Tuesday, June 29, 2010

ಕನ್ನಡಿಯಲ್ಲಿನ ಕಿನ್ನರಿ ..!









ಎರಡು ತಿಂಗಳುಗಳ ಹಿಂದೆ ನಡೆದ ಘಟನೆ ಅದ್ಯಾಕೋ ನೆನಪಾಗಿಬಿಟ್ಟಿದೆ. ಅದೊಂದು ಬುಧವಾರ ಕಾಲೇಜು ಬಸ್ಸು ಮಿಸ್ಸಾಗಿ ಲೋಕಲ್ ಬಸ್ಸಿನಲ್ಲಿ ಹೊರಟಿದ್ದೆ. ಅದೇನೋ ಖುಷಿ ಲೋಕಲ್ ಬಸ್ಸಿನಲ್ಲಿ ಓಡಾಡುವುದೆಂದರೆ . uniform ತೊಟ್ಟ ಹುಡುಗಿಯರಿರುವ ಕಪ್ಪು -ಬಿಳುಪು tvಯಂತೆ ಕಾಣುವ ಕಾಲೇಜು ಬಸ್ಸಿನಲ್ಲಿ ಹೋಗುವುದು ಬೇಜಾರಿನ ಕೆಲಸ. Gossip, ಒಂದಿಷ್ಟು ಅಸೂಯೆ ಬಿಟ್ಟರೆ ಆ ಬಸ್ಸಿನಲ್ಲಿ ಬೇರೇನೂ ಇದ್ದಹಾಗೆ ನನಗೆ ಅನಿಸಿವುದೇ ಇಲ್ಲ..!




ಲೋಕಲ್ ಬಸ್ಸು ಅಷ್ಟೇನೂ rushಇರಲಿಲ್ಲ. ನಿಂತಿದ್ದೆ ನಾನು ಎದುರುಗಡೆ ಬಾಗಿಲಿನ ಹತ್ತಿರವೇ . ಅದೇನೋ ಖುಷಿ ಬಾಗಿಲಲ್ಲಿ ನೇತಾಡಿಕೊಂಡು ಹೋಗುವುದೆಂದರೆ . ದಕ್ಷಿಣ ಕನ್ನಡದ ಬಸ್ಸುಗಳ ಕಿಟಕಿಗಳಿಗೆ ಗಾಜುಗಳೇ ಇರುವುದಿಲ್ಲ ಫುಲ್ ಖುಲ್ಲಂ ಖುಲ್ಲ. ಬೇಸಿಗೆಯಲ್ಲಿ ಗಾಳಿ ಬೆಳಕುಗಳೂ , ಮಳೆಗಾಲದಲ್ಲಿ ಮಳೆಹನಿಯೂ ಬಸ್ಸಿನೊಳಗೆ ಚೆನ್ನಾಗಿ ಬರುತ್ತವೆ..! ಬಸ್ ಕ್ಲೀನರ್ ಬಂದು "ಮಿತ್ತ ಪೋಯಿ" (ಮೇಲೆ ಹೋಗಿ ) ಎಂದು ಎಚ್ಚರಿಸಿದಾಗ ಒಳಗೆ ಹೋಗದೆ ವಿಧಿಯಿರಲಿಲ್ಲ. ಹಾಗೆ ನಿಂತ ನನಗೆ ಕಂಡದ್ದು ಡ್ರೈವರನ ಎಡಗಡೆ ಇರುವ ಉದ್ದದ ಸೀಟಿನಲ್ಲಿ ಕುಳಿತು ನನ್ನನ್ನೇ ನೋಡುತ್ತಿದ್ದ ಸುಮಾರು ೪ ರ ಹರೆಯದ ಹುಡುಗಿ. ತುಂಬಾ ಮುದ್ದು ಮುದ್ದಾಗಿದ್ದಳು. ಸುಮ್ಮನೆ ಮುಗುಳ್ನಕ್ಕೆ ಕಣ್ಣನ್ನು ಮಿಟುಕಿಸುತ್ತ. (ಪಕ್ಕಾ ಹುಡುಗೀರ style )




