Friday, January 29, 2010

ನನ್ನ ಜುಟ್ಟಿನ ಕಥೆ ..!



ಅಮ್ಮನ ಹತ್ರ ತಲೆ ಬಾಚಿಸ್ಕೊಳ್ದೆ ಅದೆಷ್ಟು ದಿನಗಳಾಯ್ತು ಅಂತ ಯೋಚಿಸ್ತಾ ,ನನ್ನ ಒದ್ದೆ ಮೋಟು ಕೂದಲನ್ನು ಹರಡಿಕೊಂಡು ಜಗುಲಿಯ ಮೇಲೆ ಕೂತಿದ್ದೆ ಮೊನ್ನೆ ಜನೆವರಿ ೨೬ರ ಮಧ್ಯಾಹ್ನ .ನನ್ನ high schoolನ ದಿನಗಳಲ್ಲಿ , schoolಗೆ ಹೋಗೋ ಗಡಿಬಿಡಿಯಲ್ಲಿರುತ್ತಿದ್ದ ಅಮ್ಮನ ಹಿಂದೆ ಮುಂದೆ ಓಡಾಡಿ ಬೈಸಿಕೊಳ್ಳುತ್ತ ಜಡೆ ಹಾಕಿಸಿಕೊಳ್ಳುತ್ತಿದ್ದೆ . ತುಂಬಾ ಉದ್ದನೆಯ, ದಪ್ಪಗಿನ ಎರಡು ಜಡೆ.! ಎಷ್ಟೋ ಜನ ಕಣ್ಣು ಹಾಕುತ್ತಿದ್ದರು,ಜಡೆ ತುಂಬಾ ಚೆಂದ ಇದೆ ಎಂದು. ನನಗೆ ಜಡೆ ಹಾಕಿಕೊಳ್ಳಲೂ ಬರುತ್ತಿರಲಿಲ್ಲ. ಅಮ್ಮ ಜಡೆ ಹಾಕಿಕೊಟ್ಟರೂ ಸರಿ ಆಗಲಿಲ್ಲವೆಂಬ ಕಿರಿ ಕಿರಿ ಬೇರೆ. ಮೊದಲೇ ಗಡಿಬಿಡಿಯಲ್ಲಿ ಇರುತ್ತಿದ್ದ ಅಮ್ಮನಿಗೆ ಬೈಯದೆ ವಿಧಿ ಇರಲಿಲ್ಲ.
ಶಾಲಾ ದಿನಗಳ ನಂತರ ನನ್ನ ಉದ್ದನೆಯ ಚಂದದ ಕೂದಲಿಗೆ ಕತ್ತರಿ ಬಿದ್ದಿತ್ತು . ಗೆಳತಿಯರು ಯಾಕೆ cut ಮಾಡಿದೆ ? ಎಂದು ಕೇಳಿದರೆ , ಉದ್ದದ ಕೂದಲನ್ನು maintain ಮಾಡೂದು ಕಷ್ಟ ಎನ್ನೋ ಉತ್ತರ ರೆಡಿ ಇತ್ತು . ತುಂಬಾ comfort ,ಬರೆ ಹತ್ತು ನಿಮಿಷಗಳಲ್ಲಿ ರೆಡಿ ಆಗ್ತೇನೆ ,ಬೇಕೆನಿಸಿದಾಗ ತಲೆ ಸ್ನಾನ ಮಾಡಬಹುದು ಹೀಗೆ ಉದ್ದಕ್ಕೆ ಸಾಗುತ್ತಿತ್ತು ನನ್ನ ಕಾರಣಗಳ ಸಾಲು.

ನಂತರ ನಾನೇ ಬಾಚಿಕೊಳ್ತಿದ್ದೆ, ಜುಟ್ಟು ಹಾಕಿ ಹೋಗುತ್ತಿದ್ದೆ . ಜುಟ್ಟಿನ ಪಕ್ಕ ನನ್ನ dressಗೆ ಮ್ಯಾಚ್ ಆಗೋ ಎರಡು ಕ್ಲಿಪ್ಪುಗಳು . ನನ್ನ ಗೆಳತಿಯೊಬ್ಬಳು ಆ ಕ್ಲಿಪ್ಪುಗಳನ್ನು 'ಜುಟ್ಟು ರಕ್ಷಕರು' ಎಂದು ಕರೆಯುತ್ತಿದ್ದಳು .

ಆದರೆ ಮೊನ್ನೆ ಯಾಕೋ ಅಮ್ಮನಹತ್ರ ಜುಟ್ಟು ಹಾಕಿಸ್ಕೊಳ್ಬೇಕು ಅನಿಸ್ತು. ಅಷ್ಟರಲ್ಲೇ ಅಮ್ಮ "ಎಷ್ಟು ಚಂದಕಿತ್ತು ಜಡೆ ಕತ್ತರಿಸಿ ಈಗ ಕೋಳಿ ಪುಕ್ಕದಂಗೆ ಕಾಣ್ತು ನೋಡು .!" ಎನ್ನುತ್ತಾ ಹತ್ತಿರ ಬಂದರು . " "ನಂಗೆ ಜುಟ್ಟು ಹಾಕ್ಕೊಡು" ಎಂದೆ. ಬಾಚಣಿಗೆ ತಂದೇ ಬಿಟ್ಟರು . ಅವರು ಬಾಚ್ತಿದ್ದಾಗ ಅದೇಕೋ ಸ್ವಲ್ಪ emotional ಆಗ್ಬಿಟ್ಟೆ ಕಣ್ಣೇರು ಕೆನ್ನೆಗೆ ಹರಿಯದಿದ್ದಂತೆ ತಡೆ ಹಿಡಿದಿದ್ದೆ. ಅಮ್ಮ ಎರಡು ಜುಟ್ಟು ಹಾಕಿದ್ದರು. ಅವರಿಗೋ ಅವರ 'ಮುದ್ದು ಪುಟ್ಟಿ' ಕೈಗೆ ಸಿಕ್ಕ ಹಾಗಿತ್ತು , ನಗುತ್ತಿದ್ದರು. ನಾನು ಕನ್ನಡಿಯ ಮುಂದೆ ಓಡಿ ಹೋಗಿದ್ದೆ.

ಅಷ್ಟರಲ್ಲಿ ತಮ್ಮ ಬಂದಿದ್ದ. " "primary schoolಗೆ ಹೋಗಿ ಕೂತ್ಕ , ನೀ ದಿನ ಹೋದಂಗೆ ಸಣ್ಣಾಗು " ಎಂದ .!ಪುಟ್ಟ ಪುಟ್ಟ ಸಂತೋಷಗಳನ್ನು ಸಂಭ್ರಮಿಸುವ ನನಗೆ ಅದಾವುದರ ಪರಿವೆ ಇರಲಿಲ್ಲ, ತಮ್ಮನಿಗೆನು ಅರ್ಥವಾಗಬೇಕು ನನ್ನ ಮತ್ತು ಅಮ್ಮನ ಖುಷಿ. .! ?

ಇಂತಹ ಕ್ಷಣಗಳಲ್ಲೇ ಇರುವುದಲ್ಲವೇ ಜೀವನದ ಖುಷಿ . ಸಂತೋಷ ,ಖುಷಿಗಳು ನಮ್ಮನ್ನು ಹುಡುಕಿ ಬರಲಾರವು ನಾವೇ ಅವುಗಳನ್ನು ಹುಡುಕಿಕೊಂಡು ಹೋಗಬೇಕು ಅಲ್ವಾ?

