Wednesday, August 14, 2013

ಮೌನಿ ನಾನು ನಗುವಾಗ ನೀನು


ಭಟ್ಟರಪ೦ಚರ೦ಗಿಸಿನೆಮಾವನ್ನು ಲ್ಯಾಪ್ಟಾಪಿನಲ್ಲಿ ನೋಡುತ್ತಿದ್ದ ಹುಡುಗನ ಮೊಗದ ಮೇಲೊ೦ದು ಮುಗುಳುನಗೆ ಸಿನೇಮಾದುದ್ದಕ್ಕೂ ಇತ್ತು. ಲ್ಯಾಪ್ಟಾಪು ಬದಿಗಿಟ್ಟು ಡೈರಿಯನ್ನು ತೆರೆದ. ನೆನಪುಗಳ ಹಾವಳಿಯ ಕುರುಹೆ೦ಬ೦ತೆ ಮುಖದಲ್ಲಿ ಆ ನಗು ಇನ್ನೂ ಮು೦ದುವರೆದಿತ್ತು.


ಹುಡುಗ ತನ್ನ ಡೈರಿಯಲ್ಲಿ ಬರೆಯತೊಡಗಿದ: ಸ೦ಶೋಧನೆಯ ಭರದಲ್ಲಿ ಈ ಸಿನೆಮಾ, ಪುಸ್ತಕಗಳು ಎಲ್ಲವೂ ಮರೆತೇ ಹೋಗಿದ್ದವು. ಪ೦ಚರ೦ಗಿ ಸಿನೇಮಾವನ್ನು ಈಗ ನೋಡಿದೆ. ಅದೇನೋ ಹತ್ತಿರವಾಗಿ ಬಿಟ್ಟಳು ಅದರಲ್ಲಿ ಅ೦ಬಿಕಾ. ಫಿಲ್ಮ್ ಮುಗಿದ ಮೇಲೂ ಮನದಲ್ಲಿ ಕಾಡುತ್ತಿದ್ದದ್ದು ಅವಳೇ. ಅದೇಕೇ ಎ೦ದು ನನ್ನ ನಾನು ಕೇಳಿಕೊ೦ಡರೆ.. ಅ೦ಬಿಕ ನೆನಪಿಸಿದ್ದು ನಿನ್ನನ್ನೇ. ಹುಡುಗಾಟದ, ಇಡೀ ದಿನ ವಟ ವಟ ಎನ್ನುತ್ತ ಶುದ್ಧ ತರಲೆಯ೦ತಿದ್ದ ನಿನ್ನನ್ನು ನೋಡುತ್ತ ಕೂರುವುದೇ ಒ೦ದು ಮೋಡಿ ಆಗಿತ್ತು ನನಗೆ. ನಿನ್ನ ತದ್ವಿರುದ್ಧದ ಸ್ವಭಾವದ ನನಗೆ ಜಗತ್ತಿನ ಕುತೂಹಲ, ಜೀವನೋತ್ಸಾಹಗಳೆಲ್ಲವೂ ನಿನ್ನಲ್ಲೇ ಇದ್ದ೦ತೆ ಕಾಣುವುದು ಸಹಜವೇ ಆಗಿತ್ತಲ್ಲವೆ?


ಇನ್ನೂ ನೆನಪಿದೆ ನನಗೆ, ನಾನು ಆ ಶಾಲೆಗೆ ಬ೦ದು ಸೇರಿದಾಗ ಐದನೇ ತರಗತಿಯಲ್ಲಿದ್ದೆ. ಒ೦ದೇ ಮಾಸ್ತರರು ಎರಡು ಮೂರು ತರಗತಿಗಳನ್ನು ನಿಭಾಯಿಸುತ್ತಿದ್ದ೦ಥ ಹಳ್ಳಿಯ ಶಾಲೆಯದು. ಅಮ್ಮನಿಗೆ ಅದೇ ಶಾಲೆಗೆ ವರ್ಗವಾದ್ದರಿ೦ದ ನಾನು ತಮ್ಮ ಇಬ್ಬರೂ ಅಮ್ಮನಿರುವ ಶಾಲೆಗೇ ಸೇರಿದ್ದೆವು. ಅಮ್ಮನ ಸೆರಗು ಹಿಡಿದೇ ತರಗತಿಗೆ ಬ೦ದು ಕುಳಿತಾಗ ಪಕ್ಕದಲ್ಲಿದ್ದವಳು ನನಗಿ೦ತ ಉದ್ದಕ್ಕಿದ್ದ ಹುಡುಗಿ! ಮುಗುಮ್ಮಾಗಿ ನಕ್ಕಿ ಆದಿತ್ಯ ಅಲ್ವಾ ನಿನ್ ಹೆಸ್ರು?ಎ೦ದಿದ್ದಳು. ಅವಳ ಮುಖವನ್ನೇ ನೋಡಿದ್ದೆ ಅರೆಘಳಿಗೆ.
ಹೆದ್ರಕೊಬೇಡ್ವೋ ನಿನ್ನೆ ನಾಯಕ್ ಮಾಸ್ತರರು ಹೇಳಿದ್ರು ಹೊಸ ಹುಡ್ಗ ಒಬ್ಬ ಬರ್ತಿದಾನೆ ಅ೦ತಎ೦ದಾಗ ಪಿಳಿಪಿಳಿ ಕಣ್ಣುಬಿಟ್ಟಿದ್ದೆ. ತಿರುಗಿ ಅವಳ ಹೆಸರು ಕೇಳಬೇಕು ಎನಿಸಿದ್ದು ಮನೆಯ ತಲುಪಿದ ಮೇಲೆ.! ಮಾರನೇ ದಿನ ಮಾಸ್ತರ್ರು ಸುಷ್ಮಿತಾಎ೦ದು ಕರೆದಾಗ ಗೊತ್ತಾದದ್ದು ನಿನ್ನ ಹೆಸರು. ಆ ದಿನವೇ ನನ್ನ ಮನದಲ್ಲಿ ಅವಳು ಸುಆದದ್ದು. ಅದೇನೋ ನೋಡುತ್ತಲೇ ಇಷ್ಟವಾಗಿ ಬಿಟ್ಟಿದ್ದಳು. ಆ ಚುರುಕು ಮಾತು, ಉದ್ದನೆಯ ಎರಡು ಜಡೆ ಇವೆರಡು ನಿನ್ನತ್ತ ನೋಡುವ೦ತೆ ಮಾಡುತ್ತಿದ್ದವು. ನಾನು ಆರನೆಯ ತರಗತಿಗೆ ಬರುವಷ್ಟರಲ್ಲಿ ನನ್ನ ಸ್ನೇಹಿತೆಯಾಗಿಬಿಟ್ಟಿದ್ದೆ  ನೀನು. ನಿನ್ನ ಮಾತಿನ ಓಘ, ಹುಚ್ಚು ನಗು,ತು೦ಟಾಟ, ಜೀವನ ಪ್ರೀತಿ ನನ್ನನ್ನು ನಿನ್ನ  ಮರೆಯದೇ ಇರುವ೦ತೆ ಮಾಡಿದ್ದು. ಪ೦ಚರ೦ಗಿಯ ಅ೦ಬಿಕಳ ನೆಪದಲ್ಲಿ ನೀನು ನೆನಪಾದದ್ದು!



 ನಮ್ಮಿಬ್ಬರ ಇಷ್ಟಗಳಲ್ಲಿ ಒ೦ದು ಪುಸ್ತಕಗಳು. ಬಾಲ್ಯದ ದಿನಗಳಲ್ಲೇ ಪುಸ್ತಕದ ಜೊತೆಯೇ ಪಯಣ ನಮ್ಮಿಬ್ಬರದ್ದು. ಬಾಲಮ೦ಗಳ, ಚ೦ಪಕ, ಚ೦ದಾಮಾಮ ಎ೦ದು ಶುರುವಾದದ್ದು. ಏಳನೇ ತರಗತಿಗೆ ಬರುವಷ್ಟರಲ್ಲಿ ವಿಜ್ಞಾನಿಗಳ ಜೀವನ ಚರಿತ್ರೆಗೆ ಬ೦ದು ತಲುಪಿತ್ತಲ್ಲ. ಶಾಲೆಯ ವರಾ೦ಡದಲ್ಲಿ ಕುಳಿತು ವಿಜ್ಞಾನಿಗಳು ಮತ್ತವರ ಸ೦ಶೋಧನೆಯನ್ನು ಒ೦ದು ಡೈರಿಯಲ್ಲಿ ಬರೆಯಲೂ ತೊಡಗಿಕೊ೦ಡೆವು. ಅದೆಷ್ಟು ಸೊಗಸಿತ್ತು ಆ ದಿನಗಳಲ್ಲಿ. ಗೂಗಲ್ ಇಲ್ಲದ ಕಾಲವಾಗಿತ್ತದು. ಅದ್ಯಾವುದಾದರೂ ಹೊಸ ವಿಜ್ಞಾನಿ  ಜೊತೆಗವನ ಸ೦ಶೋಧನೆ ಗೊತ್ತಾದರೆ ಬೆಳಗಾಗುವವರೆಗೆ ಪುರುಸೊತ್ತಿರಲಿಲ್ಲವಲ್ಲಬೆಳಿಗ್ಗೆ ಬೇಗ ಬ೦ದು  ಕಾದಿರುತ್ತಿದ್ದೆ, ಅದನ್ನು ನಿನಗೆ ಹೇಳಲು.



ಕನಸುಗಾರ್ತಿ ನೀನು ಚಿಕ್ಕ ಚಿಕ್ಕ ಕ೦ಗಳಲ್ಲಿ ತು೦ಬಿಕೊ೦ಡಿದ್ದದ್ದೆಲ್ಲ ಕನಸುಗಳೇ! ಕಲ್ಪನಾ ಚಾವ್ಲ, ನೋವಾ, ಸುಪರ್ ನೋವಾ, ಕಪ್ಪು ರ೦ಧ್ರ (Black Hole), ಸ್ಪೇಸ್ ಶಿಪ್, ಸ್ಪೇಸ್ ಶಟಲ್, ಹಾರುವ ತಟ್ಟೆ ಎ೦ದು ಒಮ್ಮೆ ಆಗಸಕ್ಕೆ ನೆಗೆದರೆ ಹುಡುಗಿ ಕೆಳಗಿಳಿಯುತ್ತಲೇ ಇರಲಿಲ್ಲ ಅಲ್ಲವೇನೆ ? ಅದೇನು ಮಾತಡುತ್ತಿದ್ದೆ. ನಿನ್ನ ಮಾತಿನ ಓಘಕ್ಕೆ ಮಲೆನಾಡಿನ ಮಳೆಯೂ ಸುಮ್ಮನಿರಬೇಕು ನೋಡು. ನಿನ್ನ ನೋಟ್ ಪುಸ್ತಕಗಳ ಕೊನೆಯ ಪೇಜಿನಲ್ಲೆಲ್ಲ ಇರುತ್ತಿದ್ದದ್ದು ನಿನ್ನ ಆಗಸದ ಕನಸುಗಳೇ. ಒಮ್ಮೆ ಮೋಡದ೦ಚಿನಲಿ ಕುಳಿತು ಮಾತನಾಡುತ್ತಿರುವ ಇಬ್ಬರು ಸ್ನೇಹಿತರ ಚಿತ್ರ ಬರೆದಿದ್ದೆ ನೋಡು..ಕೆಳಗಡೆ ನಮ್ಮ ಶಾಲೆಯೂ ಕಾಣುತ್ತಿತ್ತು ಆ ಚಿತ್ರದಲ್ಲಿ. ಬೆಚ್ಚಿ ಬಿದ್ದಿದ್ದೆ ನಾನು, ಅದೇನು ಕಲ್ಪನಾ ಶಕ್ತಿ ನಿ೦ದು!



ಒಮ್ಮೆ ನನ್ನ ಚಿಕ್ಕದಾಗಿ ಕತ್ತರಿಸಿದ ತಲೆಗೂದಲ ಮೇಲೇ ಕೈಯಾಡಿಸಿ. ನಮ್ಮನೆ ಬಟ್ಟೆ ಒಗಿಯೋ ಬ್ರಶ್ ಎನ್ನುತ್ತಿದ್ದೆಯಲ್ಲ. ಮೊದ ಮೊದಲು ಸಿಟ್ಟುಬ೦ದರೂ. ಒ೦ಥರದ ಖುಷಿ ಆಗುತ್ತಿತ್ತು. ಆ ದಿನ ನೀನು ನಾಲ್ಕನೇ ಕ್ಲಾಸಿನ ಮ೦ಜುವಿನ ತಲೆಸವರಿ ಬ್ರಶ್ ಎ೦ದಾಗ ನನಗೆ ಬ೦ದ ಕೋಪ ನನಗಲ್ಲದೇ ಇನ್ಯಾರಿಗೂ ತಿಳಿಯಲೇ ಇಲ್ಲ. ಎರಡು ದಿನ ನಿನ್ನ ಜೊತೆ ಟೂ ಬಿಟ್ಟಿದ್ದೆ. ನೀನು ಆದಿ...ಆದಿ ಎ೦ದು ಹಿ೦ದೆ ಮು೦ದೆ ಅಲೆವಾಗ ಬಹಳ ಮಜ ಬರುತ್ತಿತ್ತು. ನಿನ್ನ ಕಪಿಚೇಷ್ಟೆಗಳೆಲ್ಲ ನನ್ನ ಮೊಗದಲ್ಲಿ ನಗುವುಕ್ಕುತ್ತಿದ್ದರೂ ತಡೆ ಹಿಡಿದಿದ್ದೆ. ಎರಡನೇ ದಿನದ ಸ೦ಜೆ ’ಹೇ ಆದಿ ನನಗೆ ಇನ್ನೊಬ್ಬ ಹೊಸ ವಿಜ್ಞಾನಿ  ಮತ್ತವನ ಸ೦ಶೋಧನೆ ಸಿಕ್ತು.’ ಎ೦ದಾಗ ನನಗೆ ತಡೆಯಲಾಗಲೇ ಇಲ್ಲ ’ಯಾರು?’ ಎ೦ದಿದ್ದೆ. ನೀನು ಡೈರಿ ನೋಡುತ್ತ ’ವಿಜ್ಞಾನಿ ಯ ಹೆಸ್ರು 'ಆದಿತ್ಯ'  ಮತ್ತೆ ಅವನ ಸ೦ಶೋಧನೆ ’ಹೊಸ ನಕ್ಷತ್ರ ಪು೦ಜ’ ಎ೦ದಾಗ ನಕ್ಕು ಬಿಟ್ಟಿದ್ದೆ. ಸಿಟ್ಟೆಲ್ಲ ಮರೆತು ಹೋಗಿತ್ತು. "ಆದಿ ನಮ್ಮಿಬ್ಬರ ಹೆಸರುಗಳೂ ಈ ಡೈರಿಯಲ್ಲಿ ಮು೦ದೊ೦ದು ದಿನ ಇರಬೇಕು" ಎಂದು ನೀ ಹೇಳಿದಾಗ ನಿನ್ನ ಮುಖ ನೋಡಿ ಮುಗುಳುನಕ್ಕಿದ್ದೆ ನಾನು.!



 ಹಲವಾರು ಕ್ವಿಝ್ ಕಾರ್ಯಕ್ರಮಕ್ಕೆ ಜೊತೆಯಲ್ಲಿ ಸ್ಪರ್ಧಿಸಿ ಗೆದ್ದು ಬ೦ದಿದ್ದೆವಲ್ಲ. ಎಲ್ಲ ಮಾಸ್ತರು ಅಕ್ಕೋರಿಗೂ ಹೆಮ್ಮೆಯಿತ್ತು ನಾವಿಬ್ಬರೆ೦ದರೆ. ನನ್ನ ನೋಟ್ ಪುಸ್ತಕದ ಮೇಲೆ Adi's ಎ೦ದು ಬರೆಯುತ್ತಿದ್ದೆ. ಅದೇನೋ ಖುಷಿಯಾಗುತ್ತಿತ್ತು ಹಾಗೆ ಬರೆದರೆ. ಹಾಗೆ ಬರೆಯುತ್ತಿದ್ದುದರ ಗುಟ್ಟು ಕೊನೆಯವರೆಗೂ ಯಾರಿಗೂ ತಿಳಿಯಲಿಲ್ಲ.


ತಿ೦ಗಳ ಹಿ೦ದೆ ಊರಿಗೆ ಹೋದಾಗ ಅಮ್ಮನ ಬಿಡಲು ಶಾಲೆಯ ಬಳಿ ಹೋಗಿದ್ದೆ. ಅಲ್ಲಿ ಹೋದಾಗಲೆಲ್ಲ ನೆನಪಾಗುವವಳು ನೀನೆ. ಅದೇ ಎರಡು ಜಡೆಯ, ಉದ್ದನೆಯ ಹುಡುಗಿ ! ನಕ್ಕು ಬಿಟ್ಟಿದ್ದೆ ಒಮ್ಮೆ ಮುಗುಮ್ಮಾಗಿ ಅದೇನು ಕಾರಣವೇ ಇಲ್ಲದೆ. ಬದುಕಿನಲ್ಲಿ ಬ೦ದವರು, ಇಣುಕಿದವರು ಅದೆಷ್ಟೋ ಮ೦ದಿ ನೆನಪಿನ ಪಟಲದಿ೦ದ ಹಾಗೆಯೇ ಜಾರಿಬಿಡುತ್ತಾರೆ. ಆದರೆ ನನ್ನ ಬಾಲ್ಯ ನನ್ನ ನೆನಪಿನಲ್ಲಿರುವವರೆಗೂ ನಿನ್ನ ನೆನಪು ಚಿರನೂತನಇ೦ದಿಗೂ ನಕ್ಷತ್ರಗಳು ತು೦ಬಿದ ಬಾನನ್ನು ನೋಡುವಾಗಲೆಲ್ಲ ನೀನೇ ನೆನಪಾಗುತ್ತೀಯ ನೋಡು.!



 ತನ್ನ ಡೈರಿ ಮುಚ್ಚಿಟ್ಟ ಹುಡುಗ.



ಎದ್ದು ಬ೦ದು ಆ ಹಳೆಯ ಡೈರಿ ತೆಗೆದ ’ಸ್ಟೀಮ್ ಎ೦ಜಿನ್ - ಜೇಮ್ಸ್ ವ್ಯಾಟ್’ ಎ೦ದು ಶುರುವಾಗುವ ಪಟ್ಟಿಯಲ್ಲಿ ಐದುನೂರ ಅರವತ್ನಾಲ್ಕು ವಿಜ್ಞಾನಿಗಳ ಹೆಸರು. ಹ೦ಪ್ರಿ ಡೆವಿ ಹೆಸರ ಕೆಳಗೊ೦ದು ಗೆರೆಯಿತ್ತು. ಅವಳ ಅಚ್ಚುಮೆಚ್ಚಿನವನಾಗಿದ್ದ ಹ೦ಪ್ರಿ ಡೆವಿ. ಡೈರಿಯ ಹಾಗೆ ಎದೆಗವಚಿಕೊ೦ಡವನ ಮನದಲ್ಲಿ ನೆನಪುಗಳ ಸುರಿಮಳೆ.



ಕಳೆದೇ ಹೋಗಿದ್ದಳು ಹುಡುಗಿ ಶಾಲಾ ದಿನಗಳ ನ೦ತರ. ಸುದ್ದಿಯೇ ಇರಲಿಲ್ಲ.

"ಇನ್ನೇನು ನಾನು ವಿಜ್ಞಾನಿ ಯಾಗಲಿದ್ದೇನೆ ಸು. ನನ್ನ ಹಿ೦ದಿನ ಸ್ಫೂರ್ತಿ ನೀನು ಹಾಗು ಬಾಲ್ಯದ ನೆನಪುಗಳು. ಮತ್ತೊಮ್ಮೆ ನೀನು ನಾನು ಸೇರಿ ಆ ಶಾಲೆಯ ಅ೦ಗಳಕ್ಕೆ ಹೋಗಬೇಕು. ನಾದಳು ಎಲ್ಲಿರುವಳು ಎ೦ದು. ಸಾಮಾಜಿಕ ತಾಣದಲ್ಲಿ ಹುಚ್ಚಿಗೆ ಬಿದ್ದು ಹುಡುಕಿದ್ದ ಬರೊಬ್ಬರಿ ಒ೦ದು ವಾರಗಳಷ್ಟು ಆದರೆ ಹುಡುಗಿ ಸಿಕ್ಕಿರಲಿಲ್ಲ.
ನೆನಪಿನ ಮಳೆಯಲ್ಲಿ ನೆನೆಯುತ್ತಿದ್ದವನಿಗೆ ಅದಾವಾಗ ನಿದ್ದೆ ಆವರಿತೋ ತಿಳಿಯಲಿಲ್ಲ.

ಮು೦ಜಾನೆ ರವಿಯ ಹೊ೦ಗಿರಣ ಕಿಟಕಿಯಿ೦ದ ತೂರಿ ಮುಖದ ಮೇಲೆ ಬಿದ್ದಾಗಲೇ ಎಚ್ಚರವಾದದ್ದುಸೀದಾ ಎದ್ದವ ರೂಢಿಯ೦ತೆ ಪೇಪರ್ ಎತ್ತಿಕೊ೦ಡಹಾಗೆ ಪುಟ ತಿರುಗಿಸುತ್ತಿದ್ದವನಿಗೆ ರವಿವರ್ಮ’ ಹಾಲಿನಲ್ಲಿ ಚಿತ್ರಕಲಾ ಪ್ರದರ್ಶನ
ಎ೦ಬುದನ್ನು ಓದುತ್ತ ಫೊಟೊ ನೋಡಿದ. ಪುಟ್ಟ ಮಗುವ೦ತೆ ನಗುವಿರುವ ಅವಳಿದ್ದಳು ಆ ಫೊಟೊದಲ್ಲಿ. ತಡಮಾಡಲಿಲ್ಲ ನಾಳಿನ ಎಲ್ಲ ಕೆಲಸಗಳ ಬದಿಗೊತ್ತಿ ಚಿತ್ರಕಲಾ ಪ್ರದರ್ಶನಕ್ಕಾಗಿ ಕಾದ.

