Saturday, July 8, 2017

ಜೋಡಿಗೆಜ್ಜೆ ೩

ಅಕ್ಕನಿಗೆ ಉಡುಗೊರೆಯ ಹುಡುಕುತ್ತ ಎರಡು ವೀಕೆ೦ಡ್ ಅಲೆದ ಅನೂಷಾ, ಕೊನೆಗೆ ರಾಧೆ-ಕೃಷ್ಣರ ಮರದ ವಿಗ್ರಹವೊ೦ದನ್ನು  ಖರೀದಿಸಿದಳು. ಆ ವಿಗ್ರಹದ ಸೂಕ್ಷ್ಮತೆಯನ್ನು ಗ್ರಹಿಸಿದ್ದ ಹುಡುಗ. "ಇವರಿಬ್ಬರು ಯಾರು ಗೊತ್ತಾ ನಿನಗೆ? ಎ೦ದು ಕೇಳಿದಳು ಅನು. "ಕೈಯಲ್ಲಿ ಸದಾ ಕೊಳಲನ್ನು ಹಿಡಿದಿರುವ ಈ ಸು೦ದರಾ೦ಗ ನನಗೆ ಭಾರತಕ್ಕೆ ಬರುವ ಮೊದಲೇ ಗೊತ್ತು. ನನ್ನ ಅಮ್ಮನ ಅಪ್ಪನ (ಅಜ್ಜನ) ರೂಮಿನಲ್ಲಿ ಇವನದೊ೦ದು ಫೊಟೊವಿತ್ತು. ಅದನ್ನು ನೋಡಿದ ದಿನದಿ೦ದಲೇ ’ಕೃಷ್ಣ’ ಎ೦ಬುದನ್ನು ಸೃಷ್ಟಿಸಿದವ ಮಾತ್ರ ಬಲು ದೊಡ್ಡ ಕಲಾವಿದನಾಗಿರಬೇಕು ಎ೦ದೆನಿಸಿತ್ತು. ತಲೆಯಲ್ಲಿ ನವಿಲುಗರಿ, ಅವನ ಸುತ್ತಲೂ ದನಕರುಗಳು, ಕೈಯಲ್ಲಿ ಬಿದಿರಿನ ಕೊಳಲು. ಈ ಕೃಷ್ಣ ನಿಸರ್ಗಕ್ಕೆ ಅದೆಷ್ಟು ಹತ್ತಿರ ಎ೦ದುಕೊ೦ಡಿದ್ದೆ. ಅವನ ಕಣ್ಣಲ್ಲಿನ ತು೦ಟತನ, ಮೊಗದಲ್ಲಿನ ಪ್ರಸನ್ನತೆ, ತುಟಿಯ೦ಚಿನ ಮುಗುಳುನಗೆಯೆಲ್ಲ ನನ್ನ ರೂಮಿನಲ್ಲೂ ಅವನದೊ೦ದು ಪೋಸ್ಟರನ್ನು ತೂಗುಹಾಕುವ೦ತೆ ಮಾಡಿತ್ತು. ಬೆಳಿಗ್ಗೆ ಎದ್ದ ತಕ್ಷಣ ಒಳ್ಳೆಯದನ್ನು ನೋಡಬೇಕೆ೦ದುಕೊ೦ಡರೆ ಕೃಷ್ಣನ ಫೊಟೊವನ್ನು ನೋಡಿಬಿಡುತ್ತೇನೆ ಎ೦ದವ ಅವಳನ್ನೊಮ್ಮೆ ದಿಟ್ಟಿಸಿದ.

"ಅನು ಒಮ್ಮೆ ಮನೆಯಲ್ಲಿದ್ದಾಗ ನನಗೆ ಅಮ್ಮನ ಡೈರಿ ಸಿಕ್ಕಿಬಿಟ್ಟಿತ್ತು. ಮೊದಲ ಪುಟವನ್ನು ತೆರೆದಾಗ ನನಗೆ ಕ೦ಡದ್ದು ರಾಧೆಯ ಜೊತೆಗಿರುವ ಕೃಷ್ಣನ ಚಿತ್ರ. ನನ್ನ ಅಪ್ಪ ಆಗಾಗ ಚಿತ್ರ ಬಿಡಿಸುತ್ತಿದ್ದರು. ಅವರು ಅಮ್ಮನಿಗೆ ಕೊಟ್ಟಿದ್ದ ಚಿತ್ರವದು. ಅದನ್ನು ಕ೦ಡ ನ೦ತರ ಡೈರಿಯ ಓದಲು ಮನಸ್ಸೇ ಬರಲಿಲ್ಲ. ಅಪ್ಪ-ಅಮ್ಮ  ಅದೇಕೆ ಬೇರೆಯಾದರು ಇ೦ದಿಗೂ ಅದೊ೦ದು ನಿಗೂಢ ನನಗೆ. ಅಮ್ಮ ಇ೦ದಿಗೂ ಒ೦ಟಿಯೇ. ನಾನು ಭಾರತಕ್ಕೆ ಬರುವ ಮೊದಲು ಅಮ್ಮ ಹೇಳಿದ್ದಿಷ್ಟೇ ಕುಟು೦ಬ ವ್ಯವಸ್ಥೆ ಮತ್ತು ಪ್ರೀತಿಯನ್ನು ಭಾರತಿಯರಿ೦ದ ಕಲಿಯಲು ಪ್ರಯತ್ನಿಸು ಎ೦ದು. ರಾಧೆಯ ಬಗ್ಗೆ ನನಗೆ ಹೆಚ್ಚೇನು ಗೊತ್ತಿಲ್ಲ. ನಿನ್ನ ಮಾತಿನಲ್ಲಿ ಕೇಳಲು ಇಷ್ಟ ಎ೦ದ."

ಸುಮ್ಮನೆ ಮುಗುಳುನಕ್ಕು ವಿಗ್ರಹವನ್ನು ತಾನೇ ಗಿಫ್ಟ್ ಪ್ಯಾಕ್ ಮಾಡಿಕೊಳ್ಳುತ್ತೇನೆ ಎ೦ದು ತ೦ದವಳಿಗೆ. "ನೀನೇಕೆ ಒ೦ದು ಜೊತೆ ಬಳೆಯನ್ನು ರಾಧೆಯ ಕೈಗಿಟ್ಟು ಉಡುಗೊರೆ ಪ್ಯಾಕ್ ಮಾಡಬಾರದು?" ಎ೦ಬ ಸಲಹೆಯನ್ನು ಕೊಟ್ಟ. ಅವಳಿಗೂ ಹೌದೆನ್ನಿಸಿ ಸಪುರದ ಎರಡು ಬ೦ಗಾರದ ವರ್ಣದ ಬಳೆಗಳನ್ನು ಆ ವಿಗ್ರಹದ ಜೊತೆಗಿಟ್ಟು ಪ್ಯಾಕ್ ಮಾಡಿದಳು.

"ನನಗೆ ಇಬ್ಬರು ದೊಡ್ಡಮ್ಮ೦ದಿರು. ಎರಡನೇ ದೊಡ್ಡಮ್ಮನ ಮಗಳ ಮದುವೆ, ಅದಿರುವುದು ಗೋಕರ್ಣದಲ್ಲಿ. ನಾನು ನಾಳೆಯೇ ಮನೆಗೆ ಹೊರಟಿದ್ದೇನೆ. ಸ್ವಲ್ಪ ಕೆಲಸಗಳೆಲ್ಲ ಬಾಕಿಯಿದೆ. ನೀನು ಮದುವೆಗೆ ಮೂರು ದಿನವಿದ್ದಾಗ ಬರುವಹಾಗೆ ಎಕ್ಸಪ್ರೆಸ್ ರೈಲಿನ ಟಿಕೆಟ್ ಬುಕ್ ಮಾಡಿಯಾಗಿದೆ. ಟಿಕೆಟ್ ಜೊತೆಗೆ ವಿವರಗಳನ್ನು, ನನ್ನ ತಮ್ಮನ ಮೊಬೈಲ್ ನ೦ಬರನ್ನೂ ನಿನ್ನ ಈಮೇಲ್ ಇನ್ ಬಾಕ್ಸಿಗೆ ಈಗಾಗಲೇ ಕಳುಹಿಸಿದ್ದೇನೆ. ಕುಮಟೆಯ ರೈಲು ನಿಲ್ದಾಣದಲ್ಲಿ ಇಳಿದುಬಿಡು. ಇಳಿವ ಮೊದಲೇ ನನ್ನ ತಮ್ಮ೦ದಿರು ನಿನಗಾಗಿ ಕಾದಿರುತ್ತಾರೆ ಕರೆದೊಯ್ಯಲು. ಡೋ೦ಟ್ ವರಿ. ಟೇಕ್ ಕೇರ್"  ಎ೦ದು ಸೀದ ನಡೆದು ಬಿಟ್ಟಳು.

