Showing posts with label ಮಳೆ. Show all posts
Showing posts with label ಮಳೆ. Show all posts

Thursday, July 22, 2010

ಮಳೆಹನಿಗಳ ಜೊತೆಯಲಿ ....


ಭೂಮಿಯಲ್ಲಿನ ನೀರು ಆವಿಯಾಗಿ, ಮೋಡವಾಗಿ ವಿಶ್ವಪರ್ಯಟನೆ ಕೈಗೊಂಡು, ತಂಪು ಸಿಕ್ಕಾಗ ಮಳೆ ಹನಿಯಾಗಿ ಭೂಮಿಗೆ ಮರಳುತ್ತದೆ. ಇದೆಲ್ಲ school daysನಲ್ಲೆ ಗೊತ್ತಿದೆ ಅಂತೀರಾ ? ಇಲ್ಲಿ ನಾನು ಮಳೆಹನಿಗಳಿಗೆ ಭಾವನೆಯನ್ನು ಕೊಡಲು ಹೊರಟಿದ್ದೇನೆ . ನೋಡಿ ....

ಕೆಲವು ಮಳೆಹನಿಗಳು ಸಮುದ್ರ, ನದಿಗಳಲ್ಲೇ ಬಿದ್ದು ಅಖಂಡ ಜಲರಾಶಿಯಲ್ಲಿ ಒಂದಾಗುತ್ತದೆ. ಹನಿ ಹನಿ ಕೂಡಿ ಹಳ್ಳ ಎಂದು ಹೇಳುತ್ತವೆ.ಇನ್ನು ಕೆಲವು ಗುಡ್ಡ, ಬೆಟ್ಟ, ಮಳೆ ಕಾಡುಗಳ ನಡುವೆ ಬಿದ್ದು ಒಂದಾಗಿ ಜಲಪಾತವಾಗಿ ಧುಮ್ಮಿಕ್ಕುತ್ತವೆ. . ಇನ್ನೂ ಕೆಲವು ಮಣ್ಣಲ್ಲಿ ಇಂಗಿಹೋಗುವ ಮೊದಲು, ನಮ್ಮ-ನಿಮ್ಮ ಮನೆಯ ಅಂಗಳದ ಹೂಗಿಡಗಳ ಮೇಲೆ, ಎಲೆಗಳ ಮೇಲೆ ಬಿದ್ದು ನಲಿಯುತ್ತವೆ. ಒಣಗಲು ಹಾಕಿದ ಬಟ್ಟೆಯಮೇಲೆ ಬಿದ್ದು ಗೋಳು ಹೊಯ್ಸುತ್ತವೆ ಅಲ್ವಾ ? ಸೊಕ್ಕು ,ಮುಗ್ಧತೆ, ಅಸಹಾಯಕತೆ , ಅಟ್ಟಹಾಸ, ಅಸೂಯೆ, ಎಲ್ಲ ಭಾವಗಳನ್ನು ಹೊರಸೂಸುವ ಮಳೆಹನಿಗಳು ನನ್ನ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ ...!





ಇನ್ನೂ ಅರಳಬೇಕಿರುವ ಗುಲಾಬಿ ಮೊಗ್ಗಿನ ಮೇಲೆ ಮುಗುಮ್ಮಾಗಿ ಕುಳಿತು ಸುತ್ತಲಿನ ಜಗತ್ತನ್ನು ಕುತೂಹಲದಿಂದ ನೋಡುತ್ತಿರುವ ಪುಟ್ಟ ಮಳೆ ಹನಿ ಆರಿಹೊಯಿತೋ, ಮಣ್ಣು ಸೇರಿತೋ ನೋಡಿದವರಿಲ್ಲ. .!

ಗಿಡವೊಂದರ ಬಣ್ಣದ ಎಳೆಗಳ ಮೇಲೆ ಕುಳಿತಿರುವ ಮಳೆಹನಿಗಳು ಕಾಯುತ್ತಿರುವುದಾದರೂ ಯಾರನ್ನು ?
ಸುಂದರಿಯ ಮೂಗುತಿಯೋ ಇದು.? ಮಣ್ಣು ಸೇರಲು ಕಾತುರದಿಂದ ಕಾಯುತ್ತಿರುವ ಮಳೆಹನಿ ಬಾನಂಚಿನ ಉಲ್ಕೆಯಂತೆ ಜಾರಿ ಬೀಳಬಹುದು ..!

