ಎದುರಿನ ಜನಜಂಗುಳಿಯಲ್ಲಿ ಅವಳನ್ನು ಹುಡುಕುವ ಕ್ರಿಶ್ಚಿಯನ್ನರ ಹುಡುಗ .!


*ಜೀವದ ಗೆಳೆಯ ಕೊಟ್ಟ chocolateನ್ನು ತಾನೊಬ್ಬಳೆ ತಿಂದು ಉಳಿದ ಗೆಳತಿಯರಿಗೆ ಅಂಥದ್ದೇ ಬೇರೆ chocolate ತಂದು ಕೊಡುವ ನನ್ನ ಗೆಳತಿ ..! (ಅದೇಕೆ ಎಂದು ಕೇಳಿದಾಗ ಅವಳಿಂದ ಬಂದ ಉತ್ತರ " ನಾನು ಅವನ ಪ್ರೀತಿಯನ್ನು ಬೇರೆಯವರಿಗೆ ಹಂಚಲಾರೆ..!" )


*ಕೊಟ್ಟಿಗೆಯಲ್ಲಿ ಕಟ್ಟಿ ಹಾಕೆಂದು ಮನೆಯ ವರೆಗೆ ಬಂದು ಅಜ್ಜನನ್ನು ಕರೆದುಕೊಂಡು ಹೋಗುವ ಅಜ್ಜನ ಪ್ರೀತಿಯ ಎಮ್ಮೆ.


*ಶಾಲಾದಿನಗಳಲ್ಲಿ ಉದ್ದಕಿದ್ದ ನನ್ನ ಕೂದಲನ್ನು ಹೆಣೆದು ಜಡೆ ಕಟ್ಟುತ್ತಿದ್ದ, ಈಗಲೂ ಅದೇ ಪ್ರೀತಿಯಂದ ನನ್ನ ಮೋಟು ಕೂದಲಿಗೆ ಜುಟ್ಟು ಹಾಕುವ ನನ್ನ ಅಮ್ಮ.


*ತಟ್ಟೆ ಇಟ್ಟು ಪ್ರೀತಿಯಿಂದ ಬಡಿಸಿ ಊಟ ಮುಗಿಯುವ ವರೆಗೂ ಅದೂ-ಇದೂ ಸುದ್ದಿ ಹೇಳುತ್ತಲೇ ಇದ್ದು ನಂತರ ತಾನು ಉಣ್ಣುವ ನನ್ನ ಅಜ್ಜಿ . ಅದೆಷ್ಟು ಹೊತ್ತಾದರೂ ಸರಿ ಅಜ್ಜ ಬರದೇ ಊಟ ಮಾಡಲೊಲ್ಲದ ನನ್ನ ಅಜ್ಜಿ .

* ಗಿಡಗಳಲ್ಲಿ ಅದೆಷ್ಟೇ ಹೂಗಳಾದರೂ ಅದನ್ನು ಕಿತ್ತು ಮುಡಿಯದ, ಬೇರೆಯವರು ಕೀಳುವುದನ್ನೂ ವಿರೋಧಿಸುವ ಅಮ್ಮ .

*ನಾನು ಜ್ವರ ಬಂದು ಮಲಗಿದಾಗ ರಾತ್ರಿಯೆಲ್ಲಾ ಎಚ್ಚರವಿದ್ದು ನೋಡಿಕೊಂಡ ಹಾಸ್ಟೆಲಿನ ಗೆಳತಿ.

*ಸಾಯುವ ಮೊದಲು ತನ್ನ ಪ್ರೀತಿಯ ಹುಡುಗಿಯ ಹೆಸರನ್ನು ಕನ್ನಡದಲ್ಲಿ ಡೈರಿ ಪೂರ್ತಿ ಬರೆದ ಮಿಜೋರಾಮಿನ ಹುಡುಗ..
*ಬೆಂಗಳೂರಿಗೆ ಬಂದಾಗ ಅದೆಷ್ಟೋ ವರ್ಷದ ಸ್ನೇಹಿತೆಯಂತೆ ಆತ್ಮೀಯತೆಯಿಂದ ನೋಡಿಕೊಂಡ orkut ಗೆಳತಿ, ಹಂಚಿಕೊಂಡ ಸಣ್ಣ ಪುಟ್ಟ ಸಂಗತಿಗಳು. ಅದೆಷ್ಟೋ ವರ್ಷಗಳಿಂದ ಜೊತೆಯಿದ್ದ ಜೋಡಿ ನವಿಲಿನ ಕ್ಲಿಪ್ ಒಂದನ್ನು ನನಗೆ ಕೊಟ್ಟ ಕ್ಷಣ ..!
*ಹಾಸ್ಟೆಲಿನಲ್ಲಿ ಬರೀ ಒಂದು ತಿಂಗಳು ನನ್ನ ಜೊತೆಗಿದ್ದು. CET ಕೋಚಿಂಗ್ ಕ್ಲಾಸ್ ಮುಗಿಸಿ ಹೊರಡುವ ಹಿಂದಿನ ರಾತ್ರಿಯೆಲ್ಲ ನನ್ನ ಕೈ ಹಿಡಿದು ಮಂಚಕ್ಕೆ ಒರಗಿದ್ದ ಪೋರಿ ..!
*ಅಮ್ಮನಂತೆ ಸ್ನೇಹಿತೆಯಂತೆ ನನ್ನ ನೋಡಿಕೊಂಡ PG ಆಂಟಿ .