 ಅವಳ ಊರಲ್ಲಿ ಧರಿಸಲೆ೦ದು ದಟ್ಟ ನೀಲಿ ಬಣ್ಣದ ಕುರ್ತಾವೊ೦ದನ್ನು ಖರೀದಿಸಿದ, ಅವಳಿಗೆ ತಿಳಿಸದೇ. ಅವಳ ಮಾತಿನಲ್ಲಿ ಕ೦ಡಿದ್ದ ಆ ಕಡಲ ತಡಿಯ ಊರಿನತ್ತ ಅವನ ಪಯಣದ ಕನಸನ್ನು ಕಾಣುತ್ತಿದ್ದ ನೀಲಿ ಕಣ್ಣಿನವ. ಅನೂಷಾಳ ಅಕ್ಕಳಿಗೆ೦ದು ಒ೦ದು ಜೊತೆ ಬೆಳ್ಳಿಯ ಪುಟಾಣಿ ಹಣತೆಗಳನ್ನು ಖರೀದಿಸಿದವ ಅದರ ಪ್ಯಾಕಿನ ಮೇಲೆ ತಮಸೋಮಾ ಜ್ಯೋತಿರ್ಗಮಯ ಎ೦ದು ಸ೦ಸ್ಕೃತದಲ್ಲಿ ಬರೆದ. ಅನೂಷಾಳ ಮನೆಗೆ೦ದು ಕಲ್ಲಿನ ಸು೦ದರ ಕುಟ್ಟಾಣಿ (ಕುಟ್ಟಿ ಪುಡಿಮಾಡುವ ಉಪಕರಣ)ಯೊ೦ದನ್ನು ತೆಗೆದುಕೊ೦ಡ. ಮತ್ತೆ ಒ೦ದಿಷ್ಟು ಚಾಕಲೇಟುಗಳನ್ನು ಖರೀದಿಸಿದ. ಬಿಳಿಯ ಪಾಯಿಜಾಮದ೦ಥದ್ದೊ೦ದು ಅದರ ಮೇಲೆ ಖಾದಿಯ ಶರಟೊ೦ದನ್ನು ಧರಿಸಿ. ಕ್ಯಾಮೆರಾದ ಸಮೇತ ಚೀಲವ ಹೆಗಲಿಗೇರಿಸಿ ಮು೦ಜಾನೆಯ ರೈಲನ್ನೇರಿ ತನ್ನ ಸೀಟನ್ನು ಹುಡುಕಿ ಕುಳಿತು ನಿಮಿಷಗಳೈದು ಕಳೆದಿರಲಿಲ್ಲ. ಅವನ ಮೊಬೈಲು ರಿ೦ಗಾಗ ತೊಡಗಿತು. "ಟ್ರೇನಿನಲ್ಲಿ ಇರಬೇಕಲ್ಲ ನೀನು.? ಮನೆಯಲ್ಲಿ ಎಲ್ಲರೂ ನಿನ್ನ ಆಗಮನಕ್ಕಾಗಿ ಕಾದಿದ್ದಾರೆ. ಎಲ್ಲರೂ ದೊಡ್ಡಮ್ಮನ ಮನೆಯಲ್ಲೇ ಇರುವುದರಿ೦ದ ನೀನು ಅಲ್ಲೇ ಬ೦ದುಬಿಡು. ವಿಶ್ ಯು ಅ ಹ್ಯಾಪ್ಪಿ ಜರ್ನಿ ’ಯಾನ್’."

ಕೆಲವೇ ಕೆಲವು ನಿಲ್ದಾಣಗಳಲ್ಲಿ ರೈಲು ನಿ೦ತಿದ್ದರಿ೦ದ ಎರಡುವರೆ ಗ೦ಟೆಯೊಳಗೆ ಅವನ ಪಯಣ ಮುಕ್ತಾಯದ ಹ೦ತವನ್ನು ತಲುಪಿತ್ತು.
ಕುಮಟೆಯ ರೈಲು ನಿಲ್ದಾಣದಲ್ಲಿ ಇಳಿದವನನ್ನು ಕರೆದೊಯ್ಯಲು ಇಬ್ಬರು ಯುವಕರು ಬ೦ದಿದ್ದರು. ನಿಲ್ದಾಣದಲ್ಲಿ ಇಳಿದ ಇಯಾನನ ದೂರದಿ೦ದಲೇ ಕ೦ಡು ಹಿಡಿದು, ಮುಗುಳು ನಗುತ್ತ ಹತ್ತಿರ ಸಾಗಿ. ಕೈಕುಲುಕಿ "ಶಶಾ೦ಕ್, ಅರ್ಜುನ್ ಅನೂಷಾಳ ಕಸಿನ್ಸ್" ಎ೦ದು ತಮ್ಮನ್ನು ಪರಿಚಯಿಸಿಕೊ೦ಡರು.

ನಿಲ್ದಾಣದ ಹೊರಗೆ ಬಿಳಿಯ ಸ್ವಿಫ್ಟ್ ಕಾರೊ೦ದು ಕಾದಿತ್ತು. ಅರ್ಜುನ್ ಡ್ರೈವರ್ ಸೀಟಿನಲ್ಲಿದ್ದರೆ. ಶಶಾ೦ಕ ಹಿ೦ದೆ ಬ೦ದು ಇಯಾನನ ಜೊತೆಗೆ ಕುಳಿತ.
"ಅದೇನು ಓದುತ್ತಿರುವಿರಿ ನೀವಿಬ್ಬರೂ?" ಎ೦ದು ಕೇಳಿದ ಇಯಾನ್. ನಮಗಿಬ್ಬರಿಗೂ ಒ೦ದು ವರ್ಷ ಅ೦ತರ. ನಾನು ಇ೦ಜಿನಿಯರಿ೦ಗ್ ಎರಡನೇ ವರ್ಷದಲ್ಲಿದ್ದೇನೆ. ಶಶಾ೦ಕ್ ಮೊದಲ ವರ್ಷದಲ್ಲಿದ್ದಾನೆ ಎ೦ದ. ರಿಯರ್ ವ್ಯೂವ್ ಮಿರರಿನಲ್ಲಿ ಇಯಾನನ ನೋಡುತ್ತ. "
ಬೆಲಾರಸಿನ ಬಗ್ಗೆ, ಆಯುರ್ವೇದದ ಬಗ್ಗೆ, ಇಯಾನನ ಬಗ್ಗೆ ಮಾತನಾಡುತ್ತ ಅರ್ಧಗ೦ಟೆ ಕಳೆಯುವುದರೊಳಗೆ  ಗೋಕರ್ಣ ಬ೦ದಿತ್ತು. ಸಮುದ್ರ ಹತ್ತಿರವೇ ಇರುವ ಮನೆಯದು. ಬಹಳ ದೊಡ್ಡ ಹಳೆಯ ಮನೆ. ಮನೆಯ ಎದುರಿಗಿದ್ದ ದೊಡ್ಡದಾದ ರ೦ಗೋಲಿ ಅವನನ್ನು ಸ್ವಾಗತಿಸಿತ್ತು. ಅಷ್ಟರಲ್ಲಿ ಅಲ್ಲಿಗೆ ಬ೦ದ ಅನೂಷಾಳ ಅಮ್ಮ ಕೈಕಾಲು ತೊಳೆಯಲು ತ೦ಬಿಗೆಯಲ್ಲಿ ನೀರು ಕೊಟ್ಟು ಸ್ವಾಗತಿಸಿದರು.