Thursday, January 28, 2010


ಕುಮಟಾ ಜಾತ್ರೆಗೂ ನನಗೂ ಅದಾವ ಸಂಬಂಧವೋ ಗೊತ್ತಿಲ್ಲ , ಪ್ರತಿಸಲದ ಜಾತ್ರೆಯ timeನಲ್ಲಿ ನಾನು ಮನೆಗೆ ಬಂದಿರ್ತೇನೆ. ಅದೇನೋ ಸಂಭ್ರಮ ,ಖುಷಿ, ಒಂಥರದ ಕುತೂಹಲ, ಜನರ ಗದ್ದಲ, ಎಲ್ಲ. ವರುಷಕ್ಕೊಮ್ಮೆ ಬರುವ ಏಳನೇ ಋತು ಅನ್ನಬಹುದೇನೋ .!
ಮಂಗಳೂರಿನಲ್ಲಿ ದಿನವೂ ಜನ ಜಾತ್ರೆಯನ್ನು ನೋಡುವ ನನಗೆ ಜನಜಂಗುಳಿಯೇನು ಹೊಸದಲ್ಲ, low waist pant ಹಾಕೋರನ್ನ ನೋಡಿ ನೋಡಿ ಸಾಕಾಗಿದೆ. ಎಲ್ಲ rock star ಅಥವಾ model ಥರ ಕಣೋ artificial ಮುಖಗಳೇ ಹೆಚ್ಚು .
ಆದರೆ ಮೊನ್ನೆ ಜಾತ್ರೆ ಮುಗಿದ ಮಾರನೆ ದಿನ ಅಮ್ಮನ ಜೊತೆ ಹೋಗಿತ್ತು ನನ್ನ ಸವಾರಿ.ನಾನು ತುಂಬಾ miss ಮಾಡೋ childhood days ಸಿಕ್ಕಿದ ಹಾಗೆ ಅನಿಸಿತ್ತು . ಅದೇನೋ ಖುಷಿ ಅಮ್ಮನ ಜೊತೆ ಜಾತ್ರೆಯ ಪೇಟೆಗೆ ಹೋಗುವುದು ಅಂದ್ರೆ.
ಸುಮ್ಮನೆ ಅಮ್ಮನ ಹಿಂದೆ ಓಡಾಡುತ್ತ ಜನರನ್ನು ನೋಡುತ್ತಿದ್ದೆ ಅದೇನು ಕುತೂಹಲ ಜನರಲ್ಲಿ ಈ ಜಾತ್ರೆಯ ಬಗ್ಗೆ ? ಅಲ್ಲಿಯ ಅಂಗಡಿಗಳ ಬಗ್ಗೆ? ಸಿಹಿತಿಂಡಿಗಳ ಬಗ್ಗೆ ? ಸುತ್ತಲಿನ ಹಳ್ಳಿಗಳ ಜನರು, ಪೇಟೆಯ ಜನರು ಎಲ್ಲ ಜಾತ್ರೆಯ ಜಂಗುಳಿಯಲ್ಲಿ 'ಜಾತ್ರೆಯ ಜನರೇ' . ಬೇಧ ಭಾವ ಏನಿಲ್ಲ . ಅದೆಷ್ಟು ಅಂಗಡಿಗಳು..ಮೇಲಿಂದ ಬಗೆಬಗೆಯ ಹೆಸರುಗಳು ಆ ಬಣ್ಣದ ಬಳೆಗಳಿಗೆ !! 'ಮಳೆಯಲಿ ಜೊತೆಯಲಿ ಬಳೆ','ಮಗಧೀರ ಬಳೆ', 'all izz well ಬಳೆ' ...ಗಿರಾಕಿಗಳ ಸೆಳೆಯಲು ವಿವಿಧ ಹೆಸರಿನ ಮೇಳ .!ಹೆಂಗಸರ , ಹುಡುಗಿಯರ ಕುತೂಹಲ, ಚೌಕಾಶಿ,ಖರೀದಿ ..ಅದೆಲ್ಲ ಕೇಳುವುದೇ ಒಂಥರಾ ಮಜಾ. .!ಏನೋ ಒಂದು ಸುಂದರ ಕನಸಿನ ಲೋಕದಂತೆ ಭಾಸವಾದದ್ದು ಮೊದಲ ಸಲ .!
ಹುಡುಗಿಯರಿಗೆ ಲೈನ್ ಹೊಡೆಯಲು ಬರುವ ಒಂದಿಷ್ಟು ಹುಡುಗರ ಗುಂಪು. ತನ್ನ ಕಾಡಿಗೆಯ ಕಣ್ಣಂಚಲಿ ಓರೆನೋಟ ಬೀರುವ ಹುಡುಗಿಯರ ಒಂದು ನೋಟಕ್ಕೆ ನಮ್ಮ ಪಡ್ಡೆ ಹೈಕಳು ಕಲಾಸ್ ..!!ಎಲ್ಲವನ್ನು scan ಮಾಡುತ್ತಿದ್ದವು ನನ್ನ ನಯನ ದ್ವಯಗಳು.
ಜಾತ್ರೆಯಲಿ ಸಿಕ್ಕ ನನ್ನ ಹಳೆ ಗೆಳೆಯ ಗೆಳತಿಯರು . ಒಂದು ಮಾತು ಹೇಳದೆ ಕೊರಳಲ್ಲಿ ಕರಿಮಣಿ ಸರ ಹಾಕಿಸಿಕೊಂಡು ಸಿಕ್ಕಿಬಿದ್ದ ಗೆಳತಿ , ಫೋನ್ ನಂಬರ್ ವಿನಿಮಯ ! ಮತ್ತೆ ಚಿಗುರಿದ ಹಳೆ ಸ್ನೇಹ .
ಯಾವ classಗೂ ಹೋಗದೆ ಅದ್ಭುತವಾಗಿ ಕೊಳಲು ಬಾರಿಸುತ್ತ,ಮಾರುವ ಹುಡುಗನ fan ಆಗಿ ಹೋಗಿದ್ದೆ ನಾನು .ಪುಟ್ಟ ಮಕ್ಕಳ ಕುತೂಹಲದ ನೋಟಕ್ಕೆ ಬೆರಗಾಗಿದ್ದೆ,ಮಾರಾಟಗಾರರ ಮಾತಿನ ಮೋಡಿಗೆ ಮರುಳಾಗಿದ್ದೆ , ಹಲವು ಬಣ್ಣಗಳ ಜಗತ್ತಿನೊಂದಿಗೆ ಕಳೆದುಹೋಗಿದ್ದೆ.
ಏನು ಖರೀದಿಸದೇ ಸುಮ್ಮನೆ ನೋಡುತಿದ್ದ ನನ್ನ ಪರಿಗೆ ಅಮ್ಮಂಗೆ ಅಚ್ಚರಿಯೋ ಅಚ್ಚರಿ ..! ಅಲ್ಲಿಯ ವರೆಗೆ ಸುಮ್ಮನಿದ್ದ ಅವರು ಕೊನೆಗೆ ಕೇಳಿದ್ದರು "ಎಂತೂ ತಗಂಜೆ ಇಲ್ಯಲೇ "ವಾಸ್ತವಕ್ಕೆ ಬಂದು ಸುಮ್ಮನೆ ನಕ್ಕು "ಗುಳ್ಳೆ ಮಾಡೂದು (bubler)ಬೇಕು"ಎಂದು ಕೇಳಿದ್ದೆ ಅಮ್ಮನನ್ನು ೫ ರ ಪುಟ್ಟ ಹುಡುಗಿಯಂತೆ .!ಅಮ್ಮ ಕೊಡಿಸಿದ್ದರು ಮಾರುವ ಹುಡುಗ ನಗುತ್ತಿದ್ದ . ನಾನೂ ನಕ್ಕಿದ್ದೆ ಖುಷಿಯಿಂದ .ನನ್ನ ಬಾಲ್ಯ ನನಗೆ ಸಿಕ್ಕಿತ್ತು ಮುಷ್ಟಿಯಲ್ಲಿ . ಆ ಬಣ್ಣದ ಗುಳ್ಳೆಗಳಲ್ಲಿ. ಮೊದಲ ಸಲ ಜಾತ್ರೆಯನು ನೋಡುತ್ತಿದ್ದಂತೆ ಭಾಸವಾಗಿತ್ತು ನನಗೆ .
ಮೊದಲು ಹೀಗೆಲ್ಲ ಅನಿಸ್ತಿರ್ಲಿಲ್ಲ. ಜಾತ್ರೆ ಅಂದ್ರೆ ಒಂದಿಷ್ಟು ಖರೀದಿ,ಗಮ್ಮತ್ತು,ಖುಷಿ ಅಷ್ಟೇ .ಆದ್ರೆ ಮೊನ್ನೆ ನನ್ನ ವಿಚಾರಗಳನ್ನು ನೋಡಿ ಮಂಗಳೂರು ನನ್ನನ್ನು ಇಷ್ಟೊಂದು sensitive ಮಾಡಿದೆಯಾ ? ಎಂದುಕೊಂಡೆ . !!

Wednesday, January 27, 2010

ನನ್ನ ಬಿಂಬ ಮಾತ್ರ ನಾಪತ್ತೆ.. !!!




ಕನಸುಗಳ ಕಾವಲಿದ್ದ
ಮನದ ತಿಳಿಗೊಳದಲ್ಲಿ
ನನ್ನ ಬಿಂಬವ ನೋಡುತ್ತಾ ಕುಳಿತಿದ್ದೆ ..
ಯಾರೋ ಬಂದು ಇಣುಕಿ ನೋಡಿದರು..
ಪ್ರೀತಿಯ ಕಲ್ಲೆಸೆದರು..
ಭಾವನೆಗಳ ಅಲೆಯೆದ್ದಿತು..
ಕನಸುಗಳ ಗೋಪುರದೊಳಗೆ ಭಾವನೆಗಳ ಗುಸು-ಗುಸು ...
ಕಲ್ಲು ತಳ ಸೇರಿದೆ
ಅಲೆಗಳು ಶಾಂತವಾಗಿವೆ ..
ಆದರೆ ...
ನನ್ನ ಬಿಂಬ ಮಾತ್ರ ನಾಪತ್ತೆ.. !!!

ಹೀಗೊಂದು ಹುಚ್ಚು ...