ಇಂಥಹ ಅದೆಷ್ಟೋ ಘಟನೆಗಳು ನಿಮ್ಮೊಂದಿಗೂ ನಡೆದಿರುತ್ತವೆ. ಆದರೆ ಪ್ರೀತಿ ಎಂದೊಡನೆ ಬರೀ ಹೆಣ್ಣು- ಗಂಡಿನ ನಡುವಣ ಸಂಬಂಧ ಎನ್ನುವುದೇತಕ್ಕೋ ? ಮಮತೆ, ಪ್ರೇಮ, ಪ್ರೀತಿ, ಕಾಮ ಇದೆಲ್ಲರ ವ್ಯತ್ಯಾಸವೇ ಅರಿಯದಂತೆ ಆಡುವುದು ಏತಕ್ಕೆ ?

ಪ್ರೀತಿ ಹುಟ್ಟಿ.. ಸಲ್ಲದ ಸಂಬಂಧ ಬೆಳೆದು. ಮಕ್ಕಳಾಗಿ ..ಮದುವೆಯಾಗಿ ಒಂದೇ ವರುಷಕ್ಕೆ divorce ಗೆ ತಿರುಗುವ ಪಾಶ್ಚಿಮಾತ್ಯ ದೇಶದ ಈ ಒಂದು ಅನುಕರಣೆ ಬೇಕೇ ? ಪ್ರೀತಿ ಪ್ರೀತಿ ಎಂದು ದೈಹಿಕ ಕಾಮನೆಗಳ ತೀಟೆ ತೀರಿಸಿಕೊಳ್ಳುವ ಈ ಜನಕ್ಕೆ 'boy-friend, girl friend' ಎಂದು ಸ್ನೇಹಕ್ಕೆ ಮಸಿಬಳಿಯುವುದು ಯಾಕೆ ?
ಪ್ರೀತಿಗೆ ಕೃಷ್ಣ - ರಾಧೆಯರ ಉದಾಹರಣೆ ಕೊಡುವ ದೇಶ ನಮ್ಮದು. ದೇಶವನ್ನೂ ನಾವು ಮಾತೆಯಾಗಿ ಕಾಣುತ್ತೇವೆ ಅಲ್ವಾ ? ಈ boy friend- girl friend ಸಂಸ್ಕೃತಿ ನಮ್ಮದಲ್ಲ. ಗಂಡು ಹೆಣ್ಣಿನ ನಡುವೆ ನಿಷ್ಕಲ್ಮಶ ಸ್ನೇಹವೂ ಇರುತ್ತದೆ. ಒಂದು ವೇಳೆ ಬರೀ ಸ್ನೇಹಕ್ಕೆ ಬಳಸುತೀರೀ ಆ ಶಬ್ದವನ್ನು ಎಂದಾದರೆ ಸ್ನೇಹದಲ್ಲಿ ಗಂಡು ಹೆಣ್ಣೆಂಬ ಭೇದ ಯಾಕೆ ?


ಪ್ರೀತಿ ಯಾವತ್ತಿದ್ದರೂ ಪ್ರೀತಿಯೇ ಅದಕ್ಕೊಂದು ನಿರ್ಮಲವಾದ ಪರಿಶುದ್ಧವಾದ ಅರ್ಥವಿದೆ. ಅದೊಂದು ಶುದ್ಧ ಸರೋವರ ದಯವಿಟ್ಟು ಅದರಲ್ಲಿ ಅಶ್ಲೀಲತೆಯ ಕಲ್ಲೆಸೆಯಬೇಡಿ .

Saturday, August 14, 2010

ಒಂದಿಷ್ಟು ಸಾಲುಗಳು .......


ಮನದ ಭಾವನಾ ಲಹರಿಯನ್ನು ಉದ್ದುದ್ದಕ್ಕೆ ಹರಿಯಬಿಡದೆ ಶಬ್ದಗಳ ಚೌಕಟ್ಟಿನಲ್ಲಿ ಬಂಧಿಸುವ ಒಂದು ಪುಟ್ಟ ಪ್ರಯತ್ನ. ಒಂದು ದೊಡ್ಡ ಕಥೆ ಹೇಳುವ ಭಾವವನ್ನು ಕವನಗಳಲ್ಲದ ಈ ಸಾಲುಗಳು ಹೇಳಿಬಿಡುತ್ತವೆ. ಹನಿಗವನ ಎಂದು ಕರೆಯಲೋ ಬೇಡವೋ ಎನ್ನುವ ಅನುಮಾನ ಬೇರೆ. ನಿಮ್ಮ ಸಲಹೆಗಳ ನಿರೀಕ್ಷೆಯಲಿ ...


೧. ಅನುದಿನವೂ
ರವಿಯ ಸ್ವಾಗತಕ್ಕೆ
ನಿಸರ್ಗದ ರಂಗೋಲಿ
ಬಾಂದಳದ ತಾರೆಗಳು .!


೨.ಬಾನ ತಾರೆಗಳಿಗೆ
ದಾರಿ ತೋರಲು
ಮಿನುಗುವ ಮಿಂಚು ಹುಳುಗಳು.. !

೩.ಅನುದಿನವೂ
ನಿರೀಕ್ಷೆಯ ಹೊಸ್ತಿಲಲ್ಲೇ
ಏಳುವ ಬದುಕು ...!

೪. ಪ್ರೀತಿ ಒಸರಿ
ಹಸಿಯಾದ ಮನದಲಿ
ಸದ್ದಿಲ್ಲದೆ ಮೂಡುವ ..
ಯಾರದೋ ಹೆಜ್ಜೆ ಗುರುತುಗಳು ..!