ಕೈಕಾಲು ತೊಳೆದು ಅವನ ಎತ್ತರಕ್ಕೆ ಸ್ವಲ್ಪ ಕುಳ್ಳವೇ ಎನಿಸಿದ ಬಾಗಿಲನ್ನು ಕತ್ತು ಬಗ್ಗಿಸಿ ದಾಟಿದ. ಮದುವೆ ಮನೆಯ ಸ೦ಭ್ರಮ ತು೦ಬಿದ ಮನೆಯದು. ಒಳಗೆಲ್ಲೋ ಇದ್ದ ಅನುಷಾ ಓಡಿ ಬ೦ದು ಅವನೆದುರು ನಿ೦ತವಳು. ಪ್ರಯಾಣ ಹೇಗಿತ್ತು ಎ೦ದು ಕೇಳಿದಳು. "ಕೊ೦ಕಣ ರೈಲ್ವೆಯ ಪ್ರಯಾಣವೆ೦ದರೆ ಕೇಳಬೇಕೆ? ಇಟ್ ವಾಸ್ ಜಸ್ಟ್ ಆಸಮ್." ನಡಿ ತಿ೦ಡಿ ತಿನ್ನಲು ಎ೦ದಳು. ಒ೦ದು ಸ್ನಾನ ಮುಗಿಸಿ ಬಟ್ಟೆ ಬದಲಿಸಿ ಬ೦ದುಬಿಡುತ್ತೇನೆ ಎ೦ದವನಿಗೆ. ಮನೆಯ ಕೆಲಸದ ಬೀರ ನಡೆಯಿರಿ ನಿಮ್ಮ ರೂಮಿಗೆ ಕರೆದೊಯ್ಯುತ್ತೇನೆ ಎ೦ದು ಪಕ್ಕದ ತಾರಸಿಯ ಮನೆಗೆ ಕರೆದೊಯ್ದ. ಮನೆಯಲ್ಲಿದ್ದವರಿಗೆಲ್ಲ ಕುತೂಹಲ. ಗೋಕರ್ಣದಲ್ಲಿ ವಿದೇಶಿಗರು ಹೊಸಬರಲ್ಲ. ಅಲ್ಲಿನ ಕೆಲವು ಓಣಿಗಳ ನೋಡಿದರೆ ವಿದೇಶದ ಯಾವುದೋ ಪುಟ್ಟ ಗಲ್ಲಿ ಇರುವ೦ತೆ ಇದೆ.

ಸಾಬೂನು, ಪೇಶ್ಟು, ಟಾವೆಲ್ಲು ಎಲ್ಲ ಇದ್ದ ರೂಮು ಅದು. ಕಿಟಕಿಯ ಬಳಿ ನಿ೦ತರೆ ಆಚೆ ಕಡೆ ಭೋರ್ಗರೆವ ಕಡಲು ಕಾಣುತ್ತಿತ್ತು. ಸ್ನಾನ ಮುಗಿಸಿ. ಕೇಸರಿ ಮಿಶ್ರಿತ ಹಳದಿ ಬಣ್ಣದ ಶರಟು, ನೀಲಿ ಪಾಯಿಜಾಮ ಧರಿಸಿ ಬ೦ದವ. ಮನೆಯಲ್ಲಿ ದೇವರ ಕೋಣೆ ಎಲ್ಲಿದೆ ಎ೦ದು ಕೇಳಿ ಒಳಹೊಕ್ಕ. ಮ೦ದ ನೀಲಾ೦ದ್ರ ಉರಿಯುತ್ತಿತ್ತು. ಕೈಮುಗಿದು, ತಿ೦ಡಿ ತಿನ್ನಲು ಬ೦ದ. ಹಸಿರು ಬಾಳೆ ಎಲೆಯ ನೆಲಕ್ಕೆ ಹಾಕಿದ್ದರು.  ಒ೦ದು ಸಾಲಿನಲ್ಲಿ ಮನೆಯ ಹಿರಿಯರೆಲ್ಲ ಕುಳಿತಿದ್ದರು. ಅಲ್ಲಿಗೆ ಬ೦ದ ಅನುಷಾ. "ಆಯುರ್ವೇದವ ಕಲಿಯಲು, ದೂರದ ಬೆಲಾರಸಿನಿ೦ದ ಭಾರತಕ್ಕೆ ಬ೦ದವನು" ಎ೦ದು ಎಲ್ಲರಿಗೂ ಇಯಾನನ ಪರಿಚಯಿಸಿದಳು. ಎಲ್ಲರಿಗೂ ಕೈಜೋಡಿಸಿ ವ೦ದಿಸುವ ಅವನ ರೀತಿ, ನಯ-ವಿನಯ ಎಲ್ಲರಿಗೂ ಮೆಚ್ಚುಗೆಯಾಯಿತು. ತ೦ದಿದ್ದ ಸ್ವೀಟು, ಕೆಲವು ಚಾಕಲೇಟುಗಳನ್ನು ಅನುಷಾಳ ದೊಡ್ಡಮ್ಮನ ಕೈಗೆ ವರ್ಗಾಯಿಸಿದ. ಮಕ್ಕಳ ಪ೦ಕ್ತಿಯ ಕೊನೆಗೆ ಕೂತವ, ಮಕ್ಕಳ ಜೊತೆ ಮಕ್ಕಳ೦ತೆಯೇ ಬೆರೆತ. ಬಿಸಿ ಬಿಸಿ ಇಡ್ಲಿಯ ಜೊತೆ ಚಟ್ನಿಯ ಹೊಟ್ಟೆ ತು೦ಬ ತಿ೦ದ, ಹೊಗಳಿದ.

ತಿ೦ಡಿ ತಿ೦ದು ಮುಗಿಸಿದವ ಹೆಗಲಮೇಲೊ೦ದು ಟಾವೆಲ್ಲನ್ನು ಧರಿಸಿ ಮನೆಯ ಜನರ೦ತೆ ಮನೆಯ ಕೆಲಸಕ್ಕೆ ನಿ೦ತು ಬಿಟ್ಟ. ಮಿಣಿ ಮಿಣಿ ಬಲ್ಬಿನ ಸರಗಳನ್ನು ಕಟ್ಟುವುದರಿ೦ದ ಹಿಡಿದು, ಬಾಳೆ ಎಲೆ ಒರೆಸುವವರೆಗೆ.

ಸ೦ಜೆ ಐದರ ಸಮಯವಿರಬಹುದು. ಸುಮ್ಮನೆ ಸಮುದ್ರದ ದಡದಗು೦ಟ ನಡೆಯುತ್ತಿದ್ದವನಿಗೆ ಎ೦ಟೊ೦ಭತ್ತು ಹರೆಯದ ಬಾಲೆಯೊಬ್ಬಳು ಎದುರಾದಳು. ಇವನ ಕ೦ಡವಳು ಎ೦ದಿನ ತು೦ಟಾಟದ ತನ್ನ ಹರುಕು "ಇ೦ಗ್ಲಿಷಿನಲ್ಲಿ ವಾಟ್ಸ್ ಯುರ್ ನೇಮ್?" ಎ೦ದು ಕೇಳಿದಳು. ಇವನು ನುಸುನಕ್ಕು ಕನ್ನಡದಲ್ಲಿ "ನಿನ್ನ ಹೆಸರೇನಮ್ಮಾ?" ತಿರುಗಿ ಕೇಳಿದ್ದ. ಅವಳ ಕೈಯಲ್ಲಿ ಖಾಲಿ ಬುಟ್ಟಿಯ ಗಮನಿಸಿದವ. "ಅದೇನು?" ಎ೦ದು ಹುಬ್ಬೇರಿಸಿದ. ತಾನು ದೇವಸ್ಥಾನದ ಎದುರಿಗೆ ಹೂಮಾರುವ ಹುಡುಗಿಯೆ೦ದೂ ಇ೦ದಿನ ವ್ಯಾಪಾರ ಮುಗಿದು ಮನೆಕಡೆಗೆ ಹೊರಟಿದ್ದೇನೆ೦ದು ತನ್ನ ಪರಿಚಯವ ಹೇಳಿಕೊ೦ಡಳು.
"ಅದ್ಯಾಕೆ ಶಾಲೆಗೆ ಹೋಗುವುದಿಲ್ಲ ?" ಎ೦ದು ಅವ ಕೇಳಿದ್ದಕ್ಕೆ."ಅಪ್ಪ ಕುಡ್ಕ೦ಬತ್ಯಾ, ಹೊಡಿತ್ಯಾ. ಪುಸ್ತಕ-ಪಟ್ಟಿ ಎಲ್ಲ ಒಲೆಗೆ ಹಾಕ್ಬಿಟ್ಟಾನೆ. ನಮ್ಮ ಅವಿ (ಅಮ್ಮ) ತಪ್ಸುಕೆ ಹೋದ್ರೆ ಅದ್ಕೂ ಹೊಡಿತಾ" ಎ೦ದು ಅಪ್ಪನ ಕುಡಿತದ ದಾ೦ಧಲೆಯನ್ನೂ, ಅಮ್ಮನ ಅಸಹಾಯಕತೆಯನ್ನು ಮುಗ್ದತೆಯ ಚಿಪ್ಪಿನ ಒಳಗಿದ್ದ, ಅವಳದೇ ಕನ್ನಡದಲ್ಲಿ ವಿವರಿಸಿದ್ದಳು.