ಅವಳನ್ನೇ ಅವಲೋಕಿಸಿದೆ ...ಕೆಂಪು ಬಿಳಿ ಬಣ್ಣಗಳ ಚೆಂದದ ಫ್ರಾಕ್ ತೊಟ್ಟಿದ್ದಳು.ಕೈಗಳಿಗೆ ಕೆಂಪು ಬಿಳಿ ಬಳೆಗಳ ಸಮ್ಮಿಶ್ರಣ. ಪುಟ್ಟ ಪುಟ್ಟ ಕೈಗಳಲ್ಲೂ ಮದರಂಗಿಯ ರಂಗು.ಕಾಲುಗಳಲ್ಲಿ ದಪ್ಪನೆಯ ಗೆಜ್ಜೆಯ ಘಲ ಘಲ. ಕಣ್ಣಿಗೆ ಅಮ್ಮ ಹಚ್ಚಿದ್ದಿರಬೇಕು ಒಂದೆಳೆಯ ಕಾಡಿಗೆ. ಹಣೆಯಲ್ಲಿ ಹೊಳೆಯುವ ಪುಟ್ಟ ಬಿಂದಿ. ರೇಶಿಮೆ ಕೂದಲು ಅದರಲ್ಲಿ ಕುಳಿತು ನನ್ನ ಹೊಟ್ಟೆಯುರಿಸಿದ್ದು ಮಲ್ಲಿಗೆಯ ಉದ್ದನೆಯ ಮಾಲೆ. .!




ಅದ್ಯಾಕೋ ನನ್ನ ಬಾಲ್ಯ ನೆನಪಾಗಿಬಿಟ್ಟಿತ್ತು. ನಾನೂ ಹಾಗೆ ಕೈತುಂಬಾ ಬಳೆಗಳನ್ನು ಹಾಕಿಕೊಳ್ಳುತ್ತಿದ್ದೆ. ನನ್ನ ಪುಟ್ಟ ಜುಟ್ಟಿಗೆ ಅದರ ಎರಡರಷ್ಟು ಉದ್ದದ ಹೂ ಮಾಲೆಯನ್ನು ಅಮ್ಮನತ್ರ ಜಗಳವಾಡಿ ಮುಡಿಯುತ್ತಿದ್ದೆ. ಗೋಲಾಕಾರದಲ್ಲಿ ಡಬ್ಬಿಯಲ್ಲಿ ಬರುವ ಆ ಬಣ್ಣಗಳಿಂದ ನನ್ನ ಹಣೆಯ ಮೇಲೆ ಚಿತ್ರ ವಿಚಿತ್ರವಾದ design ಮಾಡುತ್ತಿದ್ದೆ. ಅದೇನೋ ಖುಷಿಯಿತ್ತು ತನ್ಮಯತೆಯಿಂದ ಅಲಂಕರಿಸಿಕೊಳ್ಳುವುದರಲ್ಲಿ , ಆ ಕನ್ನಡಿಯ ಮುಂದೆ ನಾನೇ ಕಿನ್ನರಿ...! ಎಲ್ಲ ಗತವೈಭವ ಅನಿಸಿಬಿಡ್ತು.