೫. ಪಡುವಣದಿ ಇಳಿಯುವ
ರವಿಯ ಕಂಡಾಗ
ನೆನಪಾಗುವವಳು
ಹುಸಿಮುನಿಸು ತೋರಿಸಿ
ದೂರ ಓಡುವ ನನ್ನ ಹುಡುಗಿ ..!


೬. ಮನದ ಬಾಂದಳದಲ್ಲಿ
ಕನಸುಗಳು ಚಂದಿರ
ನೆನಪುಗಳು ತಾರೆಗಳು
ಮನದಂಚಲಿ ಬದಲಾಗುವ ಭಾವಗಳು
ಬೆಳ್ಳಿ ಮೋಡಗಳು ..!

೭.ಪ್ರೀತಿಯು ಗಂಗೆಯಂತೆ
ನಿರಂತರವಾಗಿ ಹರಿಯುತ್ತದೆ
ಎಲ್ಲ ಕಲ್ಮಶಗಳ ಜೊತೆಗೆ ...!


೮.ಮರೆತು ಹೋಗುವ
ಹಾಡಿನ ಸಾಲುಗಳ ಅಕ್ಷರಗಳು ನೀನು..!


೯.ನಿನ್ನ ನಗುವಿಗೆ
ಉತ್ತರವ ಹುಡುಕುತ್ತಿದ್ದ ನನಗೆ
ನನ್ನ ನಗುವೇ ಮರೆತುಹೋಯಿತು..!


೧೦.ನಿನ್ನೆಲ್ಲ ಪ್ರಶ್ನೆಗಳಿಗೆ
ನನ್ನೆಲ್ಲ ಪ್ರಶ್ನೆಗಳಿಗೆ
ಉತ್ತರ ..............
ನಾನು-ನೀನು....!

Monday, August 9, 2010

ಹಿಮ ಕಣಿವೆಯು ಕುದಿಯುತಿದೆ ......







ಅದೊಂದು ಹಿಮ ಕಣಿವೆ. ಹಿಮಾಚ್ಛಾದಿತ ಬೆಟ್ಟ ಗುಡ್ಡಗಳು, ಸುಂದರ ಹೂ ಬನಗಳು, ಸ್ವಚ್ಛ ತಿಳಿನೀರ ಸರೋವರಗಳು, ಹಿಮನದಿಗಳು, ನೀರ ಬುಗ್ಗೆಗಳು ಅಲ್ಲಿಯ ನಿತ್ಯ ನೋಟವಾಗಿತ್ತು. ಹೊಸತಾಗಿ ಮದುವೆಯಾದವರಿಗೆ ಅದು ಸ್ವರ್ಗ.ಅಲ್ಲಿನ ಜನರೂ ತಿಳಿನೀರ ಮನಸಿನ, ನಗುಮೊಗದ, ಹಿಮದಂಥ ಮೈಬಣ್ಣದವರೇ. ಆದರೆ ಅದು ಶಾಪಗೃಸ್ಥ ಕಿನ್ನರಲೋಕವಿರಬೇಕು.! ಅಲ್ಲಿನ ಜನರಿಗೆ ನೆಮ್ಮದಿ, ನಿರಾಳತೆ ಎನ್ನುವುದು ಒಂದು ಮರೀಚಿಕೆ, ಶಬ್ದಕೋಶದಲ್ಲಷ್ಟೇ ಅರ್ಥ ಸಿಗುವ ಒಂದೆರಡು ಪದಗಳು. ಹೌದು ..!ನಾನು ಈಗ ಹೇಳ ಹೊರಟಿರುವುದು ಭಾರತ ಮಾತೆಗೆ ಕಿರೀಟದಂತೆ ಇರುವ ಕಾಶ್ಮೀರದ ಬಗ್ಗೆ.


ಒಮ್ಮೆ ಕಣ್ಮುಚ್ಚಿ ಭಾರತದ ಭೂಪಟವನ್ನು ಕಲ್ಪಿಸಿಕೊಳ್ಳಿ ಒಂದು ಮಾನವಾಕೃತಿಯಂತೆ ಇದೆ ಅಲ್ವಾ? ಅದರಲ್ಲೂ ಕೈತೆರೆದು ನಿಂತ ಮಾನವಾಕೃತಿ ( ಈಶಾನ್ಯ ರಾಜ್ಯಗಳಿರಿವುದು ಎಡಗೈ, ಗುಜರಾತ್ ಬಲಗೈ). ಪಾದವಿಡಲು ಪುಟ್ಟ ಜಾಗ ಸಾಕಲ್ಲವೇ?ದಕ್ಷಿಣದ ಕೊನೆ ಪುಟ್ಟದಾಗೆ ಇದೆ ..! (ಜಗತ್ತಿನ ಮತ್ತಾವ ದೇಶವೂ ಇದರಂತೆ ಇರಲಿಕ್ಕಿಲ್ಲ.) ಅದಿಕ್ಕೆ ಭಾರತ ಮಾತೆ ಎಂದು ಕರೆದಾಗ ದೇವಿಯ ಕಲ್ಪನೆ ಮೂಡಿಬಿಡುತ್ತದೆ. ದೇವಿಗೆ ಕಿರೀಟವಿರದಿದ್ದರೆ ?? ತಲೆಗಿಂತ ಕಿರೀಟ ಸ್ವಲ್ಪ ದೊಡ್ಡದಿರಬೇಕು right? ಉತ್ತರದ ಕೊನೆಯನ್ನೊಮ್ಮೆ ನೋಡಿ, ಕಾಶ್ಮೀರ ಕಿರೀಟದಂತೆ ಕಾಣುತ್ತಿದೆ.


ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ (ಉಗ್ರರು), ಆಫ್ಗಾನ್, ಟಿಬೆಟ್ ಎಲ್ಲ ಕಡೆಯ ನಿರಾಶ್ರಿತರು ಬರುವುದು ಭಾರತಕ್ಕೇ. ಅವರಿಗೂ ಭಾರತ ಕೈತೆರೆದು ನಿಂತ ತಾಯಿಯಾಗಿ ಕಂಡಿರಬೇಕು. ಅಥವಾ ರಾಜಕಾರಣಿಗಳ ದೊಂಬರಾಟದ ದೇಶವಾಗಿ ಕಂಡಿದೆಯೋ ...! ಜಗತ್ತಿನ ಇನ್ಯಾವ ದೇಶ ಇಷ್ಟೊಂದು ನಿರಾಶ್ರಿತರಿಗೆ ಜಾಗ ಕೊಟ್ಟಿದೆ ಹೇಳಿ ?
ಅಮೆರಿಕದಂಥ ಪಶ್ಚಿಮದ ದೇಶಗಳು ಭಾರತದ ಪ್ರತಿಭೆಗಳಿಗೆ ಮಣೆ ಹಾಕಿದೆಯೇ ಹೊರತು ನಿರಾಶ್ರಿತರಿಗಲ್ಲ.


ಕಾಶ್ಮೀರ ಮೊದಲಿನಿಂದಲೂ ಹಾಗೆ, ಅದು ವಿವಾದಿತ ಪ್ರದೇಶ. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ. ಕಾಶ್ಮೀರವು ಸ್ವತಂತ್ರ ದೇಶವಾಗಬೇಕು ಎಂದುಕೊಂಡಿದ್ದ ಅಲ್ಲಿನ ಮಹಾರಾಜ ಹರಿಸಿಂಗ್. ನಂತರ ಪಾಕ್ ಗೆರಿಲ್ಲಾ ಮಾದರಿಯಲ್ಲಿ ದಂಡೆತ್ತಿ ಬಂದಾಗ ವಿಧಿಯಿಲ್ಲದೇ ಭಾರತಕ್ಕೇ ಶರಣಾಗಿದ್ದ. ಭಾರತಕ್ಕೆ ಕಿರೀಟ ದೊರಕಿತ್ತು. ಅದೆಲ್ಲ ಈಗ ಇತಿಹಾಸ .!


ಆದರೂ ಕಾಶ್ಮೀರ ಹರಿದು ಹಂಚಿ ಹೋಗಿದೆ. ಪಾಕಿಸ್ತಾನವು ವಾಯುವ್ಯ ಭಾಗವನ್ನು(ಉತ್ತರ ಭಾಗದ ಪ್ರದೇಶಗಳು & ಆಜಾದ್ ಕಾಶ್ಮೀರ), ಭಾರತವು ಕೇಂದ್ರೀಯ & ದಕ್ಷಿಣ ಭಾಗದ (ಜಮ್ಮು& ಕಾಶ್ಮೀರ,) & ಹಾಗೂ ಲಡಾಖ್‌‌ನ್ನು ನಿಯಂತ್ರಿಸಿದರೆ, ಚೀನಾವು ಈಶಾನ್ಯ ಭಾಗವನ್ನು (ಅಕ್ಸಾಯ್‌ ಚಿನ್‌ ಮತ್ತು ಟ್ರಾನ್ಸ್‌-ಕರಕೋರಂ ಟ್ರಾಕ್ಟ್‌) ನಿಯಂತ್ರಿಸುತ್ತದೆ.


ಅಲ್ಲಿಂದ ಶುರುವಾದ ರಕ್ತ ಸಿಕ್ತ ಇತಿಹಾಸ ಇನ್ನೂ ಮುಂದುವರೆದಿದೆ. ಕಾಶ್ಮೀರದ ಜನರೂ ಶಾಂತಿಪ್ರಿಯರೇ.ಹಿಂದೂಗಳು ಹಾಗೂ ಮುಸ್ಲಿಮರು ಸೌಹಾರ್ದಯುತ ಜೀವನವನ್ನೇ ನಡೆಸುತ್ತಿದ್ದರು. ಆದರೆ ಇತ್ತೀಚಿನ ಒಂದು ದಶಕದಲ್ಲಿ ಪರಿಸ್ಥಿತಿ ಬಿಗಡಾಯಿಸಿ ಹೋಗಿದೆ. ಪ್ರವಾಸೋದ್ಯಮ ಸಂಪೂರ್ಣವಾಗಿ ಕುಸಿದಿದೆ. ಬೆಳಗಾದರೆ ದೇವಾಲಯಗಳಲ್ಲಿ ಘಂಟೆಗಳ ನಾದವಿಲ್ಲ, ಸುಂದರ ಕಣಿವೆಗಳಲ್ಲಿನ ಹೂವುಗಳಿಗೂ ಅರಳಲು ಭಯ, ಭಯದ ಚಾದರವನ್ನೇ ಹೊದ್ದು ಶಾಲೆಗೆ ಹೋಗುವ ಮುಗ್ಧ ಕಂದಮ್ಮಗಳು,ಹೊರಗೆ ಹೋದ ಮನೆಯ ಜನ ಜೀವಂತ ಬಂದಾಗಲೇ ಸತ್ಯ ಅವರು ಬದುಕಿದ್ದದ್ದು. ಬಂದೂಕಿನ ನಳಿಕೆಯ ತುದಿಗಳಲ್ಲೇ ಇರುವ ಯಮಪಾಶ, ಜನರು ಸಾವಿನ ನೆರಳಲ್ಲೇ ಓಡಾಡುತ್ತಾರೆ. ಶೆಲ್,ಗ್ರೆನೇಡ್ A.K47 ಇವೆಲ್ಲ ಅಲ್ಲಿನ ಮಕ್ಕಳಿಗೆ ಸಾವಿಗೆ ಪರ್ಯಾಯವಾದ ಶಬ್ದ. ಕೋಮುಗಲಭೆ, ರಾಜಕೀಯ ದೊಂಬರಾಟ, ಬಸ್ಸಿಗೆ ಬೆಂಕಿ , ಕಲ್ಲು ತೂರಾಟ, ಕೈ ಬಾಂಬ್ ಎಸೆತ , ರಕ್ತದೋಕುಳಿ, ಎಲ್ಲ ಮುಗಿದ ಮೇಲೆ ಕರ್ಫ್ಯೂ. ನಂತರ 'ಶಾಂತಿ' ಎಂಬ ಪದದ ಹುಡುಕಾಟ. ಇಷ್ಟೇ ಆಗಿದೆ ಅಲ್ಲಿನ ಅವಸ್ಥೆ . A to Z ಶ್ರೇಣಿಯ ಭದ್ರತೆಯಲ್ಲಿ ಓಡಾಡುವ ರಾಜಕಾರಣಿಗಳಿಗೆಲ್ಲಿ ತಿಳಿಯಬೇಕು ಜನ ಸಾಮಾನ್ಯನೊಬ್ಬನ ಬದುಕು? ಮನೆಯ ಹೊರಬಂದು ಆಡಲಾಗದ ಆ ಮುದ್ದು ಕಂದಮ್ಮಗಳ ಕಣ್ಣಲ್ಲಿರುವ ಭಯ.!