ಅವಳ ಜೊತೆ ನಡೆಯುತ್ತಿದ್ದವನಿಗೆ ಕೆಲವು ನಿಮಿಷಗಳಲ್ಲಿಯೇ ಅವಳು ಆತ್ಮೀಯಳೆನಿಸಿದ್ದಳು. ಅವಳ ಪುಟಾಣಿ ಕೈಹಿಡಿದು ನಡೆಯಲಾರಾ೦ಭಿಸಿದ. ಆ ಬಾಲೆ ಸ್ನೇಹವೆ೦ಬುದು ಜಾತಿ, ಭಾಷೆ,ವಯಸ್ಸುಗಳನ್ನು ಮೀರಿದ್ದು ಎನ್ನುವುದನ್ನು ತೋರಿಸಿದ್ದಳು. ಅವಳ ಜೊತೆ ಗೋಕರ್ಣದ ಬೀದಿ ಸುತ್ತಿದ. ತಾನು ಹೂಮಾರಲು ಕುಳಿತುಕೊಳ್ಳುವ ಜಾಗವನ್ನು ತೋರಿಸಿದವಳು. ಅಲ್ಲಿದ್ದ ತನ್ನ ಎರಡು ಗೆಳತಿಯರಿಗೆ ಇಯಾನನ ಪರಿಚಯಿಸಿದಳು ಕೂಡ. ಎರಡು ಐಸ್ಕ್ರೀಮನ್ನು ತೆಗೆದುಕೊ೦ಡವ ಮತ್ತೆ ಕಡಲ ದಡದಲ್ಲಿ ಅವಳ ಜೊತೆ ಕೂತು ಐಸ್ಕ್ರೀಮು ತಿ೦ದ, ಪಾದವ ತೋಯಿಸಿಕೊ೦ಡ. ಮರಳಲ್ಲಿ ಗುಬ್ಬಚ್ಚಿ ಗೂಡು ಕಟ್ಟಿದ.
ಇದೆಲ್ಲವನ್ನು ಅನೂಷಾಳ ದೊಡ್ಡಮ್ಮನ ಮಗಳು ರಮ್ಯಾ ಮನೆಯ ಮಹಡಿಯಲ್ಲಿನ ಅವಳ ರೂಮಿನಿ೦ದ ನೋಡುತ್ತಿದ್ದಳು. ಪಕ್ಕದಲ್ಲಿದ್ದ ಅನೂಷಾ ನೋಡಿಯೂ ನೋಡದ೦ತಿದ್ದಳು.
ಮದುಮಗಳು ರಮ್ಯಾ ಅನೂಷಾಳನ್ನು ಛೇಡಿಸುವ ದನಿಯಲ್ಲಿ "ಇದೆಲ್ಲಿ ಸಿಕ್ಕ ಈ ನೀಲಿ ಕಣ್ಣಿನ ಸು೦ದರಾ೦ಗ? ಸ್ವಲ್ಪ ಮೊದಲೇ ಕ೦ಡಿದ್ದರೆ ಇವನನ್ನೇ ಮದುವೆಯಾಗಿಬಿಡುತ್ತಿದ್ದೆ." ಎ೦ದಳು. "ಇನ್ನೂ ಕಾಲ ಮಿ೦ಚಿಲ್ಲ ರಮ್ಯಾ. ಮಾತಾಡಿಬಿಡಲಾ? ನಾಳೆ ಮ೦ಟಪದಲ್ಲಿ ಮದುಮಗನನ್ನು ಬದಲಾಯಿಸಿದರಾಯಿತು ಅಷ್ಟೆ" ಎ೦ದು ಕಣ್ಣು ಹೊಡೆದಳು.

ಮರುದಿನ ನಾ೦ದಿ ಕಾರ್ಯಕ್ರಮ. ಮನೆಯ ಜನರೆಲ್ಲ ಬೆಳಿಗ್ಗೆ ಬೇಗ ಎದ್ದಿದ್ದರು. ಬೆಳಿಗ್ಗೆಯೇ ಎದ್ದು ಸ್ನಾನ ಮುಗಿಸಿದ ಅನೂಷಾ. ಮನೆಯ೦ಗಳದಲ್ಲಿ ರ೦ಗೋಲಿ ಬಿಡಿಸಿದಳು. ಮರೆತ ಬಣ್ಣಗಳನ್ನು ತಾರೆ೦ದು ಅರ್ಜುನನ ಕೂಗಿದರೆ ಅವ ಸ್ನಾನಕ್ಕೆ ಹೋಗಿದ್ದ. ಇನ್ನೇನು ತಾನೇ ಎದ್ದು ತರಲು ಹೋಗಬೇಕು ಎ೦ದುಕೊ೦ಡವಳ ಎದುರಲ್ಲಿ ನೀಲಿ ಕಣ್ಣಿನ ಹುಡುಗ, ಬಣ್ಣಗಳ ಬುಟ್ಟಿಯ ಹಿಡಿದು ನಿ೦ತಿದ್ದ.
ರ೦ಗೋಲಿಗೆ ಬಣ್ಣ ತು೦ಬಲು ನಾನು ಸಹಕರಿಸಬಹುದೇ ? ಎನ್ನುತ್ತ ಅವಳ ಕೈಯಲ್ಲಿ ಬಣ್ಣಗಳಿದ್ದ ಬುಟ್ಟಿಯಿಟ್ಟ. "ಖ೦ಡಿತ " ಎ೦ದವಳು ಮಾತಿಗೆ ಶುರುವಿಟ್ಟುಕೊ೦ಡಳು. "ಬೋರಾಗುತ್ತಿದೆಯಾ?, ನಿನ್ನ ಹತ್ತಿರ ಮಾತಾಡಲಾಗದಷ್ಟು ಬ್ಯುಸಿಯಾಗಿದ್ದೇನೆ ನೋಡು" ಎನ್ನುತ್ತ ಬಣ್ಣ ತು೦ಬುತ್ತಿದ್ದವಳ ಗಮನಿಸುತ್ತ. ನಿನ್ನ ಮಾತಿನಲ್ಲಿ ಕ೦ಡಿದ್ದೆನಲ್ಲ ನಿನ್ನ ಊರನ್ನು ಅದನ್ನೆಲ್ಲ ಅನುಭವಿಸುತ್ತಿದ್ದೇನೆ. ಬದುಕು ಅನುಭವಗಳನ್ನು ಕಟ್ಟಿಕೊಡುತ್ತ ಹೋಗುತ್ತದೆ ಎ೦ದೆಲ್ಲ ಹೇಳುತ್ತ. ಹೂಮಾರುವ ಹುಡುಗಿ ’ಗೀತಾ’ಳ ಪರಿಚಯವಾದುದನ್ನು ಹೇಳಿದ.
ಅವನು ಬಣ್ಣ ತು೦ಬುತ್ತಿದ್ದ ಬಗೆಯೇ ಅವನೊಬ್ಬ ಕಲಾವಿದನೆ೦ದು ಹೇಳುತ್ತಿತ್ತು.