ಈಗ ಬಳೆಗಳನ್ನು ಕಂಡರೆ ಒಂದು ರೀತಿಯ ಅಲರ್ಜಿ. ಅದನ್ನು ಕೊಳ್ಳುವ ಮಾತು ಬಿಡಿ ಇರೋದನ್ನೇ ಹಾಕಿಕೊಳ್ಳಲಾಗದ ಮನೋಸ್ಥಿತಿ. ಹಣೆಗೆ ಬೊಟ್ಟು ಇಡದೆ ಅದೆಷ್ಟು ವರುಷಗಳು ಕಳೆದಿತ್ತೋ. ಅಜ್ಜಿಯ ಮನೆಗೆ ಹೋಗುವಾಗ, ಭೂತ ಕನ್ನಡಿಯ ಹಿಡಿದು ಹುಡುಕಿದರೆ ಮಾತ್ರ ಕಾಣುವಂಥ ಒಂದು ಚುಕ್ಕಿಯನ್ನು ಇಡುತ್ತಿದ್ದೆ. .!ಒಂದೇ ಕಾಲಿಗೆ ಒಂದೆಳೆಯ ಬೆಳ್ಳಿ ಚೈನು ಅದೊಂಥರ fashion..! (ಇದರಿಂದ ತುಂಬಾ ಫಚೀತಿ ಅನುಭವಿಸಿದ್ದೇನೆ ಬಿಡಿ ಆ ಕುರಿತು ಇನ್ನೊಮ್ಮೆ ಬರೆಯುತ್ತೇನೆ ). ಇನ್ನು ಚೋಟುದ್ದದ ಕೂದಲು, ನಾಲ್ಕೈದು ಕ್ಲಿಪ್ ಗಳನ್ನು ಹಾಕಿ ಕಷ್ಟಪಟ್ಟು ಕಟ್ಟುತ್ತಿದ್ದ ಜುಟ್ಟು. ಇನ್ನು ಅದಕ್ಕೆಲ್ಲಿ ಮಲ್ಲಿಗೆಯ ಮಾಲೆ? ನನಗೆ ನಗು ಬಂದಿತ್ತು. ನಾಗರೀಕತೆ, fashion ಎಂದು ನಾವು ಕಳೆದು ಕೊಳ್ಳುತ್ತಿರುವುದೇನು? ನಮ್ಮ ಸಂಸ್ಕೃತಿಯನ್ನೇ ? ಅಥವಾ ನಮ್ಮನ್ನೇ? ಕಂಡಕ್ಟರ್ ಬಂದು ಟಿಕೆಟ್ ಕೇಳಿದಾಗಲೇ ನಾನು ನನ್ನ ನೆನಪುಗಳ ಮುಸುಕಿನಿದ ಹೊರಬಂದದ್ದು.


ಮತ್ತೊಮ್ಮೆ ಆ ಬಾಲೆಯತ್ತಲೇ ನನ್ನ ನೋಟ ಹರಿಯಿತು ಬೇಡವೆಂದರೂ. ಆಕೆಯೂ ನನ್ನತ್ತಲೇ ನೋಡುತ್ತಿದ್ದಳು. ಅವಳಿಗೆ ನನ್ನ ತುಂಡು ಕೂದಲು ಇಷ್ಟವಾಗಿದ್ದಿರಬೇಕು (ಹಾಗಂತ ನಾನು ಅಂದುಕೊಂಡದ್ದು). ನನ್ನ ಮನದೊಳಗೋ ಹೇಳಿಕೊಳ್ಳಲಾಗದ ಭಾವ. ಅದು ಮೆಚ್ಚುಗೆಯೋ ,ವಿಷಾದವೋ, ಅಸೂಯೆಯೋ ತಿಳಿಯಲಿಲ್ಲ ಆ ಕ್ಷಣಕ್ಕೆ.