ಹಬ್ಬಗಳ ಗಲಾಟೆಯಲ್ಲಿ ಒಂದು ಲಕ್ಷ್ಮೀ ಪಟಾಕಿಯ ಶಬ್ದಕ್ಕೆ ಕಿವಿ ಮುಚ್ಚಿಕೊಳ್ಳುತ್ತೇವೆ ನಾವು. ಇನ್ನು ಕಣ್ಣೆದುರಿಗೆ ಮದ್ದು ಗುಂಡುಗಳ ಸುರಿಮಳೆಯಾಗಿ, ರಕ್ತ ಕೋಡಿಯಾಗಿ ಹರಿದು, ಸಾವು ತಾಂಡವವಾಡಿದರೆ? ಒಮ್ಮೆ ಯೋಚಿಸಿ ಗೆಳೆಯರೇ ....


ಅಲ್ಲಿಯ ಗಲಾಟೆ ನೋಡಿ ದೇವರೂ ಮುನಿಸಿಕೊಂಡಿದ್ದಾನೆ. ನೆಲದಲ್ಲಿನ ಬಾಂಬ್ ಸ್ಪೋಟಕ್ಕೆ ಸರಿಯಾಗಿ, ಬಾನಲ್ಲಿ ಮೇಘ ಸ್ಪೋಟ..! ಮತ್ತೆ ಕಂಗಾಲಾಗಿದ್ದಾರೆ ಜನ. ಮತ್ತೊಂದಿಷ್ಟು ಸಾವು,ನೋವು, ನರಳಾಟ, ಕಣ್ಣೀರು...


ಇನ್ನಾದರೂ ರಾಜಕೀಯ ಪಕ್ಷಗಳು ಎಚ್ಚೆತ್ತುಕೊಳ್ಳಲಿ. ಕಾಶ್ಮೀರದ ಕಣಿವೆಗಳಲ್ಲಿ ಶಾಂತಿಯ ಹೂ ಅರಳಲಿ. ಮುಗ್ಧ ಕಂದಮ್ಮಗಳು ನಿರ್ಭೀತಿಯಿಂದ ಆಡಲಿ, ದಾಲ್ ಸರೋವರದಲ್ಲಿ ಮತ್ತೊಮ್ಮೆ ಜೋಡಿ ಹಕ್ಕಿಗಳು ತೇಲಲಿ....ಭಾರತದ ಮುಕುಟದಲ್ಲಿನ ಹಿಮರಾಶಿ ಸೂರ್ಯ ರಶ್ಮಿಗೆ ಹೊಳೆಯಲಿ. ಎಂದು ಹಾರೈಸುವುದಷ್ಟೇ ನಮ್ಮ ಪಾಲಿಗೆ ಉಳಿದದ್ದು ...


ಲಡಾಕಿನ ಗಿರಿ, ಪರ್ವತದಲ್ಲಿ ಬಂದೂಕನ್ನು ಹೆಗಲಿಗೇರಿಸಿಕೊಂಡು ಗಡಿ ಕಾಯುತ್ತಿರುವ ಯೋಧನೂ ದೇವರಲ್ಲಿ ಬೇಡಿಕೊಳ್ಳುತ್ತಾನೆ.ಕಾಶ್ಮೀರದಲಿ ಶಾಂತಿ ನೆಲೆಸಿ, ಮತ್ತೊಮ್ಮೆ ಮನದನ್ನೆಯ ಕಣ್ಣುಗಳಲ್ಲಿನ ನಕ್ಷತ್ರಗಳನ್ನು ಹುಡುಕುವಂತಾಗಲೆಂದು.. !

Saturday, August 7, 2010

ವಿಶ್ವ ಕವಿ ಟಾಗೋರರಿಗೊಂದು ನುಡಿನಮನ ..