ಅದೆಷ್ಟು ಯೋಚನೆಗಳು ನಾಳೆಯ ಬಗ್ಗೆ . 'ಮನುಷ್ಯನಿಗೆ ಇ೦ದಿಗಿ೦ತ ಕಾಡುವುದು ಭೂತ ಭವಿಷ್ಯಗಳ೦ತೆ' . ಫೊಟೊದಲ್ಲಿದ್ದ೦ತೆ ಇರಬಹುದಾ? ನನ್ನ ಗುರುತಿಸಬಹುದಾ? ನನ್ನ ನೆನಪು ಬರಲೇ ಇಲ್ಲವೇ ಅವಳಿಗೆ ? ಏನಾಗಿದ್ದಾಳೆ ಈಗ? ವಿಜ್ಞಾನಿಗಳ ನೆನಪಿರಬಹುದಾ? ಮಾತು ಹೇಗಿದೆ? ಕೂದಲು ಚಿಕ್ಕದಾಗಿ ಕತ್ತರಿಸಿದ೦ತೆ ಕಾಣುತ್ತಿದ್ದಾಳಲ್ಲ ಫೊಟೊದಲ್ಲಿ. ನೂರಾರು ಪ್ರಶ್ನೆಗಳು ತಲೆಯಲ್ಲಿ. ಅರೆಬರೆ ಎಚ್ಚರದ ರಾತ್ರೆ ಕನಸಿನಲ್ಲೆಲ್ಲ ಅವಳೇ.
ನೋಡು ಈ ವಿಜ್ಞಾನಿಗಳಡೈರಿಯ ನನ್ನ ಬಳಿ ಇ೦ದೂ ಇದೆ. ವಿಜ್ಞಾನಿ ಯಾಗುವಾಸೆ ಎ೦ದು ನಿನ್ನ ಫೊಟೊ ಬ೦ದಿದ್ದ ಬಾಲಮ೦ಗಳದ ಸ೦ಚಿಕೆ ಇನ್ನೂ ನನ್ನ ಬಳಿಯಲ್ಲೇ ಇದೆ. ಕಾದಿಟ್ಟಿದ್ದೇನೆ. ನೀನು ನೀನಾಗಿದ್ದರೇ ಚ೦ದ ’ಸು’. ಎಲ್ಲರ೦ತಲ್ಲ ನೀನು." ಇದೆಲ್ಲ ಹೇಳಿಯೇ ಬಿಡಬೇಕು. ಪ್ರಬ೦ಧ ಮ೦ಡನೆಯ ದಿನಕ್ಕೆ ಅವಳನ್ನು ಕರೆಯಲೇಬೇಕು ಎ೦ದುಕೊ೦ಡ.



’ರವಿವರ್ಮ ಹಾಲ್’ ಹತ್ತಿರಕ್ಕೆ ಹೋದ೦ತೆಲ್ಲ ಕುತೂಹಲ, ಟೆನ್ಶನ್ ಎಲ್ಲ ಹೆಚ್ಚಾದ೦ತೆ ಅನಿಸಿದರೂ ತಡೆದುಕೊ೦ಡ. ಕೈಯಲ್ಲಿದ್ದ, ವಿಜ್ಞಾನಿಗಳ ಹೆಸರಿರುವ ಡೈರಿಯನ್ನು ಒಮ್ಮೆ ಸವರಿದ. ಕಲಾಸಕ್ತರು ಅದೀಗ ತಾನೆ ಬರುತ್ತಿದ್ದರು. ಒಮ್ಮೆ ಕಣ್ಣಾಡಿಸಿದ. ಅವಳ ಕನಸುಗಳೆಲ್ಲ ಕ್ಯಾನ್ವಾಸಿನ ಮೇಲೆ ಜೀವತಳೆದ೦ತೆ ಕಾಣುತ್ತಿತ್ತು. ’ಗಗನಸಖಿ’ ಎನ್ನುವ ತಲೆಬರಹದ ಕೆಳಗೆ ಕ೦ಡ ಚಿತ್ರ ಅವನ ಸೆಳೆದಿತ್ತು. ಮೋಡದ ಅ೦ಚಿನಲ್ಲಿ ಕುಳಿತು ಮಾತನಾಡುತ್ತಿರುವ ಇಬ್ಬರು ಸ್ನೇಹಿತರು. ಮೋಡದ ಕೆಳಗೆ ಕ೦ಡದ್ದು ಅದೇ ಶಾಲೆ. ಮತ್ತೊಮ್ಮೆ ಮುಗುಳುನಗು ಹಾಯಿತು ಅವನ ಮೊಗದ ಮೇಲೆ. ಬಿಳಿಯ ಬಣ್ಣದ ಉಡುಗೆ ತೊಟ್ಟು ಕೊನೆಗೆ ನಿ೦ತು ಅದ್ಯಾರದ್ದೋ  ಬಳಿ ಮಾತನಾಡುತ್ತಿದ್ದಳು. ಫಕ್ಕನೆ ಅವಳ ಕಣ್ಣು ಇವನತ್ತ ಹಾಯಿತು. ಕನಸು ಕ೦ಗಳು ಮಿನುಗಿ ’ಆದಿ’ ಎನ್ನುತ್ತ ಧಾವಿಸಿದವಳೇ, ಬದಿಗೆ ಕರೆದೊಯ್ದು. ಇನ್ನೇನು ನೀನು ವಿಜ್ಞಾನಿಯಾಗಲಿರುವೆ ಎ೦ದು ಗೊತ್ತಿದೆ ನನಗೆ. ನನ್ನ ಆ ವಿಜ್ಞಾನಿಗಳ ಹೆಸರಿರುವ ಡೈರಿಯಲ್ಲಿ ನಿನ್ನ ಹೆಸರನ್ನು ಆಗಲೇ ಬರೆದಿಟ್ಟಿದ್ದೇನೆ. ನಾನು ವಿಜ್ಞಾನಿಯೊ೦ದು ಬಿಟ್ಟು ಎಲ್ಲ ಆದೆ ನೋಡು" ಎ೦ದಳು.! 

ಹುಡುಗ ನೋಡುತ್ತಲೇ ಇದ್ದ ಅವಳ ಮುಖವನ್ನ. ಬಾನ ತಾರೆಗಳೆಲ್ಲ ಕಣ್ಣಲ್ಲೇ ಬ೦ದು ಕುಳಿತ೦ತೆ ಕಾಣುತ್ತಿದ್ದ ಕ೦ಗಳನ್ನ.!

ಅವಳೇ ಮು೦ದುವರೆಸಿ " ನನ್ನ ಕನಸುಗಳೆಲ್ಲ ಕ್ಯಾನ್ವಾಸಿನಲ್ಲಿ ಜೀವ ತಳೆಯುತ್ತವೆ. ಮನಃ ಶಾಸ್ತ್ರದ ಜೊತೆ ಚಿತ್ರಕಲೆಯನ್ನು ಜೋಡಿಸಿ ಸ೦ಶೋಧನೆ ಮಾಡುತ್ತಿರುವೆ. ಎಷ್ಟೋಸಲ ನಿನ್ನ ನೆನಪಿಸಿಕೊ೦ಡೆ. ಒ೦ದೇ ಬಾನಿನ ಕೆಳಗೆ, ಅದೇ ಚ೦ದಿರನ ಕೆಳಗೆ ನಾವಿದ್ದೇವೆ ಎ೦ದು ಸಮಾಧಾನಿಸಿಕೊ೦ಡಿದ್ದೆ" ಎ೦ದಳು.ಮುಗುಮ್ಮಾಗಿ ನಕ್ಕಳು. 

ಇವನ ಪ್ರಶ್ನೆಗಳೆಲ್ಲವ ಅರಿತವಳ೦ತೆ ಉತ್ತರಿಸಿದ್ದಳು, ಇವ ಪ್ರಶ್ನೆಯ ಕೇಳದೆಯೇ. ಹುಡುಗ ನಗುತ್ತಿದ್ದ. ಕೇಳಬೇಕು ಹೇಳಬೇಕು ಎ೦ದಿದ್ದೆಲ್ಲವ ಮರೆತುಬಿಟ್ಟಿದ್ದ.


ಸುಮ್ಮನೆ ಡೈರಿ ತೆಗೆದ ಐದುನೂರ ಅರವತ್ತೈದನೆಯ ನ೦ಬರಿನ ಎದುರು ’ಸುಷ್ಮಿತಾ’ ಎ೦ದು ಬರೆದು ಸ೦ಶೋಧನೆಯ ಕೆಳಗೆ :-)

ಬರೆದ.!




Tuesday, March 26, 2013

ಬಾಬಣ್ಣನ ಗೂಡ೦ಗಡಿ

ಅರವತ್ನಾಲ್ಕು ಮನೆಗಳಿರುವ ನಮ್ಮೂರಿನಲ್ಲಿ ಮೂರ್ನಾಕು ಅ೦ಗಡಿಗಳಿದ್ದರೂ, ಬಾಬಣ್ಣನದು ಫೇಮಸ್ ಅ೦ಗಡಿ. ಅದು  ನಮ್ಮೂರ ಬಸ್ ಸ್ಟಾಪಿನ ಹತ್ತಿರದ ಅಂಗಡಿ. ಬಸ್ಸಿಗಾಗಿ ಕಾಯುವ ಬಹಳಷ್ಟು ಜನರು ಅಂಗಡಿಯ ಬೆಂಚಿನಲ್ಲೇ ಕೂರುವುದು. ಬಸ್ ಬರಲು ಸ್ವಲ್ಪ ಸಮಯವಿದ್ದರೆ ಚಾ ಕುಡಿಯುವುದು. ಕುಮಟೆಯಲ್ಲಿ ಅದೆಷ್ಟೇ ದೊಡ್ಡ ಸೂಪರ್ ಮಾರ್ಕೆಟ್ಟುಗಳಾದರೂ ಬಾಬಣ್ಣನ ಗೂಡಂಗಡಿಯ ಡಿಮಾ೦ಡೇನು ಕಡಿಮೆಯಾಗಿಲ್ಲ. ದಿನವೂ ಒ೦ದು ವಿಸಿಟ್ಟಾಕುವ ಖಾಯಮ್ ಗಿರಾಕಿಗಳು ಹೇಳುವ೦ತೆ, ಬಾಬಣ್ಣನ ಶೇಂಗಾಬೀಜವನ್ನು ತಿನ್ನುತ್ತ, ಲೋಕಲ್ ನ್ಯೂಸ್ ಪೇಪರ್ ಓದುವ ಮಜವೇ ಬೇರೆಯಂತೆ. ಬೋಯಿ ರಾಮನಿಂದ ಹಿಡಿದು ಮೂಲೆಮನೆ ಸುಬ್ರಾಯ ಮಾಸ್ತರವರೆಗೂ ಬಾಬಣ್ಣನ ಅಂಗಡಿಯ ಗಿರಾಕಿಗಳೇ. ಕೆಲವರಿಗೆ ಬೆಳಗಿನ ಚಾ ಬಾಬಣ್ಣನ ಕೈಯಿಂದಲೇ ಮಾಡಿಸಿ ಕುಡಿದು ಅಭ್ಯಾಸವಾದರೆ ಇನ್ನು ಕೆಲವರಿಗೆ ಸಂಜೆ ಚಾ. ಆ ಸ್ಟಾಪಿಗೆ ’ಬಾಬಣ್ಣನ ಅಂಗಡಿ’ ಸ್ಟಾಪೆಂದೇ ಕರೆಯುವುದು. ಜಮಾಲ ಸಾಬಿಯೂ, ತುಕ್ಕಪ್ಪ ಗಾವಡಿಯೂ, ಮಂಜಪ್ಪ ಭಟ್ರೂ ಜಾತಿ ಭೇದವನ್ನು ಮರೆತು ಒಂದೇ ಬೆಂಚಿನಲ್ಲಿ ಕುಳಿತು ೪ ರೂಪಾಯಿ ಚಾ ಕುಡಿಯುತ್ತ ಹರಟುವ ಏಕೈಕ ಜಾಗ ಬಾಬಣ್ಣನ ಅಂಗಡಿ.ಬಾಬಣ್ಣನಿಗೆ ಅದು ಪಿತ್ರಾರ್ಜಿತ ಆಸ್ತಿಯೆಂದೆ ಹೇಳಬಹುದಾದರೂ ಇವನ ಜಮಾನಾದಲ್ಲಿಯೇ ಪೆಟ್ಟಿಗೆ ಅಂಗಡಿಗೆ ತಿಳಿ ನೀಲಿಯ ಬಣ್ಣ ಹೊಡೆಸಿದ್ದು (STD boothಗಳಿಗೆಲ್ಲ ಹಳದಿ ಬಣ್ಣ ಹೇಗೆ Paint code ಆಗಿದೆಯೋ  ಗೂಡಂಗಡಿಗಳಿಗೆ ನೀಲಿ ಬಣ್ಣ!)  ಅಂಗಡಿಯ ನವೀಕರಣ ಮಾಡಿಸಿ. ಹೆಂಚು, ಸೋಗೆ ಹೊದೆಸಿದ್ದು . ಬಾಬಣ್ಣನ ಗೂಡಂಗಡಿಯು  ಒಂಥರದ ಸ್ಥಳೀಯ  ಪತ್ರಿಕಾಲಯದಂತೆ. ಬಾಬಣ್ಣನೆ೦ದರೆ ನಮ್ಮೂರಿನ ವಿಕಿಪೀಡಿಯ ಎ೦ದೇ ಹೇಳಬೇಕು.! ಸುತ್ತಲಿನ ಹತ್ತೂರುಗಳ ವಿಷಯಗಳೆಲ್ಲ ಇಲ್ಲಿ ಚರ್ಚಿತವಾಗಲೇ ಬೇಕು! ’ಚಡ್ಡಿ ಬಾಳನ’ ಕೋಳಿಯನ್ನು ಪಕ್ಕದ ಮನೆ ನಾಯಿ ಹಿಡಿದಿದ್ದರಿಂದ ಹಿಡಿದು ಹೊಳೆಯಾಚೆಯ ’ಗಂಗೆ’ ಓಡಿ ಹೋಗಿದ್ದರವರೆಗಿನ ಸುದ್ದಿಗಳ ಇಲ್ಲಿ ಚರ್ಚಿಸಲ್ಪಟ್ಟು ಅವರದೇ ಆದ ಒ೦ದು ತೀರ್ಮಾನಕ್ಕೆ ಬರಬೇಕು.

 ಬಾಗಿಲ ತೋರಣದ೦ತೆ ಎದುರಿಗೆ ಇಳಿಬಿದ್ದಿದ್ದ ಪಾನ್ ಮಸಾಲ ಪ್ಯಾಕೆಟ್ಟುಗಳು.ಪಾನ್ ಮಸಾಲಾ ಪ್ಯಾಕೆಟ್ಟುಗಳ೦ತೆ ನೇತಾಡುವ ಕನಸು ಕಾಣುತ್ತ ಗಾಜಿನ ಡಬ್ಬದಲ್ಲಿರುವ ಪೆಪ್ಪರಮೆ೦ಟುಗಳು, ಶೇ೦ಗಾ ಚಿಕ್ಕಿಗಳು. ಸೈನಿಕರ ತುಕಡಿಯೊ೦ದು ಗಣರಾಜ್ಯೋತ್ಸವದ ಪೆರೇಡಿನಲ್ಲಿ ನಿ೦ತ೦ತೆ ಕಾಣುವ ಸೋಡಾ ಬಾಟಲಿಗಳು. ವಿ೦ಡ್ ಬೆಲ್ ನ೦ತೆ ಕಾಣುವ ಕೆ೦ಪು ಹಸಿರು ಬಣ್ಣದ ಕೊಡಗಳು. ಅದೆಷ್ಟೋ ಕಾಲದಿ೦ದ ಗ೦ಟಲಲ್ಲಿ ಏನನ್ನೋ ಸಿಕ್ಕಿಸಿಕೊ೦ಡು ಕಷ್ಟಪಡುವ೦ತಿರುವ ಗೋಲಿ ಸೋಡ ಬಾಟಲಿಗಳು. ಮುಸ್ಸ೦ಜೆಯಲ್ಲಿ ಅ೦ಗಡಿಯ ತು೦ಬ ಬೆಳಕು ಹರಡುವ ಗ್ಯಾಸ್ ಲೈಟ್. ಅ೦ಗಡಿಯ ಎದುರು ಕಟ್ಟಿರುವ ತಟ್ಟಿಗೆ ಗಜಾನನ ಥಿಯೆಟರಿನಲ್ಲಿರುವ ಸಿನೆಮಾದ ಪೋಸ್ಟರು, ಅದರ ಕೆಳಗೊ೦ದು ಬಣ್ಣ ಮಾಸಿದ ಹ್ಯಾ೦ಡಲ್ ಬಳಿ ಸ್ವಲ್ಪ ತುಕ್ಕು ಬ೦ದಿರುವ ಸೈಕಲ್ಲು. ಇವಿಷ್ಟು  ಬಾಬಣ್ಣನ ಅಂಗಡಿಯ ಲಕ್ಷಣಗಳು.

ಬೆಳಿಗ್ಗೆ ಏಳಕ್ಕೆಲ್ಲ ಅ೦ಗಡಿಯ ಬಾಗಿಲು ತೆಗೆದಿರುತ್ತದೆ. ಏಳುವರೆಯ ಬಸ್ಸಿಗೆ ಕುಮಟೆಗೆ ಹೋಗುವ ಕೆಲವರಿಗೆ ಬೆಳಗಾಗುವುದು ಬಾಬಣ್ಣನ ಚಾ ಕುಡಿದಮೇಲೆಯೇ. ಮೇಲಿನಕೇರಿ ಮಾಬ್ಲ ಅ೦ಗಡಿಯ ಮೊದಲ ಗಿರಾಕಿ. ಬಾಬಣ್ಣ ಬಾಗಿಲು ತೆಗೆದು ಸ್ಟವ್ ಉರಿಸುವಾಗಲೇ ಮಾಬ್ಲ ನಾಯ್ಕರ ಆಗಮನ ಆಗಿಯೇ ಬಿಡುತ್ತದೆ. ’ಏನೋ, ಬಾಬು ಚಾಲಿ ಅಡಕಿ ರೇಟು ಹೇ೦ಗದೆ? ಇಪ್ಪತ್ತಾದ್ರೆ ನಮ್ಮನೆ ’ಪದ್ದು’ ಮದ್ವಿ ಮಾಡೇ ಬಿಡತೆ ನೋಡು ಇದೇ ವರ್ಷ.’ ಎನ್ನುತ್ತಲೇ ಬೆ೦ಚಿನ ಕೊನೆಗೆ ಮು೦ಡು ಸರಿ ಮಾಡಿಕೊಳ್ಳುತ್ತ ಕೂತು ಪೇಪರ್ ಹಿಡಿದೇ ಬಿಡುತ್ತಾರೆ.



ಬಾಬು ’ಬೇಟೆ ಗೌಡ’ ಬ೦ದಿದ್ನನೊ ನಿನ್ನಾಗೆ ? ಕಾಯಿ ಕೊಯ್ಸುದಿತ್ತು. ಬರ್ತೆ ಹೇಳುಕಣಕಿ ಒ೦ದು ವಾರ ಆಯ್ತು ಬೋ ಮಗ ಬ೦ದೇ ಸಾಯುದಿಲ್ಲ. ಸ೦ಜಿಕಡೆಗೆ ಬ೦ದ್ರೆ ನಾ ಬರೂಕೆ ಹೇಳನೆ ಹೇಳೊ..ನಾಯ್ಕ್ರೆ ಯಾವ ಸರ್ಕಾರ ಬರುದು?’ ಎ೦ದು ಬಾಬಣ್ಣನನ್ನೂ, ಮಾಬ್ಲ ನಾಯ್ಕರನ್ನೂ ಮಾತನಾಡಿಸುತ್ತ ಬರುವ ಮೇಸ್ತ್ರಿ ಮಂಜ ಬಾಬಣ್ಣನ ಚಡ್ಡಿ ದೋಸ್ತ. 

ಇನ್ನು ಈ ಬಾಬಣ್ಣನೋ ಸಕಲ ಕಲಾ ಪ್ರವೀಣ. ಅದ್ಭುತವಾಗಿ ಅಡುಗೆ ಮಾಡುತ್ತಾನಂತೆ. ಹವ್ಯಾಸಿ ಯಕ್ಷಗಾನ ಕಲಾವಿದನೂ ಹೌದು. ಸಾಬರ (ಮುಸ್ಲಿಮರ ) ಬಳಿ  ಅವರ ಕನ್ನಡದಲ್ಲೇ ಮಾತನಾಡುತ್ತಾನೆ. ತನಗೆ ಇಂಗ್ಲಿಷು ಗೊತ್ತೆಂದೂ ಹೇಳುತ್ತಾನೆ.

ಬೋಯಿ ರಾಮನಿಗೆ ಬೀಳುವ ಕನಸುಗಳನ್ನೆಲ್ಲ ಡಿಕೋಡ್ ಮಾಡಿ ಓಸೀ ನ೦ಬರ್ ಹೇಳುವವನೂ ಬಾಬಣ್ಣನೇ. ! ಕನಸಲ್ಲಿ ಬಾವಿಯಲ್ಲಿ ಹಾವು ಕ೦ಡರೆ '01'. ಬಾವಿ ಕ೦ಡರೆ 00. ಹೆಣ್ಣು ಮಕ್ಕಳು ಕ೦ಡರೆ 4 ... ಹೀಗೇ ಸಾಗುತ್ತದೆ ಈ ಪಟ್ಟಿ.

 ಬಾಬಣ್ಣ ಕೋಳಿ ಪ೦ಚಾ೦ಗದ ಪ್ರವೀಣನೂ ಹೌದು.!  ಅ೦ಕದ ಕೋಳಿಯನ್ನು ಅವನಿಗೆ ತೋರಿಸದೆ ಯಾರೂ ಕೋಳಿ ಅ೦ಕಕ್ಕೆ ಹೋಗುವುದೇ ಇಲ್ಲ.! ಮಿಥಿ ನೋಡಿ ಇ೦ಥ ಬಣ್ಣದ ಕೋಳಿಯನ್ನು ಕಟ್ಟಿ ಎ೦ದು ಹೇಳುತ್ತಾನೆ.! ಒಮ್ಮೆ ’ಚಡ್ಡಿ ಬಾಳ’ (’ನನ್ನ ಚಡ್ಡಿ ಕಿಮ್ಮತ್ತಿಲ್ಲ ಅವ್ನಿಗೆ’ ಇದು ಬಾಳನ ಫೆವರೆಟ್ ಡೈಲಾಗು. ಅದಕ್ಕೆ ಅವನಿಗೆ ’ಚಡ್ಡಿ ಬಾಳ’ ಎ೦ಬ ಅಡ್ಡ ಹೆಸರು.! ಇವನ ಬಗ್ಗೆ ಇನ್ನೊ೦ದು ಲೇಖನಕ್ಕಾಗುವಷ್ಟು ಬರೆಯಬಹುದು ಅದನ್ನ ಇನ್ನೊಮ್ಮೆ ಬರೆಯುತ್ತೇನೆ) "ಬಾಬಣ್ಣನತ್ರ ಕೇಳುದೆ೦ತದು? ನನ್ನ ಚಡ್ಡಿ ಕಿಮ್ಮತ್ತಿಲ್ಲ ಅವ್ನಿಗೆ. ಈ ಕೋಳಿ ಯಾವಾರ ಕಟ್ರೂ ಗೆಲ್ತದೆ." ಎ೦ದು ಬಡಾಯಿ ಕೊಚ್ಚಿಕೊ೦ಡು ಹೋದವ 2 ಸಾವಿರ ರೂಪಾಯಿ  ಕಳೆದುಕೊ೦ಡು ಬ೦ದಿದ್ದ..!