ಅದೊಂದು ಶನಿವಾರ. whistel ಹಾಕುತ್ತ hostelನ ನಮ್ಮ floorಗೆ entry ಕೊಟ್ಟ ನನ್ನನ್ನು ಗೆಳತಿಯರೆಲ್ಲ ."ಏನ್ ಹುಡುಗೀ ಶಾಹಿದ್ ಕಪೂರ್ ಬಂದು propose ಮಾಡಿದ್ನಾ ?" ಅಂತ ಚುಡಾಯಿಸೋಕೆ ಶುರುಮಾಡಿದರು. ಯಾವುದೇ ಹುಡುಗನ ಜೊತೆ tease ಮಾಡಿದ್ರೂ "ಅವನ(ಆ ಹುಡುಗನ ) ಜೊತೆ ಶಾಹಿದ್ ಕಪೂರನ free ಆಗಿ ಕೊಟ್ರೂ ಆ ಹುಡುಗ ಬೇಡ ." ಅನ್ನೋದು ನನ್ನ ಮಾಮೂಲು ಡೈಲಾಗ್ ಆಗಿತ್ತು . ಆದರೆ ಆ ದಿನ ಮಾತ್ರ ನಗುತ್ತ ಕಣ್ಣು ಹೊಡೆದು ರೂಮಿನೊಳಗೆ ಸೇರಿಬಿಟ್ಟಿದ್ದೆ. ಬಾಗಿಲ 'ಕೊಂಯ್ ' ರಾಗಕ್ಕೆ ಹುಡುಗಿಯರ ಹಿಮ್ಮೇಳ "ಹೋ" ಸೇರಿಕೊಂಡಿತ್ತು.
ಶುಕ್ರವಾರ ಸಂಜೆ ಕಾಲೇಜು ಬಸ್ಸಿನ ಹಿಂದಿನ ಸೀಟಿನಲ್ಲಿ ಹುಡುಗಿಯರ ನಗು, ಗಾಸಿಪ್ ಮಧ್ಯೆ ಕಳೆದು ಹೋಗಿದ್ದ ನಾನು, ಥಟ್ಟನೆ ಏನೋ ಹೊಳೆದವಳಂತೆ ಕೇಳಿದ್ದೆ. "ಎಷ್ಟು ಮೀಟರ್ಸ್ ಅಂದ್ರೆ ಒಂದು ಫರ್ಲಾಂಗ್ ಎಂದು ?"ಗೆಳತಿಯರು ನಾನು ಸೀರಿಯಸ್ ಆಗಿ ಕೇಳಿದ್ದ ಪ್ರಶ್ನೆಗೆ ತಲೆ ಕೆಡಿಸಿಕೊಂಡಿದ್ದರು. ಕೊನೆಗೆ ಸೀನಿಯರ್ ಪ್ರಿಯಾಂಕ ಅವಳಮ್ಮನಿಗೆ ಕಾಲ್ ಮಾಡಿ ಕೇಳಿದ್ದಳು ಅವರು maths teacher ಕೊನೆಗೂ ಉತ್ತರ ಸಿಕ್ಕಿಬಿಟ್ಟಿತ್ತು 200 mts ಎಂದು .! ಮನದಲ್ಲೊಂದು ಆಲೋಚನೆ ತಳವೂರಿತ್ತು . Empire mall stopನಲ್ಲಿ ಇಳಿದು ನೇರ ನನ್ನ hostelಗೆ ಬರುವವರೆಗೆ ಯೋಚನೆ ಸರಿಯಾದ ರೂಪ ತಳೆದಿತ್ತು . ಕಾರ್ಯರೂಪಕ್ಕೆ ಬರುವುದೊಂದು ಬಾಕಿ.
ಶನಿವಾರ ಮಧ್ಯಾಹ್ನ 1.30 ರ class ಮುಗಿಸಿ, ಊಟ ಮಾಡಿ ಸರಸರನೆ ಹೊರಬಂದಿದ್ದೆ ಕಾಲೇಜಿನ campusನಿಂದ ಯಾರಿಗೂ ಹೇಳದೆ. ಮನದಲ್ಲಿ ಚಿಕ್ಕಮ್ಮ ಹೇಳಿದ ವಿಷಯ ಕೊರೆಯುತ್ತಿತ್ತು. ಅವರು ಅಂದಿದ್ದಿಷ್ಟು"ನಿಂಗಳ ಕಾಲೇಜ್ ಹತ್ರ ಒಂದು ಫರ್ಲಾಂಗ್ ದೂರದಲ್ಲಿ ಅಕ್ಕ(ನನ್ನ ಅಮ್ಮ )ನ classmate ಹೇಮಂತನ ಮನೆ ಇದ್ದಡ, ಮೊನ್ನೆ ಟ್ರೈನ್ನಲ್ಲಿ ಬರಕದ್ರೆ ಸಿಕ್ಕಿದಿದ ನಿನ್ ಬಗ್ಗೆ ಹೇಳದೆ ಒಂದ್ಸಲ ಸಿಕ್ಕಿಕ್ಕೆ ಹೊಪುಲೇ ಹೇಳಿದ್ದ !".ಆಗ "ನೋಡ್ವ" ಎಂದು ಹೇಳಿದ್ದ ನಾನು ಇಂದು ಹೊರಟು ನಿಂತಿದ್ದೆ.ಅವರ ಮನೆ ಹೆಸರು ವಿಳಾಸ ತಿಳಿಯದೆ. ಕಾರಣ ಇಷ್ಟೇ ಅವರು ಕಾಲೇಜಿನ ದಿನಗಳಲ್ಲಿ ನನ್ನ ಅಮ್ಮನನ್ನು ತುಂಬಾ ಇಷ್ಟಪಡ್ತಿದ್ದರಂತೆ.ಆದ್ರೆ ಅಮ್ಮ ಒಪ್ಪಿರಲಿಲ್ಲ . ಒಂದು ಹಳೆಯ crush ಕಥೆಯ ಹುಡುಕಿ ಹೊರಟು ನಿಂತಿದ್ದೆ.
ಮಧ್ಯಾಹ್ನ ಎರಡು ಗಂಟೆ ಇರಬಹುದು ಹಾಗೆ ನಡೆಯುತ್ತಿದ್ದೆ . ಎಲ್ಲರ ಮನೆಯಲ್ಲೂ ಬಾಗಿಲು ಹಾಕಿತ್ತು. ಊಟದ ಹೊತ್ತು, ಊಟ ಆದವರದ್ದು ಮಲಗೋ ಹೊತ್ತು . (ಶನಿವಾರ ಧಾರಾವಾಹಿಯ ಕಾಟ ಇರಲಿಲ್ಲ). ಒಂದು ಗೂಡಂಗಡಿಯ ಅಜ್ಜನ ಹತ್ರ "ಅಜ್ಜ ಇಲ್ಲಿ ಹೇಮಂತ ಅನ್ನೋರ ಮನೆ ಎಲ್ಲಿದೆ ? ಅವ್ರು ಕಾಲೇಜ್ lecturer" ಎಂದೆ ."ಯಂಕ ಗೊತ್ತಿಜ್ಜಿ ಮಗಾ" ಅಂದ . ಹಾಗೆ ಮುಂದೆ ನಡೆದೆ. ಅಲ್ಲೇ ಒಂದು ಮನೆಯಲ್ಲಿ ಹೆಂಗಸೊಬ್ಬಳು ನಾಯಿಗೆ ಅನ್ನ ಹಾಕಲು ಹೊರಗೆ ಬಂದಿದ್ದಳು. ಒಮ್ಮೆ ನಗು ಹಾಯಿಸಿ ಇಲ್ಲಿ ಹೇಮಂತ್ ಅನ್ನೋರ ಮನೆ ಎಲ್ಲಿದೆ ? ಅವ್ರು ಕಾಲೇಜ್ lecturer ಎಂದೆ ಅದೇ ಹಾಡು ಇನ್ನೊಮ್ಮೆ ಹಾಡಿದೆ. ಅವ್ರು next crossನಲ್ಲಿ ಇದೆ ಅಂದರು.ಓಡುತ್ತಲೇ ನಡೆದಿದ್ದೆ ಅತ್ತ "thanks ಆಂಟೀ " ಎನ್ನುತ್ತಾ .
ಸುಂದರವಾದ ಪುಟ್ಟ ಮನೆ. ಮನೆಯೊಡತಿಯ ಆರೈಕೆಯಲ್ಲಿ ಬೆಳೆದು ನಿಂತ ಚಂದದ ಹೂದೋಟ. ಮನೆಯ ಜಗುಲಿಯಲ್ಲೊಂದು ಪರ್ಷಿಯನ್ ಬೆಕ್ಕು ಕುಳಿತಿತ್ತು. ಅಂಜಿಕೆಯಲ್ಲೇ calling bell ಒತ್ತಿದೆ. ಸುಮಾರು ಮಧ್ಯ ವಯಸ್ಸಿನ ಮಹಿಳೆಯೊಬ್ಬರು ಬಾಗಿಲು ತೆರೆದರು. ನನ್ನ ಪರಿಚಯ ಹೇಳಿಕೊಂಡೆ, sir ಇಲ್ವಾ ?ಎಂದು ಕೇಳಿದೆ. "ಒಂದು ನಿಮಿಷ " ಎಂದು ಒಳಗೆ ಹೋದವರು ಪುನಃ ಬಂದು ಬಾ ಕೂತ್ಕೋ ಅಂದ್ರು ."ಅವರು ಇನ್ನು ಬಂದಿಲ್ಲ ಫೋನ್ ಮಾಡಿದ್ದೆ ಈಗ ಹೊರ್ಟಿದಾರಂತೆ" ಅಂದ್ರು . ಬೇಡ ಎಂದರೂ ಕೇಳದೆ ಲಿಂಬು ಪಾನಕ ಮಾಡಿ ತಂದು ಕೊಟ್ಟರು. ಅದು ಇದು ಮಾತಾಡ್ತಾ ಇರೋವಾಗಲೇ ಸುಮಾರು ಆರು ಅಡಿ ಎತ್ತರದ, ಎಣ್ಣೆಗೆಂಪಿನ, ಫ್ರೆಂಚ್ ಗಡ್ಡದ ವ್ಯಕ್ತಿಯೊಬ್ಬರ ಆಗಮನವಾಯ್ತು . 'in simple words tall dark and handsome' ಎಂದು ಹೇಳಬಹುದು. ಎದ್ದು ನಿಂತು ಕೈ ಜೋಡಿಸಿದ್ದೆ "ನೀನು ವಿಜು ಮಗಳಲ್ವಾ? ತುಂಬಾ ಉದ್ದ ಇದ್ದೀಯ ,ಅವಳದ್ದೇ ಹೋಲಿಕೆ." ಎಂದರು ಮುಖದ ತುಂಬಾ ನಗು ಹರಡಿಕೊಂಡು. "ಕೂತ್ಕೋ ಡ್ರೆಸ್ ಚೇಂಜ್ ಮಾಡಿ ಬರ್ತೇನೆ " ಎಂದು ರೂಮಿಗೆ ಹೋಗ್ತಾ "ಜಾನೂ ಅವಳಿಗೆ ಊಟ ಆಗಿದ್ಯಾ ಕೇಳು " ಎಂದು ಹೆಂಡತೀನ ಕೇಳಿದಾಗ, ನಾನು ತುಂಟ ನಗೆ ನಕ್ಕಿದ್ದೆ . ಒಂದೈದು ನಿಮಿಷದಲ್ಲಿ ಮುಖ ತೊಳೆದು ಫ್ರೆಶ್ ಆಗಿ ಬಂದಿದ್ದರು .ಅಮ್ಮನ ಬಗ್ಗೆ, ಪಪ್ಪಾ,ತಮ್ಮನ ಬಗ್ಗೆ , ಎಲ್ಲ ಕೇಳಿದ್ರು . ಅವರ ಮಕ್ಕಳ ಬಗ್ಗೆ ಹೇಳಿದ್ರು. ನನ್ನ ಹವ್ಯಾಸ , boy friend ಇದಾನ ಎಂದು ಕೇಳ್ತಾ ಕೆಲವೇ ನಿಮಿಷಗಳಲ್ಲಿ ತುಂಬಾ ಆತ್ಮೀಯರೆನಿಸಿ ಬಿಟ್ರು. ಪೂರ್ವ ತಯಾರಿಯೊಂದಿಗೆ ಹೋಗಿದ್ದ ನಾನು ಆಲ್ಬಮ್ ಒಂದನ್ನು ಜೊತೆಗೆ ಒಯ್ದಿದ್ದೆ . ಎಲ್ಲರ ಫೋಟೋ ತೋರಿಸಿದ್ದೆ .ಅದರಲ್ಲೊಂದು ನನ್ನಮ್ಮನ ಹಳೆ ಫೋಟೋ ಅದರ ಪಕ್ಕದಲ್ಲೇ ಈಗಿನ ಫೋಟೋ ಕೂಡ ಕೂತಿತ್ತು ಮುಗುಮ್ಮಾಗಿ. "ಓಹ್! ಹಾಗೆ ಇದ್ದಾಳೆ almost. ಸ್ವಲ್ಪ ದಪ್ಪ ಅನ್ನೋದು ಬಿಟ್ರೆ "ಎಂದರು .comment or compliment ಅಂತ ಅರ್ಥ ಆಗದೆ ನಕ್ಕಿದ್ದೆ . ಪಪ್ಪನ ಹಳೆಯ ಫೋಟೋ ಹತ್ರ "ಓಹ್ ! ಪ್ರಭಾಕರ್ ಥರ ಕಾಣ್ತಾರೆ .!"ತಮ್ಮನ ಫೋಟೋಗೆ "ಸಕತ್ handsome ಎಷ್ಟು ಜನ ಹುಡುಗೀರು ಹಿಂದೆ ಬಿದ್ದಿದ್ದಾರೆ ?" ಅಂತ ನಕ್ಕರು . ಹಾಗೆ ಅವರ ಆಲ್ಬಮ್ ತೋರಿಸ್ತಾ ಮಾತಾಡ್ತಾ ಇರೋ ನಮಗೆ ಸಮಯ ಹೋದದ್ದೇ ತಿಳಿಯಲಿಲ್ಲ . ಇದೆಲ್ಲದರ ನಡುವೆ ಅವರನ್ನು sir ಎಂದು ಸಂಬೋಧಿಸುತ್ತಿದ್ದ ನನಗೆ "just uncle ಅನ್ನಮ್ಮ "ಸಾಕು ಅಂದಿದ್ದರು. uncle ನಾನಿನ್ನು ಹೊರಡ್ತೇನೆ ನಾಳೆ assignment ಬೇರೆ submit ಮಾಡ್ಬೇಕು ಎಂದು ಎದ್ದು ನಿಂತೆ. ಇರು ನಾನು ಬಿಡ್ತೇನೆ bustand ವರೆಗೆ ಎಂದು ನನ್ನ ಹಿಂದೆ ಬಂದರು. ಆಂಟೀಗೆ bye ಹೇಳಿ ನಾನು ಬೈಕ್ ಏರಿದ್ದೆ. ಹಾಗೆ ಹೋಗ್ತಾ "ನನ್ನವಳ ಹೆಸರು 'ಜಾನಕಿ'" ಅಂದ್ರು. ಅದೇನೋ ನೆನಪಾದವರಂತೆ. "ಕಾಲೇಜಿನ ದಿನಗಳಲ್ಲಿ ನಿನ್ನ ಅಮ್ಮನ್ನ ತುಂಬಾ ಇಷ್ಟ ಪಡ್ತಿದ್ದೆ, ಇವತ್ತು ನಂಗೆ ಕಾಲೇಜ್ daysಗೆ ಹೋದಂಗೆ ಆಯ್ತು ಅಂದ್ರು . bustandನಲ್ಲಿ ನನ್ನನ್ನು ಬಿಡುತ್ತಿದ್ದಂತೆ ದೂರದಲ್ಲಿ ಬಸ್ ಬರ್ತಾ ಇತ್ತು. ನಾನು "uncle ಫ್ರೆಂಚ್ ಗಡ್ಡ ಆವಾಗ್ಲೂ ಇತ್ತಾ? " ಇಲ್ಲಮ್ಮ ಅಂದ್ರು. ಆಗ ನಾನು "ಚೆನ್ನಾಗಿ ಕಾಣತ್ತೆ ನಿಮಗೆ ಆಗ ಇದ್ದಿದ್ರೆ ನನ್ನಮ್ಮ ನಿಮ್ಮನ್ನೇ ಒಪ್ಪಿಕೊಳ್ತಾ ಇದ್ರು " ಎಂದು ಹೇಳಿ ಕಣ್ಣು ಹೊಡೆದು ನಗುತ್ತ ಬಸ್ ಏರಿದ್ದೆ. ಅವರು ತಲೆ ಕೊಡವಿಕೊಂಡು ನಗುತ್ತಿದ್ದದ್ದು ಕನ್ನಡಿಯಲ್ಲಿ ಕಾಣುತ್ತಿತ್ತು ..! ನನಗೋ ಚಂದಿರನ ಅಂಗಳದಲ್ಲಿ ನಡೆದಾಡಿದ ಅನುಭವ. !!