ಇಳಿದು ಬಿಟ್ಟಿದ್ದೆ ಅಲ್ಲೇ ಜ್ಯೋತಿ ವೃತ್ತದ ಬಳಿ. ಹೂ ಮಾರುವವನ ಬಳಿ ಒಂದು ಮೊಳ ಹೂವನ್ನು ಕೊಂಡುಕೊಂಡಿದ್ದೆ. ಪಕ್ಕದ ಫ್ಯಾನ್ಸಿ ಅಂಗಡಿಗೆ ನುಗ್ಗಿ ಒಂದು ಡಜನ್ ಬಳೆಗಳನ್ನು, ಬಿಂದಿಗಳನ್ನು ತೆಗೆದುಕೊಂಡಿದ್ದೆ. ಅವೆಲ್ಲ ನನ್ನನ್ನು ಅಲಂಕರಿಸಿದ್ದವು. ನಾನು ಬಸ್ಸಲ್ಲಿರದಿದ್ದನ್ನು ಕಂಡ 'ಶಾಲು' phone ಮಾಡಿದ್ದಳು. "ಬರ್ತೇನೆ" ಎಂದು ಚುಟುಕಾಗಿ ಉತ್ತರಿಸಿ. ನಡೆದಿದ್ದೆ ಕಾಲೇಜಿನತ್ತ .


ಕ್ಲಾಸಿನೊಳಗೆ ಕಾಲಿಡುತ್ತಲೇ ಎಲ್ಲರೂ "ಹೋ " ಎಂದು ಬೊಬ್ಬಿಟ್ಟಿದ್ದರು. ಗೆಳೆಯ 'ಇಮ್ರಾನ್' ಬಂದು "hey sou..... what a cool surprize... looking cute and funny too .!" ಅಂದು ಬಿಟ್ಟಿದ್ದ. ಹುಸಿಕೋಪ ತೋರುತ್ತಲೇ ನನ್ನ ಜಾಗದತ್ತ ತೆರಳಿದ್ದೆ.


ಅವರಿಗೇನು ಗೊತ್ತಿತ್ತು ? ನನಗಾಗುತ್ತಿರುವ ಅನುಭೂತಿ, ಅವರ್ಚನೀಯ ಆನಂದ. ನನಗೋ ನನ್ನ ಬಾಲ್ಯಕ್ಕೆ ಮರಳಿದ ಅನುಭವ. ಓಡಿ ಬಿಟ್ಟಿದ್ದೆ ladies ರೂಮಿಗೆ. ಕನ್ನಡಿಯಲ್ಲಿ ಕಿನ್ನರಿಯಾಗಲು...!



Sunday, June 20, 2010

ಮತ್ತೆ ನಾನು ನಾನಾದೆ.. !


ಅದೆನಾಗಿತ್ತೋ.. ಕಳೆದ ಐದಾರು ದಿನಗಳಿಂದ ನಾನು ನಾನಾಗಿರಲಿಲ್ಲ. ಮನಸು ತಳಮಳದಲ್ಲಿತ್ತು.. ಹಗ್ಗ ಹರಿದ ನಾವೆಯಂತಾಗಿತ್ತು. ಪರೀಕ್ಷೆಯನ್ನು ಮುಗಿಸಿ ಬಂದ ನಾನು ಖುಷಿಯಿಂದಿರುವ ಬದಲು ಖಿನ್ನತೆಗೆ ಒಳಗಾಗಿದ್ದೆ . ಹೆಚ್ಚಾಗಿ 'ವಟವಟ' ಎನ್ನುತ್ತಲೇ ಇರುವ ನಾನು ಮೌನಿಯಾಗಿದ್ದೆ. ಮಳೆಯ 'ಚಟಪಟ' ನನ್ನ 'ವಟವಟ'ವನ್ನು ನಿಲ್ಲಿಸಿಬಿಟ್ಟಿತ್ತು. ನನ್ನ ಮನದೊಳಗಿದ್ದ ಒಂದು ಪುಟ್ಟ ಐದರ ಮಗುವೊಂದು ಕಳೆದು ಹೋಗಿತ್ತು. ಸ್ನೇಹಿತರ phone call ಗಳನ್ನೂ ಅಲಕ್ಷಿಸಿದ್ದೆ. ಕೊನೆಗೆ ಸ್ನೇಹಿತರಿಬ್ಬರು ಬೈದೂ ಆಗಿತ್ತು. ಏನಾಗಿದೆ ನಿನಗೆ ಎಂದರೆ ನನ್ನಲ್ಲಿ ಉತ್ತರವಿರಲಿಲ್ಲ. "nothing man, i'll be alright" ಎಂಬ ಹಾರಿಕೆಯ ಉತ್ತರ ಬೇರೆ ನನ್ನಿಂದ. ಅರ್ಧದಲ್ಲಿ ಬಿದ್ದ ಒಂದು stupid painting ಪ್ರಯತ್ನ, ಮುಗಿಸಲಾರದೆ ಹಾಗೆ ಅರ್ಧದಲ್ಲಿ ಬಿಟ್ಟ ೨ ಲೇಖನಗಳು, ಯಾಕೋ ನನ್ನೊಳಗಿದ್ದ ಒಂದು ಪುಟ್ಟ ಹುಡುಗಿ ಕಳೆದೆ ಹೋಗಿದ್ದಳು ಎಂದುಕೊಂಡಿದ್ದೆ, ಕಂಗಾಲೂ ಆಗಿದ್ದೆ.