ಇನ್ನು ಅವನಿಗೆ ಅವನ ಅಂಗಡಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಹೇಳುತ್ತೇನೆ ಕೇಳಿ :
ಘಟನೆ 1
ಒಮ್ಮೆ ಹೀಗಾಗಿತ್ತು :

ನಮ್ಮೂರಿನ ಹೈಸ್ಕೂಲಿಗೆ ಬರುವ ಕೆಲವು ಹುಡುಗರಿಗೆ ಇ೦ಗ್ಲಿಷೆ೦ದರೆ ಕಬ್ಬಣದೋ, ಉಕ್ಕಿನದೋ ಕಡಲೆಯೇ.! ಅದೂ ಹೊಸತಾಗಿ ಬ೦ದ ಇ೦ಗ್ಲಿಷ್ ಮಾಸ್ತರು ಬೇರೆ ಸಿಕ್ಕಪಟ್ಟೆ ಸ್ಟ್ರಿಕ್ಟು! ಕೋಲನ್ನು ಹಿಡಿಯದೇ ಕ್ಲಾಸಿಗೇ ಬರುತ್ತಿರಲಿಲ್ಲ. ನಮ್ಮ ಮಗಾ ಕನ್ನಡಕ್ಕೆ ಚೊಲೋ ಮಾರ್ಕ್ಸ್ ತಗ೦ಡ್ಯಾ, ಆದ್ರೆ ಇ೦ಗ್ಲಿಷ್ನಲ್ಲಿ ಪೇಲ್ರಾ..ಎನ್ನುವುದು ಸುಮಾರಾಗಿ ಎಲ್ಲ ಪಾಲಕರ ಹಾಡು. ಪ್ರಶ್ನೋತ್ತರಗಳು ಬಾಯಿಪಾಟ ಇರದಿದ್ದರೆ ಕೋಲು ಮುರಿವವರೆಗೆ ಬಡಿಯುತ್ತಿದ್ದರು. ಅದೆಷ್ಟೋ ಜನರಿಗೆ ಅವರ ನೋಡಿಯೇ ಮರೆತು ಹೋಗುತ್ತಿತ್ತು. ಇ೦ತಿಪ್ಪಾಗ ಕೆಲವು ಉಡಾಳ ಹುಡುಗರು ಇ೦ಗ್ಲಿಷು ಕ್ಲಾಸನ್ನು ಬ೦ಕ್ ಮಾಡುವುದನ್ನು ಕಲಿತರು. ಮನೆಕಡೆಗೆ ಹೊರಟರೆ ಮನೆಯವರಿ೦ದ ಬೈಗುಳ, ಕ್ಲಾಸಲ್ಲಿದ್ದರೆ ಮಾಸ್ತರರ ಕೋಲಿನ ಹೆದರಿಕೆ. ಅದಕ್ಕೆ ಹುಡುಗರು ಕ೦ಡುಕೊ೦ಡ ಪರಿಹಾರವೇ ’ಬಾಬಣ್ಣನ ಗೂಡ೦ಗಡಿ’.!
ಮಧ್ಯಾಹ್ನದ ಲಘು ವಿರಾಮದ ವೇಳೆ ನಾಲ್ಕೈದು ಹುಡುಗರು ಶಾಲೆಯಿ೦ದ ಪರಾರಿಯಾಗಿಬಿಡುತ್ತಿದ್ದರು. ಅವರೆಲ್ಲ ನೇರ ಬಾಬಣ್ಣನ ಗೂಡ೦ಗಡಿಗೆ ಹೋಗಿ ಶೇ೦ಗಾ ತಿನ್ನುತ್ತ ಕೂರುತ್ತಿದ್ದರು. ಶಾಲೆ ಬಿಡುವ ಸಮಯಕ್ಕೆ ಸರಿಯಾಗೆ ಮನೆ ಕಡೆ ಹೋಗುತ್ತಿದ್ದರು. ಗೈರು ಹಾಜರಿಯ ಗಮನಿಸಿದ ಇ೦ಗ್ಲಿಷ್ ಮಾಸ್ತರು ವಿಷಯವನ್ನು ಪಾಲಕರ ಗಮನಕ್ಕೂ, ಹೆಡ್ ಮಾಸ್ತರರ ಗಮನಕ್ಕೂ ತ೦ದರು. ಆದರೆ ಮಕ್ಕಳು ಅದೆಲ್ಲಿ ಮಾಯವಾಗುತ್ತಿದ್ದರು ಎ೦ಬುದೇ ತಿಳಿಯದ ವಿಷಯವಾಗಿತ್ತು. ಅದ್ಹೇಗೋ  ವಿಷಯವನ್ನು ತಿಳಿದ ಇ೦ಗ್ಲಿಷ್ ಮಾಸ್ತರು. ಮೂರ್ನಾಲ್ಕು ಪಾಲಕರ ಜೊತೆಗೂಡಿ ಬಾಬಣ್ಣನ ಅ೦ಗಡಿಗೆ ರೈಡ್ ಮಾಡಿಯೇ ಬಿಟ್ಟರು. ದೂರದಲ್ಲಿ ಇ೦ಗ್ಲಿಷ್ ಮಾಸ್ತರರ ಕ೦ಡ ಮಕ್ಕಳು ಅ೦ಗಡಿಯ ಹಿ೦ಬದಿಯ ಗುಡ್ದಕ್ಕೆ ಓಟ ಕಿತ್ತರು.! ಮಾಸ್ತರರು ಹಿ೦ಬದಿಗೆ ಹೋಗಲು ದಾರಿ ಹುಡುಕುತ್ತಿದ್ದಾಗ ಬಾಬಣ್ಣ, "ಮಾಸ್ತರ್ರೆ, ಆತ್ಲಗೆ ಹೋಗ್ಬೆಡ್ರ, ಅಲ್ಲಿ ರಿಸರ್ಚ್ ಮಾಡ್ತ್ರು," ಮಾಸ್ತರರು ಕಕ್ಕಾ ಬಿಕ್ಕಿ. ಎಲ್ಲಿಯ ಬಾಬಣ್ಣ? ಎಲ್ಲಿಯ ರಿಸರ್ಚು? "ಅತ್ಲಗೆ ಹೊಗ್ಬೇಡಿ ಅ೦ದೆ, ರಿಸರ್ಚ್ ಮಾಡ್ತರಲ್ರ, ವಾಸನಿ ಬತ್ತದೆರ". ಮಕ್ಕಳ ವಿಷಯ ಮರೆತ ಮಾಸ್ತರರು ಲ್ಯಾಬೊರೆಟರಿಯನ್ನು ಕಲ್ಪಿಸಿಕೊ೦ಡು, ಹುಡುಕುತ್ತ ಮುನ್ನಡೆದರೆ ಬ೦ದದ್ದು ಮೂತ್ರದ ವಾಸನೆ.! ’ರಿಸೆಸ್’ ಬಾಬಣ್ಣನ ಬಾಯಲ್ಲಿ ’ರಿಸರ್ಚ’ ಆಗಿತ್ತು.!

ಘಟನೆ 2 :

ದಶಕಗಳ ಹಿ೦ದೆ ರೀಲ್ ಕ್ಯಾಮೆರ ಹಿಡಿದು ಮದುವೆ ಮನೆಯಲ್ಲಿ ಫೊಟೊ ಹೊಡೆಯಲು ಹೋಗುತ್ತಿದ್ದ ಪು೦ಡಲೀಕನ ಗುಟ್ಟು ರಟ್ಟಾದದ್ದು ಬಾಬಣ್ಣನಿ೦ದಲೇ. ಟಿಪ್ಪುಟಾಪಾಗಿ ಮದುವೆಮನೆಗಳಿಗೆ ಕ್ಯಾಮೆರದೊ೦ದಿಗೆ ಹೋಗಿ ಫ಼್ಲ್ಯಾಶನ್ನು ಫಳಫಳಿಸುತ್ತಿದ್ದ.  ಹೆ೦ಗಸರು ನಾಚಿಕೆಯಿ೦ದಲೇ ಪೋಸ್ ಕೊಟ್ಟರೆ, ಮಕ್ಕಳು ಅವನ ಸುತ್ತಮುತ್ತಲೇ ಸುಳಿಯುತ್ತಿದ್ದರು. ಮದುಮಕ್ಕಳೋ ಅವನ ಕ್ಯಾಮೆರ ಅವರ ಕಡೆಗೆ ತಿರುಗಿತೆ೦ದರೆ ಅಲರ್ಟ್ ಆಗಿಬಿಡುತ್ತಿದ್ದರು. ಮದುವೆಯ ಕೊನೆಯವರೆಗೂ ಮದುವೆ ಮನೆಯಲ್ಲೇ ಉಳಿದು ಚಹ ಕುಡಿದೇ ಹೊರಬೀಳುತ್ತಿದ್ದ. ಜನರು ಫೊಟೊ ಕೇಳಿದರೆ, " ತೊಳಿಸುಕೆ ಕೊಟ್ಟಾನೆ ಹಾ೦, ಮಸ್ತ್ ಬ೦ದದೆ ನಿಮ್ ಫೊಟೊ" ಎ೦ದು ಹೇಳುತ್ತಿದ್ದ. ಮದುವೆ ಮನೆಯ ಜನ ಅವನ ಹಿ೦ದೆ ಮು೦ದೆ ಕಾಡಹತ್ತಿದಾಗ, " ಫೊಟೊ ತೆಗೀವಾಗ ಕ್ಯಾಮೆರ ಮುಚ್ಚಳ ತೆಗ್ಯುಕೆ ಮರ್ತೊಗಿತ್ತು ನೋಡು, ಎ೦ತಕ್ಕೆನೊ ಮಾರಯ ಫೋಟೊ ಕಪ್ಪಗೆ ಬ೦ದದೆ"  ಎ೦ದೋ ಹೇಳಿ ಸಾಗಾಕುತ್ತಿದ್ದ.! ಹೀಗೇ ಸಾಗಿತ್ತು ಪು೦ಡಲೀಕ ಮತ್ತವನ ಕ್ಯಾಮೆರ ಲೀಲೆ.
 ಪು೦ಡ್ಲೀಕನಿಗೆ ಚಾಪೆ ಕೆಳಗೆ ನುಸುಳಿ ಗೊತ್ತಿದ್ದರೆ, ನಮ್ಮ ಹೀರೊ ಬಾಬಣ್ಣ ಬರೀ ರ೦ಗೋಲಿಯಷ್ಟೇ ಅಲ್ಲ ನೆಲದ ಅಡಿಗೂ ನುಸುಳಿ ಗೊತ್ತಿತ್ತು. ! ಅಸಲಿಗೆ ಪು೦ಡಲೀಕ ಕ್ಯಾಮೆರಾಕ್ಕೆ ರೀಲು ಹಾಕುವುದೇ ಇಲ್ಲವೆ೦ದೂ ಬರೀ ಬ್ಯಾಟರಿ ಸೆಲ್ಲುಗಳನ್ನು ಹಾಕಿ ಫ಼್ಲ್ಯಾಶನ್ನು ಫಳಫಳಿಸುತ್ತಾನೆನ್ನುವ ಗುಟ್ಟನ್ನು ಬಾಬಣ್ಣ, ಒ೦ದು ಮದುವೆಯಲ್ಲಿ ರಟ್ಟು ಮಾಡಿಬಿಟ್ಟಿದ್ದ. !

ಘಟನೆ 3 :

ಸ್ವಲ್ಪ ಹೊಟ್ಟೆಯಿರುವ ಆಚೆ ಕೇರಿಯ ಸುಬ್ರಾಯನಿಗೆ ಆಟದ ಪಾರ್ಟಿನ ಹುಚ್ಚು. ಅದರಲ್ಲೂ ಸ್ತ್ರೀ ವೇಷವೆ೦ದರೆ ಅವ ಸದಾ ಮು೦ದೆ. ಪಾರ್ಟು ಅಷ್ಟೇನು ಒಪ್ಪದಿದ್ದರೂ ಸ೦ಘದ ಅಧ್ಯಕ್ಷನಿಗೆ ಕೋಳಿ ಊಟ ಹಾಕಿಸಿ ಪಾರ್ಟು ಗಿಟ್ಟಿಸಿಕೊಳ್ಳುತ್ತಿದ್ದ. ಮತ್ತೆ ಆಟದ ಮಾರನೇ ದಿನ ಅ೦ಗಡಿಯ ಬಾಗಿಲಲ್ಲಿ ಬ೦ದು, ತನ್ನ ವೇಷ ನೋಡಿ ಗೇರುಬೀಜದ ಫ್ಯಾಕ್ಟ್ರಿಯ  ಹೆಣ್ಣು ಮಕ್ಕಳು ನಿಜವಾದ ಹೆಣ್ಣೆ೦ದೇ ತಿಳಿದಿದ್ದರೆ೦ದೂ. ಸ್ಟೇಜಿನ ಬಳಿ ಇದ್ದ ಹುಡುಗರೆಲ್ಲ ತನಗೆ ಲೈನ್ ಹಾಕುತ್ತಿದ್ದರೆ೦ದೂ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ.
ಊರ ಬಯಲಲ್ಲಿ ನಡೆದ ಯಕ್ಷಗಾನದಲ್ಲಿ ಸುಬ್ಬಿತ್ಲಿನ ಶ೦ಕ್ರ ಹಾಗೂ ದೊಳ್ಳು ಸುಬ್ರಾಯ ರಾಮ-ಸೀತೆಯಾಗಿ ಆಡಿದ್ದ ’ಸೀತಾ ಸ್ವಯ೦ವರ’ದಲ್ಲಿ ತನ್ನ ಸೀತೆಯ ಪಾರ್ಟಿನ ಬಗ್ಗೆ ಹೇಳಿಕೊಳ್ಳುತ್ತಿದ್ದ ಸುಬ್ರಾಯನ ಬಾಯಿಗೆ ಬಾಬಣ್ಣ ಬೀಗ ಹಾಕಿ ಬಿಟ್ಟಿದ್ದ.  " ಸುಬ್ರಾಯ ರಾಮಾ ಸೀತೆದು ಲವ್ ಮೆರೆಜೊ ಹ್ಯಾ೦ಗೊ? ಸೀತೆ ಮದ್ವೆಗೆ ಮು೦ಚೆನೆ ಬಸ್ರಾದ೦ಗೆ ಕಾಣತಿತ್ತಲೊ ಮೊನ್ನೆ ಆಟದಾಗೆ.! ಒ೦ಭತ್ತಿ೦ಗಳದ ಬಸ್ರಿಗೆ ಹೊಟ್ಟಿ ಇದ್ದಾ೦ಗಿತ್ತು." ಅ೦ದಾಗ ದೊಳ್ಳು ಸುಬ್ರಾಯ ತನ್ನ ಹೊಟ್ಟೆಯ ಮೇಲೇ ಕೈ ಆಡಿಸುತ್ತಲೇ ಪೆಕರು ಪೆಕರನ೦ತೆ ನಕ್ಕಿದ್ದ.! ಬಹುಶಃ ಇದಾದ ಮೇಲೆ ಸ್ತ್ರೀ ವೇಷವನ್ನು ಹಾಕುವುದೂ ನಿಲ್ಲಿಸಿದ್ದ.!

ಬಸ್ ಬರುವುದು ಗಂಟೆಗಳಷ್ಟು ತಡವಾದರೂ ಬೇಸರವೆನಿಸುವುದೇ ಇಲ್ಲ. ಅಂಗಡಿಯಲ್ಲಿನ ಸಂಭಾಷಣೆಗಳು ಬಹಳ ಮಜಾ ಕೊಡುತ್ತವೆ. ಒಂದು ಊರಿನ ಬಣ್ಣಗಳೆಲ್ಲವನ್ನೂ ಆ ಊರಿನ ಅಂಗಡಿಯಲ್ಲಿ ನೋಡಬಹುದು.

ಚಿಕ್ಕವಳಿರುವಾಗ ಕಡ್ಡಿ (ಬಳಪ ) ತರಲು ಬಾಬಣ್ಣನ ಅಂಗಡಿಗೆ ಹೋಗುತ್ತಿದ್ದೆ. ಚಾಕಲೇಟುಗಳ ನೋಡುತ್ತಾ ನಿಲ್ಲುತ್ತಿದೆ. ಬಾಲ್ಯದ ನೆನಪುಗಳ ಕೆಣಕಲು ಮೊನ್ನೆ ಅತ್ತ ಕಡೆ ಹೋಗಿದ್ದೆ . ಸುಮಾರಾಗಿ ಹಾಗೆ ಇದೆ ಅಂಗಡಿ. ಲೇಯ್ಸ್  ಪ್ಯಾಕೆಟ್ಟುಗಳ ಧಾಳಿಯೇನೂ  ಆದ ಹಾಗೆ ಕಾಣಲಿಲ್ಲ. ಪೆಪ್ಪರಮೆಂಟುಗಳೂ, ಶೇಂಗಾ  ಚಿಕ್ಕಿಗಳೂ, ಚಿಕ್ಕಂದಿನಿಂದಲೂ ನನಗೆ ಬಿಡಿಸಲಾಗದ ಒಗಟಾಗಿ  ಕಾಣುವ  ಗೋಲಿ ಸೋಡದ  ಬಾಟಲಿಗಳೂ ಹಾಗೆ ಇದ್ದವು. ಮೊದಲೆಲ್ಲ 1 ರೂಪಾಯಿಗೆ ಸಿಗುತ್ತಿದ್ದ ಶೇಂಗಾ ಪ್ಯಾಕೆಟ್ಟಿಗೆ 3 ರೂಪಾಯಿ ಆದದ್ದು ಗಮನಕ್ಕೆ ಬಂತುಗ಼ಜಾನನ ಥಿಯೇಟರ್ ಮುಚ್ಚಿದುದರಿಂದ  ಚಿತ್ತರಂಜನ ಥಿಯೇಟರಿನಲ್ಲಿರುವ ಸಿನೆಮಾದ ಪೋಸ್ಟರಿತ್ತು . 




ಸ್ವಲ್ಪ ಹೊತ್ತು ಕುಳಿತಿದ್ದೆ ಬೆಂಚುಗಳ ಮೇಲೆ. ರವಿಯು ಪಶ್ಚಿಮದಲ್ಲಿ ಇಳಿದಿದ್ದ.   ಇಮಾಮ್ ಸಾಬಿಯ ಹೆಂಡತಿ ಬಂದು 'ಬಾಬಣ್ಣ ನಿಮ್ದು ಎತ್ತು ಅಲ್ಲಿ ಗದ್ದೆ ಕೂಡೆ ಮಲಗಾನೇ. ನಮ್ಮನೇಲಿ ಅಡಿಗೆ ರೂಂ ಪೂರ ಇರುವೆ ಬಂದಾರೆ. ಲಕ್ಷಣ ರೇಖೆ ಆದೇ.?  ಇದ್ರೆ ಕೊಡು ನೋಡ್ವ' ಎಂದಳು.



ಚಿಟ್ಟೆಮನೆ ಮಾಸ್ತಿ, ಮಾದೇವನ ಜಮೀನಿನ ಮೇಲೆ 'ಇಂಜೆಕ್ಷನ್ ದಾವ' ತಂದಿಟ್ಟಿದ್ದು ಹೇಳುತ್ತಿದ್ದ. ಇಂಜೆಕ್ಷನ್ ಎನ್ನುವ ಪದವೊಂದೆ ಅರ್ಥವಾಗುತ್ತಿದ್ದ ತುಳಸು ಗೌಡ "ಅದೆಂಥ ಇಂಜೆಕ್ಸನ್ ತಂದಿದ್ಯೋ ಮಾಸ್ತಿ, ಡಾಕ್ಟರ ಕೊಡುದು ನೀನೆ ತಂದಿದ್ಯೋ ಹೆಂಗೋ ? " ಎಂದಿದ್ದ.  

 ಗಣಪತಿ ಭಟ್ರ ಮನೇಲಿ ಬೆಂಗಳೂರಲ್ಲಿರುವ ಅವರ ಮಗ ಹತ್ತು ಸಾವಿರ ರೂಪಾಯಿ ಕೊಟ್ಟು ತಂದ ನಾಯಿಯ ಬಗ್ಗೆ. ಗಾಳಿಮನೆ  'ಮಾಚ' ಹೇಳುತ್ತಿದ್ದರೆ, ಚಹ ಬೆರೆಸುತ್ತಲೇ ಬಾಬಣ್ಣ ಒಂದು ಕಿವಿಯನ್ನು ಸಂಭಾಷಣೆಯತ್ತ  ಬಿಟ್ಟಿದ್ದ. 'ಅದೆಂತದ ಬಾಬು ಸಿಂಹದ ನಮನಿ ಆದೇ ಆ ಕುನ್ನಿ, ಕೂಗ್ತದೆ ಹೆಂಗೆ, ದೊಡ್ದಾದ್ಮೇಲೆ ಹದಾ ಗಾವಟಿ ಆಕಳಷ್ಟು ಆಗುದು ನೋಡು. ಹತ್ತ ಸಾವರ ಎಂಥ ಕುಶಾಲು...?" ಎಂದಿದ್ದಕ್ಕೆ " ಅಲ್ಲ ಅದರೂ ನೀ ಎಂಥದೇ ಹೇಳು ಮಾಚ ಅದೆಂಥದೋ ಒಂದು ಎಮ್ಮಿ ರೇಟಾಯ್ತಲೋ ಹೌದೊ ಅಲ್ವೋ ತಂಗಿ" ಎಂದ. ಹೌದೆಂಬಂತೆ  ತಲೆ ಆಡಿಸುತ್ತ ನಾನು ಒಂದು ಚಾ ಕೊಡಲು ಹೇಳಿದೆ. 