Saturday, January 23, 2010






ಕೋಟಿತಾರೆಗಳು ಜೊತೆಗಿದ್ದರೂ ...

ಚಂದಿರ ಏಕಾಂಗಿ !

ಪಕ್ಕದಲ್ಲೇ ರೋಹಿಣಿಯಿದ್ದರೂ

ನೋಡುವ ಮನಸ್ಸಿಲ್ಲ .

ತಾರೆಗಳ ಇಣುಕು ನೋಟದಿಂದ ತಪ್ಪಿಸಿಕೊಳ್ಳುವ

ಅಮಾವಸ್ಯೆಯೇ ಪ್ರಿಯವಾಗಿದೆ.. !!



ಏಕಾಂತ ವಿಹಾರಿ ಆತ

ಮೋಡದೊಳಗೆ ಹೊರಗೆ..

ಕನಸುಗಳ ಕಂಡೂ ಕಂಡೂ ಬೋರಾಗಿದೆ

ನಿಶೆಯ ನೀರವ ಬೇಸರಿಸಿದೆ

ಬೀಸುವ ತಂಗಾಳಿಗೆ

ಮೈ ಮನ ಚುಚ್ಚುತ್ತಿದೆ .... !!



ದೂರದಿಂದೆಲ್ಲೋ ತೇಲಿ ಬರುವ

ವಿರಹಿಯೋಬ್ಬನ ವೇಣುಗಾನ..

ಚಂದಿರನ ಮೊಗದಲ್ಲೊಂದು

ಮುಗುಳ್ನಗೆಯ ಸುಳಿಮಿಂಚು..

ನನ್ನಂತೆ ಇರುವನಲ್ಲ ಇನ್ನೊಬ್ಬ ಏಕಾಂಗಿ ಎಂದು... !



ಮಳೆ ಬಿಸಿಲುಗಳ ಮೇಳಕ್ಕೆ ಕಟ್ಟುವ ಮಳೆಬಿಲ್ಲಿನ

ಮೇಲೆ ಜಾರುವ ಹಂಬಲ

ಈ ಚಂದಿರನಿಗೆ ಅದೇಕೆ ಬಂತೋ ಗೊತ್ತಿಲ್ಲ..

ಶಶಿಯ ಹೊಟ್ಟೆಯೊಳಗೆ

ತಣ್ಣನೆಯ ಹೊಟ್ಟೆಕಿಚ್ಚು..!!

ನಿನ್ನ ಹೆಜ್ಜೆಗಳ ಹುಡುಕುತ್ತ ..!!




ನಾನು ಏಕಾಂಗಿಯಲ್ಲ
ನನ್ನ ನೆರಳು ಜೊತೆಗಿದೆ
ನಿನ್ನ ನೆನಪು ನನ್ನ ಬಳಿಯಿದೆ.
ಏಕಾಂಗಿತನ ನನ್ನೊಂದಿಗಿದೆ..
ಒಣಗಿದ ಕನಸುಗಳ ಗೂಡಿನಲ್ಲಿ
ನಿನ್ನ ನೆನಪಿನ ದೀಪವೊಂದು ಉರಿಯುತಿದೆ
ಕತ್ತಲಲ್ಲಿ ಕಳೆದುಹೋಗುವ ಭಯದಲ್ಲಿರುವ
ನನ್ನ ನೆರಳಿಗಾಗಿ..