ಏನಾಗಿತ್ತು ನನಗೆ ?? ಸಂಬಂಧಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೆನೆ? ಒಟ್ಟಿನಲ್ಲಿ ಇಲ್ಲಸಲ್ಲದ್ದಕ್ಕೆ ಸುಖಾಸುಮ್ಮನೆ ತಲೆ ಕೆಡಿಸಿಕೊಂಡಿದ್ದೆ . . ನಗು ಮರೆತು ಹೋದಂತಿತ್ತು. ಭಾವನೆಗಳು ಎಲ್ಲೋ ನಿಯಂತ್ರಣ ತಪ್ಪಿದಂತಿತ್ತು . ಮನಃ ಪೂರ್ತಿಯಾಗಿ ಅಳಲೂ ಆಗುತ್ತಿರಲಿಲ್ಲ. ನನ್ನನ್ನು ನಾನು ಹೊರಗೆಳೆಯಬೇಕಿತ್ತು. ನನ್ನ ಆರಾಮ ಖುರ್ಚಿಯಲ್ಲಿ ಕುಳಿತು ನೀಲಾಕಾಶವನ್ನು ದಿಟ್ಟಿಸುತ್ತಿದ್ದೆ. ..


ಮತ್ತೆ ಕರೆಯತೊಡಗಿತು ನನ್ನ phone, ನೋಡಿದರೆ ನನ್ನ ಆತ್ಮೀಯ ಗೆಳೆಯ. ವಿಧಿಯಿಲ್ಲದೇ recieve ಮಾಡಿದೆ. "ಏನಾಗಿದ್ಯೇ ನಿಂಗೆ ? ಬ್ಲಾಗ್ ನಲ್ಲಿ ಏನೇನೋ ಬರೆದಿದೀಯ ಅಷ್ಟೊಂದು ಸೀರಿಯಸ್ಸಾಗಿ "ಎಂದ." ಏನಿಲ್ವೋ ಸುಮ್ಮನೆ " ಎಂದುತ್ತರಿಸಿದೆ . "ನಿನ್ನ 'ಏನಿಲ್ಲ' ಅಂದ್ರೆ ತುಂಬಾ ವಿಷ್ಯ ಇದೆ ಅಂತಾನೆ ಅರ್ಥ ಹೇಳೇ ಮಹಾರಾಯ್ತೀ " ಎಂದ.