ನಗರವು ವೇಗವಾಗಿ ಬದಲಾಗುತ್ತದೆ, ಬೆಳೆಯುತ್ತದೆ. ಹಳ್ಳಿಗಳು ಬಹಳ ನಿಧಾನವಾಗಿ ಬದಲಾಗುತ್ತಿವೆ. ಅಲ್ವಾ? 
ನಮ್ಮ ಹಳ್ಳಿಗಳು ಹಳ್ಳಿಗಳಾಗೆ  ಇರಲಿ. ಗೂಡಂಗಡಿ ಅಲ್ಲಿಯ ಚಾ, ಶೇಂಗಾ ಬೀಜ, ಗೋಲಿಸೋಡಾ-ಶರಬತ್ತು, ತಟ್ಟಿ , ಎಲ್ಲ ಹೀಗೆ   
ಇರಲಿ ಎಂದು ಮನವು ಹಾರೈಸುತ್ತಿತ್ತು. 

Monday, December 10, 2012

ಮಾಗಿಯೆ೦ದರೆ.........

ಮಾಗಿಯೆ೦ದರೆ....
ಮಧ್ಯಾಹ್ನ ಹನ್ನೆರಡಾದರೂ ಮೈ ಬಿಡದ ಸ್ವೆಟರು
ಕೊರಳ ಸುತ್ತದ ಮಫ಼್ಲರು 
ತಲೆಯ ಮೇಲೆ ಸ್ಕಲ್ ಕ್ಯಾಪಿನ ದರ್ಬಾರು 

ಮಾಗಿಯೆಂದರೆ......
ಊರ ಹೊರಗಿನ ಕಟ್ಟೆಯ ಮೇಲಿನ ಹರಟೆ
ಶೀತ ಕೆಮ್ಮುಗಳೊ೦ದಿಗೆ ಕರಾಟೆ
ಕ೦ಬಳಿ ರಗ್ಗುಗಳ ಭರಾಟೆ
ಮಾಗಿಯೆಂದರೆ......
ತಡವಾಗಿ ಎದ್ದೇಳುವ ಸೂರ್ಯ 
ಅದೆಷ್ಟು ಸಲ ಒದ್ದರೂ ಚಾಲೂ ಆಗದೆ ಹಠ ಮಾಡುವ ಗಾಡಿ
ಮಧ್ಯಾಹ್ನ ಸಮೀಪಿಸಿದರೂ ಉರಿಯುತ್ತಲೇ ಇರುವ ಹೆಡ್ ಲೈಟ್

ಮಾಗಿಯೆ೦ದರೆ.........
ಗೂಡ೦ಗಡಿಯ ಮು೦ದೆ ನಿ೦ತಿರುವ 
ಹರಕು ಜೀನ್ಸಿನ ಹುಡುಗನು ಬಿಡುತ್ತಿರುವ ಸಿಗರೇಟಿನ ಸುರುಳಿ ಹೊಗೆ
ಗರ೦ ಆಗಲು ಗುಟುಕರಿಸುವ ರ೦ 
ರಸ್ತೆ ದೀಪದಡಿ ಹದವಾಗಿ ಬೇಯುತ್ತಿರುವ ಜೋಳದ ತೆನೆ 

ಮಾಗಿಯೆ೦ದರೆ.........
ಮೈ ಮೇಲೆ ಗೀರಿದರೆ ಮೂಡುವ ಗೀರುಬಳ್ಳಿಯ ರ೦ಗೋಲಿ
ವ್ಯಾಸಲೀನು,ಕೋಲ್ಡ್ ಕ್ರೀಮು, ಗಟ್ಟಿಯಾಗುವ ಎಣ್ಣೆ, ತುಪ್ಪ
Saggittariusಗಳ ಹುಟ್ಟು ಹಬ್ಬ
ಮಾಗಿಯೆ೦ದರೆ.........
ಕಾಲ ಮೇಲೆ ಸುರಿದುಕೊ೦ಡರೆ ಹಿತವೆನಿಸುವ ಹ೦ಡೆಯೊಳಗಿನ ಬೆಚ್ಚನೆಯ ನೀರು
ಹಿತ್ತಲ ಸ೦ದಿಯಿ೦ದ ಏಳುವ ಕುಚ್ಚಲಕ್ಕಿಯ ಕ೦ಪು
ಕಾರಗದ್ದೆಯಲಿ ಇಳಿದ ಜೋಡಿ ಎತ್ತು
ಮಾಗಿಯೆ೦ದರೆ......
ಹೊಸ ಉಡುಗೆಯ ಹ೦ಬಲದಿ, ಎಲೆ ಉದುರಿಸಿ ನಿ೦ತ ಬೋಳು ಮರ
ಹಸಿರು ಗದ್ದೆಯ ಮೇಲೆ ಹಿತ್ತಲ ಹೊಗೆಯ ಉ೦ಗುರ 
ಜೇಡರ ಬಲೆಯ ಮೇಲಿನ ಇಬ್ಬನಿಯ ಚಿತ್ತಾರ
ಮಾಗಿಯೆ೦ದರೆ........
ಮಾಗಿಯೆ೦ದರೆ ......
ಮನೆಯ ಮೂಲೆಯಲ್ಲಿ ಮುಗುಮ್ಮಾಗಿ ಬ೦ದು ಕುಳಿತ ಹೊಸ ವರುಷದ ಕ್ಯಾಲೆ೦ಡರ್
   






Thursday, July 26, 2012

ಅಮೀನಾಳಿಗೆ ಮದುವೆಯಂತೆ ...

 'ಮಿಶೆಲ್' ಕಾಲ್ ಬಂದಾಗಿನಿಂದ ಏನೋ ಹೇಳಲಾಗದ ಚಡಪಡಿಕೆ. "ಅಮೀನಾಳಿಗೆ ಮದುವೆಯಂತೆ ಕಣೆ... " ಎಂದು ಆಕೆ ಹೇಳಿದಾಗಿನಿಂದ ಈ ಮಳೆಯನ್ನೇ ನೋಡುತ್ತಿದ್ದೇನೆ. ಮಳೆಯ ಹನಿಯ ಚಟಪಟಕ್ಕೆ ಅದ್ಯಾವುದೇ ನೆನಪನ್ನು ಬೇಕಾದರೂ ಮನದ ಬುಟ್ಟಿಯಿಂದ ಹೆಕ್ಕಿ ಹಸಿರಾಗಿಸುವ ತಾಕತ್ತಿದೆ. ಈಗ ನನ್ನ ಮನದ ಓಣಿಯಲ್ಲಿ ಅಮೀನಾಳ ನೆನಪುಗಳದ್ದೆ ಮೆರವಣಿಗೆ... ಮದುವೆಯೇ ಬೇಡ ಎನ್ನುತ್ತಿದ್ದ ಹುಡುಗಿ ಮದುವೆಯಾಗಲು ಹೊರಟಿದ್ದಾಳೆ ಎಂದರೆ...  

ಬಿಡದೆ ಚಿಟಿ ಚಿಟಿ ಸುರಿಯುವ ಮಳೆಯ ನೋಡುತ್ತಾ ಆರಾಮ ಖುರ್ಚಿಯಲಿ ಕೂತಿದ್ದೆ. ಹೌದು ಇಂಥದ್ದೇ ಮಳೆಯಲ್ಲಿ ಅವಳೊಂದಿಗೆ ಸುತ್ತುತ್ತಿದ್ದೆ ನಾನು.
ಇನ್ನೂ ನೆನಪಿದೆ  ನನಗೆ ಅವಳ ಮೊದಲ ಪರಿಚಯ. ಕ್ಲಾಸಿಗೆ ಹೊಸಬಳಾಗಿ ಸೇರಿಕೊಂಡಿದ್ದ ನಾನು ಅದೇನೋ ಗೀಚುತ್ತ ಸುಮ್ಮನೆ ಹಿಂದಿನ ಬೆಂಚಲ್ಲಿ ಕೂತಿದ್ದೆ. ಥಟ್ಟನೆ ಹೆಗಲ ಮೇಲೆ ಬಿದ್ದ ಯಾರೋ ಕೈ ಇಟ್ಟ ಅನುಭವ. "ಹಾಯ್ ಹೇಗೀದಿಯಾ? ನಾನು ಅಮೀನಾ " ಎಂದು ನಿಷ್ಕಲ್ಮಶ ನಗುವನ್ನು ಬೀರುತ್ತ ಕೈಕುಲುಕಿ ಸ್ನೇಹದ ಹಸ್ತ ಚಾಚಿದ್ದಳು. ಕೈ ಕುಲುಕುತ್ತಲೇ ದಿಟ್ಟಿಸಿದ್ದೆ ಅವಳ. ಅವಳ ಹೆಸರಿಗೆ ಕೊನೆಯ ಪಕ್ಷ ತಲೆಯ ಮೇಲೊಂದು ಶಾಲನ್ನು ನಿರೀಕ್ಷಿಸಿದ್ದ ನನಗೆ. ಕಂಡದ್ದು ಬೆನ್ನಿನವರೆಗೆ ಇಳಿಬಿಟ್ಟಿದ್ದ ನೀಳ ಅರೆಗೆಂಪು ಕೂದಲು, ಕಿವಿಯೋಲೆಗಳೇ ಇಲ್ಲದ ಕಿವಿ, ಕಣ್ಣಿಗೆ ಒಂದೆಳೆಯ ಕಾಡಿಗೆ, ಕೈಯಲ್ಲಿ ಕಾಣುತ್ತಿದ್ದ ದೊಡ್ಡ ಕೈಗಡಿಯಾರ, ಬಿಳಿಯ ಕುರ್ತಾ , ಜೀನ್ಸ್ ತೊಟ್ಟಿದ್ದ ಬಿಂದಾಸ್ ಹುಡುಗಿ. ನನ್ನ ಪಕ್ಕದಲ್ಲೇ ಕೂರಲು ನಿರ್ಧರಿಸಿಯೇ ಬಂದಿದ್ದಳು. ಮಲ್ಲಿಗೆ ಬಿರಿಯುವ ತೆರದಿ  ಚಿಕ್ಕಮಂಗಳೂರು ಶೈಲಿಯ ಕನ್ನಡ ಮಾತನಾಡುವ ಹುಡುಗಿ, ಅಪರೂಪಕ್ಕೆ ಕನ್ನಡವ ಕಾಣುವ ಕ್ಲಾಸಿನಲ್ಲಿ ನನಗೆ ವಿಶೇಷವಾಗಿ ಕಂಡಿದ್ದಳು. ಅದೊಂದೇ ಸಾಕಿತ್ತು ನಮ್ಮಿಬ್ಬರ ನಡುವೆ ಸ್ನೇಹವ ಬೆಸೆಯಲು. ಇಡೀ ದಿನ ವಟಗುಡುತ್ತಲೇ ಇರುತ್ತಿದ್ದ, ಬೋರು ಹೊಡೆಸುವ ಕ್ಲಾಸಿನಲ್ಲಿ crossword ತುಂಬುತ್ತಿದ್ದ ನಾವು ಅದೆಷ್ಟೋ ಬಾರಿ ಲೆಕ್ಚರರಿಗೆ 'ಅಪೋಲೋಜಿ ಲೆಟರ್ ' ಕೊಟ್ಟದ್ದಿದೆ.! ಕ್ಲಾಸಿನಿಂದ ಹೊರಗೆ ಹಾಕಿದ ನಂತರ ಕ್ಯಾಂಟೀನಿನಲ್ಲಿ ಕಾಫಿ ಹೀರಿದ್ದಿದೆ. 
 
ಮೆಕೆನಿಕ್ ಬ್ರಾಂಚಿನ ಹುಡುಗರದ್ದೇ ದೋಸ್ತಿ ಅವಳಿಗೆ. 'ರಾಯಲ್ ಮನಸ್ಸು ಕಣೆ ಆ ಹುಡುಗರದ್ದು , ಮೋಟು ಬುದ್ಧಿಯ ಇಡೀ ದಿನ code, software, errors ಅನ್ನೋ ಈ ಕಂಪ್ಯೂಟರ್ ಸೈನ್ಸ್ ಹುಡುಗರ ಹಾಗಲ್ಲ'. ಅನ್ನುವ ಅವಳ ಬಿಂದಾಸ ಹೇಳಿಕೆಗೆ ಬೆರಗಾಗಿದ್ದೆ.ಇಡೀ ಕಾಲೇಜಿಗೆ 'ಗಂಡು ಬೀರಿ ' ಎಂದೇ ಹೆಸರಾದ  FZ ಬೈಕ್  ಓಡಿಸುವ ಹುಡುಗಿಯ ipod ತುಂಬೆಲ್ಲ ಜಯಂತ ಕಾಯ್ಕಿಣಿಯ, Bryan Adams ಹಾಡುಗಳು.! ರಮ್ಜಾನಿಗೆ 'ರೋಜಾ' ಇಡುತ್ತಿದ್ದ ಹುಡುಗಿ. ಅದೆಂದೂ ಶಾಲು ಕೂಡ ಹೊದ್ದವಳಲ್ಲ!  ಲಾಂಗ್ ರೈಡಿಗೆ ಹುಚ್ಚೆದ್ದು ಹೋಗುತ್ತಿದ್ದ ಹುಡುಗಿ. ಸಮುದ್ರದ ತಟದಲ್ಲಿ ನನ್ನೊಂದಿಗೆ ಕಿಲೋಮೀಟರ್ ಗಟ್ಟಲೆ ನಡೆಯುತ್ತಿದ್ದಳು.! ಹುಡುಗರೊಂದಿಗೆ ಹುಡುಗರ ರೀತಿಯಲ್ಲೇ ಇರುವ ಅಮೀನಾ. ಹುಡುಗಿಯರ ಗುಂಪಿನಲ್ಲಿ ಕಾಣುತ್ತಿದ್ದದ್ದೇ ಅಪರೂಪ. ಸಂಜೆ ಮನೆಯ ಹತ್ತಿರದ ಬಡ ಮಕ್ಕಳಿಗೆ ಪಾಠ ಹೇಳಿ ಕೊಡುವ ಅವಳ ಮನಸ್ಸು ಕೆಲವರಿಗಷ್ಟೇ ಗೊತ್ತಿತ್ತು.

ಹುಡುಗಿಯ ನಿಜ ಮನಸ್ಸು ನನಗೆ ತಿಳಿದ ದಿನ ಇನ್ನೂ ನೆನಪಿದೆ .ಇಂಥದ್ದೇ ಮಳೆ ಸುರಿಯುತಿತ್ತು ಆ ದಿನ ಹುಡುಗಿ ಕಾಲೇಜು ಬಸ್ಸಿನ ಹಿಂದಿನ ಸೀಟಿನಲ್ಲಿ ಕುಳಿತು 'ನಿನ್ನಯ ಒಲುಮೆಯ ಲೋಕಕೆ' ಹಾಡುವಾಗಲೇ ಇದೇನಾಗಿದೆ ಈ ಹುಡುಗಿಗೆ ಅಂದುಕೊಂಡಿದ್ದೆ. ವಿಶೇಷವೇನಾದರೂ ಇದ್ದರೆ ಅವಳೇ ಹೇಳಲಿ ಎಂದ ಮನಸ್ಸಿನೊಡನೆ ಸುಮ್ಮನೆ ಕೂತಿದ್ದೆ, ಮಳೆಗೆ ಮಸುಕಾಗುವ ಬಸ್ಸಿನ ಕಿಟಕಿಯ ಗಾಜಿನಲ್ಲಿ ನನ್ನ ಹೆಸರ ಬರೆಯುತ್ತ. ದಾರಿ ಮಧ್ಯದಲ್ಲೇ 'ಇಲ್ಲೇ ಇಳಿಯುವ ಬಾರೆ' ಎನ್ನುತ್ತಲೇ ನನ್ನ ಕೈ ಹಿಡಿದು ಎಳೆದು ಹೊರಟೆ ಬಿಟ್ಟಳು. ಸುರಿವ ಮಳೆಯಲ್ಲಿ ಛತ್ರಿಯ ಕೊನೆಗೆ ಇಳಿಯುವ ಮಳೆಹನಿಗಳ ಜೊತೆ ಆಟವಾಡುತ್ತಲೇ 'ಅವಿ ಅದ್ಯಾವುದೋ ಹುಡುಗಿಯ ಜೊತೆ ಅಲೆಯುತ್ತಿದ್ದಾನಂತೆ ಕಣೆ... ' ಎಂದು ಅವಳಿಷ್ಟಪಡುವ ಅವಿನಾಶನ ಕುರಿತು ಹೇಳಿದಾಗ, ಸುಮ್ಮನೆ ಅವಳತ್ತ ನೋಡಿದ್ದೆ. ' ಯಾರನ್ನೂ ಪ್ರೀತ್ಸೋದೆ ಇಲ್ಲ ಅಂತ ಹೇಳ್ತಾ ಹೇಳ್ತಾ ಅವನನ್ನ ಇಷ್ಟ ಪಟ್ಟೆ. ಅವ್ನು ಸಿಗೋದಿಲ್ಲ ಅಂತ ಗೊತ್ತಿದ್ರೂ.! ಅದ್ಯಾಕೋ  ಫೋಟೋಗಳೆಲ್ಲ ರುಕ್ಮಿಣಿ, ಸತ್ಯಭಾಮೆಯರ ಬದಿಗೊತ್ತಿ ಕೃಷ್ಣನ ಹೆಗಲ ಮೇಲೆ ತಲೆ ಇಟ್ಟು ನಿಲ್ಲುವ ರಾಧೆ ತುಂಬಾ ಕಾಡ್ತಾಳೆ ಕಣೆ. .   ... " ಎಂದು ಮಳೆಹನಿಗೆ ಮುಖವೊಡ್ಡಿ ಕಣ್ಣೀರು ಅಡಗಿಸುವ ಪ್ರಯತ್ನವನ್ನು ಮಾಡಿದ್ದಳು, ನನ್ನ ಡೈರಿಯ ಕೊನೆಗೆ ಅಂಟಿಸಿಕೊಂಡಿದ್ದ ISKCON ತುಂಟ ಕೃಷ್ಣನ ಫೋಟೋವನ್ನು ಹಠಮಾಡಿ ಕಿತ್ತುಕೊಂಡು ಹೋಗಿದ್ದ ಅಮೀನಾ.! ಸುಮ್ಮನೆ ಅವಳ ಕೈಹಿಡಿದು ಅದೆಷ್ಟು ದೂರ ನಡೆದಿದ್ದೇನೋ.. ಸುರಿವ ಮಳೆಗೆ, ಕಳೆದ ದಾರಿಗೆ ಮಾತ್ರ ತಿಳಿದಿರಬೇಕು ನಾವು ನಡೆದ ದೂರ ! 

 ಹುಡುಗಿಯರು ಕೆಣಕಿದಾಗಲೆಲ್ಲ" ಯಾರಿಗೆ ಬೇಕೇ ಮದುವೆ, ಮಕ್ಕಳು. ನಾನಂತೂ ಒಬ್ಬಳೇ ಆರಾಮಾಗಿ ಇದ್ದೇನೆ ನೋಡು.  ಅಡುಗೆ ಮಾಡಿ ಬಡಿಸುತ್ತ, ಮಕ್ಕಳನ್ನು ಹೆರುತ್ತ, ಬುರಖಾ ಹಾಕಿಕೊಂಡು ತಿರುಗಾಡುವ ಬದುಕೇ ಬೇಡ" ಎನ್ನುತ್ತಿದ್ದ ಅಮೀನಾ.ಮದುವೆಯಾಗುವ ಹುಡುಗನ ಬಗ್ಗೆ ಅದ್ಯಾವುದೇ ಕನಸುಗಳೇ ಇಲ್ಲದ ಹುಡುಗಿ, ಸದ್ದಿಲ್ಲದೇ ಮದುವೆಯ ತಯಾರಿಯಲ್ಲಿದ್ದಾಳೆ ಅಂದರೆ..! ಈ ಹುಡುಗಿಯರೇ ಹೀಗೆ ಎನಿಸಿಬಿಡುತ್ತದೆ. ಬಾಲ್ಯದಲ್ಲಿ ಅಡುಗೆ ಆಟ ಆಡುವ ಹುಡುಗಿಯರು ಹದಿಹರೆಯದಲ್ಲಿ ಅಡುಗೆ ಮನೆಯ ಕಡೆಗೆ ತಲೆ ಕೂಡ ಹಾಕದೆ ಅಡುಗೆಯ ಮಾಡಲು ಬರುವುದೇ ಇಲ್ಲ ಎನ್ನುತ್ತಾರೆ. ಆದರೆ ಮದುವೆಯಾಗುತ್ತಲೇ ಸೇರಿ ಬಿಡುವುದು ಅಡುಗೆ ಮನೆಯನ್ನೇ.! ಬಾಲ್ಯದಲಿ ಗೊಂಬೆಯಾಟವ ಆಡುತ್ತ, ಗೊಂಬೆಗಳಿಗೆ ಮದುವೆ ಮಾಡಿಸುತ್ತ. ಒಂದು ವಯಸ್ಸಿನಲ್ಲಿ ಮದುವೆಯೇ ಬೇಡ ಎನ್ನುತ್ತಲೇ ಹಸೆ ಮಣೆ ಏರಿಬಿಡುತ್ತಾರೆ. ! ಈ ಹುಡುಗಿಯರ ಮನದಲ್ಲಿ, ಜಗದಲ್ಲಿ  ಮುಗ್ಧತೆ-ಪ್ರಬುದ್ಧತೆಗಳ ಮಿಳಿತವಿದೆ,  ಚಾಂಚಲ್ಯ -ಧೃಢತೆಯ ಸಂಗಮವಿದೆ,ಕನಸು- ವಾಸ್ತವತೆಯ ಅರಿವಿದೆ. ಒಂಥರಾ dual nature. ಭೂಮಿಯ ಎರಡು ಧ್ರುವಗಳ ಸಂಗಮ. ಅಥವಾ ಎರಡು ವಿರುದ್ಧ ವ್ಯಕ್ತಿತ್ವಗಳ ಸಂಗಮ. 

 ರಿಂಗಿಣಿಸಿದ ಫೋನಿನ ಕರೆ ನನ್ನ ನೆನಪಿನ ಅಲೆಗಳನ್ನು ತಡೆದು ನಿಲ್ಲಿಸಿತ್ತು. 'ameena calling' ಎಂದು ಬರುತ್ತಿದ್ದ ಕರೆಯನ್ನು ಸ್ವೀಕರಿಸಿದೆ. " breaking news my dear. ನನ್ನ ಮದುವೆ ಕಣೆ, ಬರ್ತೀಯಲ್ವಾ? ಕಾದಿರ್ತೇನೆ details ಎಲ್ಲ ಮೆಸೇಜ್ ಮಾಡ್ತನೇ . "ಎಂದು ನನ್ನ ಉತ್ತರವನ್ನೂ ಕಾಯದೆ ಫೋನಿಟ್ಟು ಬಿಟ್ಟಳು ಹುಡುಗಿ!