ನಿನ್ನ ನೆನಪುಗಳ ಚಿತ್ರಗಳಿಗೊಂದು
ಬೆಚ್ಚನೆಯ ಭಾವದ ಫ್ರೇಮು ಹಾಕಿಸಿ
ತೂಗುಬಿಟ್ಟಿದ್ದೇನೆ
ನನ್ನ ಮನದ ಗೋಡೆಯಮೇಲೆ ..


ಬದುಕಿನ ಕಾಲುದಾರಿಯಲ್ಲಿ
ಹೊರಟಿದ್ದೇನೆ ಗೆಳೆಯ
ಏಕಾಂಗಿತನದ ಕೈ ಹಿಡಿದು
ನಿನ್ನ ಹೆಜ್ಜೆಗಳ ಹುಡುಕುತ್ತ...!

Wednesday, January 20, 2010

ನೆನಪಿನ ಸುರುಳಿ ಬಿಚ್ಚಿದಾಗ ...











ನಿನ್ನೆ ಮಂಗಳೂರಿನಲ್ಲಿ ಮಳೆ, ಸಂಜೆ ೫ರ ಮಳೆ . ನನ್ನ ಬಣ್ಣದ ಕೊಡೆ ಹಿಡಿದು ಒಂದು ವಾಕ್ ಹೋಗಿ ಪಾನಿಪುರಿ ತಿಂದು ಬರೋಣ ಅಂದುಕೊಂಡವಳಿಗೆ , ಹೊಸ ಚಪ್ಪಲಿ ಹಾಳಾಗೋದ್ರೆ ಅಂತ ಅನಿಸಿ , ಸುಮ್ಮನೆ ಬಂದು ಕೂತೆ ಕಿಟಕಿಯ ಸನಿಹ . ಗಾಜು ಸರಿಸಿ ಮಳೆಹನಿಯನ್ನು ನೋಡುತ್ತಾ ಕುಳಿತವಳಿಗೆ. ಅದೇನೋ ನೆನಪಾಗಿ ಥಟ್ಟನೆ ಎದ್ದು ನನ್ನ ಹೈಸ್ಕೂಲು ಜೀವನದ Autograph ಬುಕ್ ತೆರೆದೆ . ಈ ಮಳೆಯನಿಗಳ ಚಟಪಟಕ್ಕೆಹಳಿಯ ನೆನಪುಗಳ ಕೆಣಕೋ ತಾಕತ್ತಿದೆ . ಅಲ್ವಾ ?

ಕಂಡೂ ಕಾಣದ ತುಂಟನಗೆಯೊಂದು ಮಿಂಚಿ ಮಾಯವಾಗಿತ್ತು, ಮನದೊಳಗೆ ಏನೋ ಒಂದು ಸಮ್ಮಿಶ್ರ ಭಾವ . ಮತ್ತೆ ಅದೇ ಹೈಸ್ಕೂಲ್ ಜೀವನದ ಉನಿಫಾರ್ಮ್ ತೊಟ್ಟು ಜುಟ್ಟಿಗೆ ರಿಬ್ಬನ್ ಕಟ್ಟಿದ ಅನುಭವ.
ಹಾಗೆಯೇ ಪುಟಗಳನ್ನೂ ತಿರುವುತ್ತ ನಗುತ್ತಿದ್ದ, ನೆನಪಿನ ಬಲೆಯೊಳಗೆ ಸಿಲುಕಿದ್ದ ನನ್ನನ್ನು ಹೊರೆಗೆಳೆದದ್ದು ಹರಿದು ಹೋದ ಒಂದು ಹಾಳೆಯ ಕುರುಹು. ಥಟ್ಟನೆ flash backಗೆ ಹೋದೆ ಥೇಟ್ ಸಿನೆಮಾಗಳಲ್ಲಿ ತೋರಿಸುವ ಹಾಗೆ. !

ಆ ಹಾಳೆಯನ್ನು ನಾನೇ ಹರಿದು ಒಲೆಗೆ ಹಾಕಿದ್ದೆ. ಅದರಲ್ಲಿದ್ದಿದ್ದು ಇಷ್ಟೇ :
"ರವಿ ಇರದ ಬಾನು
ಸಿಹಿ ಇರದ ಜೇನು
ನೀನಿರದ ನಾನು
ಬರೆಯಲಿ ಇನ್ನೇನು?"
"ನನ್ನ ಈ ಪುಟ್ಟ ಹೃದಯದ ತುಂಬಾ ನಿನ್ನದೇ ನೆನೆಪುಗಳ ನಿನಾದ .!"
ನನ್ನ classmate ಹುಡುಗನ ಹಸ್ತಾಕ್ಷರದಲ್ಲಿ .ಹುಡುಗ ನನ್ನನ್ನು ಬೇಜಾನ್ ಇಷ್ಟ ಪಡ್ತಾ ಇದ್ದ. it was a crush ..! ಕೊನೆಗೆ ಭಾವನೆಗಳಿಗೆ ಅಕ್ಷರದ ರೂಪ ಕೊಟ್ಟು ಬರೆದಿದ್ದ .ಅಮ್ಮ ಬೇಡ ಎಂದರೂ ಕೇಳದೆ, ಹರಿದು ಒಲೆಗೆ ಹಾಕಿದ್ದೆ ಸಿಟ್ಟಿನಿಂದ. ಅದರ ನಂತರ ಮಾತನ್ನೂ ಕಡಿಮೆ ಮಾಡಿದ್ದೆ ಅವನಲ್ಲಿ. ಆದರೆ ಆ ಸಾಲುಗಳು ಮನದಲ್ಲಿ print ಆಗಿತ್ತು. ಹಾಗೆ ಕಾಲಕ್ಕೆ ಸಿಕ್ಕಿ ಮರೆತಿತ್ತು ಕೂಡ .
ಆದರೆ ನಿನ್ನೆ ಹುಡುಗ ನೆನಪಾಪಾಗಿ ಬಿಟ್ಟಿದ್ದ, ಕಾಡುತ್ತಿದ್ದ ಕೂಡ...ಅದೇನಾದರಾಗಲಿ ಎಂದುಕೊಂಡು cyberಗೆ ನಡೆದಿದ್ದೆ. orkut search ನಲ್ಲಿ ಅವನ ಹೆಸರು ಹಾಕಿ ಹುಡುಕಾಡಿದೆ. ಸಿಕ್ಕಿಬಿತ್ತಿದ್ದ ಅದೇ ಆ ನಗುಮೊಗದ ಹುಡುಗ. ಅದೇ ನಗೆಯ ಫೋಟೋದಲ್ಲಿ.!profile ತೆರೆದೆ ಕಾತುರತೆಯಿಂದ ......ಕೆಳಗಡೆ committed ಎಂದು ಇತ್ತು. ಹುಡುಗನ ಮನದಲ್ಲೊಮ್ಮೆ ಇಣುಕಿ ನೋಡೋಣ ಎಂದು ಹೊರಟವಳಿಗೆ ಮನಸ್ಸಾಗಲೇ ಇಲ್ಲ .!ನೆನಪುಗಳ ಕೆಣಕುವುದು ಬೇಡ ಅನಿಸಿ ಸೀದಾ ಹೊರಬಂದಿದ್ದೆ ..!
ಪಡುವಣದ ಸೂರ್ಯ ಮೋಡವನ್ನು ಬಿಟ್ಟು ಈಚೆ ಬಂದಿದ್ದ, ತುಂತುರು ಮಳೆ ಎಳೆಬಿಸಿಲ ಮೇಳಕ್ಕೆ ಕಟ್ಟಿದ ಮಳೆಬಿಲ್ಲು ಆಗಸದಲ್ಲಿ ! ಎಲ್ಲ ಮರೆತು almost ಕೂಗಿದ್ದೆ "hey..... rainbow ...!"

Tuesday, January 19, 2010

ಹಳ್ಳಿಗಳು ಹಳ್ಳಿಗಳಾಗೆ ಇರಲಿ


ಮಂಗಳೂರಿನ ಜನಜಂಗುಳಿಯಮಧ್ಯೆ ಓಡಾಡುವಾಗಲೂ ಒಮ್ಮೊಮ್ಮೆ ಒಂಟಿ ಎನಿಸಿಬಿಡುತ್ತೇನೆ. ಅವರವರ ಪಾಲಿನ ಗಡಿಬಿಡಿಯ ಜೀವನದ ಮಧ್ಯೆ. ಸುಂದರ ಸಂಬಂಧಗಳು ಅಪರೂಪ. ವ್ರದ್ಧಾಶ್ರಮಗಳು ಹೆಚ್ಚಾಗುತ್ತಿವೆ . ಅದ್ಕ್ಯಕೋ ಬೇಜಾರು ತರುವ ವಿಷಯ ನನಗೆ. private ಬಸ್ಸುಗಳಲ್ಲಿ ಓಡಾಡುವಾಗ ಎಲ್ಲಾದರೂ ನಮ್ಮ ಕಡೆಯ (ಉತ್ತರ ಕನ್ನಡದ ) ಕನ್ನಡ ಕೇಳಿದರೆ ಕತ್ತು ನೋವು ಬರುವಷ್ಟು ಹಿಂತಿರುಗಿ ನೋಡುತ್ತೇನೆ ಅವರನ್ನು ಪತ್ತೆ ಮಾಡುವವರೆಗೂ.