ಅದ್ಯಾವುದೋ ಹಕ್ಕಿಯ ಬಿದ್ದ ರೆಕ್ಕೆಯ ಮೇಲೆ ಬಿದ್ದಿರುವ ಅಸಹಾಯಕ ನೀರಹನಿ... ಇದರ ಗೋಳನ್ನು ಕೇಳುವವರಿಲ್ಲ ..!
ಹೂಗಳ ರಾಣಿ ತಾನೆಂದು ಬೀಗುವ, ಅದೀಗ ಬಿರಿದ ಗುಲಾಬಿ ಪಕಳೆಗಳ ಮಧ್ಯೆ ವಯ್ಯಾರ ತೋರುವ ಮಳೆಹನಿಗಳು..!
ಅಪ್ಸರೆಯೊಬ್ಬಳ ಮುತ್ತಿನ ಹಾರವೆಲ್ಲೋ ಹರಿದು ಮುತ್ತುಗಳೆಲ್ಲ ಚೆಲ್ಲಾಪಿಲ್ಲಿ ಆದಂತೆ ಕಾಣುವ ಕೆಸುವಿನ ಎಲೆಗಳ ಮೇಲೆ ಬಿದ್ದ ನೀರ ಹನಿಗಳು .! ನೀರಲ್ಲಿ ಮುಳುಗಿಸಿದರೆ ಒದ್ದೆಯಾಗದ ಕೆಸುವಿನ ಎಲೆಗಳಿಗೆ ಅದೇನೋ ಪ್ರೀತಿಯಂತೆ ಮಳೆಹನಿಗಳ ಮೇಲೆ ..!


ಹೋಳಿಹಬ್ಬದ ನೆನಪಾಗಿ ಮನೆಯಂಗಳದ ಚೆಂದದ ಬಣ್ಣದ ಕೆಸುವಿನ ಎಲೆಗಳ ಮೇಲೆ ಬಂದು ಬಿದ್ದ ಮಳೆಹನಿಗಳು ..!
ಪುಟ್ಟ ಪುಟ್ಟ ಎಳೆಗಳ ಮೇಲೆ ಹರಡಿರುವ, ಜಾರಿ ಬೀಳುವ ಭಯದಲ್ಲಿರುವ ಮಳೆಹನಿಗಳು ....!
ಮದುಮಗಳ ಬೈತಲೆಯ ಸಿಂಗರಿಸಲು ಹೊರಟ ಮಳೆಹನಿಗಳಿಗೆ ಹೊರಡುವ ತರಾತುರಿ ..!
ಹೂವಿನ ಕೇಸರಗಳ ಮೇಲೆ ಕುಳಿತು ಬೀಗುತ್ತಿರುವ ಮಳೆಹನಿಗಳು ...!
ನಾವೆಲ್ಲಾ ಮುಟ್ಟಿದೊಡನೆ ಮುನಿಯುವ ವಯ್ಯಾರಿಗೆ ಮಳೆಹನಿಗಳು ಮುಟ್ಟಿದರೆ ತೊಂದರೆ ಇಲ್ಲವಂತೆ ..!
ಭಯಂಕರವಾದ ತಪಸ್ಸಿಗೆ ಕುಳಿತಂತೆ ಕಾಣುವ ಮಳೆಹನಿ, ಪರಿಸರ ಮಾಲಿನ್ಯ ತಡೆಗಟ್ಟುವಂತೆ ವರ ಕೇಳಬಹುದೇ ದೇವರು ಪ್ರತ್ಯಕ್ಷನಾದರೆ ...!
ಸ್ಪಟಿಕದ ಹರಳುಗಳಂತೆ ಕಾಣುವ ಮಳೆಹನಿಗಳಿಗೆ ತಮ್ಮ ಬಿಂಬವ ನೋಡುವ ಆಸೆ ಆಗಿದೆಯಂತೆ ..!



ಮಳೆಹನಿಗಳು ಜೀವ ಜಾಲಕ್ಕೆ ಅಮೃತ ಬಿಂದುಗಳು. ದೈತ್ಯಾಕಾರದ ಆ ಕಪ್ಪು ಮೋಡಗಳು ಹೊತ್ತುತರುವ ಕೋಟಿ ಜಲಬಿಂದುಗಳಲ್ಲಿ ಕೇವಲ ಒಂದೇ ಒಂದು ಮಳೆಹನಿಗಾಗಿ ಎಲ್ಲೊ ಒಂದು ಚಾತಕ ಪಕ್ಷಿಯು ಕಾಯ್ದಿರುತ್ತದೆ, ಯಾವುದೋ ಒಂದು ಹೂವು ಆ ಮಳೆಹನಿಗಾಗಿ ತಲೆಬಾಗುತ್ತದೆ. ಭುವಿಯಲ್ಲಿ ಇಳಿಯುವ ಮಳೆಹನಿ ಸುತ್ತಲು ಹಸಿರಿನ ಚಾದರವನ್ನು ಹಾಸುತ್ತದೆ.
ಮಳೆಯಿಲ್ಲದೆ ಬಾಯಾರಿಕೆಯಿಂದ ಸಾಯುವ ಜೀವಗಳು ಅದೆಷ್ಟೋ ..... ಮನೆಯ ನಲ್ಲಿಯನ್ನು ತಿರುಗಿಸಿದೊಡನೆ ನೀರ ಹರಿವನ್ನು ಕಾಣುವ ನಾವು ನೀರನ್ನು ಅದೆಷ್ಟು ಪೋಲು ಮಾಡುತ್ತೇವೆ ಅಲ್ವಾ ?