ನಾನು ಪಕ್ಕಾ ಬಹಿರ್ಮುಖಿ. ಖುಷಿಯಾದರೆ ಕುಣಿದು ಕೇಕೆ ಹಾಕಿಬಿಡುತ್ತೇನೆ. ಬೇಸರವಾದರೆ ಕಣ್ಣೀರು ಹರಿಯದೆ ಸಮಾಧಾನವಿಲ್ಲ. ಅದು -ಇದು ಮಾತನಾಡುತ್ತಲೇ ವಿಷಯವನ್ನೆಲ್ಲ ಹೇಳಿದ್ದೆ .ಮನಸಿಗೆ ಆದ ಬೇಸರದ ಭಾವಗಳೆಲ್ಲ ಮಾತಿನ ಮೂಲಕ ಹೊರಬಿದ್ದಿದ್ದವು. ನಾನು ತಡೆಯಿಲ್ಲದೆ ಮಾತನಾಡುತ್ತಿದ್ದೆ ಆತ 'ನಂತ್ರ', 'ಹೂಂ', 'ಸರಿ' ಎಂದಷ್ಟೇ ಹೇಳುತ್ತಿದ್ದ. ವಿಷಯ ಮುಗಿವ ಹೊತ್ತಿಗೆ ನನ್ನ ಕಣ್ಣ ಅಂಚೂ ಒದ್ದೆಯಾಗಿ ಆಗಿತ್ತು. ಆದರೂ ಮಾತಾಡುತ್ತಿದೆ. ಮನಸು ಬೇಸರದ ಮೋಡವನ್ನು ಬಿಟ್ಟು ಆಚೆ ಬಂದಿತ್ತು. FIFA WC ಸುದ್ದಿ. ಮತ್ತದೇ ಮೆಸ್ಸಿ, ಕ್ರಿಸ್ಟಿಯಾನೋ ರೋನಲ್ದೋ, ಕಾಕಾ,ರೂನಿ ಎಲ್ಲರಿಗೂ ನನ್ನ ಮಾಮೂಲಿ ಸ್ಟೈಲಿನಲ್ಲಿ ಲೈನ್ ಹೊಡೆಯ ತೊಡಗಿದೆ. ಅವನ ತಲೆ ತಿನ್ನತೊಡಗಿದೆ. ಗೆಳೆಯ ನಗುತ್ತಿದ್ದ ಜೋರಾಗಿ "ಅದ್ಯಾಕೋ ಹಲ್ಕಿರೀತಿಯಾ ನೀನೊಬ್ನೇ brush ಮಾಡ್ತೀಯ ಅನ್ನೋ ಥರ" ಎಂದಿದ್ದೆ. ನಗುವಿನ ಅಲೆ ಇನ್ನೂ ಜೋರಾಯ್ತು . ಜೊತೆಗೆ ಇನ್ನೊಂದು ಪರಿಚಯದ ಧ್ವನಿ.


"ನೀನು ಹೀಗೆ ತಲೆ ತಿಂತಾ ಇದ್ರೇನೆ ಚಂದ ನಮಗೆ .ನಿನ್ನ ಮೌನ ಸಹಿಸಲು ಅಸಾಧ್ಯ ಗೆಳತೀ " ಎಂದು ನಾಟಕೀಯವಾಗಿ ಎಂದಿದ್ದಳು ನನ್ನೊಲವಿನ ಗೆಳತಿ 'ಸಂಧ್ಯಾ'. "ಹೇಯ್ ಕತ್ತೆ ನೀನೆಲ್ಲೇ ಇದೀಯಾ.. ?" ಎಂದೆ. icecream ತಿನ್ತಿದೇನೆ ಬೇಕಾ ?"ಎಂದಳು. "ಪಿಶಾಚೀ ನನ್ನ ಬಿಟ್ಟು ತಿಂದರೆ ನೀ ಉದ್ಧಾರ ಆಗೋದಿಲ್ಲ ಎನ್ನುತ್ತಲೇ " ಅಕ್ಷರಶಃ ಕೂಗಿಬಿಟ್ಟಿದ್ದೆ ನಾನು ..! "ಅಂತೂ ನಮ್ ಟ್ರೈನ್ track ಗೆ ಬಂದು speed pick up ಮಾಡ್ತು "ಅಂದಳು ಅವಳು. ನಕ್ಕು ಬಿಟ್ಟಿದ್ದೆ . " ನಿನ್ನನ್ನೇ ಕಾಯ್ತಾ ಇದ್ದೇವೆ stupid ಬೇಗ ಹೊರಡು.. ಹೋಗಿ ಮುಖ ತೊಳ್ಕೋ. ಬರೋವಾಗ ನಿನ್ನ ಗುಳ್ಳೆ (bubbler) ಬಾಟಲಿ ತಗೊಂಡು ಬಾರೆ " ಅಂದಿದ್ದಳು. ಮನಸು ಸುಟ್ಟ ಬೂದಿಯಿಂದೆದ್ದು ಬರುವ 'ಫೀನಿಕ್ಸ್' ಪಕ್ಷಿಯಂತೆ ಹಾರುತ್ತಿತ್ತು ಮುಗಿಲೆತ್ತರಕ್ಕೆ..!


