Saturday, May 22, 2010

ಕಾಡಿಸಿತ್ತು ಬೇಸಿಗೆ ಮಳೆ ...




ಮೊನ್ನೆ ಇಡೀ, ಏಕತಾನತೆಯಿಂದ ಎಲ್ಲೋ ಕಳೆದು ಹೋಗಿದ್ದೇನೆ ಅನಿಸುತ್ತಿತ್ತು ನನಗೆ . ಒಂದು ಮಳೆಯಾದರೂ ಬರಬಾರದೇ . ಭೂಮಿ, ವಾತಾವರಣ, ಕೊನೆಗೆ ಮನಸ್ಸು, ಎಲ್ಲ ಒಮ್ಮೆ ತಂಪಾಗಬಾರದೆ ಎಂದುಕೊಳ್ಳುತ್ತಿದ್ದೆ .
ಬೇಸಿಗೆ ಮಳೆಯ ಮಜವೇ ಬೇರೆ. ಹಗಲಿನಲ್ಲಿ ಸೂರ್ಯನ ಶಾಖಕ್ಕೆ ಕಾದ ಭೂಮಿಗೆ, ಮಳೆಯ ಸಿಂಚನವಾದೊಡನೆ, ಪ್ರಕೃತಿಯಲ್ಲೆಲ್ಲ ಘಮ ಘಮ. ಮಣ್ಣ ಕಂಪು, ಮಳೆಯ ತಂಪುಗಳ wonderful combination.! ಆಗ ಕೈಯಲ್ಲೊಂದು icecream ಇದ್ದರಂತೂ ಅದೇ ಸ್ವರ್ಗ. ಅಂತದ್ದೇ ಒಂದು ಮಳೆಗೆ, ಒಂದು ಕಾಮನಬಿಲ್ಲಿಗೆ ಮನಸು ಕಾದಿತ್ತು.
ನನ್ನ ತಳಮಳ ಅರ್ಥವಾಗಿರಬೇಕು ಮೇಘ ರಾಜನಿಗೆ . ಪೂರ್ವ ದಿಕ್ಕಿನಲ್ಲಿ ಮೇಘ ಸಂದೇಶ, ಕಾಳಿದಾಸನ ಮೇಘದೂತ ಮನದ ಪಟದಲ್ಲಿ ಹಾದು ಹೋಗಿದ್ದ . ಸಂಜೆ ೬-೭ರ ಸುಮಾರಿಗೆ ಮಳೆ ಸುರಿಯಬಹುದೆಂದು ಎಣಿಸಿದ್ದೆ, ಬರಲೇ ಇಲ್ಲ ಮಳೆ. ಮಳೆ ಕಾಡಿತ್ತು , ಕಂಗೆಡಿಸಿತ್ತು.
ರಾತ್ರಿಯ ಊಟ ಮುಗಿಸಿ ರೂಮಿಗೆ ಬರುವಾಗಲೇ ಮಿಂಚುತ್ತಿತ್ತು ಬಾನು. 'ಆಂಟೀ ಮಳೆ ಬಂದ್ರೆ ಸಾಕು' ಎಂದು PG ಆಂಟೀ ಹತ್ರ ಹೇಳಿ, ರೂಮಿಗೆ ನಡೆದಿದ್ದೆ. ರಾತ್ರಿ ಕರೆಂಟು ಕೈ ಕೊಟ್ಟಾಗಲೇ ನನಗೆ ಎಚ್ಚರವಾದದ್ದು . ನನ್ನ ರೂಮಿನಲ್ಲಿದ್ದ ಕತ್ತೆಲೆಗೆ ಸೆಡ್ಡು ಹೊಡೆಯುತ್ತಿದ್ದ ಮಿಂಚು ಬಳ್ಳಿಗಳು. ಪಕ್ಕದ ಗುಡ್ಡಗಳಿಗೆ ಬಡಿದು ಪ್ರತಿಧ್ವನಿಸಿ ನನ್ನ ರೂಮಿನಲ್ಲೇ ಕೊನೆಯಾದಂತೆ ಭಾಸವಾಗುವ ಗುಡುಗು.