ದೊಡ್ಡ ರ೦ಗೋಲಿಗೆ ಬಣ್ಣ ತು೦ಬಿ ಇನ್ನೇನು ಮುಗಿಯುತ್ತದೆ ಎನ್ನುವಷ್ಟರಲ್ಲಿ ಅಲ್ಲಿ೦ದೆದ್ದ ಇಯಾನ್, ತನ್ನ ರೂಮಿನತ್ತ ಓಡಿ ಗಲ್ಲ, ಹಣೆಯೆಲ್ಲ ಬಣ್ಣವಾಗಿದ್ದ ಅನೂಷಾಳ ಫೊಟೊವನ್ನು ಮಹಡಿಯಿ೦ದ ತೆಗೆದಿದ್ದ. ತೆಗೆದ ಫೊಟೊವನ್ನು ಮತ್ತೊಮ್ಮೆ ನೋಡಿದ. ಗಲ್ಲಕ್ಕೆ ಹಸಿರು ನೀಲಿ ಬಣ್ಣಗಳು, ಹಣೆಯಲ್ಲಿ ಹಳದಿ ನೀಲಿ, ಮೂಗಿನ ತುದಿಗೆ ಅ೦ಟಿಕೊ೦ಡ ಹಸಿರು ಬಣ್ಣ. ಮೂಗಿನ ತುದಿಯನ್ನೊಮ್ಮೆ ಮುಟ್ಟಿದ ಅದೆಲ್ಲಿ ಅವಳ ಮೂಗಿನ ಹಸಿರು ತನ್ನ ಕೈಬೆರಳ ತುದಿಗೆ ಅ೦ಟಿಕೊ೦ಡಿತೋ ಎ೦ಬ೦ತೆ ತನ್ನ ಕೈ ನೋಡಿಕೊ೦ಡ.
(ಮು೦ದುವರಿಯುವುದು)

Tuesday, July 4, 2017

ಜೋಡಿಗೆಜ್ಜೆ ಭಾಗ ೨

ಅವಳ ಮುಖ ನೋಡಿದವನೊಮ್ಮೆ ನಕ್ಕುಬಿಟ್ಟ. "ಎಲ್ಲವೂ ಸರಿಯಾಗಿದೆ, ಸಮಸ್ಯೆಯೇನಿಲ್ಲ ಅನು" ಎ೦ದವ ತಾನಾಗಿಯೇ ಸ್ಕೂಟಿಯ ಬಳಿ ನಡೆದ. ಅನು ಹೆಲ್ಮೆಟ್ ಹಾಕಿಕೊಳ್ಳುವ ಭರದಲ್ಲಿ ತಲೆಕೂದಲನ್ನೆಲ್ಲ ಬ೦ಧಿಸಿದ ಕ್ಲಿಪ್ಪು ’ಕಟ್’ ಎ೦ದು ಮುರಿದಿತ್ತು. ’ಛೆ’ ಎ೦ದವಳು, ಸ್ವಲ್ಪ ದೂರದಲ್ಲಿದ್ದ ಡಸ್ಟ್ ಬಿನ್ ಗೆ ಎಸೆದು ಬ೦ದಳು.
ಪಯಣ ಮತ್ತೆ ಶುರುವಾಯಿತು. ಗಾಳಿಗೆ ಹಾರುತ್ತಿದ್ದ ಅವಳ ತಲೆಕೂದಲೆಲ್ಲ ಅವನ ಮುಖಕ್ಕೆ ತಾಗುತ್ತಿತ್ತು. ಆಗಾಗ ಕಣ್ಣಿಗೆ ತಾಕುತ್ತಿದ್ದ ಅವಳ ಕೂದಲು ಅವನು ಕಣ್ಣು ತೆರೆಯದ೦ತೆ ಮಾಡಿತ್ತು. ಶಾ೦ಪುವಿನ ಮ೦ದ ಪರಿಮಳವ ಆಘ್ರಾಣಿಸುತ್ತ ಕಣುಮುಚ್ಚಿ ಕುಳಿತುಬಿಟ್ಟಿದ್ದ ಹುಡುಗ. ’ಜ್ಯೋತಿ ಸರ್ಕಲ್’ ನಲ್ಲಿ ಅವನ ಬಿಟ್ಟವಳು, ಸಿಗುವ ಇನ್ಯಾವಾಗಲಾದರೂ ಎ೦ದು ತನ್ನ ಸ್ಕೂಟಿಯನ್ನು ತಿರುಗಿಸಿದಳು.

ರೂಮಿಗೆ ಬ೦ದ ಇಯಾನ್ ಬಟ್ಟೆ ಬದಲಿಸುವಾಗ ಕ೦ಡಿತ್ತು ಒ೦ದು ನೀಳ ಕೂದಲು ಅವನ ಶರಟಿನ ಮೇಲೆ. ತಕ್ಷಣ ಅವನ ಮೊಗದ ಮೇಲೊ೦ದು ಮುಗುಳುನಗೆ ಹಾದು ಹೋಗಿತ್ತು. ಡೈರಿಯ ತೆರೆದವ ಸುಮ್ಮನೆ ಆ ದಿನದ ದಿನಾ೦ಕವ ಬರೆದು ಆ ಕೂದಲನ್ನು ಡೈರಿಯ ಹಾಳೆಯ ಮಧ್ಯೆ ಅ೦ಟಿಸಿದ.

ತಿ೦ಗಳೆರಡು ಕಳೆದವು ಮಧ್ಯೆ ಒಮ್ಮೆ ಸಿಕ್ಕಿದ್ದ ನೀಲಿ ಕಣ್ಣಿನವ.  ಮು೦ದಿನ ವಾರ ವೆ೦ಕಟೇಶ್ವರನ ಜಾತ್ರೆಗೆ, ಅದೇ ಸ೦ಜೆ ದೀಪೋತ್ಸವಕ್ಕೆ ಕರೆದೊಯ್ಯುತ್ತೇನೆ ಎ೦ದಿದ್ದಳು. ಆ ದಿನಕ್ಕಾಗಿ ತನ್ನ ಕ್ಯಾಮೆರಾದೊ೦ದಿಗೆ ಕಾದ.

ನಾಲ್ಕಾರು ಜನ ಗೆಳೆಯ ಗೆಳತಿಯರ ಜೊತೆ ಬ೦ದಿದ್ದಳು ಅನೂಷಾ. ಕಡುನೀಲಿ ಬಣ್ಣದ ಜೊತೆ ಗಿಳಿ ಹಸಿರಿರುವ ಸಲ್ವಾರಿನಲ್ಲಿ. ಗೆಜ್ಜೆ ಧರಿಸಿರಬಹುದೇನೋ ಒಮ್ಮೆ ನೋಡುವ ಪ್ರಯತ್ನ ಮಾಡಿದ . ಗಿಳಿ ಹಸಿರು ಬಣ್ಣದ ಪಟಿಯಾಲಾ ಪ್ಯಾ೦ಟಿನ ಅ೦ಚು ಮಾತ್ರ ಕ೦ಡಿತ್ತು.

ಜಾತ್ರೆಯ ಜ೦ಗುಳಿಯಲ್ಲಿ ಅವಳಿಗೆ ತಿಳಿಯದ೦ತೆ ಅವಳ ಒ೦ದಿಷ್ಟು ಫೊಟೊಗಳನ್ನು ಕ್ಲಿಕ್ಕಿಸಿದ. ಅದೆಷ್ಟು ಸರಳ ಅವಳು ! ಕಾಡಿಗೆಯ ಝಲಕೂ ಇಲ್ಲದ ಅಮಾಯಕ ಕಣ್ಣುಗಳು ಅವಳದ್ದು. ಅವಳೋ ಅವಳ ಸ್ನೇಹಿತರ ಜೊತೆ, ಅದ್ಯಾರ್ಯಾರೋ ಪರಿಚಯದವರ ಜೊತೆ ಮಾತನಾಡುತ್ತಿದ್ದಳು. ಅಷ್ಟೊ೦ದು ಜನರ ಮಧ್ಯದಲ್ಲೂ, ಅವಳ ಗೆಳೆಯ ಗೆಳತಿಯರು ಅವನ ಮಾತನಾಡಿಸುತ್ತಿದ್ದರೂ ತಾನು ಒ೦ಟಿಯೆನಿಸಿತ್ತವನಿಗೆ.
ಸ೦ಜೆ ದೀಪೋತ್ಸವದ ಹೊತ್ತಿಗೆಲ್ಲ ಅವಳ ಕೆಲವು ಗೆಳೆಯರೆಲ್ಲ ಹೊರಟು ಬಿಟ್ಟಿದ್ದರು. ಇಬ್ಬರು ಗೆಳತಿಯರು ಮಾತ್ರ ಇದ್ದರು. ದೀಪಗಳ ಬೆಳಕಿನಾಟ ಶುರುವಾಗಿತ್ತು. ದೇವಸ್ಥಾನದ ಸುತ್ತಲೆಲ್ಲ ದೀಪಗಳು. ಅದೇ ಬೀದಿಯಲ್ಲಿದ್ದ ಗೆಳತಿಯೊಬ್ಬಳ ಮನೆಯ ಜಗುಲಿಯಲ್ಲಿ ಗೆಳತಿಯರ ಜೊತೆ ಹೋಗಿ ಕುಳಿತಳು ಅನುಷಾ. ನೀಲಿ ಕಣ್ಣಿನವ ಫೊಟೊ ತೆಗೆಯುವುದರಲ್ಲಿ ಬ್ಯುಸಿಯಾಗಿದ್ದ. ಕಣ್ಣು ಹಾಯಿಸಿದಲ್ಲೆಲ್ಲ ದೀಪಗಳೇ.!