ಮೊದಲೆಲ್ಲ ಮನೆಗೆ ಬರುವಾಗ ರೈಲು ನಿಲ್ದಾಣಕ್ಕೆ ತಮ್ಮನನ್ನೋ, ಅಪ್ಪನನ್ನೋ ಬರಹೇಳುತ್ತಿದ್ದ ನಾನು. ಮೊನ್ನೆ ತಮ್ಮ ಫೋನ್ ಮಾಡಿ "ಬೈಕ್ ತರಲಾ? "ಅಂದಾಗ "ಬೇಡ ಬಸ್ಸಿಗೆ ಬರುತ್ತೇನೆ" ಅಂದುಬಿಟ್ಟೆ. ಅದ್ಯಾಕೋ ನಮ್ಮೂರ ಕೆಂಪು ಬಸ್ಸು ತುಂಬಾ ಚೆಂದಕ್ಕೆ ಕಂಡಿತ್ತು , ಕಿಟಕಿಗಳಿಗೆ ಗಾಜಿಲ್ಲದೆ 'ತಾಡಪತ್ರೆ' ಹಾಕುವ ಮಂಗಳೂರಿನ ಬಸ್ಸುಗಳಿಗೆ ಹೋಲಿಸಿದರೆ . ಆ ದಿನದ ಕೊನೆಯ ಬಸ್ಸಾಗಿತ್ತು ಅದು . ಅದ್ಯಾಕೋ ಮಂಗಳೂರಿನ ಪ್ರೈವೇಟ್ ಬಸ್ಸಿನಲ್ಲಿ ಬರುವ perfume, powder ಪರಿಮಳಕ್ಕಿಂತ ಹಳ್ಳಿಜನರ ಬೆವರು ವಾಸನೆ, ಸರಕಾರಿ ಸಾರಾಯಿ ವಾಸನೆ ಪ್ರಿಯವೆನಿಸಿತ್ತು ನನಗೆ. ಶ್ರಮದ ಬೆವರಲ್ವಾ?? ಸರಕಾರಿ ಸಾರಾಯಿ ಕುಡಿಯುವವರು ಬೆವರಿಳಿಸಿ ದುಡಿವ ಜನರು . ಲಂಚದ ಜನರಿಗೆ ಅಥವಾ ದುಡ್ಡಿದ್ದವರಿಗೆ ಮಾತ್ರ ವಿಸ್ಕಿ, scotch,rum ಇವೆಲ್ಲ ಅಲ್ವಾ? ಒಂದು ಲುಂಗಿಯಲ್ಲಿ ಎಲ್ಲಿಬೇಕಾದರೂ ಹೋಗುವ ಸರಳ ಜನ ನಮ್ಮ ಹಳ್ಳಿ ಜನ. ಕಂಡಕ್ಟರ್ ಜೊತೆ ೫ ರುಪಾಯಿ ಟಿಕೆಟ್ ಗೆ "ಮೂರು ರುಪಾಯಿ ತಗಳ್ರ ಆಗಲಿ " ಎನ್ನುವಾಗ ಒಂದು ಅಜ್ಜಿಯ ಮುಗ್ಧತೆಗೆ ಏನೆನ್ನಬೇಕೋ ಗೊತ್ತಾಗಲಿಲ್ಲ .
ಕೊನೆಯ ಸೀಟಿನಲ್ಲಂತೂ 'love birds'ಗಳದ್ದೇ ಕಾರುಬಾರು. ಕಣ್ ಕಣ್ಣು ಬಿಟ್ಟು ನೋಡುವ ಹಿರಿಯ ಜೀವಗಳು flash backಗೆ ಹೋಗಬೇಕಷ್ಟೆ.!

ಆದ್ರೆ ಬದಲಾವಣೆ ನಿರಂತರ ಅಲ್ವಾ? ಪಟ್ಟಣದ ಗಾಳಿ ಹಳ್ಳಿಗೂ ಬೀಸುತ್ತಿದೆ ಎಲ್ಲರ ಕೈಯಲ್ಲೂ ಮೊಬೈಲ್ ಫೋನ್ಗಳ ಹಾವಳಿ . ಪತ್ರ ಓದದೆ ವರುಷಗಳು ಕಳೆದು ಹೋಗಿವೆ. ಸಂಕ್ರಮಣಕ್ಕೆ ಬರುತ್ತಿದ್ದ greeting cardಗಳ ಪತ್ತೆಯೇ ಇಲ್ಲ .!ಎಲ್ಲೆಲ್ಲೂ ಮೆಸ್ಸೇಜುಗಳದ್ದೆ ದರ್ಬಾರು. ಯಾಕೋ ಸಿಟ್ಟು ಬಂದಿದೆ ಈ ಮೊಬೈಲ್ ಗಳಮೇಲೆ . ಕಾತುರತೆ, ಆ ಗ್ರೀಟಿಂಗ್ಸ್ಗಳ ಕಾಲ ಮುಗಿದೊಯ್ತ ಅಂತ ಅಂತ ಬೇಜಾರಾಗ್ತಿದೆ .ಪತ್ರ, ಗ್ರೀಟಿಂಗ್ಸ್, ಏನೋ ಒಂಥರದ ಖುಷಿ ಎಲ್ಲವನ್ನು ಕಸಿದುಕೊಂಡಿದೆ.

ಇಷ್ಟು ಯೋಚಿಸಿತ್ತಿರುವಾಗಲೇ ನನ್ನ ಮನೆಯ stop ಬಂದಿತ್ತು . ಒಮ್ಮೆ ತಲೆಕೊಡವಿಕೊಂಡು ಎದ್ದೆ ನಾ ಕುಳಿತಿದ್ದ ಸೀಟಿನಿಂದ .
ಹಳ್ಳಿ ಹಳ್ಳಿಯಾಗೆ ಇರಲಿ . ಎಂದು ಹಾರೈಸುವುದೊಂದೇ ನನ್ನ ಪಾಲಿಗೆ ಉಳಿದದ್ದು.

ಮನದಲ್ಲೊಂದು ಮಳೆ .....


ಮೊದಲ ಮಳೆಗೆ
ಮನದ ಒಳಗೆ
ಏನೋ ಭಾವ ಸುಳಿಯುತಿದೆ..
ವಿರಸ ಕಳೆದು
ಕನಸು ಮೊಳೆತು
ಜೀವ ಭಾವ ತುಡಿಯುತಿದೆ..


ಕನಸು ಕಮರಿ
ಮನಸು ಬಳಲಿ
ಮರುಭೂಮಿಯಾಗಿತ್ತು ಮನಸು
ಮಳೆಯ ತಂಪು
ಮಣ್ಣ ಕಂಪು
ಮತ್ತೆ ಮೊಳೆಯಿತು ಕನಸು..


ಕಾದ ಭುವಿಗೆ ಮಧುರ ಸ್ಪರ್ಶ
ಎಲ್ಲಿಂದಲೋ ಇಳಿವ ಮಳೆಹನಿ
ದಣಿದ ಕಣ್ಣಿಗೆ ಏನೋ ಹರ್ಷ
ಕಣ್ಣಂಚಿನಲ್ಲಿ ಹೊಳೆವ ಹನಿ..
ಎಲ್ಲೋ ಹೊಯ್ದ ಮಳೆಯ ಕುರುಹು
ಇಲ್ಲಿ ಸುಳಿವ ತಂಗಾಳಿ ..
ಯಾರದೋ ನೆನಪು ನನ್ನ ಮನದಿ
ಅಂಚಿನಲಿ ಮುಗುಳು ನಗೆಯ ಸುಳಿ..!!

Monday, January 18, 2010

ಬೆಳದಿಂಗಳು......


ಬಾಂದಳದ ಚಂದಿರನಂತೆ
ಮನಸು ಒಂಟಿಯಾಗಿತ್ತು .....
ಹೊರಟಿದ್ದೆ ಬೆಳದಿಂಗಳ ಮೆರವಣಿಗೆಯಲ್ಲಿ ..
ಹಾದಿ ಬದಿಯ ಮರಗಳಿಂದ ನೆರಳು ಬೆಳಕಿನಾಟ....
ಪ್ರೇಮಿಗಳ ಪಿಸುಮಾತಿನಂತಿರುವ ಎಲೆಗಳ ಮರ್ಮರ ....
ಹರಿವನದಿಯಲ್ಲೊಂದು ತೇಲುವ ಬೆಳ್ಳಿ ಬಟ್ಟಲು...
ಅದು ಚಂದ್ರ ಬಿಂಬ ..!
ಕನಸಿನ ಮಾಯಲೋಕವಲ್ಲವಿದು ..
ವಾಸ್ತವದ ಪ್ರಕೃತಿ ವೈಭವ ..!!

ಮೂಲೆಯ ಗಂಗವ್ವನ ಜೋಪಡಿಗೂ
ಬೆಳ್ಳಿಯ ಬಣ್ಣ ..
ಸಾಹುಕಾರನ ಮೂರೂ ಅಂತಸ್ತಿನ ಬಂಗಲೆಯೂ
ರಜತಮಯ....
ಬೆಳದಿಂಗಳಿಗಿಲ್ಲವಲ್ಲ ಈ ತಾರತಮ್ಯ ...!!

ಕತ್ತೆತ್ತಿ ನೋಡಿದರೆ
ಬಾಂದಳದ ಚಿಕ್ಕ ಚುಕ್ಕಿಗಳೆಲ್ಲ ಮಾಯ...!
ಅಲ್ಲಲ್ಲಿ ಹರಡಿರುವ ..
ಬೆಳ್ಳಿ ಮೋಡಗಳ ತುಣುಕುಗಳು ಮಾತ್ರ ..