ನಿನ್ನೆ ಅಮ್ಮ ಅದೇನೋ ಬರೆಯುತ್ತಿದ್ದರು, ಸುಮ್ಮನೆ ಇಣುಕಿದೆ ಒಮ್ಮೆ. ಅವರು ಬರೆಯುತ್ತಿದ್ದದ್ದು ರವೀಂದ್ರನಾಥ ಟಾಗೋರರ ಕುರಿತು. ಅಮ್ಮ ಭಾಷಣದ ತಯಾರಿಯಲ್ಲಿದ್ದರು. ಬರೆದದ್ದು ಓದಬೇಕು ಅನ್ನಿಸಿತು ಓದಿದೆ. ಬಹಳ ಸುಂದರವಾಗಿ ಬರೆದಿದ್ದರು. ರವೀಂದ್ರರ ಬಗ್ಗೆ ಎಷ್ಟೋ ವಿಷಯ ತಿಳಿಯಿತು. ಅಮ್ಮ ಬರೆದದ್ದು ಯಥಾವತ್ತಾಗಿ ಇಲ್ಲಿ ಇಡಬೇಕು ಅಂದುಕೊಂಡೆ, ಒಂದು ಗಂಟೆಯ ಭಾಷಣದ ವಿಷಯ ಅಲ್ಲಿದ್ದದ್ದು. ಉದ್ದವಾದೀತು ಎಂದು ಎನಿಸಿ ನನ್ನ ಮಾತುಗಳಲ್ಲಿ ಬರೆಯುತ್ತಿದ್ದೇನೆ. ಅವರ ಬಗ್ಗೆ ಬರೆಯುವಷ್ಟು ದೊಡ್ಡವಳು ನಾನಲ್ಲ. ನನ್ನ ಗೌರವವನ್ನು ಬರಹದ ಮೂಲಕ ಸಲ್ಲಿಸುತ್ತಿದ್ದೇನೆ ಅಷ್ಟೆ. ಇಂದು ಅಂದರೆ ಆಗಷ್ಟ್ 7 ಟಾಗೋರರ ಪುಣ್ಯ ತಿಥಿ.
ತಮ್ಮ ಎಂಟನೇ ವಯಸ್ಸಿನಲ್ಲಿಯೇ ಕವನವನ್ನು ಬರೆದ ರವೀಂದ್ರರು ಜನಿಸಿದ್ದು 1861 ಮೇ 7ರಂದು ಬಂಗಾಳದ ಪ್ರಸಿದ್ದ ಥಾಕೂರ್ ಕುಟುಂಬದಲ್ಲಿ. ಮಹರ್ಷಿ (ಹಿಮಾಲಯಕ್ಕೆ ಹೋಗಿ ತಪಸ್ಸು ಮುಗಿಸಿ ಬಂದಿದ್ದರಂತೆ) ದೇವೇಂದ್ರನಾಥ ಥಾಕೂರ್ ಹಾಗೂ ಶಾರದಾದೇವಿಯವರ 14 ನೇ ಮಗು ರವೀಂದ್ರ. ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದವರು ಸೇವಕರು. 'ಶ್ಯಾಮು' ಎನ್ನುವ ಸೇವಕ ಪುಟ್ಟ 'ರಬಿ' ಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕುತ್ತಿದ್ದ. ಕೋಣೆಯಲ್ಲಿನ ಕಿಟಕಿಯ ಬಳಿ ಕುಳಿತು ಪ್ರಕೃತಿಯನ್ನು ನೋಡುತ್ತಿದ್ದ 'ರಬಿ ',ಹೊರಗೆ ಬಿಡುತ್ತಲೇ ಓಡುತ್ತಿದ್ದುದು ಹೂದೋಟಕ್ಕೆ. ಮಂಜು,ಹುಲ್ಲು, ಸೂರ್ಯರಶ್ಮಿ, ಕೆರೆ, ಗಿಡಗಳನ್ನು ನೋಡುತ್ತಾ ತನ್ನದೇ imaginary ಜಗತ್ತಿನಲ್ಲಿ ಓಡಾಡುತ್ತಿದ್ದ. ಶಾಲೆಯ ಪಾಠದಲ್ಲಿ ಆಸಕ್ತಿಯಿರದ 'ರಬಿ'ಗೆ ಶಾಲೆಯ ಕೃತಕ, ನೀರಸ ವಾತಾವರಣಕ್ಕಿಂತ ಮನೆಯ ಕಿಟಕಿಯ ಹಿಂದಿನ ಪ್ರಕೃತಿ ಸೆಳೆಯುತ್ತಿತ್ತು.


ಮುಂದೆ 1913 ರಲ್ಲಿ ಅಣ್ಣನೊಡನೆ ಇಂಗ್ಲೆಂಡಿಗೆ ಹೋಗಿ ಇಂಗ್ಲಿಷ್ ಸಾಹಿತ್ಯವನ್ನು ಓದುತ್ತಾರೆ. ಅನಾರೋಗ್ಯದಿಂದ ಮನೆಗೆ ಹಿಂದಿರುಗಿ, ಪುನಃ ಇಂಗ್ಲೆಂಡಿಗೆ ಸಮುದ್ರ ಯಾನವನ್ನು ಮಾಡುವಾಗ ರಚಿಸಿದ ಕವನಗಳ ಸಂಗ್ರಹವೇ 'ಗೀತಾಂಜಲಿ. nobel ಸಿಕ್ಕಿದ್ದೂ ಇದಕ್ಕೇ. ಗೀತಾಂಜಲಿಯನ್ನು ಅವರೇ ಇಂಗ್ಲಿಷಿಗೆ ಅನುವಾದಿಸುತ್ತಾರೆ. ಭಾರತದ ಅಖಂಡ ಐಸಿರಿಯನ್ನು ಕಣ್ಣೆದುರಿಗೆ ನಿಲ್ಲಿಸುವ, ನಮ್ಮ ರಾಷ್ಟ್ರಗೀತೆ "ಜನಗಣಮನ"ವನ್ನು ಬರೆಯುತ್ತಾರೆ..!