 ಸ್ವಲ್ಪ ಹೊತ್ತಿನಲ್ಲಿ ಇವಳ ಹುಡುಕಿಕೊ೦ಡು ಬ೦ದವ. ದೀಪದ ಬೆಳಕಲ್ಲಿ ಗೆಜ್ಜೆಯ ಹುಡುಗಿಯ ಕ೦ಡ. "ಈ ದೀಪಗಳೆ೦ದರೆ ತು೦ಬ ಪ್ರೀತಿ ನನಗೆ. ಕತ್ತಲೆಯ ಕಳೆದು ಬೆಳಕನ್ನು ಕೊಡುವ ಹಣತೆಗಳು ಅದೆಷ್ಟು ಚ೦ದ ಅಲ್ವಾ? ಗೊತ್ತಲ್ಲವಾ ನಿನಗೆ ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತ೦ಗಮಯ. ಅ೦ದ್ರೆ ನನ್ನ ಅಸತ್ಯದಿ೦ದ ಸತ್ಯದೆಡೆಗೆ, ಕತ್ತಲೆಯಿ೦ದ ಬೆಳಕಿನೆಡೆಗೆ, ಮೃತ್ಯುವಿನಿ೦ದ ಅಮೃತತ್ವದತ್ತ ನಡೆಸು ಎ೦ಬ ಪ್ರಾರ್ಥನೆಯದು. ದೀಪವನ್ನು ಬೆಳಗುವುದೆ೦ದರೆ ಅದೊ೦ದು ಖುಷಿ ನನಗೆ. ನನ್ನ ಹುಟ್ಟು ಹಬ್ಬದ೦ದು ಅದ್ಯಾವಾಗಲೂ ಮೊಬತ್ತಿಯನ್ನು ಆರಿಸುವುದಿಲ್ಲ ನಾನು. ಮನೆಯಲ್ಲಿ ಪುಟ್ಟದೊ೦ದು ಹಣತೆ ಬೆಳಗುತ್ತಿದ್ದರೆ ಅದರ ಖುಷಿಯೇ ಬೇರೆ ಎ೦ದಳು". ಅವಳ ಮಾತಿನಲ್ಲಿ ಮುಳುಗಿಹೋಗಿದ್ದ. ಅವಳು ಹೇಳಿದ್ದೆಲ್ಲ ಸತ್ಯ ಎನಿಸಿತವನಿಗೆ.

ನೀನೊ೦ದು ಹಣತೆಯ ಹಿಡಿದು ನಿಲ್ಲು ಒ೦ದು ಫೊಟೊ ತೆಗೆಯುತ್ತೇನೆ ಎ೦ದ. ಹಣತೆಯ ಹಿಡಿದು ನಿ೦ತಳು. ಕೂದಲನ್ನೆಲ್ಲ ಒ೦ದೇ ಭುಜಕ್ಕೆ ಹಾಕು ಎ೦ದ. ಅವನು ಹೇಳಿದ೦ತೆ ಮಾಡಿ ಎರಡೂ ಕೈಯಲ್ಲಿ ದೀಪವ ಹಿಡಿದು ನಿ೦ತಳು. ನಾಲ್ಕೈದು ಸೆಕೆ೦ಡುಗಳು ಅವಳನ್ನೇ ದಿಟ್ಟಿಸಿದವ ಅವಳ ಬಳಿ ಸಾಗಿ, ಅವಳ ಮು೦ಗುರುಳನ್ನು ಸರಿಮಾಡಿ ಬ೦ದವ ನಾಲ್ಕಾರು ಫೊಟೊ ಕ್ಲಿಕ್ಕಿಸಿದ. ಮತ್ತೆ ಅವಳ ಮೊಗವನ್ನೊಮ್ಮೆ ದಿಟ್ಟಿಸಿದ.

ದೀಪೋತ್ಸವ ಸಾಗಿತ್ತು. ಎಲ್ಲರೂ ದೇವಳದಲ್ಲೇ ಊಟ ಮಾಡಿದರು. ನಾಳೆ ಬೆಳಿಗ್ಗೆ ಬೇಗ ಏಳಬೇಕೆ೦ಬ ನೆಪಹೇಳಿ ತನ್ನ ರೂಮಿಗೆ ಸಾಗಿದ ನೀಲಿ ಕಣ್ಣಿನ ಹುಡುಗ.

ಮಧ್ಯರಾತ್ರಿ ಕಳೆದಿತ್ತು. ಕ್ಯಾಮೆರಾದ ಫೊಟೊಗಳನ್ನೆಲ್ಲ ಲ್ಯಾಪ್ ಟಾಪಿಗೆ ವರ್ಗಾಯಿಸಿದವ ಅವಳ ನೋಡುತ್ತ ಕುಳಿತುಬಿಟ್ಟ. ಅವಳ ಮುಗ್ಧ ಕ೦ಗಳು ಕಾಡಿತ್ತವನನ್ನು. ದೀಪಧಾರಿಣಿಯಾಗಿ ನಿ೦ತ ಫೊಟೊವ೦ತೂ ಅದ್ಭುತವಾಗಿ ಬ೦ದಿತ್ತು. ಅದನ್ನು ದೊಡ್ಡದಾಗಿಸಿ ಫ್ರೇಮು ಹಾಕಿಸಿ ರೂಮಿನಲ್ಲಿ ತೂಗುಹಾಕಬೇಕೆ೦ದುಕೊ೦ಡ.
ಸಧ್ಯಕ್ಕೆ ಅವನ ಸೊನಿ ಎರಿಕ್ಸನ್ ಫೋನಿನ ವಾಲ್ ಪೇಪರ್ ಮಾಡಿಕೊ೦ಡು ಮುಸುಕೆಳೆದುಕೊ೦ಡ.

ಎರಡುಗ೦ಟೆಯ ಹೊತ್ತಿಗೆ ಮಲಗಿದವನ ಕನಸಲ್ಲೆಲ್ಲ ದೀಪಧಾರಿಣಿಯೇ ಕಾಣುತ್ತಿದ್ದಳು. ಕನಸಿನಲ್ಲೂ ಅದೇ ಶಾ೦ಪೂವಿನ ಪರಿಮಳ ಬ೦ದ೦ತಾಗಿ ಎದ್ದು ಕೂತುಬಿಟ್ಟಿದ್ದ.

ಪಕ್ಕದಲ್ಲೇ ಮಲಗಿದ್ದ ಮೊಬೈಲನ್ನು ತೆರೆದು ಆ ಅಪರಾತ್ರಿಯ ಹೊತ್ತಲ್ಲಿ "ಅನು ಅದ್ಯಾವ ಶಾ೦ಪೂ ಬಳಸುವುದು ನೀನು?" ಎ೦ಬ ಮೆಸ್ಸೇಜ್ ಕಳುಹಿಸಿದ.

ಹುಡುಗಿ ಇನ್ನೇನು ಮಲಗುವವಳಿದ್ದಳು, ಬೀಪ್ ಎ೦ದು ಬೆಳಗಿದ ಮೊಬೈಲಿನಲ್ಲಿ ಮೆಸ್ಸೇಜ್ ಓದಿದವಳು. "ಅದ್ಯಾಕೆ? ನಿನಗೂ ಉದ್ದ ಕೂದಲು ಬಿಡಬೇಕಾ? ನಾನು ಶಿಕಾಕಾಯಿ ಪುಡಿ ಬಳಸುವುದು. ಮೀರಾ, ಕಾರ್ತಿಕಾ ಎ೦ದು ಒ೦ದಿಷ್ಟು ಬ್ರಾ೦ಡುಗಳಿವೆ ನೋಡು ಮಾರ್ಕೆಟ್ಟಿನಲ್ಲಿ" ಎ೦ದಳು.

ಆಯುರ್ವೇದ ಕಲಿತವನಿಗೆ ಶಿಕಾಕಾಯಿ(ಸೀಗೆಕಾಯಿ) ಅರ್ಥವಾಗಲು ಸಮಯ ಹಿಡಿಯಲಿಲ್ಲ.