ಸಕಲ ಜೀವರಾಶಿಗೂ
ರಜತಮಯವಾಗುವ ರೋಮಾಂಚನ
ನಿಶೆಯ ಜಡತೆಯಲ್ಲಿ ಚೈತನ್ಯ ತುಂಬುವ ಈ ಬೆಳದಿಂಗಳು ..
ಇರಬಾರದೇ ಅನುದಿನವೂ ..
ಮನವೆಣಿಸುವುದು ಹೀಗೆ..

ಆದರೆ.....
ಆದರೆ ....
ಬಾನ ಸೀರೆಯಲಿ
ಬೆಳ್ಳಿ ತಾರೆಗಳ ಕಸೂತಿ ತುಂಬಲು
ಬರಲೇ ಬೇಕಲ್ಲ ಅಮಾವಾಸ್ಯೆಯು ...!

ಬಂತಿದೋ ವಸಂತ ತಂತಿದೋ ಸಂತಸ !



ಯಾವ ಕಲಾವಿದನ ಕಲ್ಪನೆಯ ಕಲಾಕೃತಿ ?
ಅರಳಿ ನಗುತಿದೆ ವಸಂತದ ಮಡಿಲಲ್ಲಿ ಪ್ರಕೃತಿ..
ಬಂತಿದೋ ವಸಂತ ತಂತಿದೋ ಸಂತಸ ll ಪ ll


ಋತುಗಳ ರಾಜನ ಆಗಮನ
ಗಿಡಗಳಲ್ಲೆಲ್ಲ ಚಿಗುರಿನ ನರ್ತನ
ಸೃಷ್ಟಿಯಲಿ ಹಸಿರಿನ ಸಿಂಚನ
ಜೀವಜಾಲಕೆ ರೋಮಾಂಚನ
ಬಂತಿದೋ ವಸಂತ ತಂತಿದೋ ಸಂತಸll ೧ ll


ಮಾವಿನ ತೊಪಲಿ ಬೇವಿನ ಕಂಪಲಿ
ದುಂಬಿಯ ಹಿಂಡಿನ ಝೇಂಕಾರ
ರಸ್ತೆಯ ಬದಿಯಲಿ ಹೊಲದ ಬೇಲಿಯಲಿ
ವನಕುಸುಮಗಳ ವಯ್ಯಾರ
ಬಂತಿದೋ ವಸಂತ ತಂತಿದೋ ಸಂತಸ ll೨ll


ಎಲೆಗಳನುದುರಿಸಿದ ಗಿಡಗಳಿಗೆಲ್ಲ
ಚಿಗುರೆಲೆಗಳ ನವೋಲ್ಲಾಸ
ಮುದದಲಿ ಹಾಡುವ ಕೋಗಿಲೆಗೆ
ಇನ್ನೆಲ್ಲಿಯ ಆಯಾಸ?
ಬಂತಿದೋ ವಸಂತ ತಂತಿದೋ ಸಂತಸ ll ೩ ಲ್
ಜಡದಲಿ ಮುಳುಗಿದ ಪ್ರಕೃತಿಗೆ ಚೇತನ
ನೀಡುವ ವಸಂತದ ರೂಪ ವಿನೂತನ
ಹರುಷದಿ ನಲಿಯಲಿ ಜನಮನ
ಬಂತಿದೋ ವಸಂತ ತಂತಿದೋ ಸಂತಸ ll ೪ ll

ಕಳೆದು ಹೋದ ಬಾಲ್ಯ ......

ರಳಿ ಬರದ
ಬಾಲ್ಯದ ದಿನಗಳೇ..
ಎಲ್ಲಿ ಕಳೆದು ಹೋದಿರಿ ?
ಆಧುನಿಕತೆಯ ಜಾತ್ರೆಯಲಿ..

ಹಾರುವ ಚಿಟ್ಟೆಯ ಹಿಡಿಯ ಹೋಗಿ
ಮುಳ್ಳು ಚುಚ್ಚಿಸಿಕೊಂಡ ನೆನಪು
ಇನ್ನೂ ಹಸಿರು ...
ಗಾಳಿಪಟವ ಹಾರಿಸಿ ಹಾರಿದ
ನೆನಪೇ ಈಗ ಉಸಿರು..

ಅಡುಗೆ, ಗೊಂಬೆ ಆಟಗಳ
ಮಜವೇ ಬೇರೆ..
ಗೋಲಿ ಲಗೋರಿ ಆಟಗಳ
ಮರೆಯಲಿ ಹೇಗೆ..?

ಕಳೆದು ಹೋಗಿವೆ ಈಗ
ಆ ಎಲ್ಲ ಆಟಗಳು
ಬಾಲ್, ಬ್ಯಾಟ್ , ಕ್ರಿಕೆಟ್ಗಳ ಮುಂದೆ..
ಕಂಪ್ಯೂಟರ್ , ಗೇಮ್ಸ್ ಗಳ ನಡುವೆ..


ನೆನಪಾಗುತಿವೆ
ಬಾಲ್ಯದ ದಿನಗಳು..
ಒಮ್ಮೆ ಬರಬಾರದಿತ್ತೆ ಮತ್ತೆ..
ನೆನಪಿನ ಸುರುಳಿಗಳು ಬಿಚ್ಚಿದಾಗ..
ಅವು ನಮ್ಮ ಸಂಗಾತಿಗಳು ಅಷ್ಟೆ.....!

life won't give one more chance to live


Give me some sunshine
Give me some rain
Give me another chance
Wanna growup once again...
ಏನ್ ಚೆನ್ನಾಗಿವೆ ಮೇಲಿನ ಸಾಲುಗಳು . 3 idiots movie ನೋಡಿದಾಗಿನಿಂದ ತುಂಬಾನೆ ಕಾಡ್ತಾ ಇರೋ ಸಾಲುಗಳು ಇವು . ಸಾಲದ್ದಕ್ಕೆ ಈ ಹಾಡಿನ ಚಿತ್ರಣವೂ ಸಕತ್ ಆಗಿ ಬಂದಿದೆ. ಗಿಟಾರ್ ಹಿಡಿದು Give me another chance ಅಂತಾ ಹಾಡ್ತಾ, ಆ chanceಗೆ ಕಾಯದೆ ಆತ್ಮಹತ್ಯೆ ಮಾಡ್ಕೊಳ್ಳೋ ಆ ಹುಡುಗ ಕನಸು ಕಾಣ್ತಾನೆ , ಒಂದು ಶಿಕ್ಷಣ ಸಂಸ್ಥೆಯನ್ನ ಅಣಕಿಸ್ತಾನೆ, ಕೊನೆಗೆ ಶವವಾಗ್ತಾನೆ ... ನಮ್ಮನ್ನೂ ಕಾಡ್ತಾನೆ ...!!
ಮಣ್ಣಲ್ಲಿರೋ ಒಂದು ಬೀಜಕ್ಕೆ ಸೂರ್ಯನ ಬೆಳಕು, ನೀರು ಸರಿಯಾಗಿ ಬಿದ್ದರೆ ಮಾತ್ರ , ಆ ಬೀಜ ಮೊಳೆತು ಸಸಿಯಾಗೋದು ಅಲ್ವಾ?? ಅದ್ಯಾಕೋ ನಮ್ಮ ಸಮಾಜಕ್ಕೆ ಸಸಿಯು ಚಿಗುರುವಾಗಲೇ ಚಿವುಟಿ , ಅವರಿಗೆ ಬೇಕಾದ ಆಕಾರದ ಗಿಡ ಮಾಡ್ಕೊಳ್ಳೋದು ಅಭ್ಯಾಸವಾಗಿ ಬಿಟ್ಟಿದೆ ಅನಿಸ್ತಿದೆ .
ಇಷ್ಟುದ್ದ ಪೀಠಿಕೆಯ ನಡುವೆ ನೆನಪಾದವನು my little friend 'ಆಕಾಶ್'. ಸೂಕ್ಷ್ಮಮನಸಿನ, ನಕ್ಷತ್ರಗಳ ಹೊಳಪನ್ನು ಬಾಚಿ ತನ್ನ ಕಂಗಳಲ್ಲಿ ತುಂಬಿಕೊಂಡ, ಮುದ್ದುಮುಖದ ,17ರ ಹರೆಯದಲ್ಲೇ ಕನಸುಗಳನ್ನು ಕಣ್ಣಲ್ಲೇ ಬಚ್ಚಿಟ್ಟು ಗೋರಿ ಸೇರಿದ ಹುಡುಗ ..!
ಕಾಲೇಜ್ನಲ್ಲಿ ನನ್ನ junior ಆಗಿದ್ದ ಹುಡುಗನಲ್ಲಿ ತುಂಬಾ ಸಲುಗೆಯಿತ್ತು . ನನ್ನ ಕಂಡಾಗಲೆಲ್ಲ 'hey sweetheart' ಅಂತಿದ್ದ ಕಣ್ಣು ಹೊಡೆದು , ಗೆಳೆಯರ ಗುಂಪಲ್ಲಿರುತ್ತಿದ್ದ ನಾನು ಕಣ್ಣಲ್ಲೇ ಗದರುತ್ತಿದ್ದೆ . ಆಗ ನಗುತ್ತ 'my sweet sis' ಎಂದು ಬದಲಾಯಿಸಿ ನಕ್ಕು ಬಿಡ್ತಿದ್ದ.
ಸರಿಯಾಗಿ ನೆನಪಿದೆ ಆ ದಿನ ನನಗೆ ತಿಂಡಿ ತಿನ್ನುತ್ತಿದ್ದ ನನ್ನನ್ನು ನನ್ನ cellphone ಕರೆದಿತ್ತು . ಗೆಳತಿ 'ಇಂಚರ' call ಮಾಡಿ "ಹೇ 'ಆಕಾಶ್' ಇನ್ನಿಲ್ಲ.!" ಅಂದಿದ್ದಳು ಬಿಕ್ಕುತ್ತ . ವಿಚಾರಿಸಿ ನೋಡಿದರೆ, physics lab exam ಮುಗಿಸಿ ಹೋಗಿದ್ದ ಹುಡುಗ ನೇಣಿಗೆ ಶರಣಾಗಿದ್ದ . ಯಾವುದೋ ಒಬ್ರು lecturer ಅವನದಲ್ಲದ ತಪ್ಪಿಗೆ ಕೆನ್ನೆಗೆ ಹೊಡೆದು ಅವಮಾನಿಸಿದ್ದನ್ನು ಸಹಿಸದೇ ಜಗತ್ತಿಗೆ good bye ಹೇಳಿದ್ದ . ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಅವನಮ್ಮ ಅದೇ ದಿನ ನದಿಗೆ ಹಾರಿದರು . ಮೊಮ್ಮಗ , ಮಗಳು ಇಬ್ಬರ ಸಾವನ್ನು ಕೇಳಿದ ಮುದಿಜೀವ ಅವನ ಅಜ್ಜಿಯೂ ಅವರದೇ ದಾರಿ ಹಿಡಿದರು . ಒಂದೇ ದಿನ 3 ಸಾವು ಆ ಮನೆಯಲ್ಲಿ.! ಹೇಗಿರಬೇಡ ..?
ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಕೊಡದೆ ಮಲಗಿಬಿಟ್ಟಿದ್ದ ಚಿರವಾಗಿ break ಇರದ ಕನಸುಗಳನ್ನ ಕಾಣುತ್ತ. ಗೆಳೆಯರು ಅವನ ಅಂತಿಮ ದರ್ಶನಕ್ಕೆ ಕರೆದರೂ ನಾನು ಒಲ್ಲೇ ಎಂದಿದ್ದೆ ..
ಅದ್ಯಾಕೋ ಅವನ ಕನಸುಕಂಗಳ ಹೊಳಪು ಕಂಡಿದ್ದ ನನ್ನಲ್ಲಿ, ಅವನ ಮುಚ್ಚಿದ ಕಂಗಳನ್ನು ನೋಡುವ ಧೈರ್ಯವೇ ನನ್ನಲ್ಲಿ ಇರಲಿಲ್ಲ ..!
Life won't give one more chance to live..!! ಅಲ್ವಾ?