ಸಂಬಂಧಗಳ ಜಂಜಾಟವಿಲ್ಲದೆ ಬೆಳೆಯುವ ಸ್ನೇಹಕ್ಕೆ ಅದೆಷ್ಟು ಶಕ್ತಿ ?ಅದಕ್ಕೆ ನಾನು ಸಂಬಂಧಗಳಿಗಿಂತ ಸ್ನೇಹಿತರನ್ನೇ ಹೆಚ್ಚು ನಂಬುವುದು. ಬರೋಬ್ಬರಿ ಐದಡಿ ಎಂಟು ಇಂಚು ಎತ್ತರದ ನನ್ನಲ್ಲಿ ಪುಟ್ಟ ಹುಡುಗಿಯನ್ನೇ ಹುಡುಕುವ ನನ್ನ ಆ ಎರಡು ಸ್ನೇಹಿತರಿಗೆ ಮನದಲ್ಲಿ ಥ್ಯಾಂಕ್ಸ್ ಹೇಳುತ್ತಲೇ ನನ್ನ 'ಗುಳ್ಳೆ ಬಾಟಲಿಯನ್ನು' ಹುಡುಕಲು ಕುಣಿಯುತ್ತಲೇ ಸಾಗಿದ್ದೆ ...! ಮತ್ತೆ ನಾನು ನಾನಾದೆ.. !

Saturday, June 19, 2010

ಸಾವೆಂದರೆ .......




ಮರಳ ಗಡಿಯಾರದಲ್ಲಿನ ಕಣಗಳಂತೆ ಸೋರಿಹೋಗುವ ಕಾಲ
ಇತಿಹಾಸವಾಗಿ ಭೂತದೊಳಗೆ ಸೇರಿಹೋಗುವ ಕ್ಷಣಗಳು
ಅದೆಲ್ಲೋ ಎಚ್ಚರಿಸುತ್ತಿದೆ ಸಾವಿನ ಗಂಟೆಯ ಸದ್ದು.
ಸರಿಯುತ್ತಿದ್ದೇವೆ ನಾವು ಸತ್ಯದ ಅಂಚಿಗೆ ..
ಸಾವೊಂದು ನಗ್ನ ಸತ್ಯ ಉಳಿದಿದ್ದೆಲ್ಲವೂ ಸುಳ್ಳು !
ಕೆಲವರಿಗೆ ಕೈಲಾಸ, ವೈಕುಂಠ, ದೇವರ ಸಹವಾಸ..
ಕೆಲವರಿಗೆ ಜಗತ್ತಿನ ಯಾವುದರ ಪರಿವೆಯಿಲ್ಲದ ಗೋರಿಯೊಳಗಿನ ಸುಖ ನಿದ್ರೆ ...
ಯೋಧರಿಗೆ ಸೋಲೇ ಸಾವು ....
ಹುಟ್ಟಿನೊಂದಿಗೆ ಸಾಗುವ ನೆರಳು ಈ ಸಾವು
ಸಾವೆಂದರೆ ಯಮಪಾಶ,ನರಳಾಟ,ರಕ್ತದೋಕುಳಿ
ಕೊನೆಗೆ ಸಾವೆಂದರೆ ಮುಕ್ತಿ ..
ಆತ್ಮಕ್ಕೆ ಮರುಹುಟ್ಟುಕೊಡುವ ಶಕ್ತಿ ..!