Tuesday, July 20, 2010

ಬಾಲ್ಯದ ನೆನಪುಗಳ ಕೆದಕುವ ಮಳೆಹನಿಗಳು





ಮಂಗಳೂರಿನಿಂದ ಬಸ್ಸಿನಲ್ಲಿ ಬರುತ್ತಿದ್ದೆ.ಐದು ಗಂಟೆಯ ಪಯಣ.ಪಕ್ಕದ ಸೀಟಿನಲ್ಲಿ ಸಂಭಾವಿತ ಆಸಾಮಿ ಕೂತಿದ್ದರೆ ಅವರನ್ನು ಮಾತಿಗೆಳೆಯುವುದು ನನ್ನ ವಾಡಿಕೆ. ಅದಿಲ್ಲದಿದ್ದರೆ ಯಾವುದಾದರೂ ಪತ್ರಿಕೆಗೆ ಶರಣು ಹೋಗಿರುತ್ತೇನೆ (ಚಲಿಸುವ ಬಸ್ಸಿನಲ್ಲಿ ಓದಬಾರದೆ
ನ್ನುವುದು ಗೊತ್ತಿದೆ, ಆದರೂ ಕೆಲವೊಮ್ಮೆ ಅನಿವಾರ್ಯ).ಮಳೆ ಬಿಡದೆ ಸುರಿಯುತ್ತಿತ್ತು. ಪಕ್ಕದಲ್ಲೂ ಯಾರೂ ಇರಲಿಲ್ಲ. ಪತ್ರಿಕೆಯನ್ನು ಮಡಿಸಿ ಬ್ಯಾಗಿನೊಳಗೆ ಇಡುತ್ತಲೇ, ಕಿಟಕಿಯ ಗಾಜನ್ನು ಸರಿಸಿದೆ. ಅದೆಷ್ಟು ರಸಿಕ ಈ ಮಳೆರಾಯ .!ಚುಂಬಿಸುತ್ತಲೇ ಹಸಿರು ಸೀರೆಯನ್ನು ಉಡಿಸಿಬಿಡುತ್ತಾನೆ ಈ ಭೂಮಿಗೆ.ಎಂದು ಯೋಚಿಸುತ್ತಲೇ ಒಮ್ಮೆ ಬಾನತ್ತ ಕಣ್ಣು ಹಾಯಿಸಿದೆ. ಬಾನಲ್ಲಿ ಕಾರ್ಮೋಡಗಳ ಸಂತೆ, ಕೊಳ್ಳುವವರಿಲ್ಲದೆ ಮಳೆಯಾಗಿ ಸುರಿಯುತಿದೆ ಭೂಮಿಗೆ ಅನ್ನಿಸಿಬಿಟ್ಟಿತು. ಬಸ್ಸಿನ ಕಿಟಕಿಯ ಸರಳುಗಳಲ್ಲಿ ಮುತ್ತಿನಂತೆ ಪೋಣಿಸಿರುವ ಮಳೆಹನಿಗಳನ್ನು ಕಾಣುತ್ತಲೇ ಮನ್ಸಸ್ಸು ಜಾರಿದ್ದು ಬಾಲ್ಯದ ದಿನಗಳತ್ತ. ನೆನಪುಗಳ ಕೆಣಕೋ ತಾಕತ್ತಿರುವುದು ಈ ಮಳೆಹನಿಗಳಿಗೆ ಮಾತ್ರ ..!

ಬಾಲ್ಯದ ಮಳೆಗಾಲವೆಂದರೆ ಅಜ್ಜಿಯ ಮನೆ. ಅದೇನೋ ಅವಿನಾಭಾವ ಸಂಬಂಧ ಅವೆರಡಕ್ಕೆ. ನಾವು ಮಕ್ಕಳೆಲ್ಲ ಒಟ್ಟಿಗೆ ಸೇರುತ್ತಿದ್ದದ್ದು ಮಳೆಗಾಲದಲ್ಲೇ. ಅದೇನು ಮಜಾ ಆ ಮಳೆಗಾಲ. ಮೂಗಿನಲ್ಲಿ ಸಿಂಬಳ ಸೋರುತ್ತಿದ್ದರೂ ಮನೆಯಿಂದ ಕದ್ದು-ಮುಚ್ಚಿ ಪರಾರಿಯಾಗಿ, ಗದ್ದೆಯ ಪಕ್ಕದ ಅವಳೆ(ತೋಡು)ಯ ಹರಿವ ನೀರಲ್ಲಿ ಮೀನನ್ನು ಹಿಡಿಯಲು ನಮ್ಮ ವಾನರ ಸೇನೆ ಹೊರಡುತ್ತಿತ್ತು. ತಳದಲ್ಲಿ ತೂತಾದ ಪಾತ್ರೆಗಳೇ ನಮ್ಮ ಮೀನುಗಾರಿಕಾ ಬಲೆಗಳು !. ನಮ್ಮ ಬಾಲಂಗೋಚಿ ಕೆಂಬಣ್ಣದ ಒಂದು ಬೆಕ್ಕು. ಅದಕ್ಕೋ ಹಸಿ ಮೀನು ಮುಕ್ಕುವ ತರಾತುರಿ. ಗಂಟೆಗಟ್ಟಲೆ ಪ್ರಯಾಸಪಟ್ಟು, ಮೈಪೂರ್ತಿ ಒದ್ದೆಯಾಗಿ,ಅಜ್ಜನ ಹತ್ತಿರ ಬೈಸಿಕೊಂಡು, ಸಿಕ್ಕ ಚಳ್ಳೆ-ಪಿಳ್ಳೆ ಮೀನುಗಳನ್ನು ತಂದು ಮನೆಯ ಮುಂದೆ ಮೊದಲೇ ತಯಾರು ಮಾಡಿಟ್ಟ ಪ್ಲಾಸ್ಟಿಕ್ ಕೊಡದಲ್ಲಿ ಬಿಟ್ಟಾಗ ಸರಳ ಸುಂದರ aquarium ರೆಡಿ.ನಮಗೋಅದೇನೋ ಮಹತ್ಕಾರ್ಯ ಸಾಧಿಸಿದಂಥಹ ಹಮ್ಮು.