Friday, January 15, 2010

ಇತಿಹಾಸ ಮರುಕಳಿಸದೇ. ??


ಗೆಳೆಯರೇ ಮಾನವೀಯತೆ ಮರೆಯಾಗುತ್ತಿದೆ ನಾಗರೀಕತೆಯ ಹೆಸರಿನಲ್ಲಿ ಸಂಬಂಧಗಳು ಸಾಯುತ್ತಿವೆ ego & attitudeಗಳ ನಡುವೆ . ಒಮ್ಮೆ ಹಿಂತಿರುಗಿ ನೋಡಿದರೆ. ..ನಾವು ಪಡೆದದ್ದೇನು? ಒಂದಿಷ್ಟು ಹಣ,ಮೋಜು. ಐಶಾರಮತೆ.ಕಳೆದುಕೊಳ್ಳುತ್ತಿರುವುದು? ಆರೋಗ್ಯ, ಭಾವನಾತ್ಮಕ ಬೆಸುಗೆ .ಎಲ್ಲೋ ಒಂದು message ಓದಿದ ನೆನಪು ನನಗೆ ... ಕುಸಿದು ಬಿದ್ದ ಕನಸು, ಒಡೆದ ಸಂಬಂಧಗಳಿಗಿಂತ ಬಾಲ್ಯದ ಮುರಿದುಹೋದ pencil, ಮತ್ತು ಕುಸಿದು ಹೋದ ಮರಳು ಗೋಪುರಗಳು ಚಂದ ಎಂದು . ಒಮ್ಮೆ ತಿರುಗಿ ನೋಡಿ ನಿಮ್ಮ ಬಾಲ್ಯವನ್ನು .ನಿಮ್ಮ ಕನಸಿನರಮನೆಗೆ ನೀವೇ ರಾಜ/ರಾಣಿ . ಜೀವನದ ಜಂಜಾಟಗಳಿಲ್ಲದ ಸಾಮ್ರಾಜ್ಯ ಅದು. ನಿಷ್ಕಲ್ಮಶ ಕಪಟವನ್ನರಿಯದ ಮನಸು. promise ಕಣ್ರೀ... ದೇವರು ಬಂದು "ಏನು ಬೇಕು ಮಗಳೇ?" ಅಂತ ಕೇಳಿದ್ರೆ . ವಾಪಸ್ ನನ್ನ childhood days ಕೊಟ್ಬಿಡಪ್ಪ ಅಂತ ಕೇಳ್ತೇನೆ ...!!ಹದಿವಯಸಿನ ಮನದ ತುಮುಲಗಳು, ಗೆಳೆತನವನ್ನು ಬಯಸುವ ಮನಸು , crush, one side love .. ಅದು ಅಪ್ಪಟ ಮುಗ್ಧ ಪ್ರೀತಿ , ಬೇಜಾನ್ love ಮಾಡ್ಬಿಡ್ತೇವೆ ಅದ್ಕೆ ಅದು unforgetable..!! ಅಪ್ಪ, ಅಮ್ಮ ಇರೋವರೆಗೂ ನಾವೆಂದೂ 'ಅನಾಥ' ಅಂತ ಆಗೋದಿಲ್ಲ. ಜಗತ್ತು ನಮ್ಮನ್ನು ವಿರೋಧಿಸಿದರೂ parents will be always with us. ಆದ್ರೆ ವಿಪರ್ಯಾಸ ನೋಡಿ ತಮ್ಮದೇ ಮಕ್ಕಳು ಇರೋವಾಗ ಅಪ್ಪ, ಅಮ್ಮ ಸೇರ್ತಾ ಇರೋದು ಅನಾಥರಂತೆ ವೃದ್ಧಾಶ್ರಮವನ್ನು ..!!ನಾನೇನು philosophy ಹೇಳ್ತಾ ಇಲ್ಲ , ಇವಿಷ್ಟು ಮನಸಲ್ಲಿ ಹಾದೋಯ್ತು. ಜೀವನವನ್ನು ಪ್ರೀತಿಸೋಣ.. ಸ್ವಾರ್ಥವನ್ನು ಬದಿಗಿಟ್ಟು.. ಮತ್ತೊಮ್ಮೆ ಬಾಲ್ಯದ ಕನಸುಗಳ ಅರಮನೆಗೆ ಲಗ್ಗೆ ಹಾಕೋಣ . who cares for others?? ಬದುಕು ನಮ್ಮದು . ಇತಿಹಾಸ ಮರುಕಳಿಸದೇ. ??

ಅದೆನೆಲ್ಲ ಕಲಿಸಿ ಬಿಡತ್ತೆ ಈ ಪ್ರೀತಿ ??


ಯಾವುದೋ ಒಂದು pantಗೆ ಯಾವುದೋ ಒಂದು shirt
ಸಿಕ್ಕಿಸ್ಕೊಂಡು ಹೋಗ್ತಿದ್ದ ಹುಡುಗರು..
ಕ್ರಿಕೆಟ್, ಸಚಿನ್, ಧೋನಿ,christiano, messi, sharpova, sania, ..
ಅಂತಿದ್ದ ಹುಡುಗರ ಹೃದಯದಲ್ಲಿ ...
ಒಂದು 'ಗೆಜ್ಜೆ ಕಾಲುಗಳ ' ಗುರುತು ಮೂಡಿದರೆ ಸಾಕು..
ಅದೆಷ್ಟು ಬದಲಾವಣೆ??
hip-hop , rap music ಅಂತಿದ್ದೋರು..
ಕಿಶೋರ್ ಕುಮಾರ್ , ರಫಿ, ಮೈಸೂರು ಅನಂತ ಸ್ವಾಮಿ ಅಂತ
slow trackಗೆ ಅಂಟಿಕೊಂಡು ಬಿಡ್ತಾರೆ...
ಅನಾವಶ್ಯಕವಾಗಿ ಕವಿನೂ ಆಗ್ಬಿಡ್ತಾರೆ.. !
ಆಕಾಶದ ಚಂದ್ರಮ, ತಾರೆಗಳ ಜೊತೆ ಕನಸು ಕಾಣ್ತಾರೆ ..
ಅವಳ first meetನಿಂದ ಹಿಡಿದು ಪ್ರತಿ ಸಲದ
ಡ್ರೆಸ್ಸಿನ color ನೆನಪಿಟ್ಕೋoಡಿರ್ತರಲ್ವಾ??
ಅದೇನು memory power !!!!
ಅದ್ಕೆ ಇರಬೇಕು...
ನೆನಪುಗಳ ಮರೆಯೋ ಕಾಲ ಬಂದಾಗ..
ಹೆಚ್ಚು suffer ಆಗೋರು ಹುಡುಗರೇ...!!
memory power ಶಾಪ ಆಗೋದು ಆವಾಗಲೇ ... !!