ಕಂಸನನ್ನು ಕಾಡಿದ್ದು ಇದೇ ಸಾವು ..
ಸಾವಿತ್ರಿ ಗೆದ್ದದ್ದು ಇದೇ ಸಾವು ..
ಹಿಟ್ಲರ್, ಸದ್ದಾಂ, ಇದಿ ಅಮಿನ್ ,ಸ್ಟಾಲಿನ್ ರ ಕ್ರೌರ್ಯದ ಕೊನೆ ಸಾವು..
ರಾತ್ರಿ ರಾಹುಲನ ಬಿಟ್ಟು ಹೊರಟ ಸಿದ್ಧಾರ್ಥನ ಬುದ್ಧನನ್ನಾಗಿಸಿದ್ದು ಒಂದು ಸಾವು ..!
ನಮ್ಮೆಲ್ಲರ ಎದುರಿಗಿರುವ ಸತ್ಯ ಸಾವು ..!
ಸತ್ಯಂ ಶಿವಂ ಸುಂದರಂ ..!

Friday, June 18, 2010

ಚಿಟ್ಟೆಗಳ ಲೋಕದಲ್ಲೊಂದು ಪಯಣ ....


ಮಳೆಗಾಲದಲ್ಲಿ ಮಳೆಹನಿಯಲ್ಲಿ ನೆನೆಯುತ್ತಲೇ ಅರಳುವ ಹೂವುಗಳು ಹಲವು. ಹೂ ಅರಳಿ ಕಂಪು ಬೀರಿದೊಡನೆ, ಮುಂಜಾನೆಯ ಅರುಣೋದಯ ಕಾಲದಲ್ಲೇ ಬರುವವು ದುಂಬಿಗಳ ಹಿಂಡು. ನಂತರ ಚಿಟ್ಟೆಗಳ ಕಾರುಬಾರು. . Egg > Caterpillar > Pupa >Butterfly ಎಂಬ ನಾಲ್ಕು ಹಂತಗಳಲ್ಲಿ ವಿಕಾಸಗೊಂಡು, ಮೈಮೇಲೆ ಬಣ್ಣಗಳನ್ನೂ, ಚುಕ್ಕಿಗಳ ಚಿತ್ತಾರವನ್ನೂ ಬಿಡಿಸಿಕೊಂಡು ಹೆಮ್ಮೆಯಿಂದ ಹಾರಾಡುತ್ತವೆ. ಹಲವು ಕವಿಗಳ ಕವಿತೆಯ ವಸ್ತುವಾಗಿರುವ ಚಿಟ್ಟೆಗಳದ್ದು ಕನಸಿನ ಲೋಕ








ಚಿಕ್ಕವಳಿದ್ದಾಗ ಅದರ ಹಿಡಿಯಲು ಅದರ ಬೆನ್ನು ಹತ್ತುತ್ತಿದ್ದ ನಾನು. ಈ ಬಾರಿ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದ್ದೇನೆ..















ಪರಿಸರ ಮಾಲಿನ್ಯದಿಂದಾಗಿ ನಗರಗಳಲ್ಲಿ ವಿರಳ ಎನಿಸಿರುವ ಈ ಹಾರಾಡುವ ಹೂಗಳು ಹೆಚ್ಚೆಂದರೆ ಹದಿನೈದು ದಿನಗಳು ಬದುಕುತ್ತವೆಯಂತೆ...! ನಮ್ಮನೆಯ ಹೂದೋಟದಲ್ಲಿ ಬರುವ ಸಾಮಾನ್ಯ ಚಿಟ್ಟೆಗಳ ಲೋಕದಲ್ಲೊಂದು ಪಯಣ.