ಅವಳೆಯ ಮಧ್ಯದಲ್ಲೇ ಹರಿವ ನೀರನ್ನು ಕಲ್ಲುಗಳಿಂದ ಕಟ್ಟಿಹಾಕಿ ತಯಾರುಗೊಂಡ ಪುಟ್ಟ ಡ್ಯಾಮಿನಂಥ ಡ್ಯಾಮಿನಲ್ಲೇ ನನ್ನ ಅಜ್ಜಿ
ಪಾತ್ರೆಗಳನ್ನು ತೊಳೆಯುತ್ತಿದ್ದುದು. ಅಜ್ಜಿ ಪಾತ್ರೆತೊಳೆಯಲು ಬಂದಾಗಲೆಲ್ಲ ನಾನು ಪಕ್ಕದ ಬಟ್ಟೆ ಒಗೆಯುವ ಕಲ್ಲಿನ ಮೇಲೆ ಬಂದು ಕಾಲುಗಳನ್ನು ನೀರಿನಲ್ಲಿ ಬಿಟ್ಟು ಕೂರುತ್ತಿದ್ದೆ. ಕಾಲಿಗೆ ಮುತ್ತಿಕ್ಕುವ ಮೀನುಗಳು ಅದೇನೋ ಕಚಕುಳಿ.ಅಜ್ಜಿ ತೊಳೆದಿಟ್ಟ ಪಾತ್ರೆಗಳು ನನಗೆ ಹರಿಗೋಲು.ಸೌಟುಗಳು ಹರಿಗೋಲ ಹುಟ್ಟುಗಳು. ನಾವಿಕ ನಾನೇ ಅದೂ ದಡದಲ್ಲಿ !


ಚಿಕ್ಕಮ್ಮನನ್ನು ಕಾಡಿ ಬೇಡಿ ಮಾಡಿಸಿಕೊಂಡು ಬಿಟ್ಟ ಕಾಗದದ ದೋಣಿಗಳು. ಕೊನೆಗೆ ಕಾಗದದ ದೋಣಿಯನ್ನು ಸ್ವತಃ ಮಾಡಲು ಕಲಿತಾಗ, ಮೌಂಟ್ ಎವೆರೆಸ್ಟನ್ನು ಏರಿದ ಖುಷಿ. ಆ ಕಾಗದದ ದೋಣಿಯನ್ನು ಬಿಟ್ಟು ಹಾಕಿದ ಕೇಕೆ ಇನ್ನೂ ಕೇಳುತ್ತಿರುವ ಭ್ರಮೆ. ತಳ ಭಾರವಾಗಿ ದೋಣಿ ಮುಳುಗಿದಾಗ ಕಣ್ಣಂಚು ಒದ್ದೆಯಾದದ್ದು ಮಳೆಹನಿಯಿಂದಲೋ, ಕಣ್ಣೀರಿನಿಂದಲೋ ನೆನಪಿಲ್ಲ ..!

ಕೆರೆಯ ಪಕ್ಕದಲ್ಲಿದ್ದ ಲಿಂಬೆ ಹಣ್ಣಿನ ಗಿಡದಲ್ಲಿ ಬಂಗಾರದ ಬಣ್ಣದ ಲಿಂಬೆ ಹಣ್ಣುಗಳು, ಕೆರೆಯ ನೀರಲ್ಲಿ ತಮ್ಮ ಪ್ರತಿಬಿಂಬಕ್ಕೆ ತಾವೇ ನಾಚುತ್ತಿದ್ದವು. ಮಧ್ಯಾಹ್ನದ ಊಟಕ್ಕೆ ನೆಂಜಿಕೊಳ್ಳಲು ಅದರದ್ದೇ ಉಪ್ಪಿನಕಾಯಿ.

ಗದ್ದೆ ಹೂಡುತ್ತಿದ್ದ ಕಟ್ಟುಮಸ್ತಾದ ಆಳು 'ಗಣಪು'. ಅವನ ಬಾಲ ನಾನು.! ಬೇಡ ಎಂದರೂ ಕೇಳದೆ ನೇಗಿಲು ಹಿಡಿದು ನಾನೇ ದೊಡ್ಡ ರೈತನಂತೆ ಪೋಸು ಕೊಡುತ್ತಿದ್ದೆ. ಗದ್ದೆಯ ಕೆಸರರಾಟ ಮುಗಿದು ಮನೆಗೆ ಬಂದು ಅಜ್ಜಿ ಬಿಸಿನೀರ ಸ್ನಾನ ಮಾಡಿಸುವಾಗ ನನ್ನ ಕಾಲಲ್ಲಿ ಒಂದೇ ಗೆಜ್ಜೆ ..!