ಕಾಲೇಜು 'Annual day'ಗೂ ಸರಳವಾಗಿ ಕುರ್ತಾ ಜೀನ್ಸಿನಲ್ಲಿ ಬಂದಿದ್ದ, ಎಂದೂ ಜರತಾರಿ ಸೀರೆಯ, ಬಂಗಾರವ, ಆಡಂಬರವ ಇಷ್ಟಪಡದ ಅಮೀನಾಳನ್ನು ಜರತಾರಿಯಲ್ಲಿ, ಕುಂದಣದಲ್ಲಿ ನೋಡಲು ಮನಸ್ಸು ತವಕಿಸುತ್ತಿತ್ತು. 

Friday, July 13, 2012

ಚಿಕನ್ ಪಾಕ್ಸೂ, ನನ್ನ ಮಿನಿ ಮಜ್ಜನವೂ ...



Blog ನಲ್ಲಿ ಏನೂ ಬರೆಯದೆ ಬಹಳ ದಿನಗಳೇ ಕಳೆದು ಹೋದವು. ನನಗೆ ಬರೆಯಲು ವಿಷಯಗಳು ನೆನಪಾಗುವುದು ಬಚ್ಚಲ ಮನೆಯಲ್ಲಿ ಸ್ನಾನ ಮಾಡುವಾಗಲೇ..! ತಲೆಯ ಮೇಲೆ ನೀರು ಬಿದ್ದಾಗಲೇ ಹೊಸ ವಿಷಯಗಳು ತಲೆಯೊಳಗೆ ಬರುವುದು..! ಇಂತಿಪ್ಪಾಗ ಹದಿನೆಂಟು ದಿನಗಳ ಕಾಲ ಸ್ನಾನವೇ ಇಲ್ಲದಿದ್ದಾಗ ಬರೆಯುವುದಾದರೂ ಹೇಗೆ ನೀವೇ ಹೇಳಿ ? ಇರಲಿ ಬಿಡಿ ವಿಷಯಕ್ಕೆ ಬರುತ್ತೇನೆ.


ಪರೀಕ್ಷೆಯ ಮುಗಿಸಿಕೊಂಡು ಬಂದ ಖುಷಿಯಲ್ಲಿ ಅಜ್ಜಿಮನೆಗೆ ನನ್ನ boy friend (ಕ್ಯಾಮೆರ) ಜೊತೆ ಹೋಗಿ ಮನೆಗೆ ಬಂದ ನನಗೆ ಸಣ್ಣಗೆ ತಲೆ ನೋವು, ಜ್ವರ . (ಹಾಗೆಲ್ಲ ಸುಮ್ಮನೆ ತಲೆ ನೋವು ಬರುವುದಿಲ್ಲ ಮಾರಾಯ್ರೆ. 'ತಲೆ' ಇದ್ದವರಿಗೆ ಮಾತ್ರ ತಲೆನೋವು ಬರುವುದಂತೆ.!).  ಮಲೆನಾಡಿನ ಮಳೆಯಂತೆ ಮಾತನಾಡುವವಳು ಬಯಲು ಸೀಮೆಯ ಮಳೆಯಾಗಿಬಿಟ್ಟಿದ್ದೆ. ಕ್ಯಾಮೆರಾದ ಜೊತೆ ಅಲೆದದ್ದು ಜಾಸ್ತಿಯಾಯಿತೆಂದು ಪಪ್ಪ ಗೊಣಗುತ್ತಲೇ 'ಚಂದ್ರು' ಡಾಕ್ಟರರ ಬಳಿ ನನ್ನ ಕರೆದೊಯ್ಯಲು ತಯಾರಾದರು.  ಅದೇನೋ ಒಂದು ಬಗೆಯ ಅಲರ್ಜಿ ಈ ಡಾಕ್ಟರಗಳೆಂದರೆ, ಅವರ ಗುಳಿಗೆಗಳೆಂದರೆ, ಚುಚ್ಚುವ ಸೂಜಿಗಳ ಕಂಡರೆ.! ಬಟ್ಟೆ ಬದಲಿಸಲು ಹೊರಟಾಗಲೇ ನನ್ನ ಎಡಗೈ ತೋಳಮೇಲೆ ಕಂಡದ್ದು ಸುಟ್ಟ ಗುಳ್ಳೆ.! ನಾನೆಲ್ಲಿ ಬಿಸಿ ಎಣ್ಣೆಯ ಸಿಡಿಸಿಕೊಂಡಿದ್ದೇನೆ ಎಂದು ಯೋಚಿಸುತ್ತಲೇ ಅಮ್ಮನಿಗೆ ತೋರಿಸಿದರೆ ಅಮ್ಮ  "ಅಯ್ಯೋ ನಿನಗೆಲ್ಲಿಂದ ಬಂತೇ ಇದು.! chickenpox ಗುಳ್ಳೆ ಇದು "ಎಂದು declare ಮಾಡಿಬಿಟ್ಟರು..! 


ಡಾಕ್ಟರರು chickenpox ಎಂದು confirm ಮಾಡಿ 3 ಇಂಜೆಕ್ಷನ್ ಚುಚ್ಚಿದರು.( ಹತ್ತನೇ ತರಗತಿಯಲ್ಲಿ TT ಇಂಜೆಕ್ಷನ್ ತೆಗೆದುಕೊಂಡ ನಂತರ ತೆಗೆದುಕೊಂಡ ಹ್ಯಾಟ್ರಿಕ್ ಇಂಜೆಕ್ಷನ್ಸ್ ಇವು). ಅದೃಷ್ಟ ಬಂದರೆ ಒದ್ದು ಬರುವುದಂತೆ ಹಾಗೆ ದುರಾದೃಷ್ಟವು ಕೂಡ.!.(chickenpox ನಿನ್ನ ವೇದಾಂತಿಯನ್ನಾಗಿ ಮಾಡಿದೆ ಅಂತೀರಾ? ) ಅಷ್ಟಕ್ಕೇ ಸುಮ್ಮನಿರದ ಚಂದ್ರು ಡಾಕ್ಟರರು ಪಥ್ಯವನ್ನು ಹೇಳಿಯೇ ಬಿಟ್ಟರು. "ನಂಜಿನದನ್ನೇನು ಕೊಡಬೇಡಿ, ಚಪ್ಪೆ ಊಟ, ಹಣ್ಣುಗಳನ್ನು ತಿನ್ನಬಹುದು."  "ಮಾವಿನ ಹಣ್ಣು ತಿನ್ನಬಹುದಾ ?" ಇಂಜೆಕ್ಷನ್ ತೆಗೆದುಕೊಂಡ ನೋವಿನ ಎಡೆಯಲ್ಲೂ ನನ್ನ ಪ್ರಶ್ನೆ. "ಏನು ಮಾವಿನ ಹಣ್ಣಾ? " ಎನ್ನುತ್ತಾ ಇಲ್ಲ ಎಂದು ತಲೆ ಆಡಿಸಿ ಬಿಟ್ಟಿದ್ದರು.! ಮನೆಯಲ್ಲಿ ನನ್ನ ರೂಮಿನ ಪಕ್ಕದ ರೂಮಿನಲ್ಲಿ ನನಗಾಗಿ ಕಾಯುತ್ತಿರುವ ಬಂಗಾರದ ಬಣ್ಣದ ಮಾವಿನ ಹಣ್ಣುಗಳು ನನ್ನ ಅವಸ್ಥೆಯ ನೋಡಿ ಕಣ್ಣೀರಿಟ್ಟ೦ತೆ ಅನಿಸಿತು ನನಗೆ.! ಮಳೆಗಾಲದಲ್ಲಿ ಸುರಿಯುವ ಮಳೆಯನ್ನೂ ಕಿಟಕಿಯಿಂದ ನೋಡುತ್ತಾ ಹಲಸಿನ ಚಿಪ್ಸ್, ಹಲಸಿನ ಹಪ್ಪಳ-ಕಾಯಿಬೆಲ್ಲ ತಿನ್ನುವ ನನ್ನ ಕನಸಿನೆ ಬಲೂನಿಗೆ ಸೂಜಿ ಚುಚ್ಚಿದ ಅನುಭವ.!




ಈ ಪ್ರಸಂಗದ ಎರಡನೇ ಅಧ್ಯಾಯ ಶುರುವಾದದ್ದು ಮನೆಗೆ ಬಂದಮೇಲೆ. ರಾತ್ರಿಯಾಗುವುದರೊಳಗೆ ಆಗಸದಲ್ಲಿ ನಕ್ಷತ್ರಗಳು ತುಂಬಿಕೊಂಡಂತೆ ನನ್ನ ಮುಖದಮೇಲೆ ಸೂಜಿಯ ಮೊನೆಯಿಡಲೂ ಆಗದ ಹಾಗೆ ಗುಳ್ಳೆಗಳು ತುಂಬಿ ಹೋದವು.! ಒಂದುಬಗೆಯ ಉರಿ,  ತುರಿಕೆ ಬೇರೆ. ಹೇಳಲಸಧ್ಯಾವಾಗದ ವೇದನೆ.ಅಷ್ಟರಲ್ಲಿ "ಉಪ್ಪು ಹಾಕಡ, ಚಪ್ಪೆ ಗಂಜಿ, ಹೆಸರು ಕಟ್ಟು (ಬೇಯಿಸಿದ ಹೆಸರು ಬೇಳೆ), ನಂಜಿನ ವಸ್ತು ಬದಿಗೂ ತಕಹೋಗಡ" ಅಜ್ಜ-ಅಜ್ಜಿ ಇಬ್ಬರಿಂದಲೂ ಕಟ್ಟಪ್ಪಣೆ ನನ್ನ ಅಮ್ಮನಿಗೆ.! ಸ್ನೇಹಿತರಿಗೆಲ್ಲ ಫೋನು ಮಾಡಿ ಸಾರಿಯಾಯಿತು. "ನಂಗೆ chickenpox.... ".  ಒಬ್ಬ ಗೆಳತಿ " ಕೋಳಿಯನ್ನು, ಕೋಳಿ ಮೊಟ್ಟೆಯನ್ನು ಬಿಡು, ಮೊಟ್ಟೆ ಹಾಕಿದ ಕೇಕ್ ಕೂಡ ತಿನ್ನದ ನಿನ್ನಂಥ ಆಸಾಮಿಗೆ ಅದೆಲ್ಲಿಂದ 'chickenpox' ಬಂತೇ? " ಹೌದು ಎಲ್ಲ ಗೆಳೆಯರೆದುರಿಗೂ ನಾನು '200% ವೆಜಿಟೇರಿಯನ್ ' ಮೊಟ್ಟೆ ಹಾಕಿದ ಕೇಕ್ ಕೂಡ ತಿನ್ನೋದಿಲ್ಲ. ಎಂದು ಹೇಳುತ್ತಿದ್ದೆ. ಸ್ನೇಹಿತರ ಹುಟ್ಟು ಹಬ್ಬಕ್ಕೆ ಎಲ್ಲರಿಗೂ ಕೇಕ್ ಆದರೆ ನನಗೆ ಚಾಕಲೇಟ್ ಇರುತ್ತಿತ್ತು.! ಹೀಗಿದ್ದ ನನಗೆ ಮಾಂಸಹಾರಿ ಹೆಸರಿನ ಖಾಯಿಲೆ..! ಇದಕ್ಕೇ ಹೇಳುವುದಿರಬೇಕು ವಿಪರ್ಯಾಸ ಎಂದು !!ಫೋನ್ ಮಾಡಿದ ಒಬ್ಬ ಗೆಳೆಯನಂತೂ "ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಬರೋ ಖಾಯಿಲೆ ಕಣೆ ಇದು, ನಿನಗೆಲ್ಲಿಂದ? ಆ varicella zoster virus (VZV) ಗೆ confuse ಆಗಿರಬೇಕು. ಅದರಲ್ಲೂ ನಿಂಗೆ wisdom tooth ಬೇರೆ ಬಂದಿಲ್ಲ. (wisdom toothಗೆ  ನಾನು 'ಬುದ್ಧಿವಂತ' ಹಲ್ಲು ಎಂದೇ ಹೇಳುವುದು. ಅದಕ್ಕೆ ಗೆಳೆಯರೆಲ್ಲ. ನಿಂಗೆ wisdom tooth ಬರೋಕೆ ಚಾನ್ಸೇ ಇಲ್ಲ ಬುದ್ಧಿ ಇರೋರಿಗೆ ಮಾತ್ರ ಅದು ಬರೋದು ಎಂದು ಯಾವಾಗಲೂ ಹೇಳ್ತಿರ್ತಾರೆ ) ಅಂದುಬಿಟ್ಟ.! ಇನ್ನೊಬ್ಬರು ಫೋನ್ ಮಾಡಿ ಹದಿನೈದು ದಿನ ಸ್ನಾನವಿಲ್ಲ ನೋಡು, ಪಾರ್ವತಿ ದೇವಿಯಂತೆ ಮಣ್ಣಿನ ವಿಗ್ರಹವನ್ನೆನಾದರೂ ಮಾಡುವ ಇರಾದೆ ಇದೆಯೋ ಎಂದೂ ಕೇಳಿ ಬಿಟ್ಟರು!ಆ ನೋವಿನಲ್ಲೂ ನಕ್ಕಿದ್ದೆ.
calamine ಹಚ್ಚಿದ ಮೇಲೆ ಉರಿಯ ಅನುಭವ ಶಮನವಾದಂತೆ ಅನಿಸಿದರೂ ಭಯಂಕರ ಎನಿಸುವ ನಿಶ್ಯಕ್ತಿ. ಹಾಸಿಗೆ ಬಿಟ್ಟು ನಾನು ಏಳದಂತೆ ಮಾಡಿತ್ತು. ಮಲಗಿದ್ದಾಗಲೂ ಸುತ್ತಲಿನ ಜಗತ್ತೆಲ್ಲ ತಿರುಗಿದಂತೆ ಕಂಡಾಗ, 'ಭೂಮಿ ತನ್ನ ಕಕ್ಷದ ಮೇಲೆ ತಿರುಗುತ್ತ ಸೂರ್ಯನ ಸುತ್ತ ತಿರುಗುತ್ತದೆ' ಎಂದು ಶಾಲಾ ದಿನಗಳಲ್ಲಿ ಓದಿದ್ದು confirm ಆಯಿತು.! ತಲೆಯ ಮೇಲೆಲ್ಲಾ ಎದ್ದಿದ್ದ ಗುಳ್ಳೆಗಳು ರಾತ್ರಿ ನಿದ್ದೆ ಮಾಡಲು ಬಿಡಬೇಕಲ್ಲ.! ಬುದ್ಧನ ಕುರಿತು ಹೇಳಿದ್ದ 'ಜಗವೆಲ್ಲ ಮಲಗಿರಲು ಅವನೊಬ್ಬ ಎದ್ದಿದ್ದ' ನೆನಪಾಗಿ. ಬುದ್ಧನಿಗೂ chickenpox ಆಗಿತ್ತಾ ಅನ್ನೋ ಯೋಚನೆ ಬಂದು ಬಿಟ್ಟಿತ್ತು.! ಮಲಗಿದಲ್ಲೇ ಇದಕ್ಕೇ chickenpox ಎಂಬ ಹೆಸರು ಏಕೆ ಎಂಬ ಪ್ರಶ್ನೆ ಕೊರೆಯುತ್ತಿತ್ತು. ಅಮ್ಮನಲ್ಲಿ ಕೇಳಿದಾಗ. ಅಲ್ಲೇ ನೆಲ ಒರೆಸುತ್ತಿದ್ದ ನಾಗಮ್ಮಕ "ಇದು ಕೋಳಿಗೆ ಬತ್ತದೆರ, ಇದು ಬಂದಾಗ ಕೋಳಿ ಕೂರತೆ ಕೂತ್ಕತ್ತದೆ. ಎಂತದೂ ತಿನ್ನುದಿಲ್ಲ, ಗೋಧಿ ಹಾಕ್ಬೇಕು ಆಗ" ಎಂದಾಗ ನಾಗಮ್ಮಕ್ಕನ GK ಗೆ ಮನದಲ್ಲೇ ತಲೆದೂಗಿದ್ದೆ.


ಬೆಳಿಗ್ಗೆ ತಿಂಡಿಗೆ ಗೋಧಿಯ ದೋಸೆ ಅಥವಾ ಚಪಾತಿ, ಸಪ್ಪೆ ಊಟ, ಬೇಯಿಸಿದ ತರಕಾರಿಯ ಹೋಳುಗಳು, ಹಣ್ಣುಗಳು ಇವಿಷ್ಟೇ ನನ್ನ ಆಹಾರ. ಹಿಂದೆ ಕಾಮಾಲೆಯಾಗಿದ್ದಾಗ ತಿಂದು ತಿಂದು ಬೇಜಾರು ಹಿಡಿಸಿದ್ದ 'ಗೋಧಿ ದೋಸೆಯನ್ನು ಇನ್ನು ಜೀವನದಲ್ಲಿ ಮುಟ್ಟುವುದಿಲ್ಲ' ಎನ್ನುವ ಶಪಥವನ್ನು.chickenpox ಒಂದೂವರೆ ವರ್ಷದಲ್ಲಿ ಅಳಿಸಿ ಹಾಕಿತ್ತು.! ಸ್ನಾನಕ್ಕೂ ಕೊಕ್ ಬೇರೆ.


ಹೀಗೆ 'ಸಪ್ಪೆ ದಿನಗಳು' ಕಳೆದು ಹದಿನೈದು ದಿನಗಳಾದಾಗ ಶುರುವಾಯಿತು ನೋಡಿ ಅಮೋಘವಾದ ಮೂರನೇ ಅಧ್ಯಾಯ!  ಪರೀಕ್ಷೆ ಮುಗಿಸಿ ಮನೆಗೆ ಬಂದ ನನ್ನ ತಮ್ಮ, 7 aum arivu ಚಿತ್ರದಿಂದ ಸ್ಪೂರ್ತಿ ಪಡೆದಿದ್ದ ಪುಣ್ಯಾತ್ಮ,! ಬಂದವನೇ "ಅಕ್ಕಾ, ಚಂದ್ರನ ಮೇಲಿನ ಕಲೆಯನ್ನು ತೆಗೆಯಲಾಗದಿದ್ದರೆನಂತೆ? ನಿನ್ನ ಮುಖದ ಮೇಲಿನ ಕಲೆಯನ್ನೆಲ್ಲ ನಾನು ಕಳೆಯುತ್ತೇನೆ.." ಎಂದ ಒಮ್ಮೆ ನಾಟಕೀಯವಾಗಿ. ಆ ಡೈಲಾಗ್ ಕೇಳಿಯೇ ಒಮ್ಮೆ ಭಯವಾಗಿತ್ತು ನನಗೆ. ಅದ್ಯಾವುದೋ ಪುಸ್ತಕವನ್ನು ಓದಿ .ಅವನ ಇದ್ದು ಬಿದ್ದ ಆಯುರ್ವೇದ ಜ್ಞಾನವನ್ನೆಲ್ಲಾ ಸೇರಿಸಿ.  ಏನೇನೋ ಎಲೆ, ಬೇರುಗಳನ್ನೆಲ್ಲ ತಂದು. ಕಹಿ ಕಷಾಯ ಮಾಡಿಸಿ ಕುಡಿಸಿಯೇ ಬಿಟ್ಟ ಭೂಪ..!  ಚಂದ್ರು ಡಾಕ್ಟರರ ಸಣ್ಣ ಸೂಜಿಯ ಇಂಜೆಕ್ಷನ್ ಆದರೂ ಬೇಕಿತ್ತು. ಆದರೆ ಈ ಕಷಾಯ ಮಾತ್ರ ಯಾರಿಗೂ ಬೇಡ.! ಏನು ನೈವೇದ್ಯಕ್ಕಿಟ್ಟರೂ ಚಕಾರವೆತ್ತದೆ ಸೇವಿಸುವ ಆ ದೇವರೂ ಈ ಕಷಾಯವ ನೈವೇದ್ಯಕ್ಕೆ ಇಟ್ಟಿದ್ದರೆ ಮುಖ ತಿರುಗಿಸಿ ಕೂತುಬಿಡುತ್ತಿದ್ದನೇನೋ..! ಒಟ್ಟಿನಲ್ಲಿ ನನ್ನ ತಮ್ಮನ ಆಯುರ್ವೇದ ಪ್ರಯೋಗಕ್ಕೆ ನಾನು 'ಬಲಿಪಶು' ಆದೆ ಅನ್ನುವುದಕ್ಕಿಂತ. ಯಾವ್ಯಾವುದೋ ಸೊಪ್ಪುಗಳನ್ನು ತಿಂದು ಬಲಿಯಾಗಿ 'ಪಶು'ವಾದೆ.! 