ಗೀತಾಂಜಲಿಯಲ್ಲಿ ದೇವರ ಅಸ್ತಿತ್ವ, ಹುಟ್ಟು- ಸಾವು,ಮಕ್ಕಳ ಆಟ,ಪ್ರೇಮ,ಮಾನವನ ಆಸೆ ಆಕಾಂಕ್ಷೆಗಳ ಬಗ್ಗೆ ಕಾವ್ಯಮಯವಾಗಿ ಆದರೆ ಅಷ್ಟೇ ಸರಳ ಶೈಲಿಯಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಸಾಹಿತ್ಯದ ಸುಮಾರು ಎಲ್ಲ ಪ್ರಕಾರಗಳಲ್ಲಿ ರವೀಂದ್ರರು ಬರೆದಿದ್ದಾರೆ .



ನಾಟಕಕಾರರಾದ ರವೀಂದ್ರರು ವಾಲ್ಮೀಕಿ ಪ್ರತಿಭಾ,ರಕ್ತ ಕರಭಿ,ವಿಸರ್ಜನ,ಮುಕ್ತಧಾರಾ,ಚಿತ್ರಾಂಗದಾ,ಚಂಡಾಲಿಕಾ,ಆಲಿಕ್ ಬಾಬು,ಆಚಲಯತ್ನ ಹೀಗೆ ಹಲವು ನಾಟಕಗಳನು ಬರೆಯುತ್ತಾರೆ, ಅದರಲ್ಲಿ ಅಭಿನಯಿಸುತ್ತಾರೆ ಕೂಡ.ಅವರು ಕಾರವಾರಕ್ಕೆ ಬಂದಾಗ ರಚಿತವಾದದ್ದು' ಪ್ರಕೃತಿರ್ ಪ್ರತಿಶೋದ್' ಎಂಬ ನಾಟಕ.



ಚೋಕೆರ್ ಬಾಲಿ, ಭಗ್ನನೌಕಾ,ಗೋರಾ,ಯೋಗಾಯೋಗ,ರಾಜ ಔರ್ ರಾಣಿ ಹೀಗೆ ಹೃದಯಸ್ಪರ್ಶಿಯಾದ 12ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ. ಇವರ ಕಾದಂಬರಿಗಳಲ್ಲಿ ಪಾತ್ರಗಳು ಜೀವಂತ, ವರ್ಣನೆ ನೈಜತೆಗೆ ಸನಿಹ.



ಯುರೋಪ್,ಜಪಾನ ಜಾತ್ರಿ,ಪ್ರಭಾಸಿರ್ ಪತ್ರ,ರಸಿಯಾರ್ ಚಿಟಿ, ಇವು ಪ್ರವಾಸ ಕಥನಗಳು.


ಚರಿತ್ರಪೂಜಾ,ಸಮಾಜ, ಸ್ವದೇಶ,ಶಾಂತಿನಿಕೇತನ,ವಿಚಿತ್ರ ಪ್ರಬಂಧ,ವಿಶ್ವಪರಿಚಯ, ಸಭ್ಯತಾರ್ ಸಂಕಟ,ಶಿಕ್ಷಾ,ಶಬ್ದತತ್ವ ,ರಾಮಮೋಹನರಾಯ ಇವು ಟಾಗೋರರ ಪ್ರಸಿದ್ಧ ಪ್ರಬಂಧಗಳು.


"ಬಿದಿಗೆ ಚಂದ್ರ" ಇದು ಶಿಶು ಸಾಹಿತ್ಯಕ್ಕೆ ಟಾಗೋರರ ಕೊಡುಗೆ.ಚಿಕ್ಕ ಮಕ್ಕಳ ಮನಸ್ಸು, ಮುಗ್ಧತೆ,ಕುತೂಹಲ,ಕಲ್ಪನಾ ಸಾಮ್ರಾಜ್ಯ ಇವೆಲ್ಲವೂ ಸುಂದರವಾಗಿ ಚಿತ್ರಿಸಲ್ಪಟ್ಟಿದೆ."ಗಲ್ಪಗುಚ್ಹ" ಇದು ಟಾಗೋರರ ಸಣ್ಣಕಥೆಗಳ ಸಂಕಲನ. ಗ್ರಾಮಜೀವನದ ಹಲವು ಮುಖಗಳನ್ನು ಇದರಲ್ಲಿ ಕಲಾಪೂರ್ಣವಾಗಿ ತಂದಿದ್ದಾರೆ.


ತಾರಾಮಂಡಲದ ಬಗ್ಗೆ ಮಕ್ಕಳಲ್ಲಿ ಕುತೂಹಲ ಮೂಡಿಸಲು "ವಿಶ್ವಪರಿಚಯ"ಎಂಬ ವೈಜ್ಞಾನಿಕ ಪುಸ್ತಕವನ್ನು ಬರೆಯುತ್ತಾರೆ.