ಹೊರಗಿನ ಮುಸುರೆ ಒಲೆಯಲ್ಲಿ ಸುಟ್ಟ ಹಲಸಿನ ಹಪ್ಪಳ, ಕೊರ್ಸಗಾಯಿ, ಜೀರಿಗೆ ಅಪ್ಪೆಮಿಡಿ ಉಪ್ಪಿನಕಾಯಿ, ಕುಚ್ಚಲಕ್ಕಿಗೆ ಒಂದಿಷ್ಟು ಮೊಸರು ಇವಿಷ್ಟಿದ್ದರೆ ಅದು ಮೃಷ್ಟಾನ್ನ ಭೋಜನ. ಊಟದ ನಂತರ ಮಾವಿನ ಹಣ್ಣಿನ ಹಪ್ಪಳ. ಈಗಿನ ಯಾವ multi star ಹೋಟೆಲಿನಲ್ಲಿಯೂ ಸಿಗದು ಇಂಥ ಊಟ.

ಹೀಗೆ ಮೆರವಣಿಗೆ ಹೊರಟ ನೆನಪುಗಳ ನಡುವೆಯೇ ಕುಮಟಾ ಬಂದಿತ್ತು.ಮನೆಗೆ ಬಂದ ಮಾರನೆ ದಿನವೇ ಅಜ್ಜಿಯ ಮನೆಗೆ ಹೋಗಿದ್ದೆ. ನಿನ್ನೆ ನೆನಪಾದದ್ದೆಲ್ಲವನ್ನು ಕಣ್ಣು ತುಂಬಿಸಿಕೊಳ್ಳುವ ಹಂಬಲದಿಂದ. ನೋಡಿದರೆ ..ನೀರು ಹರಿಯುತ್ತಿದ್ದ ತೋಡಿನ ಅವಶೇಷ ಮಾತ್ರ ಉಳಿದಿದೆ. ಗದ್ದೆ ಊಳುವವರಿಲ್ಲದೆ ಬರಡಾಗಿದೆ. ಲಿಂಬೆ ಹಣ್ಣಿನ ಗಿಡವಿದ್ದ ಜಾಗದಲ್ಲಿ ಕೆಸುಗಳ ಸಾಮ್ರಾಜ್ಯ.
ಕೆರೆಯು ಹೂಳು ತುಂಬಿಕೊಂಡು ಕಮಲದ ಹೂಗಳ ತಾಣವಾಗಿದೆ.


ಮನಸ್ಸಿಗೆ ಅದೇನೋ ಕಸಿವಿಸಿ, ಕಳವಳ. ಕಣ್ಣಂಚು ಒದ್ದೊದ್ದೆ ಈ ಬಾರಿ ಮಳೆಹನಿಯಿಂದಂತೂ ಅಲ್ಲವೇ ಅಲ್ಲ..! ಅಷ್ಟರಲ್ಲಿ ಅಜ್ಜಿ ಕರೆದದ್ದು ಕೇಳಿಸಿತು "ಊಟಕ್ಕೆ ಬಾರೆ ..ಹೊತ್ತಾತು ಮಳೆ ಬೇರೆ ಸುರೀತಿದ್ದು ." ಕಣ್ಣೊರೆಸುತ್ತಲೇ ಕೈಕಾಲು ತೊಳೆಯಲು ನಡೆದೆ. ಮುಸುರೆ ಒಲೆಯಿಂದ ಹಲಸಿನ ಹಪ್ಪಳ ಸುಟ್ಟ ವಾಸನೆ ಬರುತ್ತಿತ್ತು. ಆಗ ತಿಳಿಯಿತು ಹಸಿವೆ ಆದದ್ದು..! ಕುಚ್ಚಲಕ್ಕಿ ಅನ್ನ, ಮೊಸರು, ಉಪ್ಪಿನಕಾಯಿ, ಹಲಸಿನ ಹಪ್ಪಳ ನನ್ನನ್ನೇ ಕಾಯುತ್ತ ಕುಳಿತಿದ್ದವು. ಜೊತೆಗೆ ಅಜ್ಜಿ- ಅಜ್ಜ ಕೂಡ..!




Saturday, May 22, 2010

ಕಾಡಿಸಿತ್ತು ಬೇಸಿಗೆ ಮಳೆ ...