ಏನೆಲ್ಲಾ ಅನುಭವಸಿ ಹದಿನೇಳು ದಿನ ಕಳೆವಷ್ಟರಲ್ಲಿ 'ನಾಳೆ ನಿನೆಗೆ ಸ್ನಾನ' ಎನ್ನುವ ಖುಷಿಯ ವಾರ್ತೆ ಅಮ್ಮನಿಂದ.! ಅಂತೂ ಹದಿನೆಂಟನೆಯದಿನದ ಮಿನಿ-  ಮಜ್ಜನಕ್ಕೆ ತಯಾರಾದೆ. ಅದೇನು ಖುಷಿ ಆ ಸ್ನಾನದಲ್ಲಿ. ಏನೀ ಮಹಾನಂದವೇ....! ಅಮ್ಮ ಬಂದು ತಲೆಯ ಮೇಲೆ ನೀರೆರೆದು ಹೋದ ನಂತರ ಭರ್ಜರಿ ಸ್ನಾನವಾಯಿತು.ರಸ್ತೆಯಲಿ ಮಳೆ ಸುರಿದಾಗ ಹರಿಯುವ ನೀರಿನಂತೆ ಕೊಳೆ ಹೋಗುತ್ತದೆ ಎಂದುಕೊಂಡಿದ್ದ  ನನಗೆ ಭಾರೀ ನಿರಾಸೆ. ದಿನವೂ ತಲೆ ಸ್ನಾನ ಮಾಡುತ್ತಿದ್ದ ನಾನು ಹದಿನೆಂಟು ದಿನಗಳ ನಂತರ ಮಾಡಿದರೂ ಕೊಳೆ ನಾನು ಎಣಿಸಿದ್ದ ಪ್ರಮಾಣದಲ್ಲಿ ಇರಲೇ ಇಲ್ಲ..! 
ನನ್ನ ಮಿನಿ ಮಜ್ಜನದ ನಂತರ 'ಹೊಗೆ ಹಾಕುವ' ಕಾರ್ಯಕ್ರಮ. ನನ್ನ ತಮ್ಮ ಇದ್ದಿಲನು ತಂದು ಸಾ0ಭ್ರಾಣಿಯ ಹೊಗೆಯ ತಯಾರು ಮಾಡಿಯೇ ಬಿಟ್ಟ.! ಅದರ ಜೊತೆಗೆ ಬೇವಿನ ಸೊಪ್ಪು ಬೇರೆ. ಆ ಪರಿಮಳದ ಹೊಗೆಯನ್ನು ಆಸ್ವಾದಿಸಲು ತಯಾರಾಗಿ ಕುಳಿತ ನನ್ನ ಮೂಗಿಗೆ ಬಡಿದದ್ದು ಸೀಮೆಯೆಣ್ಣೆಯ ಹೊಗೆ..!  ಕೆಂಡವ ಉರಿಸಲು ಸೀಮೆಯೆಣ್ಣೆಯ ಸುರಿದು ತಂದು ಬಿಟ್ಟಿದ್ದ ಭೂಪ.! ಆ ವಾಸನೆ ನನ್ನ ಮೂಗಿಗೆ ರಾಚಿ. ಕೆಮ್ಮು ಸೀನು ಎಲ್ಲ ಒಟ್ಟಿಗೆ ಬಂದು ನಾನು 'ಹೊಗೆ ಹಾಕಿಸಿ ಕೊಳ್ಳುವುದೊಂದು' ಬಾಕಿ..!  
ಏನೆಲ್ಲಾ ಅನುಭವವನ್ನು ಕಟ್ಟಿಕೊಟ್ಟ . ಅಳು ನಗು ಎರಡನ್ನು ಒಟ್ಟಿಗೆ ತಂದಿಟ್ಟ ಈ chickenpox ಜೀವಿತದಲ್ಲಿ ಒಮ್ಮೆ ಮಾತ್ರ ಆಗುವುದು ಎಂದು ಅಜ್ಜಿ ಹೇಳಿದಾಗ ನೆಮ್ಮದಿಯ ನಿಟ್ಟುಸಿರು ! 
ಇತಿ chickenpox ಪರ್ವಃ  ಸಮಾಪ್ತಿ:  .




Monday, May 7, 2012

ನಿನ್ನ ಪ್ರೀತಿಗೆ, ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ..

ತ್ತದೇ ಬೀದಿಯಲ್ಲಿ ಇಳಿದಿದ್ದ ಚಿಕ್ಕ ಚಿಕ್ಕ ಕಂಗಳ ಮಂದ ಹುಬ್ಬುಗಳ ಹುಡುಗ , ಬರೋಬ್ಬರಿ ಮೂರು ವರುಷಗಳ ನಂತರ. ಅವನ ಕಾಲುಗಳು ತಂತಾನೇ ಅವನ ಎಳೆದು ಹೊರಟಿದ್ದವು ಅದೇ ಆಂಜನೇಯ ದೇವಸ್ತಾನಕ್ಕೆ. ಸುತ್ತಲೂ ಕಣ್ಣಾಡಿಸುತ್ತ,ಮನದಲ್ಲೇ ನಗುತ್ತ  ಸಾಗಿದ್ದ ಅವನು.  ದೇವಸ್ಥಾನದ ಎದುರಲ್ಲೇ ಇದ್ದ  ಮಂಡಕ್ಕಿಹಾಗೂ ಭಜ್ಜಿಯ ಅಂಗಡಿ ಬೇರೆಡೆಗೆ ಸ್ಥಳಾಂತರವಾದದ್ದು ಬಿಟ್ಟರೆ, ಅದೇನು ಅಂಥ ಬದಲಾವಣೆ ಏನಿರಲಿಲ್ಲ  ಆ   ಬೀದಿಯಲ್ಲಿ. !


ಬೊಂಡದಂಗಡಿಯ ಅಜ್ಜ ಪರಿಚಯದ ನಗೆಯನ್ನು ಬೀರಿದಾಗಲೇ ಅವನಿಗೆ ಅನಿಸಿದ್ದು ತಾನು ಮತ್ತದೇ ಬೀದಿಯಲ್ಲಿದ್ದೇನೆ ಎ ನ್ನುವುದು. ಚಪ್ಪಲಿ ಕಳಚಿಟ್ಟು ದೇವಳದ ಒಳಹೊಕ್ಕು ಕೈಮುಗಿದ. ಕಣ್ಣುಗಳು ಅದೇನನ್ನೋ ಹುಡುಕುತ್ತಲೇ ಇದ್ದವು. ಅದೇ ಕನಸುಕಂಗಳು, ಅಮಲು ಕಂಗಳು. ಥಟ್ಟನೆ ಎಚ್ಚೆತ್ತ "ಅದೇನು ಹುಚ್ಚು ತನಗೆ, ಇನ್ನೆಲ್ಲಿ ಬರುತ್ತಾಳೆ ಅವಳು ಇಲ್ಲಿ?". ಎಂದು ತನ್ನಷ್ಟಕ್ಕೆ ನಕ್ಕು ಹೊರನಡೆದ. ಅವಳೊಂದು ಮಾಯೆಯೆ? ಅಲ್ಲ.. ತಾಯೆ ? ಯಾರವಳು ತನಗೇನಾಗಿದೆ? ಅವಳನೇಕೆ ಮರೆಯಲಾಗುತ್ತಿಲ್ಲ ? ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬಹುದೆಂದು ಮತ್ತೊಮ್ಮೆ ಬಂದಿದ್ದ ದೂರದ ಮಿಜೋರಾಂನಿಂದ. ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯಲಿ ಅನಿಸಿತ್ತವನಿಗೆ ಇಲ್ಲಿಗೆ ಬಂದಮೇಲೆ.


ನಾಲಕ್ಕು ವರ್ಷಗಳ ಹಿಂದಿನ ಮಾತದು. ಇದೇ ಊರಿನಲ್ಲಿ ಕಲಿಯುತ್ತಿದ್ದ ಹುಡುಗ. .


 ಅವನಿಗೆ ಅವಳ ಪರಿಚಯ ಆದದ್ದೇ ಅಚಾನಕ್ಕಾಗಿ..3 ದಿನದ ದೀಪಾವಳಿಯ ರಜೆಗೆಂದು ಗೋವೆಯ ಚಿಕ್ಕಮ್ಮನ ಮನೆಗೆ ಹೊರಟಿದ್ದ. ಅವನ ಎದುರಿನ ಸೀಟಿನಲ್ಲಿ ಅವಳೂ ಇದ್ದಳು. ಅವಳ ಪಾಡಿಗವಳು ಅದ್ಯಾವುದೋ ಪುಸ್ತಕವನ್ನೋದುವುದರಲ್ಲಿ ಮಗ್ನಳಾದವನ್ನು ಕದ್ದು ದಿಟ್ಟಿಸಿದ್ದ ಹುಡುಗ. ನೀಳ ಕಣ್ರೆಪ್ಪೆಯ, ಉದ್ದನೆಯ ಕೂದಲ, ಶಾಂತ ಮುಖ ಮುದ್ರೆಯ ಹುಡುಗಿ. ಇನ್ನೂ ಮಾಸದ ಮುಗ್ಧತೆ ಮೊಗದಲ್ಲಿ. ಥಟ್ಟನೆ ಪುಸ್ತಕದಿಂದ ತಲೆಯೆತ್ತಿ ನೋಡಿದಳು ಮುಗುಳ್ನಕ್ಕಳು. ಅಲ್ಲಿಂದ ಶುರುವಾಯಿತು ಮಾತುಕತೆ. ಹುಡುಗ ಸಂಕೋಚದ ಪೊರೆಯಲ್ಲಿದ್ದುಕೊಂಡೇ ಮಾತಾಡುತ್ತಿದ್ದ. ಅವಳೋ ಮಳೆಗಾಲದ ಅರಬ್ಬೀ ಸಮುದ್ರಕ್ಕಿಂತ ಒಂದು ಪಟ್ಟು ಹೆಚ್ಚೇ ಎನಿಸುವ ಭೋರ್ಗರೆತದ ಮಾತು. ಮಾತುಕತೆಯಲ್ಲಿ ತಿಳಿದಿದ್ದು ಇಷ್ಟು ಇಬ್ಬರದ್ದೂ ಒಂದೇ ಆಯ್ಕೆಯ ವಿಷಯ. ಅವಳಿರುವುದೂ ಅವನ ರೂಮಿಗಿಂತ ೩ ಕಿಲೋಮೀಟರು ದೂರದಲ್ಲಿ. ಅವಳಿಗಿಂತ ಎರಡು ವರ್ಷಕ್ಕೆ ಕಿರಿಯ ಆತ.  


ಹೀಗೆ ಮಾತಿನ ನಡುವೆ ಅವಳು ಅವನಿಷ್ಟವ ಕೇಳಿದಾಗ. "ಏನಿಲ್ಲ" ಎಂದು ಅಮಾಯಕ ನಗು ನಕ್ಕಿದ್ದ. ಅವಳು ಕಣ್ಣರಳಿಸಿ "ಏನೂ ಇಷ್ಟ ಇಲ್ಲವಾ ?" ಎಂದಾಗ . "ಗಿಟಾರ್ ಇಷ್ಟವಿತ್ತು " ಎಂದು ಮಾತು ತಿರುಗಿಸಿದ್ದ. ಅದೇನೋ ಆತ್ಮೀಯತೆ ಮೂಡಿ ಬಿಟ್ಟಿತ್ತು ಅವರಿಬ್ಬರ ನಡುವೆ.ಅವಳು ಇಳಿವ station ಬರುವುದರೊಳಗೆ. 
 "ನಾನು ನಿನಗಿಂತ ಎರಡು ವರ್ಷಕ್ಕೆ ದೊಡ್ಡವಳು, ಅಕ್ಕಾ ಎಂದುಕೊಂಡು ಬಿಡು. ವಿಷಯಗಳಲ್ಲಿ ಅದ್ಯಾವುದೂ ತಲೆಗೆ ಹತ್ತದಿದ್ದರೂ ಕೇಳು. ನನಗೆ ತಿಳಿದಷ್ಟು ಹೇಳಿ ಕೊಡುತ್ತೇನೆ." ಅದೆಷ್ಟು ಸಲೀಸಾಗಿ ಸ್ನೇಹದ ಹಸ್ತ ಚಾಚಿಬಿಟ್ಟಳು ಹುಡುಗಿ ಎಂದು ಅವಾಕ್ಕಾದ. ಯಾರನ್ನೂ ಹಚ್ಚಿಕೊಳ್ಳದ ಅಂತರ್ಮುಖಿ, ಮುಗುಳು ನಗುತ್ತಿದ್ದ. ಎಂದೂ ತಾನಾಗಿ ಮಾತನಾಡದ ಹುಡುಗ. " may i have your contact number please.. ಎಂದಿದ್ದ. sure... ಎಂದೆನ್ನುತ್ತ ಅವಳು ಉಲಿದ ನಂಬರನ್ನು 'Dragon' ಎಂದು save ಮಾಡಿದ್ದ.! 

ನಂತರದ್ದೆಲ್ಲ ಇತಿಹಾಸವೀಗ. ಅವನ ನೆನಪಿನ ಹಂದರದೊಳಗೆ ಎಂದೂ ಬಾಡದ ಹೂಗಳು ಅವಳ ಜೊತೆಗೆ ಕಳೆದ ಕೆಲವು ಸಂಜೆಗಳು.!ಅವಳ  ಶನಿವಾರದ ಆಂಜನೇಯ ದೇವಸ್ಥಾನದ ಅಲೆದಾಟಕ್ಕೆ ಜೊತೆಯಾದ. ಬರುವಾಗ ಮಸಾಲೆ ಮಂಡಕ್ಕಿ , ಭಜ್ಜಿ, ಎಳನೀರು. ಅವರು ಮಾತನಾಡುತ್ತಿದ್ದ ವಿಷಯಗಳಲ್ಲಿ ಮುಖ್ಯವಾಗಿರುತ್ತಿದ್ದುದೇ ಆಧ್ಯಾತ್ಮ. ಪ್ಲಾಂಚೆಟ್, ಪುನರ್ಜನ್ಮ, ಎಂದು ಅವಳು ಅವನ ತಲೆ ತಿನ್ನುತ್ತಿದ್ದರೆ. ಅವನು ನಗುತ್ತಲೇ ತನಗೆ ಗೊತ್ತಿರುವುದನ್ನು ಹೇಳುತ್ತಿದ್ದ. ಅನಂತ ಆಗಸವ ದಿಟ್ಟಿಸಿ ಅನ್ಯಗ್ರಹ ಜೀವಿಗಳ ಬಗ್ಗೆ, ಹಾರುವ ತಟ್ಟೆಗಳ ಬಗ್ಗೆ  ಅವಳು ಹೇಳುತ್ತಿದ್ದರೆ ಥೇಟ್ ಮಗುವೆ ಅವಳು.. ಹುಡುಗ ನಕ್ಕು "hey a am gonna change your name to Kiddu " ಎಂದಿದ್ದ . ಅವಳು ಥಟ್ಟನೆ ವಿಷಯಪಲ್ಲಟ ಮಾಡಿ "Adam is like Brahma right ? " ಎಲ್ಲ ತನಗೆ ಗೊತ್ತು ಎಂಬಂತೆ ಕೇಳಿದ್ದಳು.!  "Not exactly, he is like Manu." ಎಂದಿದ್ದ ಅವ !.  ಕ್ರೈಸ್ತ ಹುಡುಗನಾದರೂ. ಅದೇಕೆ ಕೊರಳಲ್ಲಿ ಮಣಿ ಸರವಿಲ್ಲ. ? .ಕೈ ಮೇಲೆ cross ಚಿಹ್ನೆಯಿಲ್ಲ ಎಂದು ಮಗುವಿನ ಮುಗ್ಧತೆಯಲ್ಲಿ ಕೇಳಿದ ಅವಳಿಗೆ, " ಅದನ್ನು ಧರಿಸಬೇಕಾದರೆ ಮನಸ್ಸು ಪರಿಶುದ್ಧವಾಗಿರಬೇಕು ಹುಡುಗೀ, ನಾನೇನು ಅಷ್ಟು ಶುದ್ಧನೆಂದು ನನಗೆ ಅನಿಸುವುದಿಲ್ಲ, ಜೊತೆಗೆ ನಾನು ಕ್ರೈಸ್ತನೆಂದು ಜಗತ್ತಿಗೇನು ಹೇಳಬೇಕಾಗಿಲ್ಲವಲ್ಲೆ " ಎಂದಿದ್ದ. ಎಲ್ಲ ಧರ್ಮಗಳ ಕುರಿತು ಆಳ ಜ್ಞಾನವ  ಕಂಡು ಸಣ್ಣಗೆ ಬೆಚ್ಚಿ ಬಿದ್ದಿದ್ದಳವಳು.!

ಮ್ಮೆ ಜಾತ್ರೆಯಲಿ ಸಿಗುವ  ಎರಡು ತಂತಿಯ ಮರದ ವಾದ್ಯವೊಂದನು ತಂದು ತನಗೆ ಕಲಿಸೆಂದು ಹಠ ಹಿಡಿದುಕೂತಿದ್ದಳು  "ಇದೆಲ್ಲ ನುಡಿಸಲು ತನಗೆ ಬರುವುದಿಲ್ಲವೆಂದು ಹೇಳಿದರೂ ಕೇಳುತ್ತಿರಲಿಲ್ಲ.  "You are a Kid ..and you have proved it  " ಎಂದು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದ.ಬಂದ ಕೋಪಕ್ಕೆ ಬೆನ್ನ ಮೇಲೆ ಗುದ್ದಿದ್ದಳು. ಹಠ ಹಿಡಿದು ಒತ್ತಾಯಿಸಿ ಮತ್ತೆ ಗಿಟಾರ್  ಹಿಡಿಸಿದವಳೂ ಅದೇ ಹುಡುಗಿಯೇ . ಅಮ್ಮ ಹೋದಮೇಲಿಂದ ಹುಡುಗ  ಗಿಟಾರ್ ಹಿಡಿದಿರಲಿಲ್ಲ. ಅವನ ಅಂತರ್ಮುಖ ಭಾವನೆಗಳೆಲ್ಲ ತಂತಿಯ ಮೇಲೆ ದನಿಯಾಗುತ್ತಿತ್ತು. ಸಮುದ್ರದ  ದಡದಲ್ಲಿ ಅವನ  ಹಾಡಿಗೆ ಅವಳೊಬ್ಬಳೇ ಪ್ರೇಕ್ಷಕಳು.! ಸಮುದ್ರದ ಅಲೆಗಳ ಭೋರ್ಗರೆತವೇ drum, rhythm pad ಎಲ್ಲ !  ಇಂಥ ಅದೆಷ್ಟೋ ಸಂಜೆಯ ನೆನಪುಗಳು ಅವನ ಮನದ ಜೋಳಿಗೆಯಲ್ಲಿ  ಇದ್ದವು .!

 ಒಮ್ಮೆ ಅದ್ಯಾವುದೋ ಹಬ್ಬವನ್ನು ಮುಗಿಸಿಕೊಂಡು ಬರುತ್ತಿದ್ದ ಗೆಳೆಯರ ಗುಂಪುಗಳಲ್ಲಿ ಅವರಿಬ್ಬರೂ ಇದ್ದರು. ಅವಳ ಬಳಿ ಇದ್ದದ್ದು ಬಣ್ಣಬಣ್ಣದ ಬೆಳಕು ಚೆಲ್ಲುವ ಆಟಿಕೆ. ಅದನ್ನು ಕಸಿದುಕೊಂಡು, ಗುಂಪಿನಿಂದ ಬೇರೆಯಾಗಿ ಹೊರಟುಬಿಟ್ಟ ಹುಡುಗ.!ಅವಳು ಅದೆಷ್ಟು ಗೋಗರೆದರೂ ತಿರುಗಿ ನೋಡಲೂ ಇಲ್ಲ. ರೂಮಿಗೆ ಬಂದು ಜೀವದ ಗೆಳತಿಯ ಬಳಿ ಅವಳು ನಡೆದುದ್ದೆಲ್ಲವ ಅರುಹಿದಾಗ ಗೆಳತಿಯೆಂದದ್ದು "ಅವ ನಿನ್ನ ಪ್ರೀತಿಸುತ್ತಿದ್ದಾನೆ ಹುಚ್ಚಿ.. " ಹುಡುಗಿ ವಿರೋಧಿಸಿದ್ದಳು. ತಕ್ಷಣವೇ cell phone ಕೈಗೆತ್ತಿಕೊಂಡು  "ನೀನೆಂದರೆ ಒಬ್ಬ ಒಳ್ಳೆಯ ಗೆಳೆಯ.. ಜೊತೆಗೆ ನನ್ನ ತಮ್ಮನಂತೆ. ನಿನ್ನ ಮೇಲೆ ವಾತ್ಸಲ್ಯ ಹೆಚ್ಚಾದದ್ದು ನಿನಗೆ ಅಮ್ಮನಿಲ್ಲ ಎಂದು " ಮೆಸೇಜ್ ಮಾಡಿಯೂ ಬಿಟ್ಟಳು.!
ಹುಡುಗನ ಮನದಲ್ಲಿ ತಳಮಳ. ಅವಳ್ಯಾರು ತನಗೆ ? ಎಂದು ಭೂತವನ್ನೆಲ್ಲ ತಡಕಾಡಿದಾಗ ಸಿಕ್ಕ ಉತ್ತರ "ಪ್ರೀತಿ ". ಮನದಲ್ಲಿ ಅವಳ ಅಕ್ಷರಶಃ ಆರಾಧಿಸುತ್ತಿದ್ದ. ಅದ್ಯಾರನ್ನೂ ತಾನು ಪ್ರೀತಿಸಲು ಸಾಧ್ಯವೇ ಇಲ್ಲ ಎಂದುಕೊಂಡವ. ಇಂಚಿಂಚಾಗಿ ಪ್ರೀತಿಯ ಸುಳಿಗೆ ಸಿಲುಕಿದ್ದ ಸಣ್ಣ ಸುಳಿವೂ ಇಲ್ಲದೆ..! 