ತರಗೆಲೆಗಳ ಶಬ್ದದೊಂದಿಗೆ ಬೀಸುತ್ತಿದ್ದ ಗಾಳಿ. ಹಾಗೆ ಪಟ ಪಟನೆ ಮಳೆ ಹನಿಗಳು ಬೀಳತೊಡಗಿದವು. ಮಳೆ ಭೋರೆಂದು ಸುರಿಯ ತೊಡಗಿತು. ಬಿಟ್ಟು ಹೋದ ಹುಡುಗನನ್ನು ನೆನೆದು ಅಳುತ್ತಿದ್ದ ಹುಡುಗಿಯಂತೆ ರೋಧಿಸುತ್ತಿತ್ತು ಬಾನು.
ಹೊರಗಡೆ ಮಳೆ ಹನಿಯ ಅದೇ ಚಟಪಟ..ನನ್ನ ರೂಮಿನ ಹೊರಗೆ ಹಾಕಿರುವ ನೀಲಿ ಬಣ್ಣದ ತಾಡಪತ್ರೆಯ (plastic sheet) ಮೇಲೆ. ಪಕ್ಕದ ಮನೆಯ ಹಲವು ಮಳೆಗಾಲಗಳನ್ನು ಕಂಡಿರುವ ಅರೆ ಕಪ್ಪು ಬಣ್ಣದ ಹೆಂಚುಗಳ ಮೇಲೆ,ಎದುರಿಗಿರುವ ಹಳದಿ ಗುಲ್ ಮೊಹರ್ ಗಿಡದ ಮೇಲೆ, ಕೆಸುವಿನ ಎಳೆಗಳ ಮೇಲೆ , ಅಂಗಳಕ್ಕೆ ಹಾಸಿರುವ ಕಲ್ಲಿನ ಮೇಲೆ ಬೀಳುವ ಮಳೆಹನಿಗಳ ಸದ್ದು ಬೇರೆ ಬೇರೆ ಇದ್ದಂತ ಭಾವ,ನನ್ನದೇ ಕಲ್ಪನೆಯ ಲೋಕ.
ಮನೆ,ಅಮ್ಮ ಎಲ್ಲವೂ ನೆನಪಾಗಿದ್ದವು. ನನ್ನ ಪುಟ್ಟ ರೂಮಿನ, ಪುಟ್ಟ ಮಂಚದ ಮೂಲೆಯಲ್ಲಿ ಅಮ್ಮನ ನೈಟಿಯನ್ನು ಹಿಡಿದು ಮುದುರಿ ಕುಳಿತಿದ್ದೆ. ಮಳೆಯ ಚಟಪಟಕ್ಕೆ ಮನದಲ್ಲಿ ನೆನಪುಗಳ ಜಾತ್ರೆ . ಜಾತ್ರೆಯಲ್ಲಿ ಇರುವವರು ಯಾರು ಎಂದು ಪತ್ತೆ ಹಚ್ಚುವುದರ ಒಳಗೆ ಬಂದ ಕರೆಂಟು, ಕಟ ಕಟ ಸದ್ದಿನೊಂದಿಗೆ ತಿರುಗಲು ಶುರುವಿಟ್ಟುಕೊಂಡ ಫ್ಯಾನು.ನೆನಪುಗಳ ಸರೋವರದಲ್ಲಿ ಯಾರೋ ಕಲ್ಲೆಸೆದ ಭಾವನೆ. ಮನದಲ್ಲೇನೋ ಕಸಿವಿಸಿ. ನೆನಪುಗಳ ಪ್ರವಾಹಕ್ಕೆ ತಡೆಯೊಡ್ಡಿ ಕಿಟಕಿ ತೆರೆದೆ...