ಮೊನ್ನೆ ಇಡೀ, ಏಕತಾನತೆಯಿಂದ ಎಲ್ಲೋ ಕಳೆದು ಹೋಗಿದ್ದೇನೆ ಅನಿಸುತ್ತಿತ್ತು ನನಗೆ . ಒಂದು ಮಳೆಯಾದರೂ ಬರಬಾರದೇ . ಭೂಮಿ, ವಾತಾವರಣ, ಕೊನೆಗೆ ಮನಸ್ಸು, ಎಲ್ಲ ಒಮ್ಮೆ ತಂಪಾಗಬಾರದೆ ಎಂದುಕೊಳ್ಳುತ್ತಿದ್ದೆ .
ಬೇಸಿಗೆ ಮಳೆಯ ಮಜವೇ ಬೇರೆ. ಹಗಲಿನಲ್ಲಿ ಸೂರ್ಯನ ಶಾಖಕ್ಕೆ ಕಾದ ಭೂಮಿಗೆ, ಮಳೆಯ ಸಿಂಚನವಾದೊಡನೆ, ಪ್ರಕೃತಿಯಲ್ಲೆಲ್ಲ ಘಮ ಘಮ. ಮಣ್ಣ ಕಂಪು, ಮಳೆಯ ತಂಪುಗಳ wonderful combination.! ಆಗ ಕೈಯಲ್ಲೊಂದು icecream ಇದ್ದರಂತೂ ಅದೇ ಸ್ವರ್ಗ. ಅಂತದ್ದೇ ಒಂದು ಮಳೆಗೆ, ಒಂದು ಕಾಮನಬಿಲ್ಲಿಗೆ ಮನಸು ಕಾದಿತ್ತು.
ನನ್ನ ತಳಮಳ ಅರ್ಥವಾಗಿರಬೇಕು ಮೇಘ ರಾಜನಿಗೆ . ಪೂರ್ವ ದಿಕ್ಕಿನಲ್ಲಿ ಮೇಘ ಸಂದೇಶ, ಕಾಳಿದಾಸನ ಮೇಘದೂತ ಮನದ ಪಟದಲ್ಲಿ ಹಾದು ಹೋಗಿದ್ದ . ಸಂಜೆ ೬-೭ರ ಸುಮಾರಿಗೆ ಮಳೆ ಸುರಿಯಬಹುದೆಂದು ಎಣಿಸಿದ್ದೆ, ಬರಲೇ ಇಲ್ಲ ಮಳೆ. ಮಳೆ ಕಾಡಿತ್ತು , ಕಂಗೆಡಿಸಿತ್ತು.
ರಾತ್ರಿಯ ಊಟ ಮುಗಿಸಿ ರೂಮಿಗೆ ಬರುವಾಗಲೇ ಮಿಂಚುತ್ತಿತ್ತು ಬಾನು. 'ಆಂಟೀ ಮಳೆ ಬಂದ್ರೆ ಸಾಕು' ಎಂದು PG ಆಂಟೀ ಹತ್ರ ಹೇಳಿ, ರೂಮಿಗೆ ನಡೆದಿದ್ದೆ. ರಾತ್ರಿ ಕರೆಂಟು ಕೈ ಕೊಟ್ಟಾಗಲೇ ನನಗೆ ಎಚ್ಚರವಾದದ್ದು . ನನ್ನ ರೂಮಿನಲ್ಲಿದ್ದ ಕತ್ತೆಲೆಗೆ ಸೆಡ್ಡು ಹೊಡೆಯುತ್ತಿದ್ದ ಮಿಂಚು ಬಳ್ಳಿಗಳು. ಪಕ್ಕದ ಗುಡ್ಡಗಳಿಗೆ ಬಡಿದು ಪ್ರತಿಧ್ವನಿಸಿ ನನ್ನ ರೂಮಿನಲ್ಲೇ ಕೊನೆಯಾದಂತೆ ಭಾಸವಾಗುವ ಗುಡುಗು.ತರಗೆಲೆಗಳ ಶಬ್ದದೊಂದಿಗೆ ಬೀಸುತ್ತಿದ್ದ ಗಾಳಿ. ಹಾಗೆ ಪಟ ಪಟನೆ ಮಳೆ ಹನಿಗಳು ಬೀಳತೊಡಗಿದವು. ಮಳೆ ಭೋರೆಂದು ಸುರಿಯ ತೊಡಗಿತು. ಬಿಟ್ಟು ಹೋದ ಹುಡುಗನನ್ನು ನೆನೆದು ಅಳುತ್ತಿದ್ದ ಹುಡುಗಿಯಂತೆ ರೋಧಿಸುತ್ತಿತ್ತು ಬಾನು.