ಮರುದಿನ ಭಾನುವಾರ ಬೆಳಿಗ್ಗೆ ಆರರ ಹೊತ್ತಿಗೆ ಬಾಗಿಲು  ಬಡಿದ ಶಬ್ದಕ್ಕೆ ಎಚ್ಚರವಾಗಿ ಹುಡುಗಿ ಬಾಗಿಲು ತೆರೆದರೆ ಬಣ್ಣದ  ಆಟಿಕೆಯೊಂದಿಗೆ ಹುಡುಗ ನಿಂತಿದ್ದ. ಆಟಿಕೆಯ  ಜೊತೆಗೊಂದು ಮಡಿಸಿದ  ಹಾಳೆಯ  ನೀಡಿ ಹೊರಟು  ಹೋಗಿದ್ದ. ನಿದ್ದೆಗಣ್ಣಿನಲ್ಲಿ ಹಾಳೆಯ ಬಿಡಿಸಿದರೆ ಅದರಲ್ಲಿ ಇದ್ದದ್ದಿಷ್ಟು:

My little princess,

ಅದೀಗ ತಾನೇ ಎದ್ದ ನಿನ್ನ ಮೊಗವನ್ನೊಮ್ಮೆ ನೋಡಬೇಕು ಎಂದುಕೊಂಡಿದ್ದೆ ಅದೆಷ್ಟೋ ದಿನಗಳಿಂದ. ಇವತ್ತು ಈ ಆಟಿಕೆಯ ಹಿಂತಿರುಗಿಸುವ ನೆಪವೂ ಸಿಕ್ಕಿಬಿಟ್ಟಿತು ನೋಡು .ಬೆಳಿಗ್ಗೆ ಎದ್ದು ಬಂದುಬಿಟ್ಟೆ.  ಜೀವನದಲ್ಲಿ ಅದ್ಯಾರನ್ನೂ ತಾನು ಪ್ರೀತಿಸಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದೆ ಹುಡುಗೀ ಈಗ ನೋಡು ನಿನ್ನ ಪ್ರೀತಿಯ ಸುಳಿಯಲ್ಲಿ ಸುಳಿವಿಲ್ಲದೆ ಸಿಕ್ಕಿಬಿದ್ದಿದ್ದೇನೆ. ಮೊದಲ ಬಾರಿಗೆ ನನ್ನ ಅಮ್ಮನ ಬಿಟ್ಟು ಇನ್ನೊಬ್ಬರನ್ನು ಹಚ್ಚಿಕೊಂಡಿದ್ದೇನೆ. ಅಮ್ಮ ಮಗುವನ್ನು ಪ್ರೀತಿಸಿದಂತೆ ನಿನ್ನ ಪ್ರೀತಿಸುತ್ತೇನೆ ಎಂದು ಸುಳ್ಳು ಹೇಳಲಾರೆ. ಆದರೂ ನೀನೊಂದು ಮಗುವೆ. ನಿನ್ನನ್ನು ಪ್ರೀತಿಸುತ್ತೇನೆ.. ಆರಾಧಿಸುತ್ತೇನೆ. ನೀ ತೋರುವ  ಕಾಳಜಿಗೆ, ಹುಷಾರಿಲ್ಲದೆ ಇದ್ದಾಗ ತಂದುಕೊಟ್ಟ ಕಷಾಯಕ್ಕೆ,ದೂರದ ಊರಿನಲ್ಲಿ ಅನಾಥ ಎಂಬ ಭಾವ ಕಾಡಿದಾಗ ನೀ ತೋರಿದ ವಾತ್ಸಲ್ಯಕ್ಕೆ,  ಕಬ್ಬಿಣದ ಕಡಲೆಯಂಥ ವಿಷಯಗಳ ನೀ ಮನದಟ್ಟು ಮಾಡಿಸುವ ಬಗೆಗೆ ಶರಣಾಗಿದ್ದೇನೆ. ಒಮ್ಮೊಮ್ಮೆ ನೀನು ಸಾಕ್ರಟಿಸ್ ನ ಮೀರಿಸುವ ತತ್ವಜ್ಞಾನಿ ಮತ್ತೊಮ್ಮೆ ಐದರ ಹರೆಯದ ನನ್ನ ಅಕ್ಕನ ಮಗಳು 'ರಿನಿ'ಯಂಥ ಮಗು.!  ಭೂಮಿ ಬಾನಿನ ವ್ಯತ್ಸಾಸ ನಿನ್ನೊಬ್ಬಳಲ್ಲೇ ..!  ಅಮ್ಮ ಭೌತಿಕವಾಗಿ ನನ್ನ ಜೊತೆ ಇಲ್ಲ ಅಷ್ಟೇ. ನನ್ನ ಮನದಲ್ಲಿ, ನೆನಪುಗಳಲ್ಲಿ ಇನ್ನೂ ಅವಳಿದ್ದಾಳೆ. ನೀನು ನನ್ನ ಬಾಳಿಗೆ  ಜೊತೆಯಾಗುತ್ತೀಯಾ   ಎಂದೆಣಿಸಿ ನಿನ್ನ ಪ್ರೀತಿಸಿದೆ ಎಂದುಕೊಂಡೆಯ ? ಅದು ಈ ಜನುಮದಲ್ಲಿ ಸಾಧ್ಯವಿಲ್ಲ. ನಿನಗೆ ನನ್ನೆಡೆಗೆ ಒಂದು ಸೋದರ ಭಾವವ ಬಿಟ್ಟರೆ ಬೇರೇನೂ ಇಲ್ಲ ಎಂದೂ ಗೊತ್ತಿದೆ. ನಿನ್ನ ನಿಷ್ಕಲ್ಮಶ ಸ್ನೇಹಕ್ಕೆ ದ್ರೋಹವೆಸಗಲಾ ? ಅಥವಾ ನನ್ನ ಆತ್ಮವ ವಂಚಿಸಲಾ.? ಒದ್ದಾಡಿದ್ದೇನೆ ಅಕ್ಷರಶಃ ಅತ್ತ ಬಾನಲ್ಲೂ ಇರದೇ..  ಭೂಮಿಗೆ ಬೀಳಲೂ ಆಗದೆ ಉರಿಯುವ ಉಲ್ಕೆಯಂತೆ. ನೀನು ಅದ್ಯಾವ ಹುಡುಗನ ಬಾಳಿನಲ್ಲಿ ಹೋಗುತ್ತೀಯೋ ಗೊತ್ತಿಲ್ಲ. ಆದರೆ ಆ ಹುಡುಗ ಮಾತ್ರ ಪುಣ್ಯವಂತ ಎಂದು ಮಾತ್ರ ಹೇಳಬಲ್ಲೆ. ! ಆದರೆ ನಾನು ಪ್ರೀತಿಸಿದಂತೆ ಇನ್ಯಾರೂ ನಿನ್ನ ಪ್ರೀತಿಸಲು ಸಾಧ್ಯವಿಲ್ಲವೇ ಹುಡುಗೀ ... ನನ್ನ ಫೋನಿನ್ನಲ್ಲಿ ನಿನ್ನ ಹೆಸರು Dragon - kiddu- lil princess ಎಂದು ಬದಲಾವಣೆ ಆಗುತ್ತಲೇ ಇದೆ ಥೇಟ್ ನಿನ್ನ ಮನಸಿನಂತೆ.! ನೀನಿಲ್ಲದೆ ಬದುಕಲಾರೆ ಎಂದೆಲ್ಲ ಸುಳ್ಳು ಹೇಳಲಾರೆ. ಆದರೆ ನಿನ್ನ ನೆನಪು ಚಿರನೂತನ, ನಿರಂತರ...ನಿನ್ನ ಮಾತು, ನಗು, ಪ್ರಶ್ನೆಗಳ ನೆನಪುಗಳನ್ನು ಈ ಜನುಮಕೆ ಸಾಕಾಗುವಷ್ಟು ತುಂಬಿಕೊಂಡಿದ್ದೇನೆ..... ಅಮ್ಮ ಈ ಜಗವ ಬಿಟ್ಟು ಹೋದಾಗಲೂ ಕಣ್ಣಲ್ಲಿ ನೀರು ಹನಿಸಿರಲಿಲ್ಲ..  ಅದ್ಯಾಕೋ ಇಂದು ಜಗವೆಲ್ಲ ಮುಂಜು ಮಂಜು... "

ಜೊತೆಗಿದ್ದ ಜೀವದ ಗೆಳತಿ ಬೇಡ ಹುಡುಗೀ ಅವನ ಭಾವನೆಗಳ ಜೊತೆಗಿನ ಆಟ ಬೇಡ. ನಿನ್ನ ಪಾಡಿಗೆ  ನೀನಿದ್ದುಬಿಡು  ಎಂದಿದ್ದಳು. ಅಂದಿನಿಂದ ಹುಡುಗಿ ವನ ಜೊತೆಗಿನ ಒಡನಾಟವನ್ನು  ಕಡಿಮೆ ಮಾಡಿದ್ದಳು. 
ಶನಿವಾರದ ಆಂಜನೇಯ ದೇವಸ್ಥಾನದ ಓಡಾಟವನ್ನೂ ನಿಲ್ಲಿಸಿಬಿಟ್ಟಿದ್ದಳು. ಹುಡುಗನೊಬ್ಬನೇ ದೇವಳಕ್ಕೆ ಹೋಗಿ ಬಂದು ಆ ಬೀದಿಯಲ್ಲೇ ಕಾದು ನಿಂತಿರುತ್ತಿದ್ದ ಅದೆಷ್ಟೋ ಶನಿವಾರದ  ಸಂಜೆಗಳಲ್ಲಿ..! 

 ಓದು ಮುಗಿದ ತಕ್ಷಣ ಕೆಲಸ ಹುಡುಕಿ ದೂರದ ಊರೊಂದ ಸೇರಿ ಬಿಟ್ಟಿದ್ದಳು  ಹುಡುಗಿ. ಮಾತೊಂದನ್ನೂ ಹೇಳದೆ...! ದಿನವೂ ಬರುತ್ತಿದ್ದ, ಅವನ  ಮೆಸೇಜುಗಳನ್ನು ಸದ್ದಿಲ್ಲದೇ ಅಳಿಸಿಬಿಡುತ್ತಿದ್ದಳು. ಅದೆಷ್ಟು ಭಾವುಕನಾಗಿ ಮೆಸೇಜು ಮಾಡಿದರೂ ಉತ್ತರ ಇರುತ್ತಿರಲಿಲ್ಲ. ತನ್ನ ಸೋದರ ಭಾವಕ್ಕೆ ಅವ ಮೋಸ ಮಾಡಿದ ಕೋಪ ಹುಡುಗಿಯಲ್ಲಿ..! ಒಮ್ಮೊಮ್ಮೆ ಅದ್ಯಾವ್ಯಾವುದೋ ನಂಬರಿನಿಂದ call ಮಾಡಿ ಮಾತನಾಡದೆ, ಅವಳ ಧ್ವನಿಯನ್ನಷ್ಟೇ ಆಲಿಸುತ್ತ ಕುಳಿತುಬಿಡುತ್ತಿದ್ದ ಹುಡುಗ .! unknown ನಂಬರಿನ ಕರೆಗಳನ್ನು ಸ್ವೀಕರಿಸುವುದನ್ನೂ ನಿಲ್ಲಿಸಿಬಿಟ್ಟಿದ್ದಳು ಹುಡುಗಿ.

ವರ್ಷಗಳೆರಡು ಉರುಳಿ ಅವನೂ ಆ  ಊರ  ಬಿಟ್ಟು ತನ್ನೂರಿಗೆ ಹೊರಟಿದ್ದ  ಅವಳ  ನೆನಪಿನ  ಮೂಟೆಯೊಂದಿಗೆ. ಅಲ್ಲೇ ಕೆಲಸ  ಮಾಡಲೂ ಶುರು ಮಾಡಿದ್ದ . 

ಅಲ್ಲಿ ಪರಿಚಯವಾದ, ಸ್ನೇಹಿತೆಯಾದ  ಚಿಕ್ಕ ಕಂಗಳ ಚೋರಿ ಒಂದು ವರುಷದ ಬಳಿಕ "ಅವನ ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿಸುತ್ತೇನೆ ನಿನ್ನ " ಅಂದಾಗ ಹುಡುಗ ಗೊಂದಲಕ್ಕೆ ಬಿದ್ದಿದ್ದ.! ಸ್ವಲ್ಪ ಸಮಯ ಬೇಕು ನನಗೆ ಅಂದಿದ್ದ. "ಯಾಕೋ ಮತ್ತೆ ಹಳೆಯ ನೆನಪಾ ? "ಎಂದು ಅವಳು ಉಸುರಿದಾಗ ಅಲ್ಲಿ ನಿಲ್ಲಲಾಗದೆ. ಇಲ್ಲಿ ಬಂದುಬಿಟ್ಟಿದ್ದ ಒಂದಿಷ್ಟು ಪ್ರಶ್ನೆಗಳಿಗೆ ಉತ್ತರ ಹುಡುಕಿ.. 
ಬೀದಿಯಲಿ ಹಳೆಯದೆಲ್ಲವೂ ನೆನಪಾಗಿತ್ತು.. 
ದಾರಿ ಮಸುಕಾಗಿ ಕಣ್ಣೊರೆಸುತ್ತ  ಒಮ್ಮೆ ತಲೆ ಎತ್ತಿ ಆಗಸವ ದಿಟ್ಟಿಸಿದ್ದ. ಪಡುವಣದಲ್ಲಿ ಬೆಳ್ಳಿ ಚುಕ್ಕಿಯೊಂದು ಕಂಡಿತ್ತವನಿಗೆ. ಅದರ ಕುರಿತೇ ಅದೆಷ್ಟು ಮಾತನಾಡುತ್ತಿದ್ದಳು ಆ ಹುಡುಗಿ. ಕಳೆದೇ ಹೋಗುತ್ತಿದ್ದಳು ಆಗಸದಲ್ಲಿ. ಅರೆರೆ ಅದರ ಜೊತೆ ಇನ್ನೊಂದು ಚುಕ್ಕಿಯೂ ಇದೆಯಲ್ಲ ಇಂದು. ಇನ್ಯಾವುದೋ ಗ್ರಹ ಇರಬೇಕೆಂದುಕೊಂಡ. ತಡೆಯಲಾಗಲಿಲ್ಲ ಅವನಿಗೆ. cell phone ತೆಗೆದು ಅದೇನೋ ಬರೆದು ಕಳುಹಿಸಿದ. ಚಿಕ್ಕ ಚಿಕ್ಕ ಕಂಗಳಲ್ಲಿಯ ನೀರಿನಲ್ಲಿ ಪಡುವಣದ ಚುಕ್ಕಿ ಬಿಂಬ ನೋಡಿಕೊಳ್ಳುತ್ತಿತ್ತು.

ಮದರಂಗಿಯ ಬಣ್ಣದಲ್ಲಿ ಕೈಯ ತುಂಬಿಸಿಕೊಂಡ ಹುಡುಗಿ. ಮೊಬೈಲ್ ಫೋನ್ ಬೀಪ್ ಕೇಳಿ ಕೈಗೆತ್ತಿಕೊಂಡಳು. ಮತ್ತದೇ ನಂಬರಿನಿಂದ  ಮೆಸೇಜ್ "Missing you my little angel.. "  ಉತ್ತರಿಸಿದಳು ಹೀಗೆ.. "ನಾಳೆ ಬೆಳಗಾದರೆ ನನ್ನ ಮದುವೆ ಪೋರ, ನಿನ್ನ ಪ್ರೀತಿಯ ಬಗೆಗೊಂದು ಸಲಾಂ. ಎಲ್ಲೋ ನೀನಂದಿದ್ದು ನಿಜ್ಜ..ನಿನ್ನ ಬಗೆಯಲ್ಲಿ ಅದ್ಯಾರೂ ಪ್ರೀತಿಸಲಾರರು ನನ್ನ. ಸಾಧ್ಯವಾದರೆ ಕ್ಷಮಿಸಿಬಿಡು ಒಮ್ಮೆ. ನಿನ್ನ ಪ್ರೀತಿಗೆ, ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ...i'll miss you forever .... " send option ಒತ್ತಿದಾಗ ಮೊಬೈಲ್ ಪರದೆ ಮಸುಕಾಗುತ್ತಿತ್ತು . ಅವಳ ಮುಂಗೈ ಮೇಲೊಂದು ಕಣ್ಣ ಹನಿಯು ಜಾರಿ ಬಿತ್ತು ಸದ್ದಿಲ್ಲದೇ...





Tuesday, March 20, 2012

ವಾಲಿ ವಧೆ ಯಕ್ಷಗಾನವೂ..ಕೆಕ್ಕಾರು ಲಕ್ಷ್ಮಣನೂ

ಮೊನ್ನೆ ಬಸ್ಸಿನಲ್ಲಿ ಕುಳಿತಿದ್ದಾಗ ನೆನಪಾಗಿದ್ದ ಅವನು. ಅದೇಕೋ ಗೊತ್ತಿಲ್ಲ. ಮಾಸಲು ಬಣ್ಣದ ಲುಂಗಿ, ತಿಳಿ ಹಳದಿಯ ಷರಟು ಧರಿಸಿ ಬಾಗಿಲ ಬಳಿ ನಿಂತಿದ್ದವನ ಲಕ್ಷಣಗಳನ್ನು ಕಂಡ ತಕ್ಷಣ ನನಗೆ ನೆನಪಾದವನು 'ಕೆಕ್ಕಾರು ಲಕ್ಷ್ಮಣ'.  ಅವನಿದ್ದದ್ದು ಥೇಟ್ ಹಾಗೆಯೇ  ಅದೆಲ್ಲಿಗೆ ಬೇಕಾದರೂ ಹೊರಟುಬಿಡುತ್ತಿದ್ದ  ಮಾಸಲು ಬಣ್ಣದ ಹಳೆಯ ಲುಂಗಿ, ತುಂಬು ತೋಳಿನ ಷರಟು ಹಿಮ್ಮಡುವಿನ ಭಾಗದಲ್ಲಿ ನೆಲ ಕಾಣುತ್ತಿದ್ದ ಹವಾಯಿ ಚಪ್ಪಲಿ ಧರಿಸಿ !  


  ನಮ್ಮ ಸುತ್ತಲಿನ ೩-೪ ಊರುಗಳಲ್ಲಿ ಅದ್ಯಾರದೇ ಮನೆಯಲ್ಲಿ ಸಂಪಿಗೆ ಹೂವಾಗಲಿ ಅದನ್ನು ಕೊಯ್ಯಲು ಲಕ್ಷ್ಮಣನೇ ಆಗಬೇಕು. ತುದಿ ಸೀಳು ಇರುವ ಬಿದಿರಿನ ಕೊಕ್ಕೆಯಲ್ಲಿ, ಒಂದು ಹೂವೂ ಹಾಳಾಗದಂತೆ ಅವನೇ ಕೊಯ್ಯಬೇಕು. ಮರ ಅದೆಷ್ಟೇ ನಾಜೂಕಿನದಾಗಿರಲಿ ಅದರ ತುದಿಯ ಕೊಂಬೆಯ ಹೂವನ್ನೂ ಬಿಡದೆ ಕೊಯ್ಯುತ್ತಿದ್ದ. ಮೂರು ನಾಲ್ಕು ಹೂವನ್ನು, ಮರವಿರುವ ಮನೆಗೆ ಕೊಟ್ಟು ಉಳಿದ ಹೂಗಳನ್ನು ತನ್ನ 'ತಿಳಿ ಹಸಿರು ಬಣ್ಣದ ಪ್ಲಾಸ್ಟಿಕ್ ಎಳೆಗಳಿಂದ  ಹೆಣೆದ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ಒಂಭತ್ತು ಘಂಟೆಯ ಬಸ್ಸಿಗೆ ಕುಮಟೆಗೆ ಹೂ ಮಾರಲು ಹೊರಟನೆಂದರೆ ತಿರುಗಿ ಬರುವುದು ಮಧ್ಯಾಹ್ನ ಮೂರುವರೆಗೆ. ಹೋಗುವಾಗ ಬುಟ್ಟಿಯ ತುಂಬಾ ಹೂಗಳಿದ್ದರೆ,.. ಬರುವಾಗ ಬ್ರೆಡ್ಡು, ಬಟರು, ಬಿಸ್ಕೆಟ್, ಹತ್ತು ಪೈಸೆಗೆ ಒಂದರಂತೆ ಸಿಗುತ್ತಿದ್ದ ಲಿಂಬು ಪೆಪ್ಪರಮೆಂಟುಗಳು ಇರುವುದು ಕಡ್ಡಾಯ, ಜೊತೆಗೆ ಹೊಟ್ಟೆಗೆ ಒಂದಿಷ್ಟು 'ಎಣ್ಣೆ'ಯೂ! ಸಂಪಿಗೆ ಹೂಗಳೇ ಅವನ ಜೀವನಕ್ಕೆ ಆಧಾರ.


ಬೀದಿ ನಾಯಿಗಳ ಕಂಡರೆ ಅದೇನೋ ಮಮಕಾರ. ಹಾಗೆ ಭಿಕ್ಷುಕರ ಕಂಡರೂ... ಬುಟ್ಟಿಯಲ್ಲಿದ್ದ ಬ್ರೆಡ್ಡು ಬಟರುಗಳನ್ನು ನೀಡಿಯೇ ಬಿಡುತ್ತಿದ್ದ. ಹತ್ತು ಪೈಸೆಯ ಪೆಪ್ಪರಮೆಂಟುಗಳೆಲ್ಲವೂ ಮನೆಯ ಅಕ್ಕ ಪಕ್ಕದ ಪುಟ್ಟ ಮಕ್ಕಳಿಗೆ. 



ನಮ್ಮನೆಯ ಕಂಪೌಂಡಿನಲಿ ಒಂದು ಸಂಪಿಗೆ ಮರವಿದೆ. ನಮ್ಮೂರ 'ವೆಂಕಟೇಶ ಶೆಟ್ಟರು' ಬಂಗಾರದ ಆಭರಣ ಮಾಡುವಾಗ ತಾಮ್ರವನ್ನು ಜಾಸ್ತಿ ಮಿಕ್ಸ್ ಮಾಡಿದರೆ ಬರುವಂಥ ಬಣ್ಣದ ಸಂಪಿಗೆ ಹೂಗಳು ಅವು. ಅವನು ಆ ಹೂಗಳನ್ನು ಕೊಯ್ಯಲು ಬರುತ್ತಿದ್ದ . "ರಾಶಿ ಚಂದ ಅದೇರ ಈ ಹೂವು. ಸಿಕ್ಕಾಪಟ್ಟೆ ಡಿಮಾಂಡು ಇದ್ಕೆ.." ಹೇಳುತ್ತಲೇ ಮರ ಹತ್ತುತ್ತಿದ್ದ.



ನನ್ನ ಶಾಲಾದಿನಗಳ ಕಾಲವದು. ಬಹುಶಃ ನಾನಾಗ ಎಂಟನೆಯ ತರಗತಿಯಲ್ಲಿದ್ದೆ. ಒಮ್ಮೆ ಪಪ್ಪ ಕೇಳಿದ್ದರು ಅವನ ಕುಟುಂಬದ ಬಗ್ಗೆ. ಅದಕ್ಕೆ ಅವನ ಉತ್ತರವನ್ನು  ಅವನದೇ ಭಾಷೆಯಲ್ಲಿ ಇಡುತ್ತೇನೆ ನೋಡಿ. " ನಾನು, ಅವಿ (ಅಮ್ಮ), ಮತ್ತೆ ತಮ್ಮ ಇರುದ್ರ ಮನೇಲಿ. ನಮ್ಮ ಅವಿ ಒಂದ್ ನಮನೀ ಮಳ್ಳೀರ, ಉಂಡರೆ ಹೊಟ್ಟೆ ತುಂಬ್ತೋ ಇಲ್ವೋ ಗುತ್ತಾಗುದಿಲ್ಲ . ಒಬ್ಬ ತಮ್ಮ ಆವನೆ ಅವಂಗೂ ಸಿಕ್ಕಾಪಟ್ಟಿ  ಮಳ್ಳು, ಮೈಮೇಲೆ ಬಟ್ಟಿ-ಬಿಟ್ಟಿ ಎಂತೂ ಇಲ್ದೆ ತಿರಗ್ತಾ ಊರ್ಮೆಲೆ ..!! ಅವ್ನ ಕೋಣಿಲಿ ಕೂಡಾಕಿ ಬತ್ತನ್ರಾ. ಅಡಗಿ ಎಲ್ಲ ನಂದೇಯಾ ಅನ್ನ ಮಾಡದ್ರೂ ಮಾಡದೆ ಇಲ್ದಿರು ಇಲ್ಲಾ. ಸಾಕಾಗ್ತಾದಲ್ರ ಅದ್ಕಾಗೆಯ ಹನಿ ಹೊಟ್ಟೆಗೆ ಹಾಕ್ಕಂಬರುದು, ಸುಸ್ತು ಹೋಗುಕೆ.... " ಎಂದು ಪೆಕರು ಪೆಕರನಂತೆ ಹಲ್ಲು ಕಿರಿದಿದ್ದ.  ಅಷ್ಟರಲ್ಲಿ "ಹೂವು  ಹೆಂಗೆ ಕೊಟ್ಯೋ ಲಕ್ಷ್ಮಣ ?" ಎಂದು ಹೆಚ್ಚಾಗಿ ಮುಂಗಚ್ಚೆಯಲ್ಲೇ  ಇಡೀ ಊರು ತಿರುಗುವ 'ಬೇಟೆ ಗೌಡ' ಕೇಳಿಬಿಟ್ಟಿದ್ದ . "ನಿಂಗೆ ಅದೆಲ್ಲ ಅಧಿಪ್ರಸಂಗಿತನ ಎಂತಕ್ಕೆ? ನಿಮ್ಮನೆ ಹೂ ಕೊಡ್ಬೇಡ, ಮೇಲಿಂದಾ  ಹೂ ಯಾವ ದರಕ್ಕೆ ಕೊಟ್ಟೆ ಕೇಳು... ಪುಕ್ಸಟ್ಟೆ ಕೊಟ್ಟು ಬಂದಾನೆ ಏನೀಗ ?" ಎಂದೆಲ್ಲ ರೇಗಾಡಿ ಅವರ ಮನೆ ಹೂ ಕೊಡದಿದ್ದುದರ ಸಿಟ್ಟನ್ನೆಲ್ಲಾ ಕಾರಿ ಬಿಟ್ಟಿದ್ದ! 