ಕಾದ ಮಣ್ಣಿನಲ್ಲಿ ಮಳೆಹನಿ ಇಳಿವ ಭರಕ್ಕೆ ಎದ್ದ ಮಣ್ಣ ಕಂಪು. ಆ ಕಂಪಿಗೆ ಸಣ್ಣಕೆ ರೋಮಾಂಚಿತಗೊಂಡಿತ್ತು ಮನಸು. ಕಿಟಕಿಯಿಂದಲೇ ಮಳೆಹನಿಯನ್ನು ಹಿಡಿಯುವ ಪುಟ್ಟ ಪ್ರಯತ್ನವನ್ನೂ ಮಾಡಿದ್ದೆ. ಆಗಲೇ ನೆನಪಾಗಿತ್ತು. ಅಮ್ಮ ಜೋರು ಮಳೆ ಸುರಿಯುತ್ತಿರುವಾಗ ದೋಸೆ ಎರೆಯುತ್ತ, ಅಥವಾ ಮಳೆಗಾಲದಲ್ಲಿ ಕರೆಂಟು ಕೈಕೊಟ್ಟಾಗ ತನ್ಮಯಳಾಗಿ ಹಾಡುತ್ತಿದ್ದ ಮಳೆ ಹಾಡು. ಕವಿ ಸಿದ್ದಯ್ಯ ಪುರಾಣಿಕರು ಬರೆದ ಭಾವಗೀತೆಗೆ ಅಮ್ಮ ಜೀವ ತುಂಬಿ ಹಾಡುತ್ತಾಳೆ. ಆ ಕವನದ ಸಾಲುಗಳು ಹೀಗಿವೆ. :
ಮೋಡಗಳ ಜಡೆಬಿಚ್ಚಿ ಮೈದೊಳೆದುಕೊಳುತಿಹಳು
ಬಯಲ ಭಾಮಿನಿ ಜಗದ ಮಣೆಯ ಮೇಲೆ
ಕೇಶರಾಶಿಯ ನೀರು ತೊಟ್ಟಿಕ್ಕಿ ಸುರಿಯುತಿದೆ
ಇದಕೆ ಜನವೆನ್ನುವುದು ಮಳೆಯ ಲೀಲೆ
ಮಳೆಯ ಹನಿ ಮಧು ನೆಲಕೆ ಈ ಜಗದ ಮೃತ್ತಿಕೆಯ
ಕಣಕಣವು ಮಧುವ್ರತವು ಸೃಷ್ಟಿಯೆಂಬ
ಹುಟ್ಟಿನಲಿ ಶೇಖರಿತವಾಗುತಿದೆ ಮಧುಕೋಶ
ಮಾಧುರ್ಯ ಪಸರಿಸಿದೆ ತಿರೆಯ ತುಂಬ
ಹುಲ್ಲ ಹಾಸಿನ ಮೇಲೆ ಮಳೆವನಿಯ ಸೇಸೆಯಿದು
ಯಾರ ಪರಿಣಯಕಾಗಿ ? ಹೇಳು ಕವಿಯೇ!
ಆಗಸದ ಹಂದರಕೆ ಮಳೆಯ ಮುತ್ತಿನ ಸರವು
ಆಗಿಹುದು ಮದುವೆಮನೆ ಬುವಿಗೆ ಬುವಿಯೇ
ನೆಲಮುಗಿಲನಪ್ಪಿದುದೋ ಮುಗಿಲೆ ನೆಲನಪ್ಪಿದುದೋ
ಮಳೆಯಲ್ಲಿ ಬದಲಾಯ್ತು ಬಯಲಿನಂತರವು ;
ಎಲ್ಲ ನೆಲ ಎಲ್ಲ ಜಲ, ಎಲ್ಲ ಅಂಬರ ತಲವು
ನೆಲ ಮುಗಿಲು ಬಯಲೆಂಬ ಭೇದ ಆವಾಂತರವು
ಜಗದ ಪೀಠದ, ಬಯಲ ಗೋಲಕದ ಮಿಂಚುಗಳ
ಪಂಚ ಸೂತ್ರದ ಲಿಂಗ-ಮಳೆಯ ಅಭಿಷೇಕ !
ನೀರಲ್ಲ ಇದು ತೀರ್ಥ, ವಿಶ್ವ ಲಿಂಗೋದಕವು
ಆಗಲಿನ್ನಾದರೂ ನರಕ ನಾಕ .