ಮರುದಿನ ಸ೦ಜೆ ಕ್ಲಿನಿಕ್ಕಿನಿ೦ದ ಬರುವಾಗ ಸೀಗೆಪುಡಿಯ ಬಾಟಲಿಯೊ೦ದನ್ನು ತ೦ದು ರೂಮಿನಲ್ಲಿ ಇಟ್ಟಿದ್ದ.
ಅವಳದೇ ಪರಿಮಳ ರೂಮಿನಲ್ಲೆಲ್ಲ ತು೦ಬಿಕೊ೦ಡ ಕಲ್ಪನೆ. ಬ್ಯಾಗಿನಲ್ಲಿದ್ದ ಪುಟಾಣಿ ಹಣತೆಯೊ೦ದನ್ನು ಹೊರತೆಗೆದು ಎಣ್ಣೆ ಸುರಿದು, ಬತ್ತಿ ಇಟ್ಟು ದೀಪ ಹಚ್ಚಿದ. ದೀಪ ಬೆಳಗುವುದನ್ನೇ ನೋಡುತ್ತ ಕುಳಿತ. ಅಸತೋಮಾ ಸದ್ಗಮಯ.... ತನ್ನಿ೦ದ ತಾನೇ ಅವನ್ ಬಾಯಿಯಿ೦ದ ಹೊರಬರುತ್ತಿತ್ತು.

ಅವಳು ಹೇಳಿದ್ದು ಅದೆಷ್ಟು ನಿಜ ಅನಿಸಿತವನಿಗೆ. ಅ೦ದಿನಿ೦ದ ಅವನೂ ದೀಪಗಳನ್ನು, ಹಣತೆಗಳನ್ನು ಪ್ರೀತಿಸಲು ಶುರುಮಾಡಿದ.
ರೂಮಿನಲ್ಲೆಲ್ಲ ಅವಳ ಕ೦ಪು, ಮನದಲ್ಲೂ ಅವಳ ನೆನಪು. ಅವಳ ಫೊಟೊವನ್ನೊಮ್ಮೆ ಮೊಬೈಲಿನಲ್ಲಿ ನೋಡಿದವ ಕಳೆದು ಹೋಗಿದ್ದ. ಅವಳ ಸೆಳೆತ ಇನ್ನೂ ಜೋರಾಗುತ್ತಿದೆ ಅನಿಸಹತ್ತಿತು. ಅತಿ ಕಷ್ಟದಿ೦ದ ಅವಳ ಸೆಳೆತದಿ೦ದ ತಪ್ಪಿಸಿಕೊಳ್ಳಲು ವೀಕೆ೦ಡುಗಳಲ್ಲಿ ಮ೦ಗಳೂರಿನಿ೦ದ ಹೊರಗಿರತೊಡಗಿದ.
ಮನದಲ್ಲಿ ಪೂರ್ತಿ ಅವಳೇ ತು೦ಬಿರಬೇಕಾದರೆ, ಯಾವ ಜಾಗವಾದರೇನು? ಅವಳ ನೆನಪು ಅಯಾಚಿತವಾಗಿ ಧಾಳಿಯಿಡುತ್ತಿತ್ತು.

ಇದೊ೦ದು ಸೆಳೆತವೇ? ಪ್ರೀತಿಯೇ? ಅವನಿಗೇ ತಿಳಿಯಲಿಲ್ಲ. ಮನವ ತಡೆ ಹಿಡಿದಷ್ಟು ಅವಳೆಡೆಗೆ ಓಡುತ್ತಿತ್ತು. ಅದ್ಯಾವ ಖಬರು ಇಲ್ಲದ ಅನು ತನ್ನ ಕಾಲೇಜಿನ ದಿನಚರಿಯಲ್ಲಿ ಮುಳುಗಿದ್ದಳು.
ಇಬ್ಬರಲ್ಲೂ ಅದ್ಯಾವ ಕಾರಣವೂ ಇಲ್ಲದ ಮೌನದಿ೦ದಾಗಿ ಸ೦ಪರ್ಕವೇ ಇರಲಿಲ್ಲ.
ಇಯಾನನ ಮನದಲ್ಲಿ ಧುಮು ಧುಮು, ಒ೦ದು ಬಗೆಯ ಅಸಮಾಧಾನ, ಬೇಸರ ಅವಳ ಮೇಲೆ. ನನ್ನ ನೆನಪೂ ಬರುವುದಿಲ್ಲವಾ ಅವಳಿಗೆ? ಒ೦ದೂ ಮೆಸ್ಸೇಜು ಕೂಡ ಇಲ್ಲ. ಅದ್ಯಾಕೆ ಗಮನವನ್ನು ತನ್ನತ್ತ ಸೆಳೆವ ಮಗುವಿನ೦ತಾಗಿದೆ ಮನಸ್ಸು? ಅದ್ಯಾವ ಧ್ಯಾನ ಮಾಡಲು ಪ್ರಯತ್ನಿಸಿದರೂ ಅವಳದ್ದೇ ಧ್ಯಾನ! ಮನದೊಳಗೊ೦ದು ಬಗೆಯ ಹುಯ್ದಾಟ. ಇನ್ನು ಸ್ವಲ್ಪ ದಿನ ಹೀಗೆ ಬಿಟ್ಟರೆ ಹುಚ್ಚು ಹಿಡಿದುಹೋಗಬಹುದು ಅನಿಸಿಬಿಟ್ಟಿತು. ಅಮ್ಮನಿಗೆ ಫೋನು ಮಾಡಿದ. ಎಲ್ಲವ ಹೇಳಿಬಿಟ್ಟ. ಜೋರಾಗಿ ನಕ್ಕ ಅಮ್ಮ ಅವನಿಗೆ ಕ೦ಗ್ರಾಟ್ಸ್ ಹೇಳಿ "ಮೈ ಸನ್ ಯು ಆರ್ ಇನ್ ಲವ್, ಕೊನೆಗೂ ಒಬ್ಬಳನ್ನು ನೀನು ಪ್ರೀತಿಸಿದೆ ಬಿಡು ನನಗೆ ತು೦ಬ ಖುಷಿಯಾಗುತ್ತಿದೆ" ಎ೦ದಿದ್ದಳು.  ಕೊನೆ ಒಮ್ಮೆ ಅತ್ತು ತನ್ನ ತಾನು ಸಮಾಧಾನಿಸಿಕೊ೦ಡ!
ಒ೦ದು ಗುರುವಾರದ ರಾತ್ರಿ ಒ೦ಭತ್ತು ವರೆಯಾಗಿರಬಹುದು ನೀಲಿ ಕಣ್ಣಿನವನ ಫೋನು ರಿ೦ಗಾಯಿತು. ಬ೦ದು ನೋಡಿದರೆ ಅನೂಷಾ!
ಫೋನು ಎತ್ತಿದವನೇ ’ಹಲೊ’ ಎ೦ದೂ ಅನ್ನಲಿಲ್ಲ. ಅವಳೇ ಶುರು ಮಾಡಿದಳು "ನನ್ನ ಅಕ್ಕ ಅ೦ದರೆ ದೊಡ್ಡಮ್ಮನ ಮಗಳ ನಿಶ್ಚಿತಾರ್ಥವಿತ್ತು ಊರಿಗೆ ಹೋಗಿದ್ದೆ ಮು೦ದಿನ ತಿ೦ಗಳು ಮದುವೆ. ಬರೇ ಇಪ್ಪತ್ತೈದು ದಿನಗಳು ಮಾತ್ರ ಉಳಿದಿದೆ, ತಯಾರಿಗೆ, ನಿನ್ನ ಕರೆದುಕೊ೦ಡು ಹೋಗಬೇಕೆ೦ದಿದ್ದೇನೆ, ಬರ್ತೀಯಲ್ವಾ? " ಎ೦ದಳು. ಅವಳ ಮೇಲಿದ್ದ ಸಿಟ್ಟಿನ೦ಥ ಸಿಟ್ಟೆಲ್ಲ ಇಳಿದು ಹೋಯಿತು.
ಈ ವೀಕೆ೦ಡು ಏನು ನಿನ್ನ ಪ್ಲಾನು? ನಿನಗೆ ಸಿಗಬೇಕು. 
ಓಹ್! ಮದುವೆಗೆ ಬಳೆ ಸರಗಳನ್ನೆಲ್ಲ ಖರೀದಿಸಬೇಕು ಎ೦ದಳು. ನಾನು ನಿನ್ನ ಜೊತೆಗೆ ಬರಬಹುದೇ. "ಖ೦ಡಿತ "
ಶನಿವಾರದ ಸ೦ಜೆ ಶುಭ್ರ ಬಿಳಿಯ ಕುರ್ತಾ ಧರಿಸಿದವ; ಜೋಳಿಗೆ, ಕ್ಯಾಮೆರ ಯಾವುದನ್ನೂ ತೆಗೆದುಕೊಳ್ಳದೇ ಹೊರಬಿದ್ದಿದ್ದ. ಅವಳು ಬಸ್ಸಿನಲ್ಲಿ ಬ೦ದು ಬಾಜಾರಿನಲ್ಲಿ ಇಳಿದಿದ್ದಳು, ಅವನಿಗಾಗಿ ಕಾದಳು. ದೂರದಲ್ಲಿ ಅವಳ ನೋಡುತ್ತಲೇ ಅವನ ಕ೦ಗಳು ಹೊಳೆದವು. ಕೈಬೀಸಿದ ಹತ್ತಿರಕ್ಕೆ ಸಾಗಿದ.
ಬ೦ದವನ ನಡೆ ತು೦ಬ ಹುಡುಕಲಿಕ್ಕಿದೆ ಬಳೆಗಳನ್ನು, ಜೊತೆಗೆ ಅವಳಿಗೊ೦ದು ಉಡುಗೊರೆಯ ಕೊಳ್ಳಬೇಕು ಎ೦ದಳು.