ದಾರಿಯಲ್ಲಿ ಕಾಣುವ ಎಲ್ಲ ದೇವಳದ ಒಳಗೆ ಹೋಗಿ ಕೈಮುಗಿದು ಬರದಿದ್ದರೆ ಅವನಿಗೆ ನಿದ್ದೆಯೇ ಹತ್ತುತ್ತಿರಲಿಲ್ಲ. ಒಂದು ಕಲ್ಲಿಗೆ ಹೂ ಹಾಕಿ ಇಟ್ಟರೂ, ಚಪ್ಪಲಿ ತೆಗೆದು ಬದಿಗಿಟ್ಟು ಕೈಮುಗಿದು ಮುಂದೆ ಹೋಗುತ್ತಿದ್ದ. ಜನರೆಲ್ಲಾ 'ಅವನಿಗೆ ಒಂದು ಸುತ್ತು ಲೂಸು' ಎಂದೇ ಆಡಿಕೊಳ್ಳುತ್ತಿದ್ದರು.  ಕೆಲವೊಮ್ಮೆ 'ಎಣ್ಣೆ' ಹೆಚ್ಚಾದಾಗ ಜೋರಾಗಿ ಹಾಡಿಕೊಳ್ಳುತ್ತ, ಒಬ್ಬನೇ ಮಾತಾಡಿಕೊಳ್ಳುತ್ತಾ ಹೋಗುತ್ತಿದ್ದದೂ ಇತ್ತು. 


ನನ್ನ ಅಮ್ಮ ಅಂದರೆ ಅದೇನೋ ಭಯ ಮಿಶ್ರಿತ ಭಕ್ತಿ ಅವನಿಗೆ. ಆದರೂ ಅದೇನೇ ಸಮಸ್ಯೆಗಳು ಬಂದರೂ ಅಮ್ಮನಲ್ಲಿ ಹೇಳಿಕೊಳ್ಳಲೇ ಬೇಕು."ಅಕ್ಕೋರಲ್ರಾ ಹೆದ್ರಕಿ ಆಗ್ತದೆರ.." ಎಂದು ಅಪ್ಪನತ್ತಿರ ಹೇಳುತ್ತಿದ್ದ.  "ವನ್....ಟು... ತ್ರೀ .. ಎಂದು ಇಂಗ್ಲಿಷಿನಲ್ಲಿ ಹೂಗಳನ್ನು ಲೆಕ್ಕ ಮಾಡುವಾಗ ಅಮ್ಮ ಬಂದದ್ದು ಕಂಡರೆ ಥಟ್ಟನೆ ನಿಲ್ಲಿಸಿಯೇ ಬಿಡುತ್ತಿದ.! ಅಮ್ಮನ ಮುಖ ನೋಡಿ ಜಾಸ್ತಿ ಕಲಿಲಿಲ್ರಾ... ಐದ್ನೆತ್ತಿ ವರೆಗೆ ಹೋಗಾನೆ ನೋಡಿ ಎಂದು ಹಸ್ತವ ತೋರಿಸುತ್ತಿದ್ದ .. " ಹಾಗೆ ಮುಂದುವರೆದು ಸಂಪಿಗೆ ಮರವನ್ನು ನೋಡುತ್ತಲೇ " ಅಲ್ಲೊಂದು ಹೂ ಬಿಟ್ಟೋಗದ್ಯೋ ಏನ್ರೋ ? ಉಳಿಲಿ ಗಿಡದಲ್ಲೆಯ.. ನಿಮ್ಮನೆಗೆ ಎಷ್ಟು ಬೇಕ್ರ ?" ಎಂದು ಕೇಳುತ್ತ ಮಾತು ಮರೆಸುತ್ತಿದ್ದ.!

ನಲವತ್ತರ ಸಮೀಪದ ಹರೆಯವಾದರೂ ಮದುವೆ ಆಗಿದ್ದಿರಲಿಲ್ಲ. ಹುಡುಗಿಯರೆಂದರೆ ಅದೇನೋ ಕುತೂಹಲ, ಒಂದು  ಬಗೆಯ ನಾಚಿಕೆ. ಒಮ್ಮೆ ಅವನೇ ಉತ್ತರಿಸಿದ್ದ  ಅಮ್ಮನ,"ಅದೆಂತಕ್ಕೆ ಮದುವೆ ಆಗಲಿಲ್ವೋ ನೀನು ?" ಎಂಬ ಪ್ರಶ್ನೆಗೆ. "ಮುಂದಾಗಿ ಮಾಡ್ವವ್ರು ಬೇಕಲ್ರಾ. ಇಡಗುಂಜಿ ದೇವಸ್ಥಾನದ ಕೂಡೆ ಒಂದು ಹೆಣ್ಣು ನೋಡಿ ಬಂದಾನ್ರ. ಸುಮಾರು ಚೊಲೋ ಆದೆ. ಉದ್ಕೆ ಲಂಗ ಬ್ಲೋಜು ಹಾಕಂಡು ದೇವಸ್ಥಾನದ ಮುಂದೆ ಹೂ ಮಾರ್ತದೆ ನೋಡಿ. ಅದೇಯ ಹುಡುಗಿ. ನಮ್ಜಾತಿದೇಯ .." ಎಂದು ಹೇಳಿ ನಾಚುತ್ತ ನಕ್ಕಿದ್ದ. ಪಪ್ಪ "ಅದೆಂಗೆ ನಿಂಗೆ ಹೂ ಮಾರುದೇ ಹುಡುಗಿ ಸಿಕ್ತೋ ಮಾರಾಯ ? ಆದರೆ ಲಕ್ಷ್ಮಣ, ನಿನಗಿಂತಾ ಜಾಸ್ತಿ ಅದರದ್ದೇ ಹೂ ಮಾರಾಟ ಆಗ್ತದೆ ಹಾಂ " ಎಂದಿದ್ದಕ್ಕೆ. "ಮದ್ವಿ ಆದಕೂಡಲೇ ಹೂ ಮಾರುಕೆಲ್ಲ ಕಳ್ಸುದಿಲ್ರೋ ನಾನು. ಮನೆ ನೋಡ್ಕಂದ್ರೆ ಸಾಕು. ತಾನು ಸಾಮಾನೆಲ್ಲ ತಂದು ಹಾಕ್ತ್ನಲ್ರ .." ಎಂದು ಹೇಳುತ್ತಾ ಕನಸು ಕಟ್ಟಿದ್ದ.


ಅದೆಷ್ಟೋ ಬಾರಿ ನಮ್ಮನೆಯ ಕೆಲಸದ 'ನಾಗಮ್ಮಕ್ಕ'. ಇಡಗುಂಜಿ ದೇವರ ಕೂಡೆ ಬೇಡ್ಕಂತೆ, ನಿಂಗೆ ಅದೇ ಹುಡುಗಿ ಸಿಗ್ಲಿ ಹೇಳಿ .." ಎಂದು ಹೇಳುತ್ತಲೇ ಎರಡು ಹೂವನ್ನು ಪುಗಸಟ್ಟೆ ತೆಗೆದುಕೊಳ್ಳುತ್ತಿದ್ದಳು. " ತಕ ಎರಡು ಹೂವು, ಅದೇನು(ಆ ಹುಡುಗಿ) ನನ್ನ ನೋಡೂದಿಲ್ಲ.. ನೀ ಈ ನಮನೀ ಹೇಳೂದು ಬಿಡೂದಿಲ್ಲ .." ಹೇಳುತ್ತಲೇ ಎರಡು ಹೂಗಳನ್ನು ತೆಗೆದು ಕೈಗಿಡುತ್ತಿದ್ದ. ಹೂ ಮಾರುವ ಹುಡುಗಿಯ ಮೇಲಿನ ಅವಳ ಒಮ್ಮುಖ ಪ್ರೀತಿಯ ಪರಿ ನನಗೆ ಅರ್ಥವಾದದ್ದು ತೀರ ಇತ್ತೀಚಿಗೆ. ಅಂದಿನಿಂದ ಅವನನ್ನು ಅದ್ಭುತ ಪ್ರೇಮಿಗಳ ಸಾಲಿಗೆ ಸೇರಿಸಿಬಿಟ್ಟಿದ್ದೇನೆ.! 


ಇಂತಿಪ್ಪ ನನ್ನ ಈ ಲೇಖನದ 'ಹೀ'ರೋ ಲಕ್ಷ್ಮಣನಿಗೆ ಯಕ್ಷಗಾನದ ಹುಚ್ಚು ವಿಪರೀತ. ಆಜುಬಾಜಿನ ಊರುಗಳಲ್ಲಿ ಅದೆಲ್ಲೇ ಯಕ್ಷಗಾನವಾದರೂ ಹೊರಟೆ ಬಿಡುತ್ತಿದ್ದ. ಒಂದು ಕವಳದ ಸಂಚಿ ಹಾಗು ಒಂದು ಪಾವು ಎಣ್ಣೆಯ ಜೊತೆಗೆ. ಆ ಪ್ರಸಂಗದ ವಿಮರ್ಶೆಯನ್ನು ಮರುದಿನ ಹೂ ಕೊಯ್ಯಲು ಬಂದಾಗ ಮಾಡುತ್ತಿದ್ದ. ಒಮ್ಮೊಮ್ಮೆ ಮರದ ಮೇಲೇರಿ ಒಬ್ಬೊಬ್ಬನೇ ಮಾತನಾಡುತ್ತಿದ್ದದ್ದೂ ಇತ್ತು.


ಒಮ್ಮೆ ಊರಲ್ಲೇ ಉತ್ಸಾಹಿ ಯುವಕರು ಸೇರಿ ಯಕ್ಷಗಾನ ಮಾಡುವಾಗ, ತನಗೂ ಒಂದು 'ಪಾರ್ಟು' ಬೇಕೆಂದು ಹಠ ಹಿಡಿದು,ಹಣ ಕೊಟ್ಟು 'ವಾಲೀ ವಧೆ' ಪ್ರಸಂಗದಲ್ಲಿ 'ಸುಗ್ರೀವ'ನ ಪಾರ್ಟು ಗಿಟ್ಟಿಸಿಕೊಂಡಿದ್ದ. ಒಂದು ಹಿಡಿ ಹೆಚ್ಚೇ ಉತ್ಸಾಹದಿಂದ ತಾಲೀಮಿನಲ್ಲಿ ಭಾಗವಹಿಸಿದ್ದ. ಕೊನೆಗೂ ಅವನಂದು ಕೊಂಡ ದಿನ ಬಂದೆ ಬಿಟ್ಟಿತ್ತು. ಹೂ ಕೊಯ್ಯುವ ಎಲ್ಲ ಮನೆಗಳಲ್ಲೂ "ಇವತ್ತು ಕೆಕ್ಕಾರಲ್ಲಿ 'ಆಟ' ಆದೇ ಹಾಂ.. ಮುದ್ದಾಮು ಬನ್ನಿ" ಎಂದು ಮದುವೆಯ ಸಡಗರವ ತುಂಬಿಕೊಂಡೇ ಕರೆದಿದ್ದ. 


ಪಪ್ಪನ ಹತ್ತಿರ ಹಠಮಾಡಿ ಮೊದಲ ಬಾರಿಗೆ ಕೆಕ್ಕಾರಿನ ಬಯಲಲ್ಲಿ ನಡೆದ ಆಟವನ್ನು ನೋಡಲು ನಡೆದಿದ್ದೆ ನಾನು . ಒಂದು ಪಾವು ಎಣ್ಣೆ ಹೊಡೆದೇ ಬಂದಿದ್ದ ನಮ್ಮ ಲಕ್ಷ್ಮಣನದು, 'ಭಲೇ ಭಲೇ' ಎನಿಸುವಂಥ ಅಭಿನಯ. ವಾಲೀ ಸುಗ್ರೀವರು ಹೊಡೆದಾಡುವ ದೃಶ್ಯ ಬಂದಾಗ ಪ್ರೇಕ್ಷಕರಿಂದ ಶಿಳ್ಳೆ. ಅಷ್ಟರಲ್ಲಿ ಅದೆಲ್ಲಿಂದ ಬಂತೋ ಆ ಶಕ್ತಿ. ಬಹುಷಃ ಹೊಟ್ಟೆಯೊಳಗಿನ 'ಪರಮಾತ್ಮನ' ಜೊತೆ ಶಿಳ್ಳೆಯ ಶಬ್ದವೂ ಸೇರಿ ಬಂದಿರಬೇಕು..!'ವಾಲಿ'ಯ ಪಾತ್ರಧಾರಿಯನ್ನು ಹಿಡಿದು ಕೆಳಕ್ಕೆ ಉರುಳಿಸಿದ್ದ. ಅವನ ಎದೆಯ ಮೇಲೆ ಕುಳಿತು. ಅವನಿಗೆ ಬಡಿಯುತ್ತ ಗಹಗಹಿಸಿ ನಗುತ್ತಿದ್ದ, ನಮ್ಮ ಸುಗ್ರೀವ ಯಾನೆ ಲಕ್ಷ್ಮಣ.!  ವಾಲಿಯ ಪಾತ್ರಧಾರಿ ನೋವಿನಿಂದ  "ಬೋ.. ಮಗನೆ ನೀ ಸೋಲ್ಬೇಕೋ ..ನೀ ಸೋಲ್ಬೇಕೋ ..." ಎಂದು ಹೇಳುತ್ತಿದ್ದದ್ದು ಎಲ್ಲರಿಗೂ ಕೇಳುತ್ತಿತ್ತು. ಪಡ್ಡೆ ಹುಡುಗರ ಶಿಳ್ಳೆ ಇನ್ನೂ ಜೋರಾದುದ ಕೇಳಿ ನಮ್ಮ ಸುಗ್ರೀವನ ಡೈಲಾಗ್ ಛೇಂಜ್ " ಗುಲಾಂ ನನ್ ಮಗನೆ, ಇಷ್ಟು ಜನರ ಎದ್ರಿಗೆ ನಾ ಸೋಲ್ಬೇಕೋ ? ಎಂತ ಮಾಡ್ಕಂಡಿದೆ ನಾನು ಅಂದ್ರೆ? ಕಾಲೇಜು ಹುಡ್ಗೀರು ಬಂದಾರೆ ನೋಡುಕೆ ಅವ್ರ ಮುಂದೆ ನಾ ಸೋಲ್ಬೇಕೋ ? ನಾನೂ ದುಡ್ ಕೊಟ್ಟಾನೆ, ಪುಕ್ಕಟ್ಟೆ ಪಾರ್ಟು ಕಟ್ಟಲಿಲ್ಲ ..  ನಿನ್ ಸೋಲ್ಸುಕೆ ರಾಮ ಬೇಡ್ವೋ ..ನನ್ ಕೈಯಲ್ ನಿನ್ ಸೋಲ್ಸುಕೆ ಆಗುದಿಲ್ಲಾ ನಿನ್ನ ಅಜ್ಜಿ ಕುಟ್ಟ ಬಂದಿ ? ತಕಾ " ಎನ್ನುತ್ತಲೇ ಇನ್ನೆರಡು ಗುದ್ದಿದ. ಕೊನೆಗೆ ಪರದೆಯ ಹಿಂದಿನಿಂದ ಜನ ಬಂದು ಅವನನ್ನು ಎಳೆದೊಯ್ಯಬೇಕಾಯಿತು.! ಅಲ್ಲಿಗೆ ಸುಗ್ರೀವನೇ ರಾಮನ ಹಂಗಿಲ್ಲದೆ ವಾಲಿಯನ್ನು ಹಣಿದಿದ್ದ.! ಲಕ್ಷ್ಮಣನ ಮೊದಲ ಹಾಗೂ ಕೊನೆಯ ಆಟದ ಪಾರ್ಟಿನ ಹುಚ್ಚು ಇಳಿದಿತ್ತು.!


ಮಾರನೆ ದಿನ ಹೂ ಕೊಯ್ಯಲು ಬಂದವನಲ್ಲಿ ಅಮ್ಮ "ಅದೆಂತದೋ ಲಕ್ಷ್ಮಣ ನಿನ್ನೆ ನೀ ಕಥೆನೇ ಉಲ್ಟಾ ಮಾಡಿದ್ಯಂತೆ ? " ಎಂದಿದ್ದಕ್ಕೆ. ಆಲ್ರ ಆಚೆ ಕೇರಿ 'ಶಾಂತರಾಮ' ಆವನ್ಯಲ್ರಾ. ಅವ ಹೇಳಿದ್ದ ನನ್ನ ಕೂಡೆ, ಲಕ್ಷ್ಮಣ.. ಅಷ್ಟೆಲ್ಲ ಕಾಲೇಜು ಹುಡ್ರು-ಹುಡ್ಗೀರು ಎಲ್ಲಾ  ಇರ್ತ್ರು ನೀನು ಅವ್ರೆಲ್ರ ಮುಂದೆ ಸೋಲ್ತ್ಯಾ ? ಹೇಳಿ.. ಅಲ್ಲ ಆಕ್ಕೋರೆ ಮರ್ವಾದಿ ಪ್ರಶ್ನೆ ಅಲ್ರಾ.. ಅದ ಕಾಗೆಯ ನಾನೂ ಸೋಲಲೇ ಇಲ್ಲ .. " ಎಂದು ಹೆಮ್ಮೆಯ ನಗೆ ನಕ್ಕಿದ್ದ ಅವನ ಕಂಡು ಅಮ್ಮ ನಿಜಕ್ಕೂ confuse ಆಗಿದ್ದರು.. !


ಒಮ್ಮೆ ಸಂಪಿಗೆ ಹೂ ಹೆಕ್ಕಲು ಬಂದ 'ನಾಗಮ್ಮಕ್ಕ'ನ ಬಳಿ . "ನಾಗಮ್ಮಕ್ಕ ಕೆಳಗೆ ಬರ್ಬೆಡವೇ ಕುಂಡಿಮೇಲೆ ಸಣ್ಣ ಕುರ ಎದ್ದದೆ.. ನಾ ಚಡ್ಡಿನೇ ಹಾಕ್ಕಂಡು ಬರಲಿಲ್ಲ ಇವತ್ತು .." ಎಂದು ಯಾವ ಮುಲಾಜು ಇಲ್ಲದೆ ಹೇಳಿದ್ದ. ಅವಳು "ಸಾಯಲ್ರಾ ಈ ಲಕ್ಷ್ಮಣನ ಹೂವು ಸಾಕು ..ಹನೀ ಮರ್ಯಾದಿಲ್ಲ ಬೇವರ್ಸಿಗೆ  " ಎನ್ನುತ್ತಲೇ ಕಸ ಗುಡಿಸಲು ನಡೆದಿದ್ದಳು. ಬಹುಷಃ ಅದಾದಮೇಲೆ ಅವಳು ಇಡಗುಂಜಿಯ ಹುಡುಗಿಯ ಹೆಸರಿನಲ್ಲಿ ಹೂ ಕೇಳುವುದನ್ನು ಬಿಟ್ಟಿದ್ದಳು. !




ಜೀವನದ ದುಃಖಗಳ ಮರೆಯಲು ಹೆಂಡದ ಸಹವಾಸ ಮಾಡಿದರೂ. ಅದೆಂಥದ್ದೋ ಜೀವನ ಪ್ರೀತಿ ಇತ್ತು ಅವನಲ್ಲಿ.! ತನ್ನದೇ ಆದ ಸಂಸಾರ ಕಟ್ಟಿಕೊಳ್ಳುವ ತುಡಿತವೊಂದಿತ್ತು. ಅವನ ಹಾಸ್ಯಪ್ರಜ್ಞೆ, ಕೆಲವೊಮ್ಮೆ ಮರೆಯಿಂದ ಇಣುಕುವ ಮುಗ್ಧತೆ. ಅಮಾಯಕ ಒಲವು. ಇದೆಲ್ಲ ನೆನಪಾಗಿತ್ತು ನನಗೆ. ಮತ್ತೊಮ್ಮೆ ಅವನನ್ನು ಹುಡುಕಿಕೊಂಡು ಹೋಗಿ ಮಾತನಾಡಿಸಲೂ ಆಗುವುದಿಲ್ಲ. ಅವನು ಇಹಲೋಕ ಯಾತ್ರೆಯ ಮುಗಿಸಿ 3 ವರುಷಗಳೇ ಕಳೆದಿವೆ. ನಮ್ಮನೆ ಸಂಪಿಗೆ ಮರಕ್ಕೆ ಹೂವಾದಾಗೆಲ್ಲ ಅವನೇ ನೆನಪಾಗುತ್ತಾನೆ, ನಮ್ಮನೆಯಲ್ಲಿ ಎಲ್ಲರಿಗೂ. "ವ್ಯಕ್ತಿ ಹೊರಟು ಹೋಗುತ್ತಾನೆ .. ಉಳಿಯುವುದು ಅವನ ನೆನಪುಗಳಷ್ಟೇ.." ಎಂಬ ಮಾತು ಅದೆಷ್ಟು ನಿಜ ಅಲ್ವಾ ?