ಅರ್ಥ ಪೂರ್ಣ ಕವನ ಅಲ್ವಾ ? ಕವಿಯ ಕಲ್ಪನೆಗೊಮ್ಮೆ hats off ಎಂದಿದ್ದೆ . ಇದೇ ಹಾಡು ಗುಮ್ಮನಂತೆ ಕಾಡಿತ್ತು .ಫೋನ್ ಮಾಡಿ ಅಮ್ಮನನ್ನು ಹಾಡೆಂದು ಕೇಳಲು ಗಂಟೆ ೧೨.೪೫ .! ಅದೇ ಹಾಡು ಗುಯ್ಯ್ ಗುಡುತ್ತಿತ್ತು ಕಿವಿಯಲ್ಲಿ . ಹಾಗೆ ಮುಸುಕೆಳೆದು ಮಲಗಿದ್ದೆ. ಭರ್ರ್ಎಂದು ತಿರುಗುತ್ತಿದ್ದ ಫ್ಯಾನ್ ಸದ್ದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಓದುತ್ತಿದ್ದ ವಾಹನಗಳ ಸದ್ದಿಗೆ ಮಳೆಯ ಚಟಪಟ ಅಡಗಿಕೊಂಡಿತ್ತು. ಅರೆ ಮಂಪರು... ಕಿವಿಯಲ್ಲಿ ಯಾರೋ ಅದೇ ಹಾಡನ್ನು ಗುನುಗಿದಂತೆ. ಹಾಗೆ ನಿದ್ದೆ ಹೋಗಿದ್ದೆ .
ಬೆಳಿಗ್ಗೆ ಎಚ್ಚರವಾದಾಗ ಭರ್ತಿ ೭ ಗಂಟೆ. ದಡಬಡಿಸಿ ಎದ್ದಿದ್ದೆ ,.. ಬಾಗಿಲು ತೆರೆಯುತ್ತಿದ್ದಂತೆ ನಗು ಚೆಲ್ಲಿದ ಬೆಳಕು .ಹಾಗೆ ಬರಿಗಾಲಲ್ಲೇ ಗುಲ್ ಮೊಹರ್ ಗಿಡದತ್ತ ಓಡಿದ್ದೆ . ತಂಗಾಳಿ ಹೊಂಬೆಳಕುಗಳ ಸುಂದರ ಸಮಾಗಮ. ಗಿಡದಲ್ಲಿ ಕೂತಿದ್ದ ಮಿಂಚುಳ್ಳಿಯೊಂದು ನನ್ನ ನೋಡುತ್ತಲೇ ಹಾರಿತ್ತು.ಗುಲ್ಮೊಹರ ಗಿಡದಿಂದ ಹೂ-ಮಳೆಹನಿ ಎರಡೂ ನನ್ನ ಮೇಲೆ ಉದುರುತ್ತಿತ್ತು . ಮನಸ್ಸಿಗೆ ಅದೇನೋ ಅವ್ಯಕ್ತ ಆನಂದ.. ನನಗೆ ಅರಿವಿಲ್ಲದಂತೆ ಗುನುಗುತ್ತಿದ್ದೆ 'ಮುಂಜಾವಿನಲಿ ತುಂತುರಿನ ಸೋನೆ ಮಳೆ ..'
ಬೇಸಿಗೆಯ ಒಂದು ಮಳೆ ಅದೆಷ್ಟು ಅಪ್ಯಾಯಮಾನ. ಮನೆಯ ನೆನಪನ್ನು ಗುಮ್ಮನಂತೆ ಕಾಡಿಸಿ. ಬೆಳಿಗ್ಗೆ ಹೊಸ ಜಗತ್ತನ್ನು ತೋರಿಸಿದ ಮಳೆಗೆ ಮನದಲ್ಲೇ thanks ಎಂದಿದ್ದೆ