ಹೊರಗಡೆ ಮಳೆ ಹನಿಯ ಅದೇ ಚಟಪಟ..ನನ್ನ ರೂಮಿನ ಹೊರಗೆ ಹಾಕಿರುವ ನೀಲಿ ಬಣ್ಣದ ತಾಡಪತ್ರೆಯ (plastic sheet) ಮೇಲೆ. ಪಕ್ಕದ ಮನೆಯ ಹಲವು ಮಳೆಗಾಲಗಳನ್ನು ಕಂಡಿರುವ ಅರೆ ಕಪ್ಪು ಬಣ್ಣದ ಹೆಂಚುಗಳ ಮೇಲೆ,ಎದುರಿಗಿರುವ ಹಳದಿ ಗುಲ್ ಮೊಹರ್ ಗಿಡದ ಮೇಲೆ, ಕೆಸುವಿನ ಎಳೆಗಳ ಮೇಲೆ , ಅಂಗಳಕ್ಕೆ ಹಾಸಿರುವ ಕಲ್ಲಿನ ಮೇಲೆ ಬೀಳುವ ಮಳೆಹನಿಗಳ ಸದ್ದು ಬೇರೆ ಬೇರೆ ಇದ್ದಂತ ಭಾವ,ನನ್ನದೇ ಕಲ್ಪನೆಯ ಲೋಕ.
ಮನೆ,ಅಮ್ಮ ಎಲ್ಲವೂ ನೆನಪಾಗಿದ್ದವು. ನನ್ನ ಪುಟ್ಟ ರೂಮಿನ, ಪುಟ್ಟ ಮಂಚದ ಮೂಲೆಯಲ್ಲಿ ಅಮ್ಮನ ನೈಟಿಯನ್ನು ಹಿಡಿದು ಮುದುರಿ ಕುಳಿತಿದ್ದೆ. ಮಳೆಯ ಚಟಪಟಕ್ಕೆ ಮನದಲ್ಲಿ ನೆನಪುಗಳ ಜಾತ್ರೆ . ಜಾತ್ರೆಯಲ್ಲಿ ಇರುವವರು ಯಾರು ಎಂದು ಪತ್ತೆ ಹಚ್ಚುವುದರ ಒಳಗೆ ಬಂದ ಕರೆಂಟು, ಕಟ ಕಟ ಸದ್ದಿನೊಂದಿಗೆ ತಿರುಗಲು ಶುರುವಿಟ್ಟುಕೊಂಡ ಫ್ಯಾನು.ನೆನಪುಗಳ ಸರೋವರದಲ್ಲಿ ಯಾರೋ ಕಲ್ಲೆಸೆದ ಭಾವನೆ. ಮನದಲ್ಲೇನೋ ಕಸಿವಿಸಿ. ನೆನಪುಗಳ ಪ್ರವಾಹಕ್ಕೆ ತಡೆಯೊಡ್ಡಿ ಕಿಟಕಿ ತೆರೆದೆ...
ಕಾದ ಮಣ್ಣಿನಲ್ಲಿ ಮಳೆಹನಿ ಇಳಿವ ಭರಕ್ಕೆ ಎದ್ದ ಮಣ್ಣ ಕಂಪು. ಆ ಕಂಪಿಗೆ ಸಣ್ಣಕೆ ರೋಮಾಂಚಿತಗೊಂಡಿತ್ತು ಮನಸು. ಕಿಟಕಿಯಿಂದಲೇ ಮಳೆಹನಿಯನ್ನು ಹಿಡಿಯುವ ಪುಟ್ಟ ಪ್ರಯತ್ನವನ್ನೂ ಮಾಡಿದ್ದೆ. ಆಗಲೇ ನೆನಪಾಗಿತ್ತು. ಅಮ್ಮ ಜೋರು ಮಳೆ ಸುರಿಯುತ್ತಿರುವಾಗ ದೋಸೆ ಎರೆಯುತ್ತ, ಅಥವಾ ಮಳೆಗಾಲದಲ್ಲಿ ಕರೆಂಟು ಕೈಕೊಟ್ಟಾಗ ತನ್ಮಯಳಾಗಿ ಹಾಡುತ್ತಿದ್ದ ಮಳೆ ಹಾಡು. ಕವಿ ಸಿದ್ದಯ್ಯ ಪುರಾಣಿಕರು ಬರೆದ ಭಾವಗೀತೆಗೆ ಅಮ್ಮ ಜೀವ ತುಂಬಿ ಹಾಡುತ್ತಾಳೆ. ಆ ಕವನದ ಸಾಲುಗಳು ಹೀಗಿವೆ. :
ಮೋಡಗಳ ಜಡೆಬಿಚ್ಚಿ ಮೈದೊಳೆದುಕೊಳುತಿಹಳು
ಬಯಲ ಭಾಮಿನಿ ಜಗದ ಮಣೆಯ ಮೇಲೆ
ಕೇಶರಾಶಿಯ ನೀರು ತೊಟ್ಟಿಕ್ಕಿ ಸುರಿಯುತಿದೆ
ಇದಕೆ ಜನವೆನ್ನುವುದು ಮಳೆಯ ಲೀಲೆ
ಮಳೆಯ ಹನಿ ಮಧು ನೆಲಕೆ ಈ ಜಗದ ಮೃತ್ತಿಕೆಯ
ಕಣಕಣವು ಮಧುವ್ರತವು ಸೃಷ್ಟಿಯೆಂಬ
ಹುಟ್ಟಿನಲಿ ಶೇಖರಿತವಾಗುತಿದೆ ಮಧುಕೋಶ
ಮಾಧುರ್ಯ ಪಸರಿಸಿದೆ ತಿರೆಯ ತುಂಬ
ಹುಲ್ಲ ಹಾಸಿನ ಮೇಲೆ ಮಳೆವನಿಯ ಸೇಸೆಯಿದು
ಯಾರ ಪರಿಣಯಕಾಗಿ ? ಹೇಳು ಕವಿಯೇ!