ದಾಲಿಯ, ಪೋಸ್ಟ್ ಮಾಸ್ಟರ್,ಹೆಂಡತಿಯ ಪತ್ರ,ಕಾಬೂಲಿವಾಲ ಹೀಗೆ 94ಕ್ಕೂಹೆಚ್ಚು ಕತೆಗಳನು ಬರೆದಿದ್ದಾರೆ. ಕಾಬೂಲಿವಾಲ ಒಬ್ಬ ತಂದೆಯ ಮನಸ್ಸು ಹೇಗಿರುತ್ತದೆ ಎನ್ನುವುದನ್ನು ಸಾರುವ ಮನಮಿಡಿಯುವ ಕಥೆ. 'ಮರಳಿ ಮನೆಗೆ' ಒಂಟಿತನದ ದುಗುಡವನ್ನು ಅನುಭವಿಸುವ ಹಾಗೂ ತಾಯಿಯ ಪ್ರೀತಿಗಾಗಿ ಹಂಬಲಿಸುವ ಹುಡುಗನೊಬ್ಬನ ಮನೋಜ್ಞವಾದ ಕಥೆ.'ಹೆಂಡತಿಯ ಪತ್ರ' ಈ ಕಥೆಯಲ್ಲಿ ,ಬಡತನ,ಅನ್ಯಾಯ,ಹೆಣ್ಣಿನ ಶೋಷಣೆ,ಆಕೆ ಅನುಭವಿಸುವ ಮಾನಸಿಕೆ ವೇದನೆಯನ್ನು ಮನಮುಟ್ಟುವಂತೆ ಬರೆದಿದ್ದಾರೆ.'ದಾಲಿಯ' ಕಥೆಯಲ್ಲಿ ಪ್ರಕೃತಿಗೆ ಹತ್ತಿರವಾಗಿರುವ ಮನುಷ್ಯ ಹೇಗೆ ಸಹಜವಾಗಿ ಒಳ್ಳೆಯವನಾಗಿ ಇರಬಲ್ಲ ಎಂಬುದನ್ನೂ,ದ್ವೇಷ ಹಗೆತನ ಇವೆಲ್ಲ ಪ್ರೀತಿಯ ಮುಂದೆ ಎಷ್ಟು ಕ್ಷುಲ್ಲಕವಾಗಿ ಕಾಣಬಲ್ಲವು ಎಂಬುದನ್ನೂ ಅಮೋಘವಾಗಿ ಚಿತ್ರಿಸಿದ್ದಾರೆ.


ರವೀಂದ್ರರ ಪ್ರತಿಭೆ ಸಾಹಿತ್ಯ ರಂಗಕ್ಕಷ್ಟೇ ಮೀಸಲಾಗಿರಲಿಲ್ಲ . ಅವರು ಚಿತ್ರಕಾರರೂ ಹೌದು. ಚಿತ್ರಲಿಪಿಯ ಎರಡು ಸಂಪುಟದಲ್ಲಿ ಅವರ ಚಿತ್ರಗಳನ್ನು ಸಂಗ್ರಹಿಸಿ ಇಡಲಾಗಿದೆ. ತಾವು ರಚಿಸಿದ್ದ ಕವನಗಳಿಗೆ ರಾಗ ಸಂಯೋಜಿಸಿ ಹಾಡುತ್ತಿದ್ದ ರವೀಂದ್ರರು ಗಾಯಕರೂ, ಗಮಕಿಗಳು,ಉತ್ತಮ ನಟರೂ, ನಿರ್ದೇಶಕರೂ ಆಗಿ ಪ್ರಸಿದ್ಧರಾಗಿದ್ದರು.


ರವೀಂದ್ರರು ಶಾಂತಿನಿಕೇತನ,ಶ್ರೀನಿಕೇತನ,ವಿಶ್ವಭಾರತಿ ಎನ್ನುವ ಮೂರು ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಶಾಂತಿನಿಕೇತನದಲ್ಲಿನ 'ವಸಂತೋತ್ಸವ' ಇಂದಿಗೂ ಜನಪ್ರಿಯ.


ಕವಿ,ಕಾದಂಬರಿಕಾರ,ಪ್ರಬಂಧಕಾರಕ,ನಟ,ಚಿತ್ರಕಾರ,ನಿರ್ದೇಶಕ,ವಿಜ್ಞಾನಿ,ಮನೋವಿಶ್ಲೇಷಕ,ಗಾಯಕ,ಸ್ವರಸಂಯೋಜಕ,ಪ್ರಕೃತಿ ಪ್ರೇಮಿ ಹೀಗೆ ಹತ್ತು ಹಲವು ಮುಖಗಳ ಪ್ರತಿಭೆಯ ಟಾಗೋರರನ್ನು 'ಗುರುದೇವ' ಎಂದು ಕರೆಯದೇ ಇರಲಾದೀತೇ?


ವಿಶ್ವಕವಿಯಾಗಿ ಬಂಗಾಳಿ ಸಾಹಿತ್ಯವನ್ನೂ,ಭಾರತದ ಕೀರ್ತಿಯನ್ನೂ ಬೆಳಗಿದ ರವೀಂದ್ರರ ಪುಣ್ಯ ತಿಥಿ ಇಂದು.ಅವರಿಗೊಂದು ಪುಟ್ಟ ನುಡಿನಮನ.


ಲೇಖನವನ್ನೇನೋ ಬರೆದೆ. ಮತ್ತೊಮ್ಮೆ ಓದಿದರೆ ಅಮ್ಮನ influence ಬಹಳವಾಗಿ ಕಾಣುತ್ತಿತ್ತು ..!