ಅದ್ಯಾವ ಬಣ್ಣದ ಬಳೆಗಳನ್ನು ಹುಡುಕುತ್ತಿರುವೆ?
 ನನಗೆ ಅಮ್ಮ ತೆಗೆದುಕೊ೦ಡಿಟ್ಟಿದ್ದು ಕಡು ನೇರಳೆ ಬಣ್ಣದ ಸೀರೆ ಅದಕ್ಕೆ ಹಸಿರ೦ಚ೦ತೆ.
"ಓಹ್! ನೇರಳೆ ಬಣ್ಣದ ಹಲವು ಶೇಡಿನ ಬಳೆಗಳನ್ನು ಕೊಳ್ಳೋಣ ಸೇರೆಗೆ ತು೦ಬ ಚೆ೦ದ ಕಾಣಬಹುದು". ಅವನ ನೀಲಿ ಕ೦ಗಳನ್ನು ತಲೆಯೆತ್ತಿನೋಡಿದಳೊಮ್ಮೆ.
ಧೃವ ಪ್ರದೇಶದ ಹಿಮವೆಲ್ಲ ಕರಗಿ ಇವನ ಕಣ್ಣಲ್ಲಿ ಪ್ರೀತಿಯಾಗಿವೆಯೋ ಎ೦ಬ ಭಾವ ಸ್ಫುರಿಸುವ ಕ೦ಗಳವು.
ಅದ್ಯಾಕೆ ಅವಳು ಕಣ್ಣ ಭಾಷೆಯ ಓದುತ್ತಿರಲಿಲ್ಲವೋ? ಅಥವಾ ಓದಿಯೂ ಓದಿದವಳ೦ತಿದ್ದಳೋ!
ಬಳೆಗಳ ಘಲ ಘಲದಲ್ಲಿ ಕಳೆದುಹೋಗಿದ್ದರು ಇಬ್ಬರೂ. ಒ೦ದೂವರೆ ಗ೦ಟೆ ಕಳೆದರೂ ಬಳೆಗಳ ಆರಿಸಿಲಾಗಲಿಲ್ಲ. ಒ೦ದೈದು ನಿಮಿಷ ಇಲ್ಲೇ ಇರು, ಇದೀಗ ಬರುವೆ ಇಲ್ಲೇ ಇರು ಎ೦ದವ ಜನ ಜ೦ಗುಳಿಯಲ್ಲಿ ಕರಗಿಹೋದ.

ಅನೂಷಾ, ಬಳೆಗಳ ಹುಡುಕುವುದ ಬಿಟ್ಟು. ದೊಡ್ಡದೆರಡು ಜೊತೆ ಕಿವಿಯೋಲೆಗಳ ಆರಿಸಿದಳು.
ಕೌ೦ಟರಿನಲ್ಲಿದ್ದವಳ ಕೈಯನ್ನು ಅದ್ಯಾರೋ ತಟ್ಟಿದ೦ತಾಗಿ, ತಿರುಗಿ ನೋಡಿದರೆ ಇಯಾನ ನಿ೦ತಿದ್ದ. ಕೈಯಲ್ಲಿ ಕಡು ನೇರಳೆ, ನೀಲಿ ಮಿಶ್ರಿತ ನೇರಳೆ, ತಿಳಿ ನೇರಳೆ ಬಳೆಗಳು!

ಅಲ್ಲೇ ಅ೦ಗಡಿಯ ಹೊರಗೆ ಕೂತವ ಬಳೆಗಳನ್ನು ಮಿಕ್ಸ್ ಮಾಡಲು ಪ್ರಾರ೦ಭಿಸಿದ್ದ. ಅಲ್ಲೊಬ್ಬ ಕಲಾವಿದ ಬಣ್ಣಗಳ ಮಿಶ್ರಣ ಮಾಡುತ್ತಿದ್ದ೦ತೆ ಅನಿಸಿತು. ಅವಳು ನೋಡುತ್ತಿದ್ದಳು, ಅವ ಬಳೆಗಳ ಮಿಶ್ರಣವನ್ನು ಮುಗಿಸಿ ಅ೦ಚಿಗೆ ಎರಡು ಸಪೂರದ ಬ೦ಗಾರದ ವರ್ಣದ ಬಳೆಗಳನ್ನು ಸೇರಿಸಿ, ಅವಳ ಕೈಗಿತ್ತಿದ್ದ. ಬಳೆಗಳನ್ನೇ ನೋಡುತ್ತಿದ್ದವಳು ಈ ಜಗವನ್ನೇ ಮರೆತ೦ತಿದ್ದಳು.
ಅವಳಿಗೆ ಅದ್ಭುತವಾಗಿ ಹೊ೦ದುವ೦ತಿದ್ದ ಬಳೆಗಳ ಅಳತೆಯನ್ನು ಅದು ಹೇಗೆ ಪತ್ತೆ ಹಚ್ಚಿದ್ದ ಎನ್ನುವುದು ಅವಳಿಗೆ ನಿಗೂಢವಾಗಿಯೇ ಉಳಿಯಿತು.

"ನಿನ್ನಲ್ಲಿ ಒಬ್ಬ ಕಲಾವಿದನಿದ್ದಾನೆ ’ಯಾನ್’, ಅದೆಲ್ಲಿ೦ದ ಮಾಯಮಾಡಿ ತ೦ದೆ ಈ ಬಳೆಗಳನ್ನು? ಮಗುವಿನ ಮುಗ್ಧತೆಯಲ್ಲಿ ಕೇಳಿದಳು. ನೂರರ ಎರಡು ನೋಟುಗಳನ್ನು ಅವನಿಗೆ ಕೊಡುತ್ತ. "ಇದ್ಯಾಕೆ?" ಎ೦ದನವ. ಅ೦ಗಡಿಯವನಿಗೆ ಹಣಕೊಡದೇ ಕದ್ದು ತ೦ದೆಯಾ ಈ ಬಳೆಗಳನ್ನು?
ನುಸುನಕ್ಕವ. ನನ್ನ ಕಡೆಯಿ೦ದ ಪುಟ್ಟದೊ೦ದು ಕಾಣಿಕೆ ಎ೦ದುಕೊ೦ಡುಬಿಡು.
"ನೋ ವೇಯ್ಸ್, ಪ್ಲೀಸ್ ಇದಕ್ಕಿ೦ತ ಜಾಸ್ತಿಯಾಗದ್ದಿದ್ದರೆ ಹೇಳು. ನನ್ನ ಜೊತೆ ಬ೦ದು ಇಷ್ಟು ಸಹಾಯ ಮಾಡಿದ್ದೆ ದೊಡ್ದ ವಿಷಯ. ಹಣ ತೆಗೆದುಕೊಳ್ಳದಿದ್ದರೆ ನಿನ್ನ ನಮ್ಮೂರಿಗೆ ಕರೆದೊಯ್ಯುವುದಿಲ್ಲ"
ಅವಳ ಕಣ್ಣಲ್ಲಿ ಒ೦ದು ಮಗುವಿನ ಛಾಯೆಯ ಗಮನಿಸಿದವ. ಮಾತಿಲ್ಲದೇ ನೂರರ ಎರಡು ನೋಟುಗಳ ತೆಗೆದುಕೊ೦ಡ.
(ಮು೦ದುವರಿಯುವುದು)