ಆಗಸದ ಹಂದರಕೆ ಮಳೆಯ ಮುತ್ತಿನ ಸರವು
ಆಗಿಹುದು ಮದುವೆಮನೆ ಬುವಿಗೆ ಬುವಿಯೇ
ನೆಲಮುಗಿಲನಪ್ಪಿದುದೋ ಮುಗಿಲೆ ನೆಲನಪ್ಪಿದುದೋ
ಮಳೆಯಲ್ಲಿ ಬದಲಾಯ್ತು ಬಯಲಿನಂತರವು ;
ಎಲ್ಲ ನೆಲ ಎಲ್ಲ ಜಲ, ಎಲ್ಲ ಅಂಬರ ತಲವು
ನೆಲ ಮುಗಿಲು ಬಯಲೆಂಬ ಭೇದ ಆವಾಂತರವು
ಜಗದ ಪೀಠದ, ಬಯಲ ಗೋಲಕದ ಮಿಂಚುಗಳ
ಪಂಚ ಸೂತ್ರದ ಲಿಂಗ-ಮಳೆಯ ಅಭಿಷೇಕ !
ನೀರಲ್ಲ ಇದು ತೀರ್ಥ, ವಿಶ್ವ ಲಿಂಗೋದಕವು
ಆಗಲಿನ್ನಾದರೂ ನರಕ ನಾಕ .
ಅರ್ಥ ಪೂರ್ಣ ಕವನ ಅಲ್ವಾ ? ಕವಿಯ ಕಲ್ಪನೆಗೊಮ್ಮೆ hats off ಎಂದಿದ್ದೆ . ಇದೇ ಹಾಡು ಗುಮ್ಮನಂತೆ ಕಾಡಿತ್ತು .ಫೋನ್ ಮಾಡಿ ಅಮ್ಮನನ್ನು ಹಾಡೆಂದು ಕೇಳಲು ಗಂಟೆ ೧೨.೪೫ .! ಅದೇ ಹಾಡು ಗುಯ್ಯ್ ಗುಡುತ್ತಿತ್ತು ಕಿವಿಯಲ್ಲಿ . ಹಾಗೆ ಮುಸುಕೆಳೆದು ಮಲಗಿದ್ದೆ. ಭರ್ರ್ಎಂದು ತಿರುಗುತ್ತಿದ್ದ ಫ್ಯಾನ್ ಸದ್ದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಓದುತ್ತಿದ್ದ ವಾಹನಗಳ ಸದ್ದಿಗೆ ಮಳೆಯ ಚಟಪಟ ಅಡಗಿಕೊಂಡಿತ್ತು. ಅರೆ ಮಂಪರು... ಕಿವಿಯಲ್ಲಿ ಯಾರೋ ಅದೇ ಹಾಡನ್ನು ಗುನುಗಿದಂತೆ. ಹಾಗೆ ನಿದ್ದೆ ಹೋಗಿದ್ದೆ .
ಬೆಳಿಗ್ಗೆ ಎಚ್ಚರವಾದಾಗ ಭರ್ತಿ ೭ ಗಂಟೆ. ದಡಬಡಿಸಿ ಎದ್ದಿದ್ದೆ ,.. ಬಾಗಿಲು ತೆರೆಯುತ್ತಿದ್ದಂತೆ ನಗು ಚೆಲ್ಲಿದ ಬೆಳಕು .ಹಾಗೆ ಬರಿಗಾಲಲ್ಲೇ ಗುಲ್ ಮೊಹರ್ ಗಿಡದತ್ತ ಓಡಿದ್ದೆ . ತಂಗಾಳಿ ಹೊಂಬೆಳಕುಗಳ ಸುಂದರ ಸಮಾಗಮ. ಗಿಡದಲ್ಲಿ ಕೂತಿದ್ದ ಮಿಂಚುಳ್ಳಿಯೊಂದು ನನ್ನ ನೋಡುತ್ತಲೇ ಹಾರಿತ್ತು.ಗುಲ್ಮೊಹರ ಗಿಡದಿಂದ ಹೂ-ಮಳೆಹನಿ ಎರಡೂ ನನ್ನ ಮೇಲೆ ಉದುರುತ್ತಿತ್ತು . ಮನಸ್ಸಿಗೆ ಅದೇನೋ ಅವ್ಯಕ್ತ ಆನಂದ.. ನನಗೆ ಅರಿವಿಲ್ಲದಂತೆ ಗುನುಗುತ್ತಿದ್ದೆ 'ಮುಂಜಾವಿನಲಿ ತುಂತುರಿನ ಸೋನೆ ಮಳೆ ..'
ಬೇಸಿಗೆಯ ಒಂದು ಮಳೆ ಅದೆಷ್ಟು ಅಪ್ಯಾಯಮಾನ. ಮನೆಯ ನೆನಪನ್ನು ಗುಮ್ಮನಂತೆ ಕಾಡಿಸಿ. ಬೆಳಿಗ್ಗೆ ಹೊಸ ಜಗತ್ತನ್ನು ತೋರಿಸಿದ ಮಳೆಗೆ ಮನದಲ್ಲೇ thanks ಎಂದಿದ್ದೆ