14 comments:

  1. Hii Soumya,

    Tumbaa Chennagi barediddiri....nimma bhavanegalige puraanikara kavanavannu serisi baravanigege rangu tarisiddiri....Very Nice...Odi maleyalli nenedaste kushi aitu....

    ReplyDelete
  2. ನಮ್ಮನ್ನು ಕೂಡ ಮಳೆಯಲ್ಲಿ ತೋಯ್ಸಿಬಿಟ್ಟೆಯಲ್ಲ ಹುಡುಗಿ.:)
    ಎಷ್ಟು ಚೆನ್ನಾಗಿ ಬರಿತಿಯೇ...wonderful.

    ReplyDelete
  3. ಸುಮಿ,
    ಬೆಂಗಳೂರಿಗೆ ಬಂದಿದ್ರೆ ದಿನ ಸಂಜೆ ಮಳೆ ಇತ್ತಲೇ.. ಚನ್ನಗಿದ್ದು ಬರಹ.. ಇಲ್ಲಿ ದಿನ ಸಂಜೆ ಮಳೇನ ಎಂಜಾಯ್ ಮಾಡ್ತಾ ಇದ್ದಿ ನಾನು :)

    ReplyDelete
  4. tumba sundara vaagi barediddira soumya.. tumba ishta vaaytu nimma kalpane..

    ReplyDelete
  5. Soumya.. good article.. nimma ootakke puranik ra uppinakayi super combination... Keep writing..
    tAke cAre

    ReplyDelete
  6. yappa adu yen baritiri..... simply superb

    ReplyDelete
  7. ವಾವ್ ಅನಿಸುವಂತಿತ್ತು ಬರಹ ಸೌಮ್ಯ ಅವರೇ...

    ನನ್ನ ಬ್ಲಾಗಿನಲ್ಲಿ ಮಳೆಯ ಕನವರಿಕೆಯ ಕುರಿತು ಬರಹ ಬರೆದಿದ್ದೆ. ನಿಮ್ಮ ಬ್ಲಾಗಿನಲ್ಲಿ ಅದೇ ತರಹದ ಬರಹ ಕಂಡು ಕುಶಿ ಆಯಿತು.. ತುಂಬಾ ಚೆನ್ನಾಗಿ ಬರೆದಿದ್ದೀರಿ... ;)

    ReplyDelete
  8. ಸೌಮ್ಯ ಅವರೇ...
    ನಿಮ್ಮ ಬರಹ ತುಂಭಾ ಚೆನ್ನಾಗಿದೆ

    ReplyDelete
  9. ತುಂಬ ಚೆಂದದ ಬರಹ ಸೌಮ್ಯ.

    ReplyDelete
  10. ತುಂಬಾ ಚೆನ್ನಾಗಿದೆ ನಿಮ್ಮ ಬರವಣಿಗೆ...

    ಕಾಡಿತ್ತು..
    ಬೇಸಿಗೆಯ ಬಿಸಿಲ ಬೇಗೆ..
    ಬಂದಿದೆಯಲ್ಲ..
    ಇಳೆಗೆ..
    ಹಸಿರು..
    ಕಂಪು
    ತಂಪು..
    ಕೊಡುವ..ಮಳೆ.. !

    ReplyDelete
  11. tumba sogasaada baraha soumya...kaledu hogidde naanu ninna malegalada varnaneyalli...sumdara baraha...

    ReplyDelete
  12. ಎಲ್ಲರಿಗೂ ಧನ್ಯವಾದಗಳು ....ಪ್ರೋತ್ಸಾಹಕರ ಮಾತುಗಳಿಗೆ....

    ReplyDelete
  13. liked this article a lot:) even am feelin refreshed by readin this article n missin my family a lot:(

    